ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1:
- ಲಾ ನಿನಾ ಮತ್ತು ಬೆಚ್ಚಗಿನ ಆರ್ಕ್ಟಿಕ್ ನಡುವಿನ ಪರಸ್ಪರ ಕ್ರಿಯೆ.
ಸಾಮಾನ್ಯ ಅಧ್ಯಯನ ಪತ್ರಿಕೆ 2:
- ಡಿಲಿಮಿಟೇಶನ್ ಆಯೋಗ.
- ರಾಷ್ಟ್ರೀಯ ಮಹಿಳಾ ಆಯೋಗ.
- ಬ್ರಿಕ್ಸ್
- ಹೌತಿಗಳು ಮತ್ತು ಯೆಮೆನ್ ಯುದ್ಧ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
- ಅಸ್ಸಾಂ ಮೇಘಾಲಯ ಗಡಿ ವಿವಾದ.
ಪ್ರಿಲಿಮ್ಸ್ಗೆ ಸಂಬಂಧಿಸಿದ ಸಂಗತಿಗಳು:
- ದಿ ಫ್ರಾಂಟಿಯರ್ 2022 ವರದಿ.
- ಒಂದು ಕೊಂಬಿನ ಘೇಂಡಾಮೃಗ.
- ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ.
- P – 8I.
- ಭಾರತದ ಬಾಹ್ಯಾಕಾಶ ಆರ್ಥಿಕತೆ.
ಸಾಮಾನ್ಯ ಅಧ್ಯಯನ ಪತ್ರಿಕೆ 1:
ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.
ಲಾ ನಿನಾ ಮತ್ತು ಬೆಚ್ಚಗಿನ ಆರ್ಕ್ಟಿಕ್ ನಡುವಿನ ಪರಸ್ಪರ ಕ್ರಿಯೆ:
(Interaction between La Niña and the warm Arctic)
ಸಂದರ್ಭ:
ಭಾರತೀಯ ಹವಾಮಾನ ಇಲಾಖೆಯು (Indian Meteorological Department IMD) ಈ ಋತುವಿನ ಮೊದಲ ಶಾಖದ ಅಲೆ ಮತ್ತು ತೀವ್ರ ಶಾಖದ ಅಲೆಯನ್ನು ಮಾರ್ಚ್ 11 ರಂದು ಮತ್ತು ಮೊದಲ ಡಿಪ್ರೆಷನ್ / ಹವಾಮಾನದಲ್ಲಿ ದಿಢೀರ್ ಕುಸಿತವು (first depression) ಮಾರ್ಚ್ 3 ರಂದು ಕಂಡು ಬಂದಿದೆ ಎಂದು ಘೋಷಿಸಿದೆ.
- ತಜ್ಞರು ಹೇಳುವಂತೆ ಈ ವಿದ್ಯಮಾನವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹಳ ಬೇಗನೆ ಘಟಿಸಿದೆ ಮತ್ತು ಇದು ಬಹುಶಃ ಅನಿರೀಕ್ಷಿತ ಹವಾಮಾನ ವೈಪರೀತ್ಯದ ಕಾರಣದಿಂದಾಗಿರಬಹುದು, ಮತ್ತು ಇದು, ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿಸಿರಬಹುದು ಎಂದು ಹೇಳಿದ್ದಾರೆ.
ತಜ್ಞರ ಪ್ರಕಾರ:
ಆರಂಭಿಕ ಶಾಖದ ಅಲೆಗಳು, ಆರಂಭಿಕ ಕುಸಿತಗಳು / ಡಿಪ್ರೆಷನ್ ಗಳು ಮತ್ತು ವಿಲಕ್ಷಣವಾದ ಧೂಳಿನ ಬಿರುಗಾಳಿಗಳ ಹಿಂದಿನ ಕಾರಣವೆಂದರೆ ಸಮಭಾಜಕ ವೃತ್ತದ ಪೆಸಿಫಿಕ್ ಮಹಾಸಾಗರದಲ್ಲಿ ಲಾ ನಿನಾ ವಿದ್ಯಮಾನವು ಸಂಭವಿಸಿದಾಗ ಚಳಿಗಾಲದಲ್ಲಿ ಭಾರತದ ಮೇಲೆ ರೂಪುಗೊಳ್ಳುವ ಉತ್ತರ-ದಕ್ಷಿಣ ಕಡಿಮೆ ಒತ್ತಡದ ಮಾದರಿಯು ನಿರಂತರವಾಗಿ ಮುಂದುವರೆಯುವುದಾಗಿದೆ.
- 1998-2000ರಲ್ಲಿ ನಾವು ಕೊನೆಯ ಬಾರಿಗೆ ಲಾ ನಿನಾ ವಿದ್ಯಮಾನವನ್ನು ಮೂರು ವರ್ಷಗಳ ಕಾಲ ನಿರಂತರವಾಗಿ ಅನುಭವಿಸಿದ್ದೇವೆ ಮತ್ತು 2000 ರ ಮಾರ್ಚ್ನಲ್ಲಿ ಚಂಡಮಾರುತಕ್ಕೂ ಸಾಕ್ಷಿಯಾಗಿದ್ದೇವೆ.
ಲಾ ನಿನಾದ ಪರಿಣಾಮ:
- ಪೂರ್ವ ಮತ್ತು ಮಧ್ಯ ಪೆಸಿಫಿಕ್ ಮಹಾಸಾಗರದ ಮೇಲಿನ ಸಮುದ್ರದ ಮೇಲ್ಮೈ ತಾಪಮಾನವು ಲಾ ನಿನಾ ಸಮಯದಲ್ಲಿ ಸರಾಸರಿಗಿಂತ ತಂಪಾಗಿರುತ್ತದೆ.
- ಇದು ಗಾಳಿಯ ಒತ್ತಡದಲ್ಲಿನ ಬದಲಾವಣೆಯ ಮೂಲಕ ಸಮುದ್ರದ ಮೇಲ್ಮೈ ಮೇಲೆ ಬೀಸುವ ವಾಣಿಜ್ಯ ಮಾರುತಗಳ ಮೇಲೆ ಪರಿಣಾಮ ಬೀರುತ್ತದೆ.
- ವಾಣಿಜ್ಯ ಮಾರುತಗಳು ಈ ಹವಾಮಾನದ ಅಡಚಣೆಯನ್ನು ಬೇರೆಡೆಗೆ ಒಯ್ಯುತ್ತವೆ ಮತ್ತು ಪ್ರಪಂಚದ ದೊಡ್ಡ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ.
- ಭಾರತದಲ್ಲಿ, ಈ ವಿದ್ಯಮಾನವು ಹೆಚ್ಚಾಗಿ ಆರ್ದ್ರ ಮತ್ತು ಶೀತ ಚಳಿಗಾಲದೊಂದಿಗೆ ಸಂಬಂಧಿಸಿದೆ.
ಅತಿ ದೊಡ್ಡ ಕಳವಳ:
ಲಾ ನಿನಾ ಮತ್ತು ಬೆಚ್ಚಗಿನ ಆರ್ಕ್ಟಿಕ್ ನಡುವಿನ ಪರಸ್ಪರ ಕ್ರಿಯೆಯು ವಾಸ್ತವವಾಗಿ ಪ್ರಸ್ತುತ ಸಂಭವಿಸುತ್ತಿದ್ದರೆ ಅದು ಮಾನವ ಕುಲದ ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಉಂಟಾಗುತ್ತಿರುವ ಜಾಗತಿಕ ತಾಪಮಾನದ ಪ್ರಭಾವವಾಗಿದೆ.
‘ಎಲ್ ನಿನೊ’ ಮತ್ತು ‘ಲಾ ನಿನಾ’ ಎಂದರೇನು?
- ‘ಎಲ್ ನಿನೋ’ (El Niño) ಮತ್ತು ‘ಲಾ ನಿನಾ’ (La Niña) ಉಷ್ಣವಲಯದ ಪೆಸಿಫಿಕ್ ಸಾಗರದಲ್ಲಿ ಸಂಭವಿಸುವ ಎರಡು ನೈಸರ್ಗಿಕ ಹವಾಮಾನ ವಿದ್ಯಮಾನಗಳು ಮತ್ತು ಅವು ಪ್ರಪಂಚದಾದ್ಯಂತ ಹವಾಮಾನ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತವೆ.
- ‘ಎಲ್ ನಿನೋ’ ವಿದ್ಯಮಾನದ ಸಮಯದಲ್ಲಿ, ‘ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಸಾಗರ’ ದಲ್ಲಿ ಮೇಲ್ಮೈ ತಾಪಮಾನ ಏರುತ್ತದೆ, ಮತ್ತು ‘ಲಾ ನಿನಾ’ ಪರಿಸ್ಥಿತಿಗಳಲ್ಲಿ, ಪೂರ್ವ ಪೆಸಿಫಿಕ್ ಸಾಗರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ.
- ಒಟ್ಟಾಗಿ, ಈ ಎರಡು ವಿದ್ಯಮಾನಗಳನ್ನು ‘ENSO’ ಅಥವಾ ‘El Nio Southern Oscillation’ ಎಂದು ಕರೆಯಲಾಗುತ್ತದೆ.
‘ಎಲ್ ನಿನೋ’ ವಿದ್ಯಮಾನದ ಮೂಲ:
- ಹವಾಮಾನ ಮಾದರಿಯಲ್ಲಿ (Climate Pattern) ಅಸಂಗತತೆ ಉಂಟಾದಾಗ ಎಲ್ ನಿನೋ ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ.
- ಸಮಭಾಜಕವನ್ನು ಸಮೀಪಿಸುತ್ತಿದ್ದಂತೆ ಪಶ್ಚಿಮ ದಿಕ್ಕಿನ ವ್ಯಾಪಾರ ಮಾರುತಗಳು ದುರ್ಬಲಗೊಳ್ಳುತ್ತವೆ ಮತ್ತು ಇದರ ಪರಿಣಾಮವಾಗಿ, ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ, ಮೇಲ್ಮೈ ನೀರು ಪೂರ್ವದಿಂದ ದಕ್ಷಿಣ ಅಮೆರಿಕಾದ ಉತ್ತರದ ತೀರಕ್ಕೆ ಹರಿಯಲು ಪ್ರಾರಂಭಿಸುತ್ತದೆ.
- ಮಧ್ಯ ಮತ್ತು ಪೂರ್ವ ಪೆಸಿಫಿಕ್ ಸಾಗರ ಪ್ರದೇಶವು, ಆರು ತಿಂಗಳುಗಳಿಗಿಂತ ಹೆಚ್ಚು ಕಾಲ ಬೆಚ್ಚಗಿರುತ್ತದೆ ಮತ್ತು ಇದರ ಪರಿಣಾಮವಾಗಿ ‘ಎಲ್ ನಿನೋ’ ಪರಿಸ್ಥಿತಿಗಳು ಉದ್ಭವಿಸುತ್ತವೆ.
ಲಾ ನಿನಾ ದಿಂದಾಗಿ ಹವಾಮಾನದಲ್ಲಿನ ಬದಲಾವಣೆಗಳು:
- ಲಾ ನೀನಾದ ಕಾರಣ, ಹಾರ್ನ್ ಆಫ್ ಆಫ್ರಿಕಾ ಮತ್ತು ಮಧ್ಯ ಏಷ್ಯಾದಲ್ಲಿ ಸರಾಸರಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ.
- ಪೂರ್ವ ಆಫ್ರಿಕಾವು ಸಾಮಾನ್ಯ ಪರಿಸ್ಥಿತಿಗಳಿಗಿಂತ ಹೆಚ್ಚು ಬರವನ್ನು ಎದುರಿಸಬಹುದಾಗಿದ್ದು, ಈ ಪ್ರದೇಶದಲ್ಲಿ ಮರುಭೂಮಿ ಮಿಡತೆ ದಾಳಿಯಿಂದಾಗಿ ಪ್ರಾದೇಶಿಕ ಆಹಾರದ ಭದ್ರತೆಯ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆಯಿದೆ.
- ಲಾ ನೀನಾ ಆಗಮನದೊಂದಿಗೆ, ದಕ್ಷಿಣ ಆಫ್ರಿಕಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಬಹುದು.
- ಇದು ನೈರುತ್ಯ ಹಿಂದೂ ಮಹಾಸಾಗರದ ಉಷ್ಣವಲಯದ ಚಂಡಮಾರುತಗಳ ಋತುವಿನ ಮೇಲೆ ವ್ಯಾಪಕವಾಗಿ ಪರಿಣಾಮ ಬೀರುತ್ತದೆ ಮತ್ತು ಚಂಡಮಾರುತದ ತೀವ್ರತೆಯನ್ನು ಕಡಿಮೆ ಮಾಡಲು ಕಾರಣವಾಗಬಹುದು.
- ಇದು ಆಗ್ನೇಯ ಏಷ್ಯಾ, ಕೆಲವು ಪೆಸಿಫಿಕ್ ದ್ವೀಪ ಸಮೂಹಗಳು ಮತ್ತು ದಕ್ಷಿಣ ಅಮೆರಿಕದ ಉತ್ತರ ಪ್ರದೇಶದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯನ್ನು ತರುವ ನಿರೀಕ್ಷೆಯಿದೆ.
- ಲಾ ನಿನಾದ ಆಗಮನದೊಂದಿಗೆ, ಭಾರತವು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತದೆ, ಇದು ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದ ತೀವ್ರತೆಯನ್ನು ಹೆಚ್ಚಿಸುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ 2:
ವಿಷಯಗಳು: ಭಾರತದ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
ಡಿಲಿಮಿಟೇಶನ್ ಆಯೋಗ/ ಕ್ಷೇತ್ರ ಪುನರ್ವಿಂಗಡಣೆ ಆಯೋಗ:
(Delimitation Commission)
ಸಂದರ್ಭ:
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಮರುವಿನ್ಯಾಸಕ್ಕಾಗಿ ಡಿಲಿಮಿಟೇಶನ್ / ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ರಚಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಇಬ್ಬರು ಕಾಶ್ಮೀರ ನಿವಾಸಿಗಳು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಮಸ್ಯೆ ಏನು?
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು 107 ರಿಂದ 114 ಕ್ಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 24 ಸ್ಥಾನಗಳನ್ನು ಒಳಗೊಂಡಂತೆ) ಹೆಚ್ಚಿಸಿರುವುದು ಸಂವಿಧಾನದ ನಿಬಂಧನೆಗಳಾದ ಆರ್ಟಿಕಲ್ 14, 81, 82, 170, 330 ಮತ್ತು 332 ಗಳು ಮತ್ತು ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ರ ಸೆಕ್ಷನ್ 63 ರ ಅಡಿಯಲ್ಲಿನ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ ಕೇಂದ್ರದ ನಿರ್ಧಾರವನ್ನು ಅನೂರ್ಜಿತ ಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
- ಭಾರತದ ಸಂವಿಧಾನದ 170 ನೇ ವಿಧಿಯು ದೇಶದಲ್ಲಿ ಮುಂದಿನ ಕ್ಷೇತ್ರ ಪುನರ್ವಿಂಗಡಣೆಯನ್ನು 2026 ರ ನಂತರ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿರುವ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಪುನರ್ವಿಂಗಡಣೆಯನ್ನು ಏಕೆ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ ವಿಂಗಡಣೆ ಘಟನಾ ಕ್ರಮಗಳು:
- ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು 1951 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಮಿತಿಯು ಕಾರ್ಯಗತಗೊಳಿಸಿತು,ಮತ್ತು ಇದರ ಅಡಿಯಲ್ಲಿ, ಅಂದಿನ ರಾಜ್ಯವನ್ನು 25 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿತ್ತು.
- ಅದರ ನಂತರ, 1981 ರಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಡಿಲಿಮಿಟೇಶನ್ ಆಯೋಗವನ್ನು (Delimitation Commission) ರಚಿಸಲಾಯಿತು ಮತ್ತು ಈ ಆಯೋಗವು 1981 ರ ಜನಗಣತಿಯ ಆಧಾರದ ಮೇಲೆ 1995 ರಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿತು. ಅಂದಿನಿಂದ, ರಾಜ್ಯದಲ್ಲಿ ಯಾವುದೇ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ನಡೆಸಲಾಗಿಲ್ಲ.
- 2011 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು 2020 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ‘ಕ್ಷೇತ್ರ ಪುನರ್ ವಿಂಗಡಣೆ ಆಯೋಗ’ವನ್ನು ರಚಿಸಲಾಯಿತು. ಈ ಆಯೋಗಕ್ಕೆ ಕೇಂದ್ರಾಡಳಿತ ಪ್ರದೇಶದಲ್ಲಿ ಇನ್ನೂ ಏಳು ಸ್ಥಾನಗಳನ್ನು ಸೇರಿಸಲು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಮೀಸಲಾತಿ ನೀಡಲು ಆದೇಶಿಸಲಾಯಿತು.
- ಹೊಸ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಸೀಟುಗಳ ಸಂಖ್ಯೆಯನ್ನು 83 ರಿಂದ 90 ಕ್ಕೆ ಹೆಚ್ಚಿಸಲಾಗುವುದು. ಈ ಸ್ಥಾನಗಳು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ (PoK) ಕ್ಕಾಗಿ ಕಾಯ್ದಿರಿಸಲಾದ 24 ಸ್ಥಾನಗಳಿಗೆ ಹೆಚ್ಚುವರಿಯಾಗಿರುತ್ತವೆ ಮತ್ತು ಈ ಸ್ಥಾನಗಳನ್ನು ವಿಧಾನಸಭೆಯಲ್ಲಿ ಖಾಲಿ ಇಡಲಾಗುತ್ತದೆ.
ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ಯಾವಾಗ ನೇಮಿಸಲಾಯಿತು?
ಮಾರ್ಚ್ 6, 2020 ರಂದು, ಕೇಂದ್ರ ಸರ್ಕಾರವು, ಕಾನೂನು ಮತ್ತು ನ್ಯಾಯ ಸಚಿವಾಲಯ (ಶಾಸಕಾಂಗ ಇಲಾಖೆ) ಡಿಲಿಮಿಟೇಶನ್ ಆಕ್ಟ್, 2002 ರ ಪರಿಚ್ಛೇದ 3 ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವ ಮೂಲಕ ಅಧಿಸೂಚನೆಯನ್ನು ಹೊರಡಿಸಿತು, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿನ ಅಸೆಂಬ್ಲಿ ಮತ್ತು ಸಂಸದೀಯ ಕ್ಷೇತ್ರಗಳ ವಿಂಗಡಣೆಯ ಉದ್ದೇಶಕ್ಕಾಗಿ ಒಂದು ವರ್ಷದ ಅವಧಿಗೆ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ (ನಿವೃತ್ತ) ರಂಜನಾ ಪ್ರಕಾಶ್ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಡಿಲಿಮಿಟೇಶನ್ ಆಯೋಗವನ್ನು ರಚಿಸಿತು.
ಕ್ಷೇತ್ರ ಪುನರ್ವಿಂಗಡಣೆ ಆಯೋಗದ ಸಂರಚನೆ:
‘ಡಿಲಿಮಿಟೇಶನ್ ಕಮಿಷನ್ ಆಕ್ಟ್’, 2002 ರ ಪ್ರಕಾರ, ಕೇಂದ್ರವು ನೇಮಿಸಿದ ಕ್ಷೇತ್ರ ಪುನರ್ವಿಂಗಡಣೆ ಆಯೋಗವು ಮೂವರು ಸದಸ್ಯರನ್ನು ಒಳಗೊಂಡಿದೆ: ಇದರಲ್ಲಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾದ ನ್ಯಾಯಾಧೀಶರು ಮತ್ತು ಮುಖ್ಯ ಚುನಾವಣಾ ಆಯುಕ್ತರು,ಅಥವಾ ಮುಖ್ಯ ಚುನಾವಣಾ ಆಯುಕ್ತರು ನಾಮನಿರ್ದೇಶನ ಮಾಡಿದ ಚುನಾವಣಾ ಆಯುಕ್ತರು ಮತ್ತು* ಎಕ್ಸ್ ಆಫೀಸಿಯೊ ಸದಸ್ಯರಾಗಿ ನಾಮನಿರ್ದೇಶನ ಗೊಂಡಿರುವ ರಾಜ್ಯ ಚುನಾವಣಾ ಆಯುಕ್ತರು.
ಸಾಂವಿಧಾನಿಕ ನಿಬಂಧನೆಗಳು:
- ಸಂವಿಧಾನದ 82 ನೇ ವಿಧಿಯ ಪ್ರಕಾರ, ಪ್ರತಿ ಜನಗಣತಿಯ ನಂತರ ಭಾರತದ ಸಂಸತ್ತು ‘ಕ್ಷೇತ್ರ ಪುನರ್ ವಿಂಗಡನಾ ಕಾಯ್ದೆ’ಯನ್ನು ಜಾರಿಗೊಳಿಸುತ್ತದೆ.
- ಆರ್ಟಿಕಲ್ 170 ರ ಅಡಿಯಲ್ಲಿ, ಪ್ರತಿ ಜನಗಣತಿಯ ನಂತರ, ಕ್ಷೇತ್ರ ಪುನರ್ ವಿಂಗಡನಾ ಕಾಯ್ದೆ ಪ್ರಕಾರ ರಾಜ್ಯಗಳನ್ನು ಪ್ರಾದೇಶಿಕ ಕ್ಷೇತ್ರಗಳಾಗಿ ವಿಂಗಡಿಸಲಾಗುತ್ತದೆ.
ನೋಟ್:
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ‘ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ವಿಂಗಡಣೆ ಆಯೋಗ’ (Jammu and Kashmir Delimitation Commission) ವನ್ನು ರಚಿಸಲಾಗಿದೆ.
ವಿಷಯಗಳು: ಶಾಸನಬದ್ಧ, ನಿಯಂತ್ರಕ ಮತ್ತು ವಿವಿಧ ಅರೆ-ನ್ಯಾಯಾಂಗ ಸಂಸ್ಥೆಗಳು.
ರಾಷ್ಟ್ರೀಯ ಮಹಿಳಾ ಆಯೋಗ:
(National Commission for Women)
ಸಂದರ್ಭ:
ಮಹಿಳೆಯರಿಗೆ ಕಾನೂನು ನೆರವು ಹೆಚ್ಚು ಲಭ್ಯವಾಗುವಂತೆ ಮಾಡುವ ಕ್ರಮದಲ್ಲಿ, ರಾಷ್ಟ್ರೀಯ ಮಹಿಳಾ ಆಯೋಗ (NCW) ವು ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (Delhi State Legal Services Authority- DSLSA) ಸಹಯೋಗದೊಂದಿಗೆ ಕಾನೂನು ನೆರವು ಕ್ಲಿನಿಕ್ (legal aid clinic) ಅನ್ನು ಪ್ರಾರಂಭಿಸಿದೆ, ಇದು ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುವ ಮೂಲಕ ಕುಂದು ಕೊರತೆಗಳನ್ನು ಪರಿಹರಿಸಲು ಏಕ-ವಿಂಡೋ ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತದೆ.
ರಾಷ್ಟ್ರೀಯ ಮಹಿಳಾ ಆಯೋಗವು (NCW),ಇದೇ ರೀತಿಯ ಕಾನೂನು ಸೇವಾ ಕ್ಲಿನಿಕ್ಗಳನ್ನು ಇತರ ರಾಜ್ಯ ಮಹಿಳಾ ಆಯೋಗಗಳಲ್ಲಿ ಸಹ ಸ್ಥಾಪಿಸಲು ಯೋಜಿಸುತ್ತಿದೆ.
ಕಾನೂನು ನೆರವು ಕ್ಲಿನಿಕ್ (legal aid clinic) ಕುರಿತು:
ಹೊಸ ಕಾನೂನು ನೆರವು ಕ್ಲಿನಿಕ್ ಅಡಿಯಲ್ಲಿ, ವಾಕ್-ಇನ್ ದೂರುದಾರರಿಗೆ ಸಮಾಲೋಚನೆ ಸೇವೆಯನ್ನು ಒದಗಿಸಲಾಗುತ್ತದೆ, ಸಂಕಷ್ಟದಲ್ಲಿರುವ ಮಹಿಳೆಯರಿಗೆ ಕಾನೂನು ನೆರವು, ಸಲಹೆ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA)/ DSLSA ಯ ವಿವಿಧ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ, ಮಹಿಳಾ ಜನುನ್ವಾಯಿಯಲ್ಲಿ ಸಹಾಯ, ಉಚಿತವಾಗಿ ಕಾನೂನು ನೆರವು, ವೈವಾಹಿಕ ಪ್ರಕರಣಗಳಲ್ಲಿನ ವಿಚಾರಣೆಗಳು ಮತ್ತು ಆಯೋಗದಲ್ಲಿ ನೋಂದಾಯಿಸಲಾದ ಇತರ ದೂರುಗಳನ್ನು ಇತರ ಸೇವೆಗಳ ಜೊತೆಗೆ ಒದಗಿಸಲಾಗುತ್ತದೆ.
NCW ಬಗ್ಗೆ:
ರಾಷ್ಟ್ರೀಯ ಮಹಿಳಾ ಆಯೋಗವನ್ನು ರಾಷ್ಟ್ರೀಯ ಆಯೋಗದ ಕಾಯಿದೆಯಡಿ 1992 ರಲ್ಲಿ ಸ್ಥಾಪಿಸಲಾಯಿತು.
ಮಹಿಳೆಯರಿಗೆ ಸಾಂವಿಧಾನಿಕ ಮತ್ತು ಕಾನೂನು ರಕ್ಷಣೆಗಳನ್ನು ಪರಿಶೀಲಿಸಲು ಇದನ್ನು ಸ್ಥಾಪಿಸಲಾಗಿದೆ.
ಇದು ಸಿವಿಲ್ ನ್ಯಾಯಾಲಯ ಹೊಂದಿರುವ ಎಲ್ಲಾ ಅಧಿಕಾರಗಳನ್ನು ಹೊಂದಿದೆ.
ವರದಿಗಳ ಮಂಡನೆ:
ಪ್ರತಿ ವರ್ಷ ಆಯೋಗವು ಮಹಿಳಾ ಸುರಕ್ಷತೆಗಳ ಕಾರ್ಯನಿರ್ವಹಣೆಯ ಮೇಲಿನ ವರದಿಗಳನ್ನು ಒಳಗೊಂಡಂತೆ ಸೂಕ್ತವೆಂದು ಪರಿಗಣಿಸಬಹುದಾದ ಇತರ ಸಮಯಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸುತ್ತದೆ.
ಸ್ವಯಂ ಪ್ರೇರಿತ ನೋಟಿಸ್ ನೀಡುವುದು:
ಇದು ದೂರುಗಳನ್ನು ಪರಿಶೀಲಿಸುತ್ತದೆ ಮತ್ತು ಮಹಿಳಾ ಹಕ್ಕುಗಳ ನಿರಾಕರಣೆ, ಕಾನೂನುಗಳನ್ನು ಅನುಷ್ಠಾನಗೊಳಿಸದಿರುವುದು ಮತ್ತು ಮಹಿಳಾ ಸಮಾಜದ ಕಲ್ಯಾಣವನ್ನು ಖಾತರಿಪಡಿಸುವ ನೀತಿ ನಿರ್ಧಾರಗಳ ಅನುಸರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಸ್ವಯಂಪ್ರೇರಿತವಾಗಿ ನೋಟಿಸ್ ಜಾರಿ ಮಾಡುತ್ತದೆ.
ರಾಷ್ಟ್ರೀಯ ಮಹಿಳಾ ಆಯೋಗದ ಪ್ರಮುಖ ಮಿತಿಗಳು ಅದನ್ನು ಶಕ್ತಿ ಹೀನವಾಗಿಸುತ್ತದೆ:
- NCW ಕೇವಲ ಶಿಫಾರಸ್ಸು ಮಾಡುವ ಸಂಸ್ಥೆಯಾಗಿ ಮುಂದುವರೆದಿದೆ ಮತ್ತು ಅದರ ನಿರ್ಧಾರಗಳನ್ನು ಜಾರಿಗೊಳಿಸಲು ಯಾವುದೇ ಅಧಿಕಾರವನ್ನು ಹೊಂದಿಲ್ಲ.
- ಆಯೋಗವು ಸಾಂವಿಧಾನಿಕ ಸ್ಥಾನಮಾನವನ್ನು ಹೊಂದಿಲ್ಲ ಮತ್ತು ಆದ್ದರಿಂದ ಪೊಲೀಸ್ ಅಧಿಕಾರಿಗಳು ಅಥವಾ ಸಾಕ್ಷಿಗಳನ್ನು ಕರೆಸುವ ಯಾವುದೇ ಕಾನೂನು ಅಧಿಕಾರವನ್ನು ಹೊಂದಿಲ್ಲ.
- ಕಿರುಕುಳ ಎದುರಿಸುತ್ತಿರುವ ಮಹಿಳೆಯರ ಕುಂದುಕೊರತೆ ಪರಿಹಾರವನ್ನು ತಡೆಯುವ ಆಂತರಿಕ ದೂರು ಸಮಿತಿಗಳ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿಲ್ಲ.
- ಆಯೋಗಕ್ಕೆ ಒದಗಿಸಲಾದ ಹಣಕಾಸಿನ ನೆರವು ಅದರ ಅಗತ್ಯಗಳನ್ನು ಪೂರೈಸಲು ತುಂಬಾ ನಗಣ್ಯವಾಗಿದೆ.
- ಅದಕ್ಕೆ ತನ್ನದೇ ಆದ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವಿಲ್ಲ. ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರವು ಹೊಂದಿದ್ದು ವಿವಿಧ ಹಂತಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಬ್ರಿಕ್ಸ್:
(BRICS)
ಸಂದರ್ಭ:
ಐದು ಬ್ರಿಕ್ಸ್ ದೇಶಗಳ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಪ್ರಮುಖ ಮಾಧ್ಯಮ ಗುಂಪುಗಳು ಪತ್ರಕರ್ತರಿಗೆ ಮೂರು ತಿಂಗಳ ಸುದೀರ್ಘ ತರಬೇತಿ ಕಾರ್ಯಕ್ರಮವನ್ನು ನೀಡಲು ನಿರ್ಧರಿಸಿವೆ.
ಈ ಕಾರ್ಯಕ್ರಮವು ಬ್ರಿಕ್ಸ್ ಮೀಡಿಯಾ ಫೋರಮ್ನ ಉಪಕ್ರಮವಾಗಿದೆ.
BRICS ಮೀಡಿಯಾ ಫೋರಮ್ ಬಗ್ಗೆ:
- ಭಾರತದ ದಿ ಹಿಂದೂ, ಬ್ರೆಜಿಲ್ನ CMA ಗ್ರೂಪ್, ರಷ್ಯಾದ ಸ್ಪುಟ್ನಿಕ್, ಚೀನಾದ ಕ್ಸಿನ್ಹುವಾ ಮತ್ತು ದಕ್ಷಿಣ ಆಫ್ರಿಕಾದ ಇಂಡಿಪೆಂಡೆಂಟ್ ಮೀಡಿಯಾ ಸೇರಿದಂತೆ ಐದು ದೇಶಗಳ ಮಾಧ್ಯಮ ಸಂಸ್ಥೆಗಳಿಂದ ಫೋರಮ್ ಅನ್ನು 2015 ರಲ್ಲಿ ಸ್ಥಾಪಿಸಲಾಯಿತು.
- ಇದು ಬ್ರಿಕ್ಸ್ ಸಹಕಾರದ ವಿಶಾಲ ಚೌಕಟ್ಟಿನೊಳಗೆ ಕೈಗೊಳ್ಳಲಾದ ಸ್ವತಂತ್ರ ಉಪಕ್ರಮ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಗುಂಪಾಗಿ ಕಾರ್ಯನಿರ್ವಹಿಸಲು ಈ ಮೀಡಿಯಾ ಫೋರಮ್ ಅನ್ನು “ಕಲ್ಪಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ.
ಬ್ರಿಕ್ಸ್ ಸಂಘಟನೆಯ ಕುರಿತು:
ವಿಶ್ವದ ಐದು ಪ್ರಮುಖ ಉದಯೋನ್ಮುಖ ಆರ್ಥಿಕತೆಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳ ಗುಂಪಿನ ಸಂಕ್ಷಿಪ್ತ ರೂಪವೇ ಬ್ರಿಕ್ಸ್ ಆಗಿದೆ.
ಇದು ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು 42%, GDP ಯ 23%, ಭೂಪ್ರದೇಶದ 30% ಮತ್ತು ಜಾಗತಿಕ ವ್ಯಾಪಾರದ 18% ಪಾಲನ್ನು ಪ್ರತಿನಿಧಿಸುತ್ತದೆ.
- ‘ಬ್ರಿಕ್’ ಎಂಬ ಪದವನ್ನು 2001 ರಲ್ಲಿ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಿಮ್ ಒ’ನೀಲ್ (Jim O’Neill)ಅವರು ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ಆರ್ಥಿಕತೆಗಳನ್ನು ವಿವರಿಸಲು ಈ BRIC ಎಂಬ ಪದವನ್ನು ಬಳಸಿದರು.
- 2006 ರಲ್ಲಿ ನಡೆದ ಬ್ರಿಕ್ ದೇಶಗಳ ವಿದೇಶಾಂಗ ಮಂತ್ರಿಗಳ ಮೊದಲ ಸಭೆಯಲ್ಲಿ ಈ ‘ಗುಂಪನ್ನು’ ಔಪಚಾರಿಕವಾಗಿ ಸ್ಥಾಪಿಸಲಾಯಿತು.
- 2010 ರ ಡಿಸೆಂಬರ್ ನಲ್ಲಿ, ದಕ್ಷಿಣ ಆಫ್ರಿಕಾವನ್ನು ಬ್ರಿಕ್ಗೆ ಸೇರಲು ಆಹ್ವಾನಿಸಲಾಯಿತು ಮತ್ತು ಅಂದಿನಿಂದ ಈ ಗುಂಪನ್ನು ಬ್ರಿಕ್ಸ್ (BRICS)ಎಂದು ಕರೆಯಲಾಗುತ್ತದೆ.
- ಬ್ರಿಕ್ಸ್ (ಫೋರಂ) ವೇದಿಕೆಯ ಅಧ್ಯಕ್ಷತೆಯನ್ನು ವಾರ್ಷಿಕವಾಗಿ B-R-I-C-S ಅಕ್ಷರಗಳ ಕ್ರಮದಲ್ಲಿ ಸದಸ್ಯ ರಾಷ್ಟ್ರಗಳು ಅನುಕ್ರಮವಾಗಿ ವಹಿಸುತ್ತವೆ.
2011 ರಲ್ಲಿ, ದಕ್ಷಿಣ ಆಫ್ರಿಕಾ ಈ ಗುಂಪಿಗೆ ಸೇರಿತು, ಆ ಮೂಲಕ, ಆಫ್ರಿಕನ್ ಖಂಡದ ದೇಶವನ್ನು BRICS ಗುಂಪಿಗೆ ಸೇರಿಸಿಕೊಂಡು ಬ್ರಿಕ್ಸ್ ತನ್ನ ಅಂತಿಮ ಸಂಯೋಜನೆಯನ್ನು
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಹೌತಿಗಳು ಮತ್ತು ಯೆಮೆನ್ ಯುದ್ಧ:
(Houthis and the war in Yemen)
ಸಂದರ್ಭ:
ಯೆಮೆನ್ ಯುದ್ಧದಲ್ಲಿ ತಾನು ಬೆಂಬಲಿಸುವ ಬಂಡುಕೋರರು ಮುಂದಿಟ್ಟಿರುವ ಕದನ ವಿರಾಮ ಯೋಜನೆಗೆ ಇರಾನ್ ತನ್ನ ಬೆಂಬಲವನ್ನು ನೀಡಿದೆ, ಇದು ಸಂಘರ್ಷವನ್ನು ಕೊನೆಗೊಳಿಸಲು “ಸೂಕ್ತ ವೇದಿಕೆ” ಎಂದು ಹೇಳಿದೆ.
- ಹೌತಿ ಬಂಡುಕೋರರು ಸೌದಿ ಅರೇಬಿಯಾ ತನ್ನ ವೈಮಾನಿಕ ದಾಳಿ ಮತ್ತು ಯೆಮೆನ್ ಮೇಲಿನ ದಿಗ್ಬಂಧನವನ್ನು ತೆಗೆಯುವ ಮತ್ತು “ವಿದೇಶಿ ಪಡೆಗಳನ್ನು” ತೆಗೆದುಹಾಕುವ ಷರತ್ತಿನ ಮೇಲೆ ಈ ಪ್ರಸ್ತಾಪವನ್ನು ಮಂಡಿಸಿದ್ದಾರೆ ಮತ್ತು ಶಾಂತಿ ಮಾತುಕತೆಗಳನ್ನು ನಡೆಸಲು ಕರೆ ನೀಡಿದ್ದಾರೆ.
ಕದನ ವಿರಾಮದ ಅಗತ್ಯತೆ:
ಯೆಮೆನ್ ಯುದ್ಧವು ನೂರಾರು ಸಾವಿರ ಜನರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಹತ್ಯೆ ಮಾಡಿದೆ ಮತ್ತು ಲಕ್ಷಾಂತರ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ತಳ್ಳಿದೆ, ವಿಶ್ವಸಂಸ್ಥೆಯು ಈ ಯುದ್ಧವನ್ನು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟು ಎಂದು ಕರೆದಿದೆ.
‘ಹೌತಿಗಳು’ ಯಾರು?
- ಹೌತಿ (Houthi) ಯು 1990 ರ ದಶಕದಲ್ಲಿ ಯೆಮೆನ್ನ ಬಹುಸಂಖ್ಯಾತ ಶಿಯಾ ಸಮುದಾಯದ ಸದಸ್ಯರಾದ ಹುಸೇನ್ ಬದ್ರೆದ್ದೀನ್ ಅಲ್-ಹೌತಿ (Badreddin al-Houthi) ಸ್ಥಾಪಿಸಿದ ಸಶಸ್ತ್ರ ಬಂಡಾಯ ಸಂಘಟನೆಯಾಗಿದೆ.
- ಇದು ಸುಮಾರು 1,000 ವರ್ಷಗಳ ಕಾಲ ಈ ಪ್ರದೇಶದಲ್ಲಿ ರಾಜ್ಯವನ್ನು ಆಳಿದ ‘ಝೈದಿ ಶಿಯಾ ಪಂಥ’ (Zaidi Shia sect) ಕ್ಕೆ ಸೇರಿದ ಗುಂಪಾಗಿದೆ.
ಏನಿದು ಪ್ರಕರಣ?
ಅರಬ್ ಜಗತ್ತಿನ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿರುವ ಯೆಮೆನ್ ಸುಮಾರು ಏಳು ವರ್ಷಗಳಿಂದ ನಡೆಯುತ್ತಿರುವ ಅಂತರ್ಯುದ್ಧದಿಂದ ಧ್ವಂಸಗೊಂಡಿದೆ. ರಾಜಧಾನಿ ‘ಸನಾ’ (Sana’a) ವನ್ನು ‘ಹೌತಿ ಬಂಡುಕೋರರು’ ವಶಪಡಿಸಿಕೊಂಡ ನಂತರ, ಸೌದಿ ಅರೇಬಿಯಾ ನೇತೃತ್ವದ ಪಡೆಗಳು ದೇಶದಲ್ಲಿ ಇರಾನ್ ಪ್ರಭಾವವನ್ನು ಕೊನೆಗೊಳಿಸುವ ಮತ್ತು ಹಿಂದಿನ ಸರ್ಕಾರವನ್ನು ಮರುಸ್ಥಾಪಿಸುವ ಉದ್ದೇಶದಿಂದ ಬಂಡುಕೋರರ ವಿರುದ್ಧ ಯುದ್ಧವನ್ನು ನಡೆಸಿತು.
ಯುನೈಟೆಡ್ ಅರಬ್ ಎಮಿರೇಟ್ಸ್ ಸಹ 2015 ರಲ್ಲಿ ಸೌದಿ ಅಭಿಯಾನಕ್ಕೆ ಸೇರಿಕೊಂಡಿತು ಮತ್ತು 2019 ಮತ್ತು 2020 ರಲ್ಲಿ ತನ್ನ ಪಡೆಗಳನ್ನು ಔಪಚಾರಿಕವಾಗಿ ಹಿಂತೆಗೆದುಕೊಳ್ಳುವ ಘೋಷಣೆಯ ಹೊರತಾಗಿಯೂ ಸಂಘರ್ಷದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದೆ.
ಯಮನ್ ನಲ್ಲಿನ ಯುದ್ಧದ ಹಿನ್ನೆಲೆ:
- ಯೆಮನ್ನಲ್ಲಿ ನಡೆಯುತ್ತಿರುವ ಸಂಘರ್ಷದ ಬೇರುಗಳನ್ನು 2011 ರ ಅರಬ್ ವಸಂತ ಅಥವಾ ಅರಬ್ ದಂಗೆಯಲ್ಲಿ ಕಂಡುಹಿಡಿಯಬಹುದು. ಈ ಸಮಯದಲ್ಲಿ ನಡೆದ ಒಂದು ದಂಗೆಯು ದೀರ್ಘಕಾಲದವರೆಗೆ ದೇಶವನ್ನು ಆಳುತ್ತಿದ್ದ ಸರ್ವಾಧಿಕಾರಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅವರಿಗೆ ತಮ್ಮ ಉಪಾಧ್ಯಕ್ಷ ಅಬ್ಡೆರಾಬು ಮನ್ಸೂರ್ ಹಾಡಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಒತ್ತಾಯಿಸಿತು.
- ಈ ರಾಜಕೀಯ ಬದಲಾವಣೆಯು ಮಧ್ಯಪ್ರಾಚ್ಯದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಯೆಮನ್ಗೆ ಸ್ಥಿರತೆಯನ್ನು ತಂದು ಕೊಡಬೇಕಾಗಿತ್ತು, ಆದರೆ ಅಧ್ಯಕ್ಷ ಹಾಡಿಗೆ ಭಯೋತ್ಪಾದಕ ದಾಳಿ, ಭ್ರಷ್ಟಾಚಾರ, ಆಹಾರ ಅಭದ್ರತೆ, ಮತ್ತು ಮಾಜಿ ಅಧ್ಯಕ್ಷ ಸಲೇಹ್ಗೆ ಅನೇಕ ಮಿಲಿಟರಿ ಅಧಿಕಾರಿಗಳ ನಿಷ್ಠೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುವಲ್ಲಿಯೆ ಹೆಣಗಾಡಬೇಕಾಯಿತು.
- ಹೌತಿ ಶಿಯಾ ಮುಸ್ಲಿಂ ಬಂಡಾಯ ಆಂದೋಲನವು ಹೊಸ ಅಧ್ಯಕ್ಷರ ದೌರ್ಬಲ್ಯದ ಲಾಭವನ್ನು ಪಡೆದುಕೊಂಡು, ಉತ್ತರ ಸಾಡಾ (Saada province) ಪ್ರಾಂತ್ಯ ಮತ್ತು ಅದರ ನೆರೆಯ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ ನಂತರ 2014 ರಲ್ಲಿ ಯೆಮನ್ನಲ್ಲಿ ಪ್ರಸ್ತುತ ಸಂಘರ್ಷವು ಪ್ರಾರಂಭವಾಯಿತು,
- ಹೌತಿ ಎಂಬುದು ಜೈದಿ ಶಿಯಾ ಮುಸ್ಲಿಮರ ಗುಂಪಾಗಿದ್ದು, ಇವರು ಈ ಪ್ರದೇಶದಲ್ಲಿ ಸುಮಾರು 1,000 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದರು.
ಯೆಮನ್ನಲ್ಲಿ ಸೌದಿ ಅರೇಬಿಯಾ ಹಸ್ತಕ್ಷೇಪಕ್ಕೆ ಕಾರಣವೇನು?
ಯೆಮೆನ್ ರಾಜಧಾನಿ ‘ಸನಾ’ವನ್ನು ಶಿಯಾ ಹೌತಿ ಬಂಡುಕೋರರು ವಶಪಡಿಸಿಕೊಂಡ ನಂತರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಅಧ್ಯಕ್ಷ ಹಾಡಿ ಸರ್ಕಾರವನ್ನು ದೇಶದ ದಕ್ಷಿಣ ಭಾಗಕ್ಕೆ ಸೀಮಿತಗೊಳಿಸಿದ ನಂತರ ಸೌದಿ ಅರೇಬಿಯಾ ಯೆಮನ್ನಲ್ಲಿ ಮಧ್ಯಪ್ರವೇಶಿಸಿದೆ.
- ಯೆಮೆನ್ನಲ್ಲಿ ‘ಹೌತಿ ಬಂಡುಕೋರರ’ ಕ್ಷಿಪ್ರ ಬೆಳವಣಿಗೆಯು ಸೌದಿ ಅರೇಬಿಯಾದಲ್ಲಿ ಎಚ್ಚರಿಕೆಯ ಗಂಟೆಯನ್ನು ಬಾರಿಸಿತು, ಅದು ಹೌತಿ ಬಂಡುಕೋರರನ್ನು ಇರಾನ್ನ ಪ್ರಾಕ್ಸಿ ಎಂದು ಕಂಡಿತು.
- ಸೌದಿ ಅರೇಬಿಯಾ ಮಾರ್ಚ್ 2015 ರಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಈ ಅಭಿಯಾನವು ‘ಹೌತಿ ಬಂಡುಕೋರರ’ ವಿರುದ್ಧ ತ್ವರಿತ ವಿಜಯಕ್ಕೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸೌದಿ ಅರೇಬಿಯಾದ ಮಿಂಚಿನ ವೈಮಾನಿಕ ದಾಳಿಯ ಹೊರತಾಗಿಯೂ, ‘ಹೌತಿ’ಗಳು ಸೋಲೊಪ್ಪಿಕೊಳ್ಳಲು ನಿರಾಕರಿಸಿದರು.
- ನೆಲದ ಮೇಲೆ ಯಾವುದೇ ಪರಿಣಾಮಕಾರಿ ಮಿತ್ರರಾಷ್ಟ್ರಗಳು ಮತ್ತು ಯಾವುದೇ ಮಾರ್ಗವನ್ನು ಕಂಡುಕೊಳ್ಳುವ ಯೋಜನೆ ಇಲ್ಲದೆ, ಸೌದಿ ನೇತೃತ್ವದ ಅಭಿಯಾನವು ಯಾವುದೇ ನಿರ್ದಿಷ್ಟ ಫಲಿತಾಂಶಗಳಿಲ್ಲದೆ ಕೊನೆಗೊಂಡಿತು. ಕಳೆದ ಆರು ವರ್ಷಗಳಲ್ಲಿ, ಸೌದಿ ವೈಮಾನಿಕ ದಾಳಿಗೆ ಪ್ರತಿಕಾರವಾಗಿ ಉತ್ತರ ಯೆಮೆನ್ನಿಂದ ಸೌದಿ ನಗರಗಳ ಮೇಲೆ ‘ಹೌತಿ ಬಂಡುಕೋರರು’ ಹಲವಾರು ದಾಳಿಗಳನ್ನು ನಡೆಸಿದ್ದಾರೆ.
ಯೆಮನ್ನಲ್ಲಿ ‘ಮಾನವೀಯ ಪರಿಸ್ಥಿತಿ’ ಎಷ್ಟು ಕೆಟ್ಟದಾಗಿದೆ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2015 ರಲ್ಲಿ ಸೌದಿ ಹಸ್ತಕ್ಷೇಪದ ನಂತರ ಯೆಮನ್ನಲ್ಲಿ ಕನಿಷ್ಠ 10,000 ಜನರು ಸಾವನ್ನಪ್ಪಿದ್ದಾರೆ. ಸಮ್ಮಿಶ್ರ ಪಡೆಗಳ ವಾಯುದಾಳಿಯು ದೇಶದ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ದಿಗ್ಬಂಧನವು ಆಹಾರ ಮತ್ತು ಔಷಧಿಗಳ ಪೂರೈಕೆಯನ್ನು ಕಡಿಮೆಗೊಳಿಸಿದೆ ಇದು ಯೆಮನ್ ಅನ್ನು ಮಾನವೀಯ ದುರಂತಕ್ಕೆ ತಳ್ಳಿದೆ. ಯಾವುದೇ ಸಹಾಯವು ಶೀಘ್ರದಲ್ಲೇ ಅವರನ್ನು ತಲುಪದಿದ್ದರೆ, ಸುಮಾರು 12 ಮಿಲಿಯನ್ ಜನರು ಹಸಿವಿನಿಂದ ಬಳಲುವ ಅಪಾಯಕ್ಕೊಳಗಾಗ ಬಲ್ಲವರಾಗಿದ್ದಾರೆ. ದೇಶವು ಭಾರಿ ಕಾಲರ ರೋಗವನ್ನು ಸಹ ಎದುರಿಸಿದೆ ತಡೆಗಟ್ಟಬಹುದಾದ ರೋಗಗಳಿಂದಲೂ ಸಹ ಯಮನ್ ನಲ್ಲಿ ಪ್ರತಿ ಹತ್ತು ನಿಮಿಷಕ್ಕೆ ಒಂದು ಮಗು ಸಾಯುತ್ತಿದೆ ಎಂದು ಯುನಿಸೆಫ್ ಹೇಳಿದೆ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
ವಿಷಯಗಳು:ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.
ಅಸ್ಸಾಂ-ಮೇಘಾಲಯ ಗಡಿ ವಿವಾದ:
(Assam-Meghaalaya border dispute)
ಸಂದರ್ಭ:
ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ನಡುವೆ ಐದು ದಶಕಗಳಿಂದ ಜೀವಂತವಾಗಿದ್ದ ಗಡಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಂಗಳವಾರ ಮಹತ್ವದ ಒಪ್ಪಂದ ಏರ್ಪಟ್ಟಿದೆ. ಎರಡೂ ರಾಜ್ಯಗಳ ನಡುವಿನ 12 ಸ್ಥಳಗಳಲ್ಲಿ ಇದ್ದ ಗಡಿ ವಿವಾದಗಳ ಪೈಕಿ ಆರು ಸ್ಥಳಗಳಲ್ಲಿನ ವಿವಾದವನ್ನು ಈ ಒಪ್ಪಂದದ ಮೂಲಕ ಬಗೆಹರಿಸಿದಂತಾಗಿದೆ.
- 1972ರಲ್ಲಿ ಅಸ್ಸಾಂ ಅನ್ನು ವಿಭಜಿಸಿ ಮೇಘಾಲಯ ರಾಜ್ಯ ರಚಿಸಲಾಯಿತು. ಆಗಿನಿಂದ ಎರಡೂ ರಾಜ್ಯಗಳ ನಡುವೆ 885 ಕಿ.ಮೀ ಉದ್ದದ ಅಂತರ ರಾಜ್ಯ ಗಡಿ ವಿವಾದ ಆರಂಭವಾಯಿತು.
- ನವದೆಹಲಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
- ‘ಇದು ಮೇಘಾಲಯ, ಅಸ್ಸಾಂ ಮತ್ತು ಈಶಾನ್ಯ ಪ್ರದೇಶದ ಜನರಿಗೆ ಐತಿಹಾಸಿಕ ದಿನ. 50 ವರ್ಷಗಳಿಂದ ಇದ್ದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ದಿನ ಪ್ರಮುಖ ಹೆಜ್ಜೆ ಇಟ್ಟಿದ್ದೇವೆ. 12 ಸ್ಥಳಗಳ ಪೈಕಿ ಆರು ಸ್ಥಳಗಳಲ್ಲಿನ ವಿವಾದವನ್ನು ಬಗೆಹರಿಸುವ ಸಂಬಂಧ ಒಪ್ಪಂದಕ್ಕೆ ನಾವು ಸಹಿ ಹಾಕಿದ್ದೇವೆ. ಭಿನ್ನಾಭಿಪ್ರಾಯಗಳಿರುವ ಇತರ ಆರು ಸ್ಥಳಗಳಿಗೆ ಸಂಬಂಧಿಸಿದಂತೆ ಪರಿಹಾರ ಹುಡುಕುವ ಕಾರ್ಯವನ್ನು ಮುಂದುವರಿಸುತ್ತೇವೆ’ ಎಂದು ಸಂಗ್ಮಾ ಅವರು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಬಿಡುಗಡೆ ಮಾಡಿರುವ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಆರು ವಿವಾದಿತ ವಲಯಗಳು:
ಅಸ್ಸಾಂನ ತಾರಾಬರಿ, ಗಿಜಾಂಗ್, ಹಾಹಿಂ, ಬೊಕ್ಲಪಾರಾ, ಖಾನಪಾರಾ-ಪಿಲ್ಲಂಗಟ ಮತ್ತು ರತಚೆರಾ ಅಸ್ಸಾಂನ ಕಾಮ್ರೂಪ್, ಕಾಮ್ರೂಪ್ (ಮೆಟ್ರೋ) ಮತ್ತು ಚಚಾರ್ ಜಿಲ್ಲೆಗಳು ಮತ್ತು ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್, ರಿ-ಭೋಯ್ ಮತ್ತು ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಗಳು.
ಏನಿದು ವಿವಾದ?
ಅಸ್ಸಾಂ ಮತ್ತು ಮೇಘಾಲಯ 885 ಕಿಮೀ ಉದ್ದದ ಸಾಮಾನ್ಯ ಗಡಿಯನ್ನು ಹಂಚಿಕೊಂಡಿವೆ. ಮೇಘಾಲಯವನ್ನು ಅಸ್ಸಾಂನಿಂದ ‘ಅಸ್ಸಾಂ ಮರುಸಂಘಟನೆ ಕಾಯಿದೆ’, 1971 ರ ಅಡಿಯಲ್ಲಿ ಬೇರ್ಪಡಿಸಲಾಯಿತು. ಈ ಕಾನೂನನ್ನು ಮೇಘಾಲಯವು ಪ್ರಶ್ನಿಸಿದ್ದು, ಇದು ಈ ವಿವಾದಕ್ಕೆ ಕಾರಣವಾಯಿತು.
- ಸದ್ಯಕ್ಕೆ ಎರಡು ರಾಜ್ಯಗಳ ಗಡಿಯಲ್ಲಿನ 12 ಸ್ಥಳಗಳ ಕುರಿತು ವಿವಾದಗಳಿವೆ. ಈ ವಿವಾದಿತ ಸೈಟ್ಗಳಲ್ಲಿ ಅಪ್ಪರ್ ತಾರಾಬರಿ, ಗಿಜಾಂಗ್ ರಿಸರ್ವ್ ಫಾರೆಸ್ಟ್, ಹಾಹಿಂ ಪ್ರದೇಶ, ಲಾಂಗ್ಪಿಹ್ ಪ್ರದೇಶ, ಬೋರ್ದ್ವಾರ್ ಪ್ರದೇಶ, ನೊಂಗ್ವಾ-ಮಾವಟಮುರ್ ಪ್ರದೇಶ, ಪಿಲಿಂಗಕಟಾ-ಖಾನಪಾರಾ, ದೇಶ್ಡೆಮೋರಿಯಾ, ಖಂಡುಲಿ, ಉಮ್ಕಿಖರಾಣಿ-ಪಿಸಿಯಾರ್, ಬ್ಲಾಕ್ I ಮತ್ತು ಬ್ಲಾಕ್ II, ರತಚೆರಾ ಪ್ರದೇಶಗಳು ಸೇರಿವೆ.
ಲ್ಯಾಂಗ್ಪಿಹ್ ಪ್ರದೇಶ:
ಅಸ್ಸಾಂ ಮತ್ತು ಮೇಘಾಲಯ ನಡುವಿನ ವಿವಾದದ ಪ್ರಮುಖ ಅಂಶವೆಂದರೆ ಅಸ್ಸಾಂನ ಕಾಮರೂಪ ಜಿಲ್ಲೆಯ ಗಡಿಯಲ್ಲಿರುವ ಪಶ್ಚಿಮ ಗಾರೋ ಬೆಟ್ಟಗಳಲ್ಲಿರುವ ಲ್ಯಾಂಗ್ಪಿಹ್ (Langpih) ಜಿಲ್ಲೆ.
- ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಲ್ಯಾಂಗ್ಪಿಹ್ ಕಾಮರೂಪ ಜಿಲ್ಲೆಯ ಭಾಗವಾಗಿತ್ತು, ಆದರೆ ಸ್ವಾತಂತ್ರ್ಯದ ನಂತರ, ಇದು ಗಾರೋ ಹಿಲ್ಸ್ ಮತ್ತು ಮೇಘಾಲಯದ ಭಾಗವಾಯಿತು.
- ಅಸ್ಸಾಂ ಇದನ್ನು ಅಸ್ಸಾಂನಲ್ಲಿರುವ ‘ಮಿಕಿರ್ ಬೆಟ್ಟಗಳ’ ಭಾಗವೆಂದು ಪರಿಗಣಿಸುತ್ತದೆ. ಈಗ ಅಸ್ಸಾಂನ ‘ಕರ್ಬಿ ಆಂಗ್ಲಾಂಗ್ ಪ್ರದೇಶದ’ ಭಾಗವಾಗಿರುವ ‘ಮಿಕಿರ್ ಹಿಲ್ಸ್’ ನ I ಮತ್ತು II ಬ್ಲಾಕ್ಗಳನ್ನು ಮೇಘಾಲಯ ಪ್ರಶ್ನಿಸಿದೆ. ಈ ಪ್ರದೇಶಗಳು ಹಿಂದಿನ ‘ಯುನೈಟೆಡ್ ಖಾಸಿ ಮತ್ತು ಜೈನ್ತಿಯಾ ಹಿಲ್ಸ್ ಜಿಲ್ಲೆಗಳ’ ಭಾಗವಾಗಿತ್ತು ಎಂದು ಮೇಘಾಲಯ ಹೇಳುತ್ತದೆ.
ವಿವಾದವನ್ನು ಪರಿಹರಿಸುವ ಪ್ರಯತ್ನಗಳು:
- ಈ ಗಡಿ ವಿವಾದಗಳನ್ನು ಪರಿಹರಿಸಲು, ಅಸ್ಸಾಂ ಮತ್ತು ಮೇಘಾಲಯ ಎರಡೂ ರಾಜ್ಯಗಳಿಂದಲೂ ‘ಗಡಿ ವಿವಾದ ಇತ್ಯರ್ಥ ಸಮಿತಿ’ (Border Dispute Settlement Committees) ಗಳನ್ನು ರಚಿಸಲಾಗಿದೆ.
- ಇತ್ತೀಚೆಗೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಗಡಿ ವಿವಾದಗಳನ್ನು ಹಂತಹಂತವಾಗಿ ಪರಿಹರಿಸಲು ‘ಎರಡು ಪ್ರಾದೇಶಿಕ ಸಮಿತಿಗಳನ್ನು’ ರಚಿಸಲು ನಿರ್ಧರಿಸಿದರು.
- ಇತ್ತೀಚೆಗೆ ‘ಹಿಮಂತ ಬಿಸ್ವ ಶರ್ಮಾ’ ನೀಡಿರುವ ಮಾಹಿತಿ ಪ್ರಕಾರ ಗಡಿ ವಿವಾದ ಬಗೆಹರಿಸಲು ಐದು ಅಂಶಗಳನ್ನು ಪರಿಗಣಿಸಬೇಕಿದೆ. ಈ ಐದು ಅಂಶಗಳಲ್ಲಿ ಐತಿಹಾಸಿಕ ಸಂಗತಿಗಳು, ಜನಾಂಗೀಯತೆ, ಆಡಳಿತಾತ್ಮಕ ಅನುಕೂಲತೆ, ಸಂಬಂಧಿತ ಜನರ ಮನಸ್ಥಿತಿ ಮತ್ತು ಭಾವನೆಗಳು ಮತ್ತು ಭೂಮಿಯ ಸಾಮೀಪ್ಯ / ನಿಕಟತೆಗಳು ಸೇರಿವೆ.
ಇತರ ರಾಜ್ಯಗಳೊಂದಿಗೆ ಅಸ್ಸಾಂನ ಗಡಿ ವಿವಾದಗಳು:
- ಈಶಾನ್ಯ ಭಾರತದಲ್ಲಿ, ಗಡಿ ವಿಷಯಗಳ ಕುರಿತು ಆಗಾಗ್ಗೆ ಉದ್ವಿಗ್ನ ಪರಿಸ್ಥಿತಿ ತತಲೆದೋರಿರುತ್ತದೆ ಅಸ್ಸಾಂ ರಾಜ್ಯವು ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನೊಂದಿಗೆ ಗಡಿ ವಿವಾದಗಳನ್ನು ಹೊಂದಿದೆ. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ನೊಂದಿಗಿನ ಅಸ್ಸಾಂನ ಗಡಿ ವಿವಾದಗಳು ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ.
- ಮೇಘಾಲಯ ಮತ್ತು ಮಿಜೋರಾಂ ಜೊತೆಗಿನ ಅಸ್ಸಾಂನ ಗಡಿ ವಿವಾದಗಳು ಪ್ರಸ್ತುತ ಮಾತುಕತೆಯ ಮೂಲಕ ಪರಿಹಾರದ ಹಂತದಲ್ಲಿವೆ. ಇತ್ತೀಚೆಗಷ್ಟೇ ಅಸ್ಸಾಂ-ಮಿಜೋರಾಂ ಗಡಿ ವಿವಾದವು ಹಿಂಸಾಚಾರಕ್ಕೆ ತಿರುಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕಾಯಿತು.
ಪ್ರಿಲಿಮ್ಸ್ಗೆ ಸಂಬಂಧಿಸಿದ ಸಂಗತಿಗಳು:
ದಿ ಫ್ರಾಂಟಿಯರ್ 2022 ವರದಿ:
ಇತ್ತೀಚೆಗೆ, UNEP ಯ ವಾರ್ಷಿಕ ಫ್ರಾಂಟಿಯರ್ ವರದಿ 2022 ಬಿಡುಗಡೆಯಾಗಿದೆ.
ಅದಕ್ಕೆ ‘ನಾಯ್ಸ್, ಬ್ಲೇಜಸ್ ಮತ್ತು ಮಿಸ್ಮ್ಯಾಚಸ್’ (Noise, Blazes and Mismatches) ಎಂಬ ಶೀರ್ಷಿಕೆ ನೀಡಲಾಗಿದೆ.
ವರದಿಯ ಮುಖ್ಯಾಂಶಗಳು:
- ಢಾಕಾವು ವಿಶ್ವದ ಅತ್ಯಂತ ಶಬ್ದ ಮಾಲಿನ್ಯ ಹೊಂದಿದ ನಗರವೆಂದು ಸ್ಥಾನ ಪಡೆದಿದೆ ಮತ್ತು ಉತ್ತರ ಪ್ರದೇಶದ ಮೊರಾದಾಬಾದ್ ನಂತರದ ಸ್ಥಾನದಲ್ಲಿದೆ.
- ಅಸನ್ಸೋಲ್, ಜೈಪುರ್, ಕೋಲ್ಕತ್ತಾ, ನವದೆಹಲಿ ಮತ್ತು ಮೊರಾದಾಬಾದ್ ಇವು ವಿಶ್ವದ ಅತ್ಯಂತ ಗದ್ದಲದ/ಶಬ್ದ ಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಐದು ಭಾರತೀಯ ನಗರಗಳಾಗಿವೆ.
- ಜೋರ್ಡಾನ್ ನಲ್ಲಿರುವ ಇರ್ಬಿಡ್, ವಿಶ್ವದ ಅತ್ಯಂತ ಶಾಂತ ನಗರವೆಂದು ಬಿರುದು ಪಡೆದಿದೆ ಮತ್ತು ಅದರ ನಂತರದ ಸ್ಥಾನದಲ್ಲಿ ಫ್ರಾನ್ಸ್ನ ಲಿಯಾನ್ ಮತ್ತು ಸ್ಪೇನ್ನ ಮ್ಯಾಡ್ರಿಡ್ ಗಳು ಇವೆ.
ಒಂದು ಕೊಂಬಿನ ಘೇಂಡಾಮೃಗ:
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಕೊಂಬಿನ ಘೇಂಡಾಮೃಗಗಳ ಸಂಖ್ಯೆಯು 200 ರಷ್ಟು ಹೆಚ್ಚಾಗಿದೆ.
- ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಘೇಂಡಾಮೃಗಗಳ ಸಂಖ್ಯೆ 2613 ರಷ್ಟಿದ್ದು, ಇದರಲ್ಲಿ 866 ಗಂಡು, 1049 ಹೆಣ್ಣು, 273 ಲಿಂಗ ಪತ್ತೆಯಾಗದ, 279 ಕಿಶೋರಾವಸ್ಥೆಯಲ್ಲಿನ ಘೇಂಡಾಮೃಗಗಳು ಮತ್ತು 146 ಮರಿಗಳಿವೆ.
ಏಕಶೃಂಗಿ ಖಡ್ಗಮೃಗಗಳ ಕುರಿತು:
- ‘ಒಂದು ಕೊಂಬಿನ ಖಡ್ಗಮೃಗ’ ಮಾತ್ರ ಭಾರತದಲ್ಲಿ ಕಂಡುಬರುತ್ತದೆ.
- ಅವುಗಳನ್ನು ‘ಇಂಡಿಯನ್ ರೈನೋಸೆರೋಸ್’ ಎಂದೂ ಕರೆಯುತ್ತಾರೆ ಮತ್ತು ಖಡ್ಗಮೃಗದ ಪ್ರಭೇದಗಳಲ್ಲಿ ಅತ್ಯಂತ ದೊಡ್ಡದಾಗಿದೆ.
- ಇದನ್ನು ‘ಕಪ್ಪು ಕೊಂಬು’ ಮತ್ತು ಬೂದು-ಕಂದು ಚರ್ಮದ ಮಡಿಕೆಗಳಿಂದ ಗುರುತಿಸಲಾಗುತ್ತದೆ.
- ಅವು,ಸಾಮಾನ್ಯವಾಗಿ ಮೇಯುವ ಮೂಲಕ ತಮ್ಮ ಆಹಾರವನ್ನು ಸ್ವೀಕರಿಸುತ್ತವೆ, ಮತ್ತು ಅವುಗಳ ಆಹಾರದಲ್ಲಿ ಎಲ್ಲಾ ರೀತಿಯ ಹುಲ್ಲುಗಳು, ಎಲೆಗಳು, ಪೊದೆಗಳು ಮತ್ತು ಮರದ ಕೊಂಬೆಗಳು, ಹಣ್ಣುಗಳು ಮತ್ತು ಜಲಸಸ್ಯಗಳು ಸೇರಿವೆ.
ರಕ್ಷಣೆ ಸ್ಥಿತಿ:
- IUCN ಕೆಂಪು ಪಟ್ಟಿ: ದುರ್ಬಲ/ಅಪಾಯಕ್ಕೊಳಗಾದ ಬಲ್ಲ ಪ್ರಭೇದ (VU).
- ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ (CITES): ಅನುಬಂಧ -1 (ಅಳಿವಿನಂಚಿನಲ್ಲಿರುವ ಬೆದರಿಕೆ ಹೊಂದಿರುವ ಮತ್ತು CITES, ವೈಜ್ಞಾನಿಕ ಸಂಶೋಧನೆಯಂತಹ ವಾಣಿಜ್ಯೇತರ ಉದ್ದೇಶಗಳನ್ನು ಹೊರತುಪಡಿಸಿ ಈ ಪ್ರಭೇದಗಳನ್ನು ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಬಳಸುವುದನ್ನು ನಿಷೇಧಿಸುತ್ತದೆ).
- ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972: ಅನುಸೂಚಿ -1.
ಭಾರತದ ಇತರ ಸಂರಕ್ಷಣಾ ಪ್ರಯತ್ನಗಳು:
- ಐದು ಖಡ್ಗಮೃಗ ಶ್ರೇಣಿಯ ದೇಶಗಳು: ಖಡ್ಗಮೃಗದ ಪ್ರಭೇದಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಐದು ಖಡ್ಗಮೃಗ ಶ್ರೇಣಿಯ ದೇಶಗಳು (ಭಾರತ, ಭೂತಾನ್, ನೇಪಾಳ, ಇಂಡೋನೇಷ್ಯಾ ಮತ್ತು ಮಲೇಷ್ಯಾ) ಏಷ್ಯನ್ ಖಡ್ಗಮೃಗಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ‘ಏಷ್ಯನ್ ಖಡ್ಗಮೃಗಗಳ ಕುರಿತ ನವದೆಹಲಿ ಘೋಷಣೆಗೆ (New Delhi Declaration on Asian Rhinos- 2019) ಸಹಿ ಹಾಕಿವೆ.
- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ದೇಶದ ಎಲ್ಲಾ ಖಡ್ಗಮೃಗಗಳ ಡಿಎನ್ಎ ಪ್ರೊಫೈಲ್ಗಳನ್ನು ರಚಿಸುವ ಯೋಜನೆಯನ್ನು ಪ್ರಾರಂಭಿಸಿದೆ.
- ರಾಷ್ಟ್ರೀಯ ಖಡ್ಗಮೃಗ ಸಂರಕ್ಷಣಾ ಕಾರ್ಯತಂತ್ರ: ಒಂದು ಕೊಂಬಿನ ಖಡ್ಗಮೃಗಗಳನ್ನು ಸಂರಕ್ಷಿಸಲು ಇದನ್ನು 2019 ರಲ್ಲಿ ಪ್ರಾರಂಭಿಸಲಾಯಿತು.
ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ:
- ಇರುವ ಸ್ಥಳ: ಈ ಹುಲಿ ಸಂರಕ್ಷಿತ ಪ್ರದೇಶವು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿದೆ.
- ಇದು 1978 ರಲ್ಲಿ ಭಾರತದ ಪ್ರಾಜೆಕ್ಟ್ ಟೈಗರ್ನ ಭಾಗವಾಯಿತು.
- ಹುಲಿ ಸ್ಥಳಾಂತರ: ಇದು ಹುಲಿಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ ವಿಶ್ವದ ಮೊದಲ ಮೀಸಲು(Reserve) ಪ್ರದೇಶವಾಗಿದೆ.
- ಇದು ಉತ್ತರ ಅರಾವಳಿ ಚಿರತೆ ಮತ್ತು ವನ್ಯಜೀವಿ ಕಾರಿಡಾರ್ನಲ್ಲಿ ಇರುವ ಪ್ರಮುಖ ಜೀವವೈವಿಧ್ಯ ಪ್ರದೇಶವಾಗಿದೆ.
- ಇದು ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ.
- ಇದು ಅರಾವಳಿ ಶ್ರೇಣಿ ಮತ್ತು ಖಥಿಯರ್-ಗಿರ್ ಒಣ ಪತನಶೀಲ ಕಾಡುಗಳ ಪರಿಸರ ಪ್ರದೇಶದ ಒಂದು ಭಾಗವಾಗಿದೆ.
P – 8I:
- ನೌಕಾಪಡೆಯು ಇತ್ತೀಚೆಗೆ ಗೋವಾದಲ್ಲಿ ಎರಡನೇ P-8I ಸ್ಕ್ವಾಡ್ರನ್ INAS 316 ‘ಕಾಂಡರ್ಸ್’ ಅನ್ನು ನಿಯೋಜಿಸಿದೆ.
- ಭಾರತೀಯ ನೌಕಾಪಡೆಯ ಏರ್ ಸ್ಕ್ವಾಡ್ರನ್ (INAS) 316, $1 ಶತಕೋಟಿ ಮೌಲ್ಯದ ಒಪ್ಪಂದದಲ್ಲಿ 2016 ರಲ್ಲಿ ಐಚ್ಛಿಕ ಷರತ್ತಿನ ಭಾಗವಾಗಿ ಖರೀದಿಸಲಾದ ನಾಲ್ಕು P-8I ವಿಮಾನಗಳನ್ನು ನಿರ್ವಹಿಸುತ್ತದೆ.
- P -8 I ವಿಮಾನವು ಭಾರತೀಯ ನೌಕಾಪಡೆಗಾಗಿ ಬೋಯಿಂಗ್ ತಯಾರಿಸಿದ ದೀರ್ಘ-ಶ್ರೇಣಿಯ ಬಹುಪಯೋಗಿ ಕಡಲ ಗಸ್ತು ವಿಮಾನವಾಗಿದೆ.
- ಪಿ -8 ಐ ವಿಮಾನವು ಭಾರತದ ವಿಶಾಲ ಕರಾವಳಿ ಮತ್ತು ಪ್ರಾದೇಶಿಕ ಜಲ ಭಾಗವನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.
- ಇದನ್ನು ಜಲಾಂತರ್ಗಾಮಿ ವಿರೋಧಿ ಯುದ್ಧ, ಗುಪ್ತಚರ ಕಾರ್ಯಾಚರಣೆಗಳು, ಕಡಲಗಸ್ತು, ಕಣ್ಗಾವಲು ಮತ್ತು ವಿಚಕ್ಷಣ ಕಾರ್ಯಾಚರಣೆಗಳಲ್ಲಿ ಬಳಸಬಹುದು.
- ಸ್ಕ್ವಾಡ್ರನ್ಗೆ ‘ಕಾಂಡರ್ಸ್’ ಎಂದು ಹೆಸರಿಸಲಾಗಿದೆ, ‘ಕಾಂಡರ್ಸ್’ ಎಂದರೆ ಇದು ಬೃಹತ್ ರೆಕ್ಕೆಗಳನ್ನು ಹೊಂದಿರುವ ಅತಿದೊಡ್ಡ ಹಾರುವ ಭೂ ಪಕ್ಷಿಗಳಲ್ಲಿ ಒಂದಾಗಿದೆ.
ಭಾರತದ ಬಾಹ್ಯಾಕಾಶ ಆರ್ಥಿಕತೆ:
(India’s space economy)
ಭಾರತದ ಬಾಹ್ಯಾಕಾಶ ಆರ್ಥಿಕತೆಯ ಅಂದಾಜು ಗಾತ್ರ, GDP ಯ ಶೇಕಡಾವಾರು ಪ್ರಮಾಣದಲ್ಲಿ, 2011-12 ರಲ್ಲಿದ್ದ 0.26% ರಿಂದ 2020-21 ರಲ್ಲಿ 0.19% ಕ್ಕೆ ಕುಸಿದಿದೆ.
- ಜಿಡಿಪಿಗೆ ಸಂಬಂಧಿಸಿದಂತೆ, ಬಾಹ್ಯಾಕಾಶ ಯೋಜನೆಗಳಿಗೆ ಭಾರತ ಮಾಡುವ ವೆಚ್ಚವು ಚೀನಾ, ಜರ್ಮನಿ, ಇಟಲಿ ಮತ್ತು ಜಪಾನ್ಗಿಂತ ಹೆಚ್ಚು, ಆದರೆ ಯುಎಸ್ ಮತ್ತು ರಷ್ಯಾಕ್ಕಿಂತ ಕಡಿಮೆಯಾಗಿದೆ.
- ವೆಚ್ಚ-ಪರಿಣಾಮಕಾರಿ ಉಪಗ್ರಹಗಳನ್ನು ನಿರ್ಮಿಸಲು, ಚಂದ್ರಯಾನ ಯೋಜನೆ ಕೈಗೊಳ್ಳಲು ಮತ್ತು ವಿದೇಶಿ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲು ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ.
- ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು ~ US$ 423 ಶತಕೋಟಿ ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಭಾರತವು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯ 2-3% ರಷ್ಟಿದೆ ಮತ್ತು 48% ನ CAGR ನಲ್ಲಿ 2030 ರ ವೇಳೆಗೆ 10% ಗೆ ತನ್ನ ಪಾಲನ್ನು ಹೆಚ್ಚಿಸುವ ನಿರೀಕ್ಷೆಯಿದೆ