ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
- ಮರೆತು ಹೋಗುವ ಹಕ್ಕು.
- PM-YUVA ಯೋಜನೆ.
- ಮುಟ್ಟಿನ ಅವಧಿಯ ಪ್ರಯೋಜನ ಮಸೂದೆ 2017.
- ಕಾರ್ಮಿಕ ಸಂಹಿತೆಗಳು.
- ಯುಎಇಯ ಗೋಲ್ಡನ್ ವೀಸಾ.
ಪ್ರಿಲಿಮ್ಸ್ಗೆ ಸಂಬಂಧಿಸಿದ ಸಂಗತಿಗಳು:
- ಈಕ್ವೆಡಾರ್ ಕಾಡು ಪ್ರಾಣಿಗಳಿಗೆ ಕಾನೂನು ಹಕ್ಕುಗಳನ್ನು ನೀಡುತ್ತದೆ.
- ಅಫೇಸಿಯಾ.
- ಬಾಮಿಯನ್ ಬೌದ್ಧರು.
- ಹರಿಚಂದ್ ಠಾಕೂರ್.
- ಶ್ರೀಂಕ್ ಫ್ಲೇಷನ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
ಮರೆತುಹೋಗುವ ಹಕ್ಕು:
(‘Right to be Forgotten’)
ಸಂದರ್ಭ:
ಕೇಂದ್ರ ಕಾನೂನಿನ ಅನುಪಸ್ಥಿತಿಯಲ್ಲಿ, ಇತ್ತೀಚೆಗೆ, ಹಲವಾರು ಸ್ಥಳೀಯ ನ್ಯಾಯಾಲಯಗಳು ಮರೆತುಹೋಗುವ ಹಕ್ಕು (‘Right to be Forgotten’) ಅಥವಾ ಏಕಾಂಗಿಯಾಗಿ ಬಿಡುವ ಹಕ್ಕನ್ನು ಖಾಸಗಿತನದ ಹಕ್ಕಿನಲ್ಲಿ ಅಂತರ್ಗತವಾಗಿರುತ್ತದೆ ಎಂದು ತೀರ್ಪು ನೀಡಿವೆ, ಇದನ್ನು 2017 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಪುಟ್ಟಸ್ವಾಮಿ ಪ್ರಕರಣದ ತೀರ್ಪಿನಲ್ಲಿ ಮೂಲಭೂತ ಹಕ್ಕು ಎಂದು ಗುರುತಿಸಿದೆ.
- ಸಾಮಾಜಿಕ ಮಾಧ್ಯಮ ಮತ್ತು ಇತರ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿನ ಸ್ಫೋಟಕ ಬೆಳವಣಿಗೆಯೊಂದಿಗೆ ಇದು ವಿಶ್ವಾದ್ಯಂತ ಬಿಸಿ-ಬಿಸಿ ಚರ್ಚೆಯ ವಿಷಯವಾಗಿತ್ತು, ಆದರೆ ಕೆಲವು ದೇಶಗಳು ಅದನ್ನು ಪ್ರತಿಪಾದಿಸುವ ಶಾಸನವನ್ನು ಹೊಂದಿವೆ.
- ಬಹುನಿರೀಕ್ಷಿತ ಡೇಟಾ ರಕ್ಷಣೆ ಮಸೂದೆಯು ಮರೆತುಹೋಗುವ ಹಕ್ಕಿನ ಕುರಿತು ಇರುವ ಸಮಸ್ಯೆಗಳಿಗೆ ಸಮಾಧಾನ ನೀಡಲಿದೆ.
2021 ರ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ಗೆ ‘ಮರೆತುಹೋಗುವ ಹಕ್ಕು’ (‘Right to be Forgotten’) ‘ಗೌಪ್ಯತೆಯ ಅಥವಾ ಖಾಸಗೀತನದ ಮೂಲಭೂತ ಹಕ್ಕಿನ’ ಭಾಗವಾಗಿದೆ ಆದರೆ ಈ ವಿಷಯದಲ್ಲಿ ತಾನು ಯಾವುದೇ ಮಹತ್ವದ ಪಾತ್ರವನ್ನು ಹೊಂದಿಲ್ಲ ಎಂದು ತಿಳಿಸಿತ್ತು.
- ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಸಲಾದ ಅರ್ಜಿಗಳು ಈ “ಹಕ್ಕನ್ನು” ಜಾರಿಗೊಳಿಸುವಂತೆ ಕೋರಿವೆ. ‘ಮರೆತುಹೋಗುವ ಹಕ್ಕು’ ಒಂದು ಕಾನೂನು ಸಿದ್ಧಾಂತವಾಗಿದೆ, ಆದರೆ ಇದು ಭಾರತದಲ್ಲಿ ಇನ್ನೂ ಕಾನೂನಿನಿಂದ ಬೆಂಬಲಿತವಾಗಿಲ್ಲ.
ಮರೆತುಹೋಗುವ ಹಕ್ಕು ಎಂದರೇನು?
‘ಮರೆತುಹೋಗುವ ಹಕ್ಕು’ ಇದರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ಮಾಹಿತಿಯನ್ನು ಇಂಟರ್ನೆಟ್ನಿಂದ ಅಳಿಸುವ ಹಕ್ಕನ್ನು ಹೊಂದಿರುವುದಾಗಿದೆ. ಈ ಪರಿಕಲ್ಪನೆಯು ವಿದೇಶದಲ್ಲಿ ಕೆಲವು ನ್ಯಾಯವ್ಯಾಪ್ತಿಗಳಲ್ಲಿ, ವಿಶೇಷವಾಗಿ ಯುರೋಪಿಯನ್ ಒಕ್ಕೂಟದಲ್ಲಿ ಮಾನ್ಯತೆಯನ್ನು ಪಡೆದುಕೊಂಡಿದೆ.
ಹಿನ್ನೆಲೆ:
‘ಸುಖಮೀತ್ ಸಿಂಗ್ ಆನಂದ್’ ಎಂಬ ವ್ಯಕ್ತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಆರ್ಥಿಕ ಅಪರಾಧಗಳ ವಿಭಾಗವು ತನ್ನ ವಿರುದ್ಧ 2014 ರಲ್ಲಿ ಎಫ್ಐಆರ್ಗೆ ಸಂಬಂಧಿಸಿದಂತೆ 2015 ಮತ್ತು 2018 ರಲ್ಲಿ ನೀಡಲಾದ ತೀರ್ಪುಗಳು ಮತ್ತು ಆದೇಶಗಳನ್ನು ರದ್ದುಗೊಳಿಸುವಂತೆ ಅವರು ಕೋರಿದ್ದಾರೆ.
- ಈ ವರ್ಷ ಏಪ್ರಿಲ್ನಲ್ಲಿ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ, ಇದು ಸಂಬಂಧಿತ ಪ್ರಕರಣದಲ್ಲಿ ಅರ್ಜಿದಾರರಿಗೆ ಸಂಬಂಧಿಸಿದ ಶೋಧ ಫಲಿತಾಂಶಗಳನ್ನು ತೆಗೆದುಹಾಕುವಂತೆ ನ್ಯಾಯಾಲಯವು ಸೂಚಿಸಿತ್ತು.
ಕಾರಣ:
“ಅರ್ಜಿದಾರರನ್ನು ಆಯಾ ಪ್ರಕರಣಗಳಲ್ಲಿ ಸಂಬಂಧಿಸಿದ ಸೂಕ್ತ ನ್ಯಾಯಾಲಯಗಳು ಗೌರವಯುತವಾಗಿ ಖುಲಾಸೆಗೊಳಿಸಿವೆ, ಆದರೆ ಅವರ ವಿರುದ್ಧ ಆನ್ಲೈನ್ನಲ್ಲಿ ಲಭ್ಯವಿರುವ ಆಪಾದಿತ ವಿಡಿಯೋಗಳು ಮತ್ತು ಸುಳ್ಳು ಮಾಹಿತಿಗಳು ಅವರನ್ನು ಕಾಡುತ್ತಲೇ ಇವೆ” ಎಂದು ಅರ್ಜಿದಾರರು, ವಾದಿಸಿದ್ದಾರೆ.
ಭಾರತೀಯ ಸನ್ನಿವೇಶದಲ್ಲಿ ‘ಮರೆತುಹೋಗುವ ಹಕ್ಕು’:
- ‘ಮರೆತುಹೋಗುವ ಹಕ್ಕು’(Right to be Forgotten) ವ್ಯಕ್ತಿಯ ‘ಗೌಪ್ಯತೆಯ ಹಕ್ಕಿನ’ ಅಥವಾ ಖಾಸಗೀತನದ ಹಕ್ಕಿನ ವ್ಯಾಪ್ತಿಗೆ ಬರುತ್ತದೆ.ಇದು ಸಂಸತ್ತಿನಲ್ಲಿ ಇನ್ನೂ ಅಂಗೀಕಾರಗೊಳ್ಳದ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯಿಂದ ನಿಯಂತ್ರಿಸಲ್ಪಡುತ್ತದೆ.
- 2017 ರಲ್ಲಿ, ‘ಗೌಪ್ಯತೆ ಹಕ್ಕನ್ನು’ ಅಥವಾ ‘ಖಾಸಗೀತನದ ಹಕ್ಕನ್ನು’ ಸುಪ್ರೀಂ ಕೋರ್ಟ್ ತನ್ನ ಒಂದು ಹೆಗ್ಗುರುತು ತೀರ್ಪಿನಲ್ಲಿ (ಪುಟ್ಟಸ್ವಾಮಿ ಪ್ರಕರಣ) ‘ಮೂಲಭೂತ ಹಕ್ಕು’ (ಆರ್ಟಿಕಲ್ 21 ರ ಅಡಿಯಲ್ಲಿ) ಎಂದು ಘೋಷಿಸಿದೆ.
- ನ್ಯಾಯಾಲಯವು ಆ ಸಮಯದಲ್ಲಿ “ಖಾಸಗಿತನದ ಹಕ್ಕನ್ನು ‘ಆರ್ಟಿಕಲ್ 21’ ರ ಅಡಿಯಲ್ಲಿ ‘ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯ’ದ ಅವಿಭಾಜ್ಯ ಅಂಗವಾಗಿ ಮತ್ತು ಸಂವಿಧಾನದ ಭಾಗ III” ರ ಮೂಲಕ ಖಾತರಿಪಡಿಸಿದ’ ಸ್ವಾತಂತ್ರ್ಯ’ಗಳ ಒಂದು ಭಾಗವಾಗಿ ರಕ್ಷಿಸಲಾಗಿದೆ ಎಂದು ಹೇಳಿದೆ.
ಈ ಸಂದರ್ಭದಲ್ಲಿ ‘ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ’ ಯ ಅಡಿಯಲ್ಲಿ ಮಾಡಲಾದ ನಿಬಂಧನೆಗಳು ಹೇಳುವುದೇನು?
‘ಗೌಪ್ಯತೆಯ ಹಕ್ಕು’,ಈ ಮಸೂದೆಯು ಸಂಸತ್ತಿನಲ್ಲಿ ಇನ್ನೂ ಅಂಗೀಕಾರಕ್ಕಾಗಿ ಬಾಕಿ ಉಳಿದಿದ್ದರೂ ಇದನ್ನು ‘ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ’ (Personal Data Protection Bill) ಯು ನಿರ್ವಹಿಸುತ್ತದೆ.
ಈ ‘ಮಸೂದೆ’ ನಿರ್ದಿಷ್ಟವಾಗಿ “ಮರೆತುಹೋಗುವ ಹಕ್ಕಿನ” ಬಗ್ಗೆ ಹೇಳುತ್ತದೆ.
- ವಿಶಾಲವಾಗಿ ಹೇಳುವುದಾದರೆ, ‘ಮರೆತುಹೋಗುವ ಹಕ್ಕಿನ’ ಅಡಿಯಲ್ಲಿ, ಬಳಕೆದಾರರು ‘ಡೇಟಾ ವಿಶ್ವಾಸಾರ್ಹರ’ (data fiduciaries) ಹಿಡಿತದಲ್ಲಿರುವ ತಮ್ಮ ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು ಡಿ-ಲಿಂಕ್ ಮಾಡಬಹುದು ಅಥವಾ ಮಿತಿಗೊಳಿಸಬಹುದು ಮತ್ತು ಮಾಹಿತಿಯನ್ನು ತಿದ್ದುಪಡಿಯೊಂದಿಗೆ ತೋರಿಸಲು ಅದನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು ಅಥವಾ ಸರಿಪಡಿಸಬಹುದು.
ಮಸೂದೆಯಲ್ಲಿ ಈ ನಿಬಂಧನೆಗೆ ಸಂಬಂಧಿಸಿದ ಸಮಸ್ಯೆಗಳು:
ಈ ನಿಬಂಧನೆಯ ಮುಖ್ಯ ಸಮಸ್ಯೆ ಏನೆಂದರೆ, ವೈಯಕ್ತಿಕ ಡೇಟಾ ಮತ್ತು ಮಾಹಿತಿಯ ಸೂಕ್ಷ್ಮತೆಯನ್ನು ಸಂಬಂಧಪಟ್ಟ ವ್ಯಕ್ತಿಯಿಂದ ಸ್ವತಂತ್ರವಾಗಿ ನಿರ್ಧರಿಸಲಾಗುವುದಿಲ್ಲ, ಆದರೆ ಅದನ್ನು ದತ್ತಾಂಶ ಸಂರಕ್ಷಣಾ ಪ್ರಾಧಿಕಾರ (Data Protection Authority – DPA) ವು ನೋಡಿಕೊಳ್ಳುತ್ತದೆ ಎಂಬುದಾಗಿದೆ.
- ಇದರರ್ಥ, ಕರಡು ಮಸೂದೆಯಲ್ಲಿನ ನಿಬಂಧನೆಯ ಪ್ರಕಾರ, ಡೇಟಾ ಪ್ರೊಟೆಕ್ಷನ್ ಅಥಾರಿಟಿ (DPA) ಗಾಗಿ ಕೆಲಸ ಮಾಡುವ ನ್ಯಾಯಾಧೀಶರ ಅನುಮತಿಗೆ ಒಳಪಟ್ಟು, ಬಳಕೆದಾರನು ತನ್ನ ವೈಯಕ್ತಿಕ ಡೇಟಾವನ್ನು ಅಂತರ್ಜಾಲದಿಂದ ತೆಗೆದುಹಾಕಲು ಪ್ರಯತ್ನಿಸಬಹುದು.
ಮರೆತುಹೋಗುವ ಹಕ್ಕನ್ನು ಗುರುತಿಸುವ ಅವಶ್ಯಕತೆ:
ವೈಯಕ್ತಿಕ/ಖಾಸಗಿ ಮಾಹಿತಿ, ಹಿಂದಿನ ಅಪರಾಧಗಳು ಮತ್ತು ವಿಚಾರಣೆಗಳ ನ್ಯಾಯಾಲಯದ ದಾಖಲೆಗಳು ಮತ್ತು ಇಂಟರ್ನೆಟ್ನಿಂದ ಹಿಂದಿನ ಘಟನೆಗಳ ಸುದ್ದಿ ವರದಿಗಳನ್ನು ತೆಗೆದುಹಾಕುವಂತೆ ಕೋರಿ ದೆಹಲಿ ಹೈಕೋರ್ಟ್ನಲ್ಲಿ ಕನಿಷ್ಠ ಎಂಟು ಅರ್ಜಿಗಳು ವಿಲೇವಾರಿಗಾಗಿ ಬಾಕಿ ಉಳಿದಿವೆ ಮತ್ತು ಈ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಇದುವರೆಗೆ ಕೆಲವೇ ಜನರಿಗೆ ಪರಿಹಾರ ಸಿಕ್ಕಿದೆ.
ಅಂತಹ ಕಾನೂನುಗಳು ಯಾವ ದೇಶಗಳಲ್ಲಿ ಜಾರಿಯಲ್ಲಿವೆ?
- ಯುರೋಪಿಯನ್ ಒಕ್ಕೂಟದ ಸಾಮಾನ್ಯ ಡೇಟಾ ಸಂರಕ್ಷಣಾ ನಿಯಂತ್ರಣ ಅಧಿನಿಯಮ (General Data Protection Regulation- GDPR).
- ಅಪ್ರಸ್ತುತತೆ, ಅಸಮರ್ಪಕತೆ ಮತ್ತು ‘ಕಾನೂನಿನ ಉಲ್ಲಂಘನೆ’ ಯ ಆಧಾರದ ಮೇಲೆ ವೈಯಕ್ತಿಕ ಮಾಹಿತಿಗೆ ಲಿಂಕ್ಗಳನ್ನು ತೆಗೆದುಹಾಕಲು ಸರ್ಚ್ ಎಂಜಿನ್ ಅನ್ನು ಒತ್ತಾಯಿಸಲು ಬಳಕೆದಾರರಿಗೆ ಅನುಮತಿಸುವ ಕಾನೂನನ್ನು ರಷ್ಯಾ 2015 ರಲ್ಲಿ, ಜಾರಿಗೊಳಿಸಿತು.
- ಟರ್ಕಿ ಮತ್ತು ಸೈಬೀರಿಯಾದಲ್ಲಿ ‘ಮರೆತುಹೋಗುವ ಹಕ್ಕು’ ಸ್ವಲ್ಪಮಟ್ಟಿಗೆ ಗುರುತಿಸಲ್ಪಟ್ಟಿದೆ, ಆದರೆ ಸ್ಪೇನ್ ಮತ್ತು ಇಂಗ್ಲೆಂಡ್ ನ್ಯಾಯಾಲಯಗಳು ಈ ವಿಷಯದ ಬಗ್ಗೆ ಕೆಲವು ತೀರ್ಪುಗಳನ್ನು ನೀಡಿವೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
PM-YUVA ಯೋಜನೆ:
ಸಂದರ್ಭ:
ಪ್ರಧಾನಮಂತ್ರಿ-ಯುವ (PM-YUVA) ಯೋಜನೆಯಡಿ ಆಯ್ಕೆಯಾದ ಪುಸ್ತಕಗಳನ್ನು ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದ ವಿನಿಮಯವನ್ನು ಖಚಿತಪಡಿಸಿಕೊಳ್ಳಲು `ಏಕ್ ಭಾರತ್ ಶ್ರೇಷ್ಠ ಭಾರತ’ವನ್ನು ಉತ್ತೇಜಿಸುವ ಸಲುವಾಗಿ ವಿವಿಧ ಭಾರತೀಯ ಭಾಷೆಗಳಿಗೆ ಅನುವಾದಿಸಲು ಸರ್ಕಾರ ನಿರ್ಧರಿಸಿದೆ.
PM Yuva ಯೋಜನೆಯ ಕುರಿತು:
ಪ್ರಧಾನ ಮಂತ್ರಿ – ಯುವ ಬರಹಗಾರರಿಗಾಗಿ (PM-YUVA) ಮಾರ್ಗದರ್ಶನದ (Mentorship) ಯೋಜನೆಯನ್ನು ಶಿಕ್ಷಣ ಸಚಿವಾಲಯವು 29 ಮೇ 2021 ರಂದು 30 ವರ್ಷ ವಯಸ್ಸಿನ ವರೆಗಿನ ಯುವ ಬರಹಗಾರರಿಗಾಗಿ ಪ್ರಾರಂಭಿಸಿದೆ.
- ಭಾರತದ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುವ ನುರಿತ ಬರಹಗಾರರಾಗಿ ಯುವ ಮಹತ್ವಾಕಾಂಕ್ಷಿ ಬರಹಗಾರರನ್ನು ಸೃಷ್ಟಿಸುವುದು ಈ ಯೋಜನೆಯ ಗುರಿಯಾಗಿದೆ.
ಯೋಜನೆಯ ಮೂಲಕ, ಹೊಸ ಬರಹಗಾರರಿಗೆ ಮಾರ್ಗದರ್ಶನ ಕಾರ್ಯಕ್ರಮದ ಮೂಲಕ ಭಾಗವಹಿಸಲು ಮತ್ತು ಭವಿಷ್ಯದ ಬರಹಗಾರರಾಗಲು ಅವಕಾಶ ನೀಡಲಾಗುತ್ತದೆ.
ಯೋಜನೆಯ ಪ್ರಮುಖ ಉದ್ದೇಶಗಳು:
- ಶ್ರೀಮಂತ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಉನ್ನತೀಕರಿಸುವ ಕಾರ್ಯದಲ್ಲಿ ದೇಶದ ಯುವಕರನ್ನು ತೊಡಗಿಸುವುದು.
- ನಮ್ಮ ಭಾರತೀಯ ಸಾಹಿತ್ಯದ ಆಧುನಿಕ/ಯುವ ರಾಯಭಾರಿಗಳಾಗಿರುವ ಯುವ ಲೇಖಕರ ಸಮೂಹವನ್ನು ದೇಶದಲ್ಲಿ ರಚಿಸುವುದು.
- ಯುವ ಬರಹಗಾರರು ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ಒಂದು ವೇದಿಕೆ ಕಲ್ಪಿಸಿದೆ. ಭಾರತವನ್ನು ವಿಶ್ವ ಗುರುವಾಗಿಸುವ ಆಶಯದೊಂದಿಗೆ ಯುವ ಯೋಜನೆ ಆರಂಭಿಸಲಾಗಿದೆ.
- ಯುವ ಲೇಖಕರು ತಮ್ಮ ಆಲೋಚನೆಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಲು ಸಹಾಯ ಮಾಡುವ ಮೂಲಕ, ಅವರಿಗೆ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜಾಗತಿಕವಾಗಿ ಪ್ರಚಾರ ಮಾಡಲು ಅನುವು ಮಾಡಿಕೊಡುತ್ತದೆ.
- ಪರಿಣಿತ ಮಾರ್ಗದರ್ಶನವನ್ನು ಒದಗಿಸುವ ಮೂಲಕ ವಿವಿಧ ಪ್ರಕಾರಗಳಲ್ಲಿ ಹೊಸ ಮಹತ್ವಾಕಾಂಕ್ಷಿ ಲೇಖಕರಿಂದ ನುರಿತ ಬರಹಗಾರರನ್ನು ನಿರ್ಮಿಸುವುದು.
- ವಿಶ್ವದಲ್ಲೇ ಅತಿ ಹೆಚ್ಚು ಯುವಜನತೆ ಹೊಂದಿರುವ ರಾಷ್ಟ್ರ ಭಾರತ. ಈ ಅಗಾದ ಯುವಶಕ್ತಿಯನ್ನು ದೇಶದ ಅಭಿವೃದ್ಧಿಗೆ, ರಾಷ್ಟ್ರ ನಿರ್ಮಾಣಕ್ಕಾಗಿ ಬಳಸಿಕೊಳ್ಳಲು ಸಾಕಷ್ಟು ಅವಕಾಶವಿದೆ. ಭಾರತದ ಆರ್ಥಿಕತೆಗೆ ಈ ಯುವಜನೆತೆ ಅಭೂತಪೂರ್ವ ಕೊಡುಗೆ ನೀಡುವಲ್ಲಿ ಯಾವುದೇ ಅನುಮಾನವಿಲ್ಲ. ಹೊಸ ಪೀಳಿಗೆಯ ಯುವ ಸೃಜನಶೀಲ ಬರಹಗಾರರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ, ‘ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮ’ದ ಅಡಿಯಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ.
ಅನುಷ್ಠಾನ:
ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಬುಕ್ ಟ್ರಸ್ಟ್ ಈ ಯೋಜನೆಯನ್ನು ಜಾರಿಗೊಳಿಸುತ್ತದೆ. ಈ ಯೋಜನೆಯನ್ನು ಹಂತ-ಹಂತವಾಗಿ ಜಾರಿಗೊಳಿಸಲಾಗುವುದು.
ಯುವ ಬರಹಗಾರ ಆಯ್ಕೆ ಪ್ರಕ್ರಿಯೆ:
MyGov ನಲ್ಲಿ ಅಖಿಲ ಭಾರತ ಸ್ಪರ್ಧೆಯ ಮೂಲಕ ಒಟ್ಟು 75 ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ. ನ್ಯಾಷನಲ್ ಬುಕ್ ಟ್ರಸ್ಟ್ ‘ಎನ್ಬಿಟಿ ರಚಿಸಿರುವ ಸಮಿತಿಯಿಂದ ಆಯ್ಕೆ ನಡೆಯಲಿದೆ. ಮೆಂಟರ್ಶಿಪ್ ಯೋಜನೆಯಡಿಯಲ್ಲಿ ಸೂಕ್ತವಾದ ಪುಸ್ತಕಗಳನ್ನು ಆಯ್ಕೆ ಮಾಡಲಾಗುತ್ತದೆ. ಪುಸ್ತಕದ ಸೂಕ್ತತೆಯನ್ನು ನಿರ್ಣಯಿಸಲು 5,000 ಪದಗಳ ಹಸ್ತಪ್ರತಿಯನ್ನು ಸಲ್ಲಿಸಲು ಸ್ಪರ್ಧಿಗಳನ್ನು ಕೇಳಲಾಗುತ್ತದೆ. ಆಯ್ಕೆಯಾದ ಲೇಖಕರ ಹೆಸರನ್ನು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಕಟಿಸಲಾಗುವುದು. ಮಾರ್ಗದರ್ಶನದ ಆಧಾರದ ಮೇಲೆ, ಆಯ್ದ ಲೇಖಕರು ನಾಮನಿರ್ದೇಶಿತ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಅಂತಿಮ ಆಯ್ಕೆಗಾಗಿ ಹಸ್ತಪ್ರತಿಗಳನ್ನು ಸಿದ್ಧಪಡಿಸುತ್ತಾರೆ.
ತರಬೇತಿ ಅವಧಿ:
ಹಂತ I – ತರಬೇತಿ (3 ತಿಂಗಳುಗಳು)
ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವಾರಗಳ ಬರಹಗಾರರ ಆನ್ಲೈನ್ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಈ ಸಮಯದಲ್ಲಿ ಯುವ ಬರಹಗಾರರಿಗೆ NBT ಯ ನಿಪುಣ ಬರಹಗಾರರು ಮತ್ತು ಬರಹಗಾರರ ಸಮಿತಿಯಿಂದ ಇಬ್ಬರು ಪ್ರಖ್ಯಾತ ಬರಹಗಾರರು/ ಮಾರ್ಗದರ್ಶಿಗಳು ಮಾರ್ಗದರ್ಶನ ನೀಡುತ್ತಾರೆ. ಎರಡು ವಾರಗಳ ಬರಹಗಾರರ ಆನ್ಲೈನ್ ಕಾರ್ಯಕ್ರಮ ಮುಗಿದ ನಂತರ, NBT ಆಯೋಜಿಸುವ ವಿವಿಧ ಆನ್-ಲೈನ್/ಆನ್-ಸೈಟ್ ರಾಷ್ಟ್ರೀಯ ಶಿಬಿರಗಳಲ್ಲಿ ಬರಹಗಾರರಿಗೆ 2-ವಾರಗಳವರೆಗೆ ತರಬೇತಿ ನೀಡಲಾಗುತ್ತದೆ.
ಹಂತ II – ಪ್ರಚಾರ (3 ತಿಂಗಳುಗಳು)
ಯುವ ಬರಹಗಾರರು ತಮ್ಮ ತಿಳಿವಳಿಕೆಯನ್ನು ವಿಸ್ತರಿಸಲು ಮತ್ತು ಸಾಹಿತ್ಯಿಕ ಉತ್ಸವಗಳು, ಪುಸ್ತಕ ಮೇಳಗಳು, ವರ್ಚುವಲ್ ಪುಸ್ತಕ ಮೇಳಗಳು, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಮುಂತಾದ ವಿವಿಧ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸಂವಾದದ ಮೂಲಕ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ಪಡೆಯುತ್ತಾರೆ. ಮಾರ್ಗದರ್ಶನದ ಕೊನೆಯಲ್ಲಿ, ಮಾರ್ಗದರ್ಶನ ಯೋಜನೆಯಡಿ 6 ತಿಂಗಳ ಅವಧಿಗೆ (50,000 x 6 = 3 ಲಕ್ಷಗಳು) ಪ್ರತಿ ಲೇಖಕರಿಗೆ ತಿಂಗಳಿಗೆ 50,000ರೂ.ಗಳ ಏಕೀಕೃತ ವಿದ್ಯಾರ್ಥಿ ವೇತನ ಪಾವತಿಸಲಾಗುತ್ತದೆ. ಮಾರ್ಗದರ್ಶನ ಕಾರ್ಯಕ್ರಮದ ಪರಿಣಾಮವಾಗಿ ಯುವ ಲೇಖಕರು ಬರೆದ ಪುಸ್ತಕ ಅಥವಾ ಪುಸ್ತಕಗಳ ಸರಣಿಯನ್ನು ಭಾರತದ NBT ಪ್ರಕಟಿಸುತ್ತದೆ. ಮಾರ್ಗದರ್ಶನ ಕಾರ್ಯಕ್ರಮದ ಕೊನೆಯಲ್ಲಿ, ಲೇಖಕರು ತಮ್ಮ ಪುಸ್ತಕಗಳ ಯಶಸ್ವಿ ಪ್ರಕಟಣೆಯ ಮೇಲೆ 10% ರಾಯಲ್ಟಿ ಪಾವತಿಸುತ್ತಾರೆ. ವಿವಿಧ ರಾಜ್ಯಗಳ ನಡುವೆ ಸಂಸ್ಕೃತಿ ಮತ್ತು ಸಾಹಿತ್ಯದ ವಿನಿಮಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಆ ಮೂಲಕ ಏಕ್ ಭಾರತ್ ಶ್ರೇಷ್ಠ ಭಾರತವನ್ನು ಉತ್ತೇಜಿಸಲು ಅವರ ಪ್ರಕಟಿತ ಪುಸ್ತಕಗಳನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುತ್ತದೆ.
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.
ಮುಟ್ಟಿನ / ಋತುಚಕ್ರದ ಅವಧಿಯ ಪ್ರಯೋಜನ ಮಸೂದೆ 2017:
(Menstruation Benefit Bill 2017)
ಸಂದರ್ಭ:
ಐದು ವರ್ಷಗಳ ಕಾಲ, ಅರುಣಾಚಲ ಪ್ರದೇಶದ ಪಾಸಿಘಾಟ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಿನೊಂಗ್ ಎರಿಂಗ್ (Ninong Ering) ಅವರು ಹೆಣ್ಣು ಮಕ್ಕಳಿಗಾಗಿ ಋತುಚಕ್ರದ ರಜೆಯನ್ನು ಕಾನೂನಾಗಿ ರೂಪಿಸಲು ಪ್ರತಿಪಾದಿಸಿದ್ದಾರೆ.
- ನವೆಂಬರ್ 2017 ರಲ್ಲಿ, ಲೋಕಸಭೆಯ ಸಂಸದರಾಗಿ, ಎರಿಂಗ್ ಅವರು ಲೋಕಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಯಾಗಿ ಮುಟ್ಟಿನ ಪ್ರಯೋಜನ ಮಸೂದೆ 2017 (Menstruation Benefit Bill 2017) ಅನ್ನು ಮಂಡಿಸಿದ್ದರು.
- ಈಗ ಮತ್ತೊಮ್ಮೆ, ಶಾಸಕರಾಗಿ, ಎರಿಂಗ್ ಅವರು ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ 2022 ರ ಬಜೆಟ್ ಅಧಿವೇಶನದ ಮೊದಲ ದಿನದಂದು ಅದೇ ಖಾಸಗಿ ಸದಸ್ಯರ ಮಸೂದೆಯನ್ನು ಮತ್ತೊಮ್ಮೆ ಮಂಡಿಸಿದ್ದಾರೆ.
ಮಸೂದೆಯ ಮುಖ್ಯಾಂಶಗಳು:
ಈ ಮಸೂದೆಯು ಋತುಚಕ್ರದ ಬಂಧಕ್ಕೊಳಪಟ್ಟಿರುವ ಶಾಲಾ ಮತ್ತು ಕಾಲೇಜಿಗೆ ಹೋಗುವ ಹುಡುಗಿಯರಿಗೆ ರಜೆ ನೀಡಲು, ಉದ್ಯೋಗದಲ್ಲಿರುವ ಮಹಿಳೆಯರಿಗೆ, ಮುಟ್ಟಿನ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರಿಗೆ ಉತ್ತಮ ನೈರ್ಮಲ್ಯದ ನಿಬಂಧನೆಗಳನ್ನು ಒದಗಿಸಲು ಪ್ರಯತ್ನಿಸುತ್ತದೆ.
ವೇತನ ಸಹಿತ ರಜೆಯ ಅವಶ್ಯಕತೆ:
ಋತುಚಕ್ರವು ಮಹಿಳೆಯರಿಗೆ ವಿಶೇಷವಾಗಿ ಮೊದಲ ದಿನದಂದು ಆಯಾಸ ಮತ್ತು ಕಿರಿಕಿರಿ ಉಂಟುಮಾಡಬಹುದು. ಬಿಹಾರ ಮತ್ತು ಕೇರಳದಂತಹ ಭಾರತದ ರಾಜ್ಯಗಳು ಈಗಾಗಲೇ ಋತುಬಂಧದ ಸಮಯದಲ್ಲಿ ವೇತನ ಸಹಿತ ರಜೆ ಸೌಲಭ್ಯವನ್ನು ಒದಗಿಸುತ್ತವೆ.
ಮಹತ್ವ:
ನೈರ್ಮಲ್ಯ ಮತ್ತು ಮುಟ್ಟಿನ ಆರೋಗ್ಯವು ಮಹಿಳೆಯ ಜೀವನದ ಅತ್ಯಗತ್ಯ ಅಂಶಗಳಾಗಿರುವುದರಿಂದ, ಮಹಿಳೆಯರು ಘನತೆಯಿಂದ ಕೆಲಸ ಮಾಡಲು ಅಗತ್ಯವಾದ ಪರಿಸ್ಥಿತಿಗಳನ್ನು ಒದಗಿಸುವುದನ್ನು ಕಡ್ಡಾಯವಾಗಿ ಅನುಚ್ಛೇದ 21 ರೊಳಗೆ ಬರುತ್ತವೆ ಎಂದು ಯಾರೇ ಆಗಲಿ ಸಮಂಜಸವಾಗಿ ಊಹಿಸಬಹುದು. ಋತುಚಕ್ರದ ರಜೆಯನ್ನು ನೀಡುವ ಪ್ರಕರಣವು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ ಮತ್ತು ಆದಕಾರಣ ಅದಕ್ಕೆ ಸರಿಯಾದ ಗಮನವನ್ನು ನೀಡಬೇಕು.
ಖಾಸಗಿ ಸದಸ್ಯ ಎಂದರೆ ಯಾರು?
- ಸಚಿವರಲ್ಲದ ಯಾವುದೇ ಸಂಸದರನ್ನು ಖಾಸಗಿ ಸದಸ್ಯರು ಎಂದು ಉಲ್ಲೇಖಿಸಲಾಗುತ್ತದೆ.
- ಖಾಸಗಿ ಸದಸ್ಯರ ಮಸೂದೆಯ ಉದ್ದೇಶವು ಶಾಸಕಾಂಗದ ಮಧ್ಯಸ್ಥಿಕೆಯ ಅಗತ್ಯವಿರುವ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನಲ್ಲಿ ಪ್ರತಿಯೊಬ್ಬ ಸಂಸದರು ಸಮಸ್ಯೆಗಳು ಮತ್ತು ಕೊರತೆಗಳಾಗಿ ನೋಡುವ ವಿಷಯಗಳ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯುವುದಾಗಿದೆ.
ಖಾಸಗಿ ಸದಸ್ಯರ ಮಸೂದೆಯ ಸ್ವೀಕಾರಾರ್ಹತೆ:
- ಮಸೂದೆಯನ್ನು ಮಂಡಿಸುವ ಕುರಿತು ರಾಜ್ಯಸಭೆಯ ಅಧ್ಯಕ್ಷರು ಮತ್ತು ಲೋಕಸಭೆಯ ಸ್ಪೀಕರ್ ಅವರು ನಿರ್ಧಾರವನ್ನು ಕೈಗೊಳ್ಳುತ್ತಾರೆ.
- ಸದನದಿಂದ ಖಾಸಗಿ ಸದಸ್ಯರ ಮಸೂದೆಯ ತಿರಸ್ಕಾರವು ಸರ್ಕಾರದ ಮೇಲಿನ ಸಂಸದೀಯ ವಿಶ್ವಾಸದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಅಥವಾ ಸರ್ಕಾರವು ರಾಜೀನಾಮೆ ನೀಡುವ ಸಂದರ್ಭವೂ ಉದ್ಭವಿಸುವುದಿಲ್ಲ.
ಎರಡೂ ಸದನಗಳಲ್ಲಿನ ಕಾರ್ಯವಿಧಾನವು ಸರಿಸುಮಾರು ಒಂದೇ ಆಗಿರುತ್ತದೆ:
- ಮಸೂದೆಯನ್ನು ಪರಿಚಯಿಸಲು ಪಟ್ಟಿಮಾಡುವ ಮೊದಲು ಸದಸ್ಯರು ಕನಿಷ್ಟ ಒಂದು ತಿಂಗಳ ಮುಂಚೆ ಮಾಹಿತಿಯನ್ನು ನೀಡಬೇಕು.
- ಪಟ್ಟಿ ಮಾಡುವ ಮೊದಲು ಶಾಸನದ ಮೇಲಿನ ಸಾಂವಿಧಾನಿಕ ನಿಬಂಧನೆಗಳು ಮತ್ತು ನಿಯಮಗಳ ಅನುಸರಣೆಗಾಗಿ ಸಂಸದೀಯ ಸಚಿವಾಲಯವು ಅದನ್ನು ಪರಿಶೀಲಿಸುತ್ತದೆ.
ಯಾವುದೇ ವಿನಾಯಿತಿಗಳಿವೆಯೇ?
ಸರ್ಕಾರಿ ಮಸೂದೆಗಳನ್ನು ಸಂಸತ್ ಅಧಿವೇಶನದ ಯಾವುದೇ ದಿನದಂದು ಮಂಡಿಸಬಹುದು ಮತ್ತು ಚರ್ಚಿಸಬಹುದು, ಆದರೆ, ಖಾಸಗಿ ಸದಸ್ಯರ ಮಸೂದೆಗಳನ್ನು ಶುಕ್ರವಾರದಂದು ಮಾತ್ರ ಮಂಡಿಸಲೂ ಮತ್ತು ಚರ್ಚಿಸಲೂ ಅವಕಾಶವಿದೆ.
ಖಾಸಗಿ ಸದಸ್ಯರ ಮಸೂದೆ ಎಂದಾದರೂ ಕಾನೂನಾಗಿದೆಯೇ?
PRS ಶಾಸನದ ಪ್ರಕಾರ, 1970 ರಿಂದ ಯಾವುದೇ ಖಾಸಗಿ ಸದಸ್ಯರ ಮಸೂದೆಯನ್ನು ಸಂಸತ್ತು ಅಂಗೀಕರಿಸಿಲ್ಲ. ಇಲ್ಲಿಯವರೆಗೆ, ಸಂಸತ್ತು ಅಂತಹ 14 ಮಸೂದೆಗಳನ್ನು ಅಂಗೀಕರಿಸಿದೆ, ಅವುಗಳಲ್ಲಿ ಆರು 1956 ರಲ್ಲಿ.14 ನೇ ಲೋಕಸಭೆಯಲ್ಲಿ, ಮಂಡಿಸಲಾದ 300 ಕ್ಕೂ ಹೆಚ್ಚು ಖಾಸಗಿ ಸದಸ್ಯರ ಮಸೂದೆಗಳಲ್ಲಿ, ಸರಿಸುಮಾರು ನಾಲ್ಕು ಪ್ರತಿಶತದಷ್ಟು ಮಸೂದೆಗಳ ಮೇಲೆ ಚರ್ಚೆ ನಡೆಯಿತು, ಆದರೆ, ಉಳಿದ 96 ಪ್ರತಿಶತದಷ್ಟು ಮಸೂದೆಗಳು ಸಂಸತ್ತಿನಲ್ಲಿ ಒಂದೇ ಒಂದು ಸಂವಾದವನ್ನೂ ಕಾಣದೆ ಬಿದ್ದುಹೋದವು.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
4 ಕಾರ್ಮಿಕ ಸಂಹಿತೆಗಳು:
(4 labour codes)
ಸಂದರ್ಭ:
ಬಹುನಿರೀಕ್ಷಿತ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಯು, ಮೂಲತಃ ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಮಾಡಲು ನಿಗದಿಪಡಿಸಲಾಗಿತ್ತು, ಆದರೆ ಅದು ಜಾರಿಗೊಳ್ಳ್ತು ಇನ್ನೂ ಕನಿಷ್ಠ ಮೂರು ತಿಂಗಳುಗಳ ಸಮಯವನ್ನು ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ ಏಕೆಂದರೆ ಎಲ್ಲಾ ರಾಜ್ಯಗಳು ಅವುಗಳ ಮೇಲೆ ನಿಯಮಗಳನ್ನು ರೂಪಿಸಿಲ್ಲ.
ಸಮಸ್ಯೆ ಏನು?
ಕಾರ್ಮಿಕ ವಿಷಯವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. 23 ರಾಜ್ಯಗಳು ಲೇಬರ್ ಕೋಡ್ಗಳ ಮೇಲೆ ನಿಯಮಗಳನ್ನು ರೂಪಿಸಿವೆ ಆದರೆ ಇನ್ನೂ ಏಳು ರಾಜ್ಯಗಳು ಕಾರ್ಮಿಕ ಸಂಹಿತೆಗಳ ಮೇಲೆ ನಿಯಮಗಳನ್ನು ರೂಪಿಸಬೇಕಿದೆ.
ಹಿನ್ನೆಲೆ:
ನಾಲ್ಕು ಕಾರ್ಮಿಕ ಸಂಹಿತೆಗಳು ಯಾವುವು ಎಂದರೆ- ‘ವೇತನ, ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ ಮತ್ತು ಕೈಗಾರಿಕಾ ಸಂಬಂಧಗಳು’(labour codes on wages, social security, occupational safety and industrial relations) ಗಳಾಗಿವೆ.
- ಈ ಹೊಸ ಕೋಡ್ಗಳ ಅಡಿಯಲ್ಲಿ, ಸಾಮಾನ್ಯವಾಗಿ, ಉದ್ಯೋಗ ಮತ್ತು ಕೆಲಸದ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಅಂಶಗಳು ಅಂದರೆ ನೌಕರರು ಪಡೆವ ವೇತನ (ಟೇಕ್ ಹೋಮ್ ಸಂಬಳ), ಕೆಲಸದ ಸಮಯ ಮತ್ತು ವಾರದಲ್ಲಿ ಕೆಲಸದ ದಿನಗಳ ಸಂಖ್ಯೆಯಲ್ಲಿ ಬದಲಾಗಬಹುದು.
ವಿರೋಧ:
ಆದಾಗ್ಯೂ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ, ಕಾರ್ಮಿಕ ಸಂಘಗಳು ಈ ವಾರ ಈ ಕಾರ್ಮಿಕ ಸಂಹಿತೆಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಲು ಯೋಜಿಸಿವೆ.
ಕಾರ್ಮಿಕ ಸಂಘಟನೆಗಳ ಬೇಡಿಕೆಗಳು:
ವೇತನ ಮತ್ತು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಸಂಹಿತೆ (Codes) ಗಳನ್ನು ನಾವು ಒಪ್ಪುತ್ತೇವೆ ಮತ್ತು ಅವುಗಳನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಕಾರ್ಮಿಕ ಸಂಘಟನೆಗಳು ಹೇಳುತ್ತವೆ.
ಕಾರ್ಮಿಕ ಸಂಘಗಳಿಂದ ‘ಕೈಗಾರಿಕಾ ಸಂಬಂಧಗಳು’ (Industrial Relations) ಮತ್ತು ‘ಔದ್ಯೋಗಿಕ ಸುರಕ್ಷತೆ’ (Occupational Safety) ಕುರಿತು ಮಾಡಲಾದ ಕೋಡ್ಗಳ ಕುರಿತು ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು, ಅವುಗಳನ್ನು ಪುನರ್ ಪರಿಶೀಲಿಸಬೇಕೆಂಬ ಬೇಡಿಕೆಯಿದೆ.
ಕಾರ್ಮಿಕ ಸಂಹಿತೆ (labour codes) ಗಳ ಕುರಿತು:
ಈ ಹೊಸ ಕಾನೂನುಗಳಲ್ಲಿ 44 ಕಾರ್ಮಿಕ ಕಾನೂನುಗಳನ್ನು ‘ನಾಲ್ಕು ಕೋಡ್ಗಳಾಗಿ’ ಏಕೀಕರಿಸಲಾಗಿದೆ:ವೇತನ ಸಂಹಿತೆ (Wage Code, ಸಾಮಾಜಿಕ ಭದ್ರತಾ ಕೋಡ್ (Social Security Code), ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕೋಡ್(Occupational Safety, Health & Working Conditions Code) ಮತ್ತು ಕೈಗಾರಿಕಾ ಸಂಬಂಧಗಳ ಕೋಡ್ (Industrial Relations Code).
- ಈ ಎಲ್ಲಾ ನಾಲ್ಕು ಕೋಡ್ಗಳನ್ನು ಈಗಾಗಲೇ ಸಂಸತ್ತು ಅಂಗೀಕರಿಸಿದೆ ಮತ್ತು ಅವುಗಳಿಗೆ ರಾಷ್ಟ್ರಪತಿಗಳ ಒಪ್ಪಿಗೆಯನ್ನೂ ಪಡೆಯಲಾಗಿದೆ.
ಈ ನಾಲ್ಕು ಸಂಹಿತೆ/ಕೋಡ್ಗಳು:
ವೇತನ ಸಂಹಿತೆ, 2019 (The Code on Wages, 2019): ಈ ಕೋಡ್ ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ಎಲ್ಲಾ ಉದ್ಯೋಗಗಳಲ್ಲಿ ‘ಸಂಬಳ’/‘ವೇತನ’ ಮತ್ತು ಬೋನಸ್ ಪಾವತಿಗಳನ್ನು ನಿಯಂತ್ರಿಸುವುದು ಮತ್ತು ಪ್ರತಿಯೊಂದು ಉದ್ಯಮ, ವೃತ್ತಿ, ಉದ್ಯೋಗ ಅಥವಾ ಉತ್ಪಾದನೆಯಲ್ಲಿ ಒಂದೇ ರೀತಿಯ ಕೆಲಸ ಮಾಡುವ ಉದ್ಯೋಗಿಗಳಿಗೆ ಸಮಾನ ಸಂಭಾವನೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
‘ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕೋಡ್’ 2020 (Occupational Safety, Health & Working Conditions Code, 2020): ಇದು 10 ಅಥವಾ ಅದಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಸಂಸ್ಥೆಗಳಲ್ಲಿನ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಪರಿಸ್ಥಿತಿಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲಾ ಗಣಿಗಳು ಮತ್ತು ಬಂದರುಗಳು / ಹಡಗುಕಟ್ಟೆಗಳಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಪರಿಸ್ಥಿತಿಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ.
ಸಾಮಾಜಿಕ ಭದ್ರತಾ ಸಂಹಿತೆ, 2020(Social Security Code, 2020): ಇದರ ಅಡಿಯಲ್ಲಿ, ಸಾಮಾಜಿಕ ಭದ್ರತೆ ಮತ್ತು ಹೆರಿಗೆ ಪ್ರಯೋಜನಗಳಿಗೆ ಸಂಬಂಧಿಸಿದ ಒಂಬತ್ತು ಕಾನೂನುಗಳನ್ನು ಏಕೀಕರಿಸಲಾಗುತ್ತದೆ.
ಕೈಗಾರಿಕಾ ಸಂಬಂಧಗಳ ಸಂಹಿತೆ, 2020 (Industrial Relations Code, 2020): ಇದರ ಅಡಿಯಲ್ಲಿ, ಮೂರು ಕಾರ್ಮಿಕ ಕಾನೂನುಗಳು; ಟ್ರೇಡ್ ಯೂನಿಯನ್ಸ್ ಆಕ್ಟ್, 1926, ಇಂಡಸ್ಟ್ರಿಯಲ್ ಎಂಪ್ಲಾಯ್ಮೆಂಟ್ (ಸ್ಥಾಯಿ ಆದೇಶಗಳು) ಕಾಯಿದೆ, 1946 ಮತ್ತು ಕೈಗಾರಿಕಾ ವಿವಾದಗಳ ಕಾಯಿದೆ, 1947 ಅನ್ನು ಕ್ರೋಡೀಕರಿಸಲು ಪ್ರಯತ್ನಿಸುತ್ತದೆ. ಇದು ಕೈಗಾರಿಕೆಗಳ ಮೇಲಿನ ಕಾರ್ಮಿಕ ಕಾನೂನುಗಳ ಅನುಸರಣೆ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ದೇಶದಲ್ಲಿ ವ್ಯಾಪಾರ ವಾತಾವರಣವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಈ ಕೋಡ್ಗಳೊಂದಿಗಿನ ಸಮಸ್ಯೆಗಳು:
- ನಿಯಮಿತ ಕಾರ್ಮಿಕರಿಗೆ ಕೆಲಸದ ಸಮಯದ ನಿಬಂಧನೆಗಳಲ್ಲಿ ‘ದಿನದಲ್ಲಿ ಎಂಟು ಗಂಟೆಗಳಿಗಿಂತ ಹೆಚ್ಚಿನ ಕೆಲಸದ ಸಮಯವನ್ನು ನಿಗದಿಪಡಿಸುವುದು’ ಇದರ ಕುರಿತಂತೆ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ.
- ಈ ಕೋಡ್ಗಳಲ್ಲಿ ಅರೆಕಾಲಿಕ ಉದ್ಯೋಗಿಗಳಿಗೆ ಇದೇ ರೀತಿಯ ನಿಬಂಧನೆಗಳನ್ನು ಹಾಕಲಾಗಿಲ್ಲ.
- ನೌಕರರ ವೇತನದ ಮೇಲೆ ಪರಿಣಾಮ ಬೀರುವ ನಿಬಂಧನೆಗಳನ್ನು ಸಹ ಸೇರಿಸಲಾಗಿದೆ.
- ಕಾರ್ಮಿಕ ಸಂಹಿತೆಗಳಲ್ಲಿ, ನಿಬಂಧನೆಗಳ ಅನುಸರಣೆಗಾಗಿ ಮತ್ತು ಎರಡನೇ ಅಪರಾಧಕ್ಕಾಗಿ ವ್ಯವಹಾರಗಳ ಮೇಲೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ಹೆಚ್ಚಿನ ಸಣ್ಣ ವ್ಯಾಪಾರಗಳು ಕಾರ್ಮಿಕ ಸಂಹಿತೆಗಳಲ್ಲಿ ಮಾಡಿದ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮತ್ತು ಕಾರ್ಯಗತಗೊಳಿಸುವ ಯಾವುದೇ ಸ್ಥಿತಿಯಲ್ಲಿಲ್ಲ.
ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
UAEಯ ಗೋಲ್ಡನ್ ವೀಸಾ ಯೋಜನೆ:
(UAE’s Golden Visa)
ಸಂದರ್ಭ:
ಮಾರ್ಚ್ 29 ರಂದು ಅಬುಧಾಬಿಯಲ್ಲಿ ಬಾಲಿವುಡ್ ಎ-ಲಿಸ್ಟರ್ ರಣವೀರ್ ಸಿಂಗ್ ಅವರಿಗೆ ಯುಎಇ ಗೋಲ್ಡನ್ ವೀಸಾವನ್ನು ನೀಡಲಾಯಿತು. ಹತ್ತು ವರ್ಷಗಳ ಅನುಮತಿ / ಪರ್ಮಿಟ್ ಪಡೆದ ಇತ್ತೀಚಿನ ಬಾಲಿವುಡ್ ಪ್ರತಿಭೆ ಇವರು.
- ಇಲ್ಲಿಯವರೆಗೆ, 10 ಕ್ಕೂ ಹೆಚ್ಚು ಬಾಲಿವುಡ್ ನಟರು ಸಂಯುಕ್ತ ಅರಬ್ ಒಕ್ಕೂಟ (United Arab Emirates- UAE) ಸರ್ಕಾರದಿಂದ ಗೋಲ್ಡನ್ ವೀಸಾ ಪಡೆದಿದ್ದಾರೆ.
ಏನದು ಗೋಲ್ಡನ್ ವೀಸಾ?
2019 ರಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೀರ್ಘಾವಧಿಯ ನಿವಾಸ ವೀಸಾಗಳಿಗಾಗಿ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ, ಇದರ ಅಡಿಯಲ್ಲಿ ವಿದೇಶಿ ಪ್ರಜೆಗಳು ಯಾವುದೇ ರಾಷ್ಟ್ರೀಯ ಪ್ರಾಯೋಜಕರ ಅಗತ್ಯವಿಲ್ಲದೆ ಯುಎಇಯಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅವಕಾಶ ನೀಡಲಾಗಿದೆ ಮತ್ತು ಇದರ ಹೊರತಾಗಿ ಈ ಹೊಸ ವ್ಯವಸ್ಥೆಯಡಿಯಲ್ಲಿ ವಿದೇಶಿ ಪ್ರಜೆಗಳು ವ್ಯವಹಾರದ ಶೇಕಡಾ 100 ರಷ್ಟು ಮಾಲೀಕತ್ವದೊಂದಿಗೆ ವ್ಯಾಪಾರ-ವಹಿವಾಟು ನಡೆಸಲು ಸೌಲಭ್ಯವನ್ನು ನೀಡಲಾಗುತ್ತದೆ.
ಗೋಲ್ಡನ್ ವೀಸಾ ಅಡಿಯಲ್ಲಿ ನೀಡಲಾಗುವ ಕೊಡುಗೆಗಳು:
ಗೋಲ್ಡನ್ ವೀಸಾ ವ್ಯವಸ್ಥೆಯು ಮುಖ್ಯವಾಗಿ ಈ ಕೆಳಗಿನ ಗುಂಪುಗಳಿಗೆ ಸೇರಿದ ಜನರಿಗೆ ದೀರ್ಘಾವಧಿಯ ನಿವಾಸದ (5 ಮತ್ತು 10 ವರ್ಷಗಳು) ಅವಕಾಶಗಳನ್ನು ನೀಡುತ್ತದೆ:
- ಹೂಡಿಕೆದಾರರು, ಉದ್ಯಮಿಗಳು, ಅತ್ಯುತ್ತಮ ಪ್ರತಿಭೆ ಹೊಂದಿರುವ ವ್ಯಕ್ತಿಗಳು ಸಂಶೋಧಕರು, ವೈದ್ಯಕೀಯ ವೃತ್ತಿಪರರು ಮತ್ತು ವೈಜ್ಞಾನಿಕ ಮತ್ತು ಜ್ಞಾನ ಕ್ಷೇತ್ರಗಳಲ್ಲಿರುವ ಪ್ರತಿಭಾವಂತರು ಮತ್ತು ಅಸಾಧಾರಣ ವಿದ್ಯಾರ್ಥಿಗಳು.
ಅರ್ಹತಾ ಅವಶ್ಯಕತೆಗಳು (ಸಂಕ್ಷಿಪ್ತ ಅವಲೋಕನವನ್ನು ಮಾಡಿರಿ; ಕಂಠ ಪಾಠ ಮಾಡಬೇಕಾಗಿಲ್ಲ):
Eligibility requirements (Have a brief overview; need not mug up):
ಹೂಡಿಕೆದಾರರಿಗೆ:
- ಕನಿಷ್ಠ 10 ಮಿಲಿಯನ್ AED ಠೇವಣಿ (ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್) ಹೂಡಿಕೆ ನಿಧಿ ಅಥವಾ ಕಂಪನಿಯ ರೂಪದಲ್ಲಿ 10 ಮಿಲಿಯನ್ ಮೌಲ್ಯದ ಸಾರ್ವಜನಿಕ ಬಂಡವಾಳ ಹೂಡಿಕೆ.
- ಒಟ್ಟು ಹೂಡಿಕೆಯ 60% ರಿಯಲ್ ಎಸ್ಟೇಟ್ ರೂಪದಲ್ಲಿ ಇರಬಾರದು. ಅಂದರೆ ಸ್ಥಿರಾಸ್ತಿಯ ರೂಪದಲ್ಲಿ ಇರಬಾರದು.
- ಹೂಡಿಕೆ ಮಾಡಲಾದ ಮೊತ್ತವನ್ನು ಸಾಲವಾಗಿ ನೀಡಬಾರದು, ಅಥವಾ ಸ್ವತ್ತುಗಳ ಸಂದರ್ಭದಲ್ಲಿ, ಹೂಡಿಕೆದಾರರು ಪೂರ್ಣ ಮಾಲೀಕತ್ವವನ್ನು ಪಡೆದುಕೊಳ್ಳಬೇಕು.
- ಹೂಡಿಕೆದಾರರು ಕನಿಷ್ಠ ಮೂರು ವರ್ಷಗಳವರೆಗೆ ಹೂಡಿಕೆಯನ್ನು ಉಳಿಸಿಕೊಳ್ಳಲು ಶಕ್ತರಾಗಿರಬೇಕು.
- ವ್ಯಾಪಾರ ಪಾಲುದಾರರನ್ನು ಸೇರಿಸಲು ಗೋಲ್ಡನ್ ವಿಸಾ ಅನ್ನು ವಿಸ್ತರಿಸಬಹುದು, ಮತ್ತು ಭಾಗವಹಿಸುವ ಪ್ರತಿ ಪಾಲುದಾರನು 10 ಮಿಲಿಯನ್ AED ಕೊಡುಗೆ ನೀಡುತ್ತಾನೆ.
- ಗೋಲ್ಡನ್ ವಿಸಾ ಹೊಂದಿರುವವರು ತಮ್ಮ ಸಂಗಾತಿ ಮತ್ತು ಮಕ್ಕಳನ್ನು, ಒಬ್ಬ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಒಬ್ಬ ಸಲಹೆಗಾರರನ್ನು ಸಹ ಈ ವೀಸಾ ಸೌಲಭ್ಯಕ್ಕೆ ಸೇರಿಸಿಕೊಳ್ಳಬಹುದು.
ವಿಶೇಷ ಪ್ರತಿಭೆ ಹೊಂದಿರುವ ವ್ಯಕ್ತಿಗಳಿಗೆ:
ಈ ವರ್ಗದಲ್ಲಿ ವೈದ್ಯರು, ಸಂಶೋಧಕರು, ವಿಜ್ಞಾನಿಗಳು, ಹೂಡಿಕೆದಾರರು ಮತ್ತು ಕಲಾವಿದರು ಸೇರಿದ್ದಾರೆ. ಈ ವ್ಯಕ್ತಿಗಳಿಗೆ ಆಯಾ ಇಲಾಖೆಗಳು ಮತ್ತು ಕ್ಷೇತ್ರಗಳು ಮಾನ್ಯತೆ ನೀಡಿದ ನಂತರ 10 ವರ್ಷಗಳ ವೀಸಾ ನೀಡಬಹುದು. ಈ ವೀಸಾವು, ಅವರ ಸಂಗಾತಿಗಳು ಮತ್ತು ಮಕ್ಕಳಿಗೂ ವಿಸ್ತರಣೆಯಾಗುತ್ತದೆ.
5 ವರ್ಷಗಳ ವೀಸಾಕ್ಕೆ ಅರ್ಹತೆ:
- ಹೂಡಿಕೆದಾರರು ಕನಿಷ್ಠ 5 ಮಿಲಿಯನ್ AED ಯ ಒಟ್ಟು ಮೌಲ್ಯದ ಸ್ವತ್ತುಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
- ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ ಮೊತ್ತವು ಸಾಲದ ಆಧಾರದ ಮೇಲೆ ಇರಬಾರದು.
- ಆಸ್ತಿಯನ್ನು ಕನಿಷ್ಠ ಮೂರು ವರ್ಷಗಳವರೆಗೆ ಉಳಿಸಿಕೊಳ್ಳಬೇಕು.
ಅತ್ಯುತ್ತಮ ವಿದ್ಯಾರ್ಥಿಗಳಿಗಾಗಿ:
- ಸರ್ಕಾರಿ ಮತ್ತು ಖಾಸಗಿ ಮಾಧ್ಯಮಿಕ ಶಾಲೆಗಳಲ್ಲಿ ಕನಿಷ್ಠ 95% ದರ್ಜೆಯನ್ನು ಸಾಧಿಸುವಅತ್ಯುತ್ತಮ ವಿದ್ಯಾರ್ಥಿಗಳು.
- ದೇಶಿಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪದವಿ ಪಡೆದ ನಂತರ ಕನಿಷ್ಠ 3.75 ಜಿಪಿಎ ಹೊಂದಿರಬೇಕು.
ಈ ನಡೆಯ ಹಿಂದಿನ ಕಾರಣಗಳು:
ಕೋವಿಡ್ -19 ಸಾಂಕ್ರಾಮಿಕ ಮತ್ತು ತೈಲ ಬೆಲೆಗಳ ಕುಸಿತದಿಂದಾಗಿ ಯುಎಇಯ ಆರ್ಥಿಕತೆಯು ತೀವ್ರವಾಗಿ ತತ್ತರಿಸಿದೆ, ಇದು ಅನೇಕ ವಲಸಿಗರು UAE ಯನ್ನು ತೊರೆಯಲು ಕಾರಣವಾಗಿದೆ.
- UAE ಸರ್ಕಾರದ ಈ ಕ್ರಮವು ವಲಸೆ ಹೋದವರನ್ನು ಮರಳಿ ಕರೆತರುವುದು ಮತ್ತು ಗಲ್ಫ್ ದೇಶದಲ್ಲಿ “ಪ್ರತಿಭಾವಂತ ಜನರು ಮತ್ತು ಉತ್ಕೃಷ್ಟ ಮನಸ್ಸಿನ ಜನರನ್ನು” ಉಳಿಸಿಕೊಳ್ಳುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡಲು ಉದ್ದೇಶಿಸಿದೆ.
- UAE ಸರ್ಕಾರದ ಈ ವಿನಾಯಿತಿಗಳು, ಪರಿಣತಿಯ ವಿವಿಧ ಕ್ಷೇತ್ರಗಳಿಂದ ಪ್ರತಿಭಾನ್ವಿತ ವೃತ್ತಿಪರರನ್ನು ಆಕರ್ಷಿಸುತ್ತವೆ ಮತ್ತು ನಾವೀನ್ಯತೆ, ಸೃಜನಶೀಲತೆ ಮತ್ತು ಅನ್ವಯಿಕ ಸಂಶೋಧನೆಗಳನ್ನು ಮತ್ತಷ್ಟು ಪ್ರೋತ್ಸಾಹಿಸುತ್ತವೆ,ಯುಎಇ ಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ವಿಶ್ವದ ಅತ್ಯಂತ ಪ್ರತಿಭಾವಂತ ಮನಸ್ಸುಗಳಿಗೆ ಮನವಿಯನ್ನು ಮಾಡುತ್ತದೆ.
ಭಾರತಕ್ಕೆ ಮಹತ್ವ:
- ಈ ಹೊಸ ನಿಯಮಗಳು ಗಲ್ಫ್ ರಾಷ್ಟ್ರಕ್ಕೆ ಹೆಚ್ಚಿನ ಭಾರತೀಯ ವೃತ್ತಿಪರರು ಮತ್ತು ಉದ್ಯಮಿಗಳನ್ನು ಆಕರ್ಷಿಸುತ್ತದೆ ಮತ್ತು ಭಾರತ-ಯುಎಇ ಸಂಬಂಧಗಳನ್ನು ಬಲಪಡಿಸುತ್ತದೆ.
- ಕೋವಿಡ್ -19 ಸಂಬಂಧಿತ ನಿರ್ಬಂಧಗಳನ್ನು ಸಡಿಲಿಸಿದ ನಂತರ ಕೆಲಸ ಪುನರಾರಂಭಿಸಲು ಬಯಸುವ ಮಹತ್ವಾಕಾಂಕ್ಷೆಯ ಭಾರತೀಯರು UAE ಗೆ ಮರಳಲು ಸಹ ಈ ನಿಯಮಗಳು ಅನುಕೂಲಕರವಾಗಿವೆ, ಇದಕ್ಕಾಗಿ ಭಾರತವು 2020 ರ ನವೆಂಬರ್ ಆರಂಭದಲ್ಲಿ ಗಲ್ಫ್ ಸಹಕಾರ ಮಂಡಳಿಯ (GCC) ಸದಸ್ಯರಲ್ಲಿ ವಿನಂತಿಸಿಕೊಂಡಿತ್ತು.
ಪ್ರಿಲಿಮ್ಸ್ಗೆ ಸಂಬಂಧಿಸಿದ ಸಂಗತಿಗಳು:
ಕಾಡು ಪ್ರಾಣಿಗಳಿಗೆ ಕಾನೂನುಹಕ್ಕು ನೀಡಿದ ಈಕ್ವೆಡಾರ್:
ದಕ್ಷಿಣ ಅಮೆರಿಕಾ ಖಂಡದ ಈಕ್ವೆಡಾರ್ ಎಂಬ ದೇಶವು ಕಾಡು ಪ್ರಾಣಿಗಳಿಗೆ ಕಾನೂನು ಹಕ್ಕುಗಳನ್ನು ನೀಡಿದ ವಿಶ್ವದ ಮೊದಲ ದೇಶವಾಗಿದೆ.
ಅಫೇಸಿಯಾ:
(Aphasia)
- ಇದು ಮೆದುಳಿನ ಅಸ್ವಸ್ಥತೆಯಾಗಿದ್ದು ಅದು ಮಾತನಾಡುವ, ಓದುವ ಮತ್ತು ಬರೆಯುವ ಸಮಸ್ಯೆಗಳಿಗೆ ಕಾರಣವಾಗುತ್ತದೆ.
- ಪಾರ್ಶ್ವವಾಯು, ಗೆಡ್ಡೆ, ತಲೆಗೆ ಪೆಟ್ಟು ಅಥವಾ ಮೆದುಳಿನ ಭಾಷಾ ಕೇಂದ್ರಗಳಿಗೆ ಉಂಟಾಗುವ ಇತರ ಹಾನಿಯು ಅಫೇಸಿಯಾವನ್ನು ಉಂಟುಮಾಡಬಹುದು. ಮೆದುಳಿನ ಸೋಂಕು ಅಥವಾ ಆಲ್ಝೈಮರ್ನ ಕಾಯಿಲೆಯು ಅದನ್ನು ಪ್ರಚೋದಿಸಬಹುದು.
ಬಾಮಿಯನ್ ಬೌದ್ಧರು:
(Bamiyan Buddhas)
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಮೆಸ್ ಅಯ್ನಾಕ್ (Mes Aynak) ನಲ್ಲಿರುವ ಪುರಾತನ ಬುದ್ಧನ ಪ್ರತಿಮೆಗಳನ್ನು ರಕ್ಷಿಸುವುದಾಗಿ ಹೇಳಿದೆ, ಮೆಸ್ ಅಯ್ನಾಕ್ ಪ್ರದೇಶವು ತಾಮ್ರದ ಗಣಿ ಸ್ಥಳವೂ ಆಗಿದ್ದು ಅಲ್ಲಿ ಚೀನಾ ಹೂಡಿಕೆ ಮಾಡಬಹುದು ಎಂದು ತಾಲಿಬಾನ್ ಆಶಯ ವ್ಯಕ್ತಪಡಿಸಿದೆ.
ಹಿಂದೆ, ಅವರು ಫಿರಂಗಿ, ಸ್ಫೋಟಕಗಳು ಮತ್ತು ರಾಕೆಟ್ಗಳನ್ನು ಬಳಸಿ ಬಾಮಿಯಾನ್ನಲ್ಲಿ ಶತಮಾನಗಳಷ್ಟು ಹಳೆಯದಾದ ಬುದ್ಧನ ಪ್ರತಿಮೆಗಳನ್ನು ನೆಲಸಮಗೊಳಿಸಿದ್ದರು.
ಮೆಸ್ ಅಯ್ನಾಕ್ ಪ್ರತಿಮೆಗಳ ಕುರಿತ ತಾಲಿಬಾನ್ ನ ಬದಲಾದ ನಿಲಿವು ಸ್ಪಷ್ಟವಾಗಿ ಆರ್ಥಿಕ ಹಿತಾಸಕ್ತಿಗಳಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ತೋರುತ್ತದೆ, ತಾಮ್ರದ ಗಣಿಗಳಲ್ಲಿ ಚೀನೀ ಹೂಡಿಕೆಯಿಂದ ದೊರೆಯುವ ಆದಾಯದ ಮೇಲೆ ತಾಲಿಬಾನ್ ನ ಹತಾಶ ಆಡಳಿತವು ಕಣ್ಣಿಟ್ಟಿದೆ.
ಪ್ರಾಚೀನ ಬಾಮಿಯನ್ ಬುದ್ಧ ಪ್ರತಿಮೆಗಳು:
ಬಾಮಿಯಾನ್ ಕಣಿವೆ, ಹಿಂದೂ ಕುಶ್ ಪರ್ವತಗಳಲ್ಲಿ ಮತ್ತು ಬಾಮಿಯಾನ್ ನದಿಯ ಉದ್ದಕ್ಕೂ, ಆರಂಭಿಕ ರೇಷ್ಮೆ ಮಾರ್ಗಗಳ ಪ್ರಮುಖ ನೋಡ್ ಆಗಿತ್ತು, ಇದು ವಾಣಿಜ್ಯ ಮತ್ತು ಸಾಂಸ್ಕೃತಿಕ ವಿನಿಮಯದ ಕೇಂದ್ರವಾಗಿ ಹೊರಹೊಮ್ಮಿತು.
- ಬಮಿಯನ್ ಬುದ್ಧ ಪ್ರತಿಮೆಗಳು ಗುಪ್ತ, ಸಸ್ಸಾನಿಯನ್ ಮತ್ತು ಹೆಲೆನಿಸ್ಟಿಕ್ ಕಲಾತ್ಮಕ ಶೈಲಿಗಳ ಸಮ್ಮಿಶ್ರಣದ ಉತ್ತಮ ಉದಾಹರಣೆಗಳಾಗಿವೆ.
- ಅವು ಕ್ರಿ.ಶ. 5ನೇ ಶತಮಾನದಷ್ಟು ಹಿಂದಿನವು ಎಂದು ಹೇಳಲಾಗುತ್ತದೆ.
- ಅವುಗಳು ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಎತ್ತರದ ಬುದ್ಧನ ಪ್ರತಿಮೆಗಳಾಗಿದ್ದವು.
- ಅವರನ್ನು ಸಲ್ಸಾಲ್ ಮತ್ತು ಶಮಾಮಾ (Salsal and Shamama) ಎಂದು ಕರೆಯಲಾಗುತ್ತಿತ್ತು.
- ಸಾಲ್ಸಾಲ್ ಎಂದರೆ “ಬೆಳಕು ಬ್ರಹ್ಮಾಂಡದ ಮೂಲಕ ಹೊಳೆಯುತ್ತದೆ”; ಶಮಾಮಾ “ರಾಜ ಮಾತೆ”.
- UNESCO 2003 ರಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಈ ಅವಶೇಷಗಳನ್ನು ಸೇರಿಸಿತು.
ಹರಿಚಂದ್ ಠಾಕೂರ್:
ಶ್ರೀ ಶ್ರೀ ಹರಿಚಂದ್ ಠಾಕೂರ್ ಅವರ 211 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ಮಾತುವಾ ಧರ್ಮ ಮಹಾ ಮೇಳ 2022” ರ ಉದ್ಘಾಟನಾ ಸಮಯದಲ್ಲಿ ಮಾಟುವಾ ಸಮುದಾಯವನ್ನು ಉದ್ದೇಶಿಸಿ ಜಾಲ ಗೋಷ್ಠಿಯಲ್ಲಿ ಮಾತನಾಡಿದರು.
ಹರಿಚಂದ್ ಠಾಕೂರ್ ಅವರು ಬಂಗಾಳ ಪ್ರೆಸಿಡೆನ್ಸಿಯ ಅಸ್ಪೃಶ್ಯ ಜನರ ನಡುವೆ ಕೆಲಸ ಮಾಡಿದರು.
ಅವರು 1812 ರಲ್ಲಿ ಬಾಂಗ್ಲಾದೇಶದ ಒರಕಂಡಿಯಲ್ಲಿ ಜನಿಸಿದರು.
- ಠಾಕೂರ್ ಅವರ ಕುಟುಂಬವು ವೈಷ್ಣವ ಹಿಂದೂಗಳಾಗಿದ್ದು, ಅವರು ಮಾಟುವಾ ಎಂದು ಕರೆಯಲ್ಪಡುವ ವೈಷ್ಣವ ಹಿಂದೂ ಧರ್ಮದ ಪಂಥವನ್ನು ಸ್ಥಾಪಿಸಿದರು.
- ನಾಮಶೂದ್ರ ಸಮುದಾಯದ ಸದಸ್ಯರು ಇದನ್ನು ಅಳವಡಿಸಿಕೊಂಡರು ಮತ್ತು ನಂತರ ಅವರನ್ನು ಚಂಡಾಲರು ಎಂಬ ಸಾಮಾನ್ಯ ಹೆಸರಿನಿಂದ ಕರೆಯಲಾಯಿತು. ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗಿತ್ತು.
- ಈ ಪಂಥವು ಜಾತಿ ದಬ್ಬಾಳಿಕೆಯನ್ನು ವಿರೋಧಿಸಿತು ಮತ್ತು ನಂತರ ಮಾಲಿಗಳು ಮತ್ತು ತೇಲಿಗಳನ್ನು ಒಳಗೊಂಡಿರುವ ಮೇಲ್ಜಾತಿಗಳಿಂದ ಅಂಚಿನಲ್ಲಿರುವ ಇತರ ಸಮುದಾಯಗಳ ಅನುಯಾಯಿಗಳನ್ನು ಆಕರ್ಷಿಸಿತು.
- ಠಾಕೂರನ ಅನುಯಾಯಿಗಳು ಅವರನ್ನು ದೇವರೆಂದು ಪರಿಗಣಿಸುತ್ತಾರೆ ಮತ್ತು ಠಾಕೂರ್ ಅವರನ್ನು ವಿಷ್ಣು ಅಥವಾ ಕೃಷ್ಣನ ಅವತಾರವೆಂದು ಪರಿಗಣಿಸುತ್ತಾರೆ. ನಂತರ, ಅವರನ್ನು ಶ್ರೀ ಶ್ರೀ ಹರಿಚಂದ್ ಠಾಕೂರ್ ಎಂದು ಕರೆಯಲಾಯಿತು.
ಶ್ರಿಂಕ್ ಫ್ಲೇಷನ್:
(Shrinkflation)
ಸಂಕೋಚನ (ಶ್ರಿಂಕ್ ಫ್ಲೇಷನ್) ಎಂಬುದು ಮಾರಾಟದ ಉತ್ಪನ್ನದ ಮೇಲಿನ ಸ್ಟಿಕ್ಕರ್ ಬೆಲೆಯನ್ನು ಹಾಗೆಯೇ ಉಳಿಸಿಕೊಂಡು ಉತ್ಪನ್ನದ ಗಾತ್ರವನ್ನು ಕಡಿಮೆ ಮಾಡುವ ಕ್ರಮವಾಗಿದೆ.
- ಇದು ಗುಪ್ತ ಹಣದುಬ್ಬರದ (hidden inflation) ಒಂದು ರೂಪವಾಗಿದೆ.
- ಸಂಕೋಚನವನ್ನು ವ್ಯಾಪಾರ ಮತ್ತು ಶೈಕ್ಷಣಿಕ ಸಂಶೋಧನೆಯಲ್ಲಿ ಪ್ಯಾಕೇಜ್ ಡೌನ್ಸೈಸಿಂಗ್ ಎಂದೂ ಕರೆಯಲಾಗುತ್ತದೆ.