ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2 :
1. ಬರ್ಮಾ v/s ಮ್ಯಾನ್ಮಾರ್.
2. ಹರಿಯಾಣದ ಮೀಸಲಾತಿ (ಕೋಟಾ) ಕಾನೂನಿಗೆ ತಡೆಯಾಜ್ಞೆ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಚಂದ್ರಯಾನ 3.
2. ಡ್ರೋನ್ ನಿಯಮಗಳು, 2021.
3. ಹವಾಮಾನ ಬದಲಾವಣೆಗಾಗಿ ನ್ಯಾಷನಲ್ ಅಡಾಪ್ಟೇಶನ್ ಫಂಡ್ (NAFCC).
4. COP-26 ನಲ್ಲಿ ಭಾರತದ ನಿಲುವು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ನದಿ ನಗರಗಳ ಒಕ್ಕೂಟ.
2. ಪುನೌರಾ ಧಾಮ್.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗಿನ ಅದರ ಸಂಬಂಧಗಳು:
ಮ್ಯಾನ್ಮಾರ್ v/s ಬರ್ಮಾ:
ಸಂದರ್ಭ:
ಒಂದು ವರ್ಷದ ಹಿಂದೆ ಮ್ಯಾನ್ಮಾರ್ನ ಪ್ರಜಾಸತ್ತಾತ್ಮಕ ಸರ್ಕಾರವನ್ನು ಮಿಲಿಟರಿ ದಂಗೆಯಿಂದ ಉರುಳಿಸಿದ ನಂತರ ಮ್ಯಾನ್ಮಾರ್ನಲ್ಲಿ ಸಾಮೂಹಿಕ ಪ್ರತಿಭಟನೆಗಳು, ಸಶಸ್ತ್ರ ಪ್ರತಿರೋಧ ಮತ್ತು ಸಾಮೂಹಿಕ ಹತ್ಯೆಗಳು ನಡೆಯುತ್ತಲಿವೆ.
- ಚುನಾಯಿತ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಜೈಲಿಗೆ ಹಾಕಲಾಗಿದೆ. ಅವರ ಬೆಂಬಲಿಗರು ಇದನ್ನು ಶೋ ಟ್ರಯಲ್ / ನಾಟಕೀಯ ವಿಚಾರಣೆ ಎಂದು ಹೇಳುತ್ತಾರೆ.
- ಮ್ಯಾನ್ಮಾರ್ ಮಿಲಿಟರಿಯು ಕಳೆದ ವರ್ಷ ದಂಗೆಯ ಮೂಲಕ ಚುನಾಯಿತ ಪ್ರಜಾಸತ್ತಾತ್ಮಕ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರವನ್ನು ಪಡೆದುಕೊಂಡಿತು – 1948 ರಲ್ಲಿ ಬ್ರಿಟಿಷ್ ಆಡಳಿತದಿಂದ ವಿಮೋಚನೆಗೊಂಡ ನಂತರ, ಮ್ಯಾನ್ಮಾರ್ನ ಇತಿಹಾಸದಲ್ಲಿ ಈ ವಿದ್ಯಮಾನವು ಮೂರನೇ ಬಾರಿಗೆ ಜರುಗಿದೆ.
ದೇಶದ ಆಡಳಿತ ಈಗ ಯಾರ ಕೈಯಲ್ಲಿದೆ?
ಮಿಲಿಟರಿ ಕಮಾಂಡರ್-ಇನ್-ಚೀಫ್ ಮಿನ್ ಆಂಗ್ ಹ್ಲೈಂಗ್ (Min Aung Hlaing) ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಅವರು ದೀರ್ಘಕಾಲದಿಂದ ಮಹತ್ವದ ರಾಜಕೀಯ ಪ್ರಭಾವವನ್ನು ಹೊಂದಿದ್ದಾರೆ, ದೇಶವು ಪ್ರಜಾಪ್ರಭುತ್ವದ ಕಡೆಗೆ ಸಾಗುತ್ತಿದ್ದರೂ ಸಹ, ತತ್ಮಾದಾವ್ನ (Tatmadaw) ಎಂದು ಕರೆಯಲ್ಪಡುವ ಮ್ಯಾನ್ಮಾರ್ನ ಮಿಲಿಟರಿ –ಅಧಿಕಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ಈ ಸೇನಾ ದಂಗೆಗೆ ಅಂತಾರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆ:
- ಮ್ಯಾನ್ಮಾರ್ನಲ್ಲಿ “ಹಿಂಸಾಚಾರದ ತೀವ್ರತೆ ಮತ್ತು ಬಡತನದ ತ್ವರಿತ ಏರಿಕೆ” ಯೊಂದಿಗೆ ಆಳವಾದ ಮಾನವೀಯ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಸಿದೆ.
- ಭದ್ರತಾ ಪಡೆಗಳ ಆಡಳಿತವನ್ನು “ಭಯೋತ್ಪಾದನೆಯ ಆಳ್ವಿಕೆ” ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಆರೋಪಿಸಿದ್ದಾರೆ.
- ಯುಎಸ್, ಯುಕೆ ಮತ್ತು ಯುರೋಪಿಯನ್ ಯೂನಿಯನ್ ಗಳು ಮ್ಯಾನ್ಮಾರ್ನ ಮಿಲಿಟರಿ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಿವೆ.
- ದಂಗೆಯನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಚೀನಾ ನಿರ್ಬಂಧಿಸಿದೆ, ಆದರೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮರಳುವ ಕರೆಗಳನ್ನು ಬೆಂಬಲಿಸಿದೆ.
ಏನಿದು ಪ್ರಕರಣ?
ಪ್ರತಿಭಟನೆ ನಡೆಸುತ್ತಿರುವ ನಾಗರಿಕರ ಮೇಲೆ ಹಿಂಸಾತ್ಮಕ ದಬ್ಬಾಳಿಕೆಯಿಂದಾಗಿ ಮ್ಯಾನ್ಮಾರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಗೊಂಡಿದೆ.
ಭಾರತದ ಬೇಡಿಕೆಗಳು:
- ಮ್ಯಾನ್ಮಾರ್ನಲ್ಲಿ ಅತಿಶೀಘ್ರವಾಗಿ ಪ್ರಜಾಪ್ರಭುತ್ವವು ಮರು ಸ್ಥಾಪನೆಯಾಗಬೇಕು ;
- ಬಂಧಿತ ವ್ಯಕ್ತಿಗಳು ಮತ್ತು ಕೈದಿಗಳ ಬಿಡುಗಡೆ;
- ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ;
- ಎಲ್ಲಾ ರೀತಿಯ ಹಿಂಸೆಯ ಸಂಪೂರ್ಣ ನಿಲುಗಡೆ.
ಭಾರತವು, ಮ್ಯಾನ್ಮಾರ್ನ ಸಂದರ್ಭದಲ್ಲಿ ಆಸಿಯಾನ್ನ ಒಂದು ಉಪಕ್ರಮ ಮತ್ತು (Five-Point Consensus) ಐದು ಅಂಶಗಳ ಸಹಮತಿ’ ಇವುಗಳನ್ನು ಬೆಂಬಲಿಸುತ್ತಿದೆ:
ಇದು ಒಳಗೊಂಡಿರುವುದು:
- ಹಿಂಸಾಚಾರಕ್ಕೆ ತಕ್ಷಣದ ನಿಲುಗಡೆ.
- ಶಾಂತಿಯುತ ಪರಿಹಾರಕ್ಕಾಗಿ ಮ್ಯಾನ್ಮಾರ್ನ ಎಲ್ಲ ಪಾಲುದಾರರ ನಡುವೆ ಸಂವಾದ.
- ಮಧ್ಯಸ್ಥಿಕೆಗಾಗಿ ವಿಶೇಷ ಆಸಿಯಾನ್ ರಾಯಭಾರಿಯ ನೇಮಕ.
- ಮ್ಯಾನ್ಮಾರ್ಗೆ ನೆರವು ನೀಡುವುದು.
- ಆಸಿಯಾನ್ ಪ್ರತಿನಿಧಿಯಿಂದ ಮ್ಯಾನ್ಮಾರ್ಗೆ ಭೇಟಿ ನೀಡಿಕೆ.
ಬರ್ಮಾ ಮ್ಯಾನ್ಮಾರ್ ಆಗಿ ಹೇಗೆ ಬದಲಾಯಿತು?
19 ನೇ ಶತಮಾನದಲ್ಲಿ, ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಇಂದಿನ ಮ್ಯಾನ್ಮಾರ್ ಅನ್ನು ಸ್ವಾಧೀನಪಡಿಸಿಕೊಂಡಾಗ, ಇದನ್ನು ಪ್ರಮುಖ ಮತ್ತು ಪ್ರಬಲ ಸ್ಥಳೀಯ ಜನಾಂಗವಾದ ಬರ್ಮೀಸ್- ಬರ್ಮನ್ (ಬಮರ್) ಹೆಸರಿನ ನಂತರ ‘ಬರ್ಮಾ’ (ಬರ್ಮಾ) ಎಂದು ಕರೆದರು ಮತ್ತು ಇದನ್ನು ವಸಾಹತುಶಾಹಿ ಭಾರತದ ಒಂದು ಪ್ರಾಂತ್ಯವಾಗಿ ನಿರ್ವಹಿಸಿದರು.
- ಈ ವ್ಯವಸ್ಥೆಯು 1937 ರವರೆಗೆ ಮುಂದುವರೆಯಿತು. ಅದೇ ವರ್ಷದಲ್ಲಿ ಬರ್ಮಾವನ್ನು ಬ್ರಿಟಿಷ್ ಭಾರತದಿಂದ ಬೇರ್ಪಡಿಸಿ ಪ್ರತ್ಯೇಕ ವಸಾಹತು ಮಾಡಿದರು.
- 1948 ರಲ್ಲಿ ದೇಶವು ಸ್ವಾತಂತ್ರ್ಯ ಪಡೆದ ನಂತರವೂ ಹಳೆಯ ಹೆಸರನ್ನು ಉಳಿಸಿಕೊಳ್ಳಲಾಯಿತು ಮತ್ತು ಅದು ‘ಬರ್ಮದ ಒಕ್ಕೂಟ’ ಆಯಿತು.
- 1962 ರಲ್ಲಿ, ಸೈನ್ಯವು ಮೊದಲ ಬಾರಿಗೆ ದಂಗೆಯ ಮೂಲಕ ನಾಗರಿಕ ಸರ್ಕಾರದಿಂದ ಅಧಿಕಾರ ವಹಿಸಿಕೊಂಡಿತು ಮತ್ತು 1974 ರಲ್ಲಿ, ಅದರ ಅಧಿಕೃತ ಹೆಸರನ್ನು ‘ಬರ್ಮಾ ಒಕ್ಕೂಟದ ಸಮಾಜವಾದಿ ಗಣರಾಜ್ಯ’ ಎಂದು ಬದಲಾಯಿಸಲಾಯಿತು.
- ನಂತರ 1988 ರಲ್ಲಿ, ಜನಪ್ರಿಯ ದಂಗೆಯನ್ನು ಹತ್ತಿಕ್ಕಿದ ನಂತರ, ಮಿಲಿಟರಿ ಪಡೆಗಳು ದೇಶದಲ್ಲಿ ಎರಡನೇ ಬಾರಿಗೆ ಅಧಿಕಾರವನ್ನು ಪಡೆದುಕೊಂಡವು ಮತ್ತು ಅದರ ಅಧಿಕೃತ ಹೆಸರನ್ನು ‘ಯೂನಿಯನ್ ಆಫ್ ಬರ್ಮಾ’ ಎಂದು ಬದಲಾಯಿಸಿದವು.
- ಒಂದು ವರ್ಷದ ನಂತರ, ಜುಂಟಾ ಬರ್ಮವನ್ನು ಮ್ಯಾನ್ಮಾರ್ ಆಗಿ ಪರಿವರ್ತಿಸಲು ಕಾನೂನನ್ನು ಅಂಗೀಕರಿಸಿದರು ಮತ್ತು ದೇಶವನ್ನು ‘ಮ್ಯಾನ್ಮಾರ್ ಒಕ್ಕೂಟ’ ಎಂದು ಮರುನಾಮಕರಣ ಮಾಡಿದರು.
ಈ ಹೆಸರು ಬದಲಾವಣೆಯ ಹಿಂದಿನ ತಾರ್ಕಿಕತೆ ಮತ್ತು ಅದರ ಪರಿಣಾಮಗಳು:
ಮಿಲಿಟರಿಯು ದೇಶದ ಹೆಸರನ್ನು ಬದಲಾಯಿಸುವಾಗ, ವಸಾಹತುಶಾಹಿ ಭೂತಕಾಲದಿಂದ ಆನುವಂಶಿಕವಾಗಿ ಪಡೆದ ಹೆಸರನ್ನು ತ್ಯಜಿಸಲು ಮತ್ತು ಹೊಸ ಹೆಸರನ್ನು ಪಡೆದುಕೊಳ್ಳಲು, ಒಂದು ಮಾರ್ಗವನ್ನು ಹುಡುಕುತ್ತಿದೆ ಎಂದು ಹೇಳಿದೆ, ಅದು ಬರ್ಮೀಸ್ ಜನಾಂಗೀಯ ಗುಂಪನ್ನು ಮಾತ್ರವಲ್ಲದೆ ಅಧಿಕೃತವಾಗಿ ಗುರುತಿಸಲ್ಪಟ್ಟ 135 ಜನಾಂಗೀಯ ಗುಂಪುಗಳ ಒಗ್ಗಟ್ಟನ್ನು ಸಂಕೇತಿಸುತ್ತದೆ,ಎಂದು ಹೇಳಿದೆ.
- ಆದಾಗ್ಯೂ, ಬರ್ಮೀಸ್ ಭಾಷೆಯಲ್ಲಿ ‘ಮ್ಯಾನ್ಮಾರ್’ ಮತ್ತು ‘ಬರ್ಮಾ’ ಒಂದೇ ಅರ್ಥವನ್ನು ಹೊಂದಿವೆ ಎಂದು ಹೇಳುವ ಮೂಲಕ ವಿಮರ್ಶಕರು ಗಮನಸೆಳೆದಿದ್ದಾರೆ. ‘ಬರ್ಮಾ’ಎಂದು ಆಡುಮಾತಿನಲ್ಲಿ’ ಕರೆದರೂ ಔಪಚಾರಿಕವಾಗಿ ‘ಮ್ಯಾನ್ಮಾರ್’ ಎಂದು ಕರೆಯಲಾಗುತ್ತದೆ.
- ರಂಗೂನ್ನಿಂದ ಯಾಂಗೂನ್ನಂತಹ ಇತರ ಹೆಸರುಗಳ ಬದಲಾವಣೆಯು ಸಹ ಬರ್ಮೀಸ್ ಭಾಷೆಯೊಂದಿಗೆ ಹೆಚ್ಚಿನ ಅನುಸರಣೆಯನ್ನು ಪ್ರತಿಬಿಂಬಿಸುತ್ತವೆ ಹೊರತು ಬೇರೇನೂ ಇಲ್ಲ.
- ಅಲ್ಲದೆ, ಹೆಸರು ಬದಲಾವಣೆಗಳು ಇಂಗ್ಲಿಷ್ ನಲ್ಲಿ ಮಾತ್ರ ನಡೆದಿವೆ. ಇಂಗ್ಲಿಷ್ನಲ್ಲಿಯೂ ಸಹ, ವಿಶೇಷಣ ರೂಪವು ಬರ್ಮೀಸ್ ಆಗಿಯೇ ಉಳಿದಿದೆ (ಮತ್ತು ಹಾಗೆಯೇ ಮುಂದುವರೆದಿದೆ) ಮತ್ತು ಮ್ಯಾನ್ಮಾರೀಸ್ ಆಗಿ ಅಲ್ಲ.
- ಪ್ರಜಾಪ್ರಭುತ್ವ ಪರ ಸಹಾನುಭೂತಿ ಹೊಂದಿರುವವರು ಹೆಸರು ಬದಲಾವಣೆಗಳು ಕಾನೂನುಬಾಹಿರವಾಗಿದ್ದು, ಜನರ ಇಚ್ಛೆಯಿಂದ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.
- ಇದರ ಪರಿಣಾಮವಾಗಿ, ಜುಂಟಾ ನಿರ್ಧಾರವನ್ನು ವಿರೋಧಿಸಿದ ಪ್ರಪಂಚದಾದ್ಯಂತದ ಅನೇಕ ಸರ್ಕಾರಗಳು ಹೆಸರು ಬದಲಾವಣೆಗಳನ್ನು ನಿರ್ಲಕ್ಷಿಸಲು ನಿರ್ಧರಿಸಿದವು ಮತ್ತು ದೇಶವನ್ನು ಬರ್ಮಾ ಮತ್ತು ಅದರ ರಾಜಧಾನಿ ರಂಗೂನ್ ಎಂದು ಕರೆಯುವುದನ್ನು ಮುಂದುವರೆಸಿದವು.
ಮ್ಯಾನ್ಮಾರ್ನ ಮಿಲಿಟರಿ ಸಂವಿಧಾನ:
- 2008 ರಲ್ಲಿ ಮ್ಯಾನ್ಮಾರ್ನಲ್ಲಿ ಮಿಲಿಟರಿಯಿಂದ ಸಂವಿಧಾನವನ್ನು ರಚಿಸಲಾಯಿತು ಮತ್ತು ಈ ವರ್ಷದ ಏಪ್ರಿಲ್ನಲ್ಲಿ ಪ್ರಶ್ನಾರ್ಹವಾದ ಜನಾಭಿಪ್ರಾಯ ಸಂಗ್ರಹಿಸಲಾಯಿತು.
- ಈ ಸಂವಿಧಾನವು ಸೈನ್ಯವು ರಚಿಸಿದ ‘ಪ್ರಜಾಪ್ರಭುತ್ವಕ್ಕೆ ಮಾರ್ಗಸೂಚಿ’ ಆಗಿದ್ದು, ಇದನ್ನು ಪಾಶ್ಚಿಮಾತ್ಯ ದೇಶಗಳ ಒತ್ತಡದಿಂದಾಗಿ ಮ್ಯಾನ್ ಮಾರ್ ಸೈನ್ಯವು ಅಂಗೀಕರಿಸಿತು.
- ಇದಲ್ಲದೆ, ಮ್ಯಾನ್ಮಾರ್ ಅನ್ನು ಹೊರಗಿನ ಪ್ರಪಂಚಕ್ಕೆ ತೆರೆಯುವುದು ಇನ್ನು ಮುಂದೆ ಒಂದು ಆಯ್ಕೆಯಾಗಿಲ್ಲ ಆದರೆ ಗಂಭೀರವಾದ ಆರ್ಥಿಕ ಅಗತ್ಯವಾಗಿದೆ ಎಂಬುದು ಮಿಲಿಟರಿ ಆಡಳಿತಕ್ಕೂ ಅರಿವಾಯಿತು.
- ಆದರೆ ಸೇನೆಯು ಸಂವಿಧಾನದಲ್ಲಿ ತನ್ನ ಪಾತ್ರವನ್ನು ಮತ್ತು ರಾಷ್ಟ್ರೀಯ ವ್ಯವಹಾರಗಳಲ್ಲಿ ತನ್ನ ಶ್ರೇಷ್ಟತೆ ಅಥವಾ ಪ್ರಾಬಲ್ಯವನ್ನು ಖಚಿತಪಡಿಸಿಕೊಂಡಿತ್ತು.
- ಸಂವಿಧಾನದ ನಿಬಂಧನೆಗಳ ಪ್ರಕಾರ, ಸಂಸತ್ತಿನ ಉಭಯ ಸದನಗಳಲ್ಲಿ 25 ಪ್ರತಿಶತ ಸ್ಥಾನಗಳನ್ನು ಸೈನ್ಯಕ್ಕಾಗಿ ಕಾಯ್ದಿರಿಸಲಾಗಿದೆ, ಅದರ ಮೇಲೆ ಸೇವಾ ನಿರತ ಮಿಲಿಟರಿ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಲಾಗುತ್ತದೆ.
- ಅಲ್ಲದೆ, ಸೈನ್ಯದ ಪರವಾಗಿ ಚುನಾವಣೆಗಳಲ್ಲಿ ಭಾಗವಹಿಸುವ ಪ್ರತಿನಿಧಿ ರಾಜಕೀಯ ಪಕ್ಷವನ್ನು ರಚಿಸಲಾಯಿತು.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಹರಿಯಾಣದ ಮೀಸಲಾತಿ (ಕೋಟಾ) ಕಾನೂನಿಗೆ ತಡೆಯಾಜ್ಞೆ:
(Haryana private sector quota law stayed)
ಸಂದರ್ಭ:
ಹರಿಯಾಣದ ‘ಖಾಸಗಿ ವಲಯದ ಉದ್ಯೋಗ ಕಾಯ್ದಿರಿಸುವಿಕೆ ಕಾಯ್ದೆ’ (75% reservation for locals in private sector jobs) ಅಡಿಯಲ್ಲಿ ರಾಜ್ಯಾದ್ಯಂತ ಖಾಸಗಿ ವಲಯದಲ್ಲಿ ರಾಜ್ಯದ ಜನರಿಗೆ (ಹರಿಯಾಣವಿಗಳಿಗೆ) ಶೇಕಡಾ 75 ರಷ್ಟು ಉದ್ಯೋಗಾವಕಾಶಗಳನ್ನು ಕಾಯ್ದಿರಿಸುವ ಮೀಸಲಾತಿ ಕಾನೂನಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆ ನೀಡಿದೆ.
ಹಿನ್ನೆಲೆ:
ಹರಿಯಾಣದ ‘ಖಾಸಗಿ ವಲಯದ ಉದ್ಯೋಗ ಕಾಯ್ದಿರಿಸುವಿಕೆ ಕಾಯ್ದೆ’ (75% reservation for locals in private sector jobs) ಅಡಿಯಲ್ಲಿ ಖಾಸಗಿ ವಲಯದಲ್ಲಿ ರಾಜ್ಯದ ಜನರಿಗೆ ಶೇಕಡಾ 75 ರಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ಮೀಸಲಾತಿ ಕಾನೂನು, 2022 ರ ಜನೇವರಿ 15 ರಿಂದ ಜಾರಿಗೆ ಬಂದಿದೆ.
ಕಾಯ್ದೆಯ ಪ್ರಮುಖ ಅಂಶಗಳು:
- ಈ ಕಾನೂನಿನ ಅಡಿಯಲ್ಲಿ, ‘ನಿವಾಸ ಪ್ರಮಾಣಪತ್ರ’ (ವಾಸಸ್ಥಳ domicile) ಪ್ರಸ್ತುತಪಡಿಸುವ ಜನರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ 75% ಮೀಸಲಾತಿಯನ್ನು ಒದಗಿಸಲಾಗಿದೆ.
- ಈ ಕಾನೂನು 10 ವರ್ಷಗಳ ಅವಧಿಗೆ ಅನ್ವಯಿಸುತ್ತದೆ.
- 30,000 ರೂ.ಗಿಂತ ಕಡಿಮೆ ಮಾಸಿಕ ವೇತನವನ್ನು ಹೊಂದಿರುವ ಉದ್ಯೋಗಗಳಿಗೆ ಸ್ಥಳೀಯ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ನ್ಯಾಯಾಲಯದಲ್ಲಿ ಈ ಕಾನೂನನ್ನು ಏಕೆ ಪ್ರಶ್ನಿಸಲಾಗಿದೆ?
- ಹರ್ಯಾಣವು “ಮಣ್ಣಿನ ಮಕ್ಕಳು” (sons of the soil) ನೀತಿಯನ್ನು ಪರಿಚಯಿಸುವ ಮೂಲಕ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಸೃಷ್ಟಿಸಲು ಬಯಸಿದೆ ಎಂದು ಅರ್ಜಿದಾರರು ವಾದಿಸಿದರು, ಇದು ಮಾಲೀಕರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ.
- ಖಾಸಗಿ ವಲಯದ ಉದ್ಯೋಗಗಳು ಸಂಪೂರ್ಣವಾಗಿ ಕೌಶಲ್ಯ ಮತ್ತು ಬೌದ್ಧಿಕ ವಿಶ್ಲೇಷಣಾತ್ಮಕತೆಯ ಮೇಲೆ ಆಧಾರಿತವಾಗಿವೆ ಮತ್ತು ಉದ್ಯೋಗಿಗಳು ಭಾರತದ ಯಾವುದೇ ಭಾಗದಲ್ಲಿ ಕೆಲಸ ಮಾಡುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ.
- ಈ ಮಸೂದೆಯ ಮೂಲಕ ಖಾಸಗಿ ವಲಯದಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಉದ್ಯೋಗದಾತರನ್ನು ಒತ್ತಾಯಿಸುವುದು ಭಾರತದ ಸಂವಿಧಾನದಿಂದ ರಚಿಸಲಾದ ಫೆಡರಲ್ ರಚನೆಯ ಉಲ್ಲಂಘನೆಯಾಗಿದೆ, ಇದರಿಂದಾಗಿ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಮತ್ತು ಕೇವಲ ಒಂದು ವರ್ಗಕ್ಕೆ ಪ್ರಯೋಜನ ಒದಗಿಸುವಂತಿಲ್ಲ.
ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ,2020 ಕುರಿತು:
(Haryana State Employment of Local Candidates Bill, 2020)
- ಮಸೂದೆಯು ಹರಿಯಾಣದಲ್ಲಿ, ಖಾಸಗಿ ಕಂಪೆನಿಗಳು 75% ಉದ್ಯೋಗಗಳನ್ನು ಸ್ಥಳೀಯ ಜನರಿಗೆ ಮಾಸಿಕ 50,000 ರೂ.ಗಳವರೆಗೆ ಅಥವಾ ಕಾಲಕಾಲಕ್ಕೆ ಸರ್ಕಾರದಿಂದ ಸೂಚಿಸಬಹುದಾದ ವೇತನ ಮಿತಿಗೆ ಒಳಪಟ್ಟು ಮೀಸಲಿಡಬೇಕಾಗುತ್ತದೆ ಎಂದು ತಿಳಿಸುತ್ತದೆ.
- ಸರ್ಕಾರದಿಂದ ಸೂಚಿಸಲ್ಪಟ್ಟ ಈ ಕಾನೂನು ಎಲ್ಲಾ ಕಂಪನಿಗಳು, ಸಂಘಗಳು, ಟ್ರಸ್ಟ್ಗಳು, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಗಳು, ಪಾಲುದಾರಿಕೆ ಸಂಸ್ಥೆಗಳು ಮತ್ತು 10 ಅಥವಾ 10 ಕ್ಕಿಂತ ಹೆಚ್ಚಿನ ವ್ಯಕ್ತಿಗಳನ್ನು ನೇಮಿಸುವ ಯಾವುದೇ ವ್ಯಕ್ತಿ ಅಥವಾ ಘಟಕಗಳಿಗೆ ಅನ್ವಯಿಸುತ್ತದೆ.
ಈ ಮಸೂದೆಯ ಕುರಿತ ಕಳವಳಗಳು ಮತ್ತು ಸವಾಲುಗಳು:
- ಈ ಕಾನೂನು ಹರಿಯಾಣದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಖಾಸಗಿ ಹೂಡಿಕೆಗೆ ಸವಾಲುಗಳನ್ನು ಒಡ್ಡುತ್ತದೆ.
- ಅಸ್ತಿತ್ವದಲ್ಲಿರುವ ಉದ್ಯೋಗಿಗಳನ್ನು ತೆಗೆದುಹಾಕಲು ಇದು ಕೆಲವು ಸಂಸ್ಥೆಗಳಿಗೆ ರಕ್ಷಣಾತ್ಮಕ ಗುರಾಣಿಯನ್ನು ಸಹ ಒದಗಿಸಬಹುದು.
- ಹೂಡಿಕೆದಾರರು ಮತ್ತು ವ್ಯವಹಾರಗಳು ಅತ್ಯುತ್ತಮ ಮಾನವ ಸಂಪನ್ಮೂಲಗಳ ಹುಡುಕಾಟದಲ್ಲಿ ರಾಜ್ಯದಿಂದ ಹೊರಹೋಗಲು ಪ್ರಾರಂಭಿಸಬಹುದು.
- ಈ ಕಾನೂನು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ, ಕಾರಣ ಸಂವಿಧಾನದಲ್ಲಿ ಭಾರತದ ನಾಗರಿಕರಿಗೆ ದೇಶದಲ್ಲಿ ಎಲ್ಲಿಯಾದರೂ ಕೆಲಸ ಮಾಡುವ ಸ್ವಾತಂತ್ರ್ಯವನ್ನು ನೀಡಲಾಗಿದೆ.
- ಈ ಕಾನೂನು ಜಾರಿಯಿಂದ ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಿಂದ ಹೊರಗೆ ಹೋಗಬಹುದು.
- ಈ ರೀತಿಯ ಮೀಸಲಾತಿಯು ಉತ್ಪಾದಕತೆ ಮತ್ತು ಉದ್ಯಮ ಸ್ಪರ್ಧಾತ್ಮಕತೆಯ ಮೇಲೆ ಪರಿಣಾಮ ಬೀರುತ್ತದೆ.
ಈ ರೀತಿಯ ಕಾನೂನನ್ನು ಜಾರಿಗೆ ತರುವ ಹಿಂದಿನ ಸರ್ಕಾರದ ತಾರ್ಕಿಕತೆ:
- ಎಲ್ಲಾ ಉದ್ಯೋಗಗಳಲ್ಲಿ ಸಾರ್ವಜನಿಕ ವಲಯದ ಉದ್ಯೋಗಗಳ ಅನುಪಾತವು ತುಂಬಾ ಕಡಿಮೆಯಾಗಿದೆ. ಆದ್ದರಿಂದ, ಸಂವಿಧಾನವು ಎಲ್ಲಾ ನಾಗರಿಕರಿಗೆ ಸಮಾನತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ, ಈ ಆಶಯವನ್ನು ಪೂರೈಸಲು, ಖಾಸಗಿ ವಲಯಕ್ಕೆ ಕಾನೂನು ರಕ್ಷಣೆಯನ್ನು ವಿಸ್ತರಿಸುವ ಬಗ್ಗೆ ಮಾತನಾಡಲಾಗುತ್ತಿದೆ.
- ಖಾಸಗಿ ಕೈಗಾರಿಕೆಗಳು ಸಾರ್ವಜನಿಕ ಮೂಲಸೌಕರ್ಯಗಳನ್ನು ಅನೇಕ ವಿಧಗಳಲ್ಲಿ ಬಳಸುವುದರಿಂದ, ಸಾರ್ವಜನಿಕ ಬ್ಯಾಂಕುಗಳಿಂದ ಸಾಲ ಪಡೆಯಲು ಸಬ್ಸಿಡಿಗಳ ಹಂಚಿಕೆಯ ಮೂಲಕ ಭೂ ಬಳಕೆ, ತೆರಿಗೆ ರಿಯಾಯಿತಿ ಮತ್ತು ಅನೇಕ ಸಂದರ್ಭಗಳಲ್ಲಿ ಇಂಧನಕ್ಕೆ ಸಹಾಯಧನ ಇತ್ಯಾದಿಗಳನ್ನು ಬಳಸಲಾಗುತ್ತದೆ. ಆದ್ದರಿಂದ, ಖಾಸಗಿ ವಲಯಗಳಲ್ಲಿ ಮೀಸಲಾತಿ ಜಾರಿಗೊಳಿಸಲು ರಾಜ್ಯಕ್ಕೆ ಅಗತ್ಯವಾದ ಕಾನೂನು ಬದ್ಧ ಅಧಿಕಾರವಿದೆ.
- ಕೈಗಾರಿಕೆಗಳ ಬೆಳವಣಿಗೆ ಮತ್ತು ಆರ್ಥಿಕತೆಯ ನಡುವೆ ಸರಿಯಾದ ಸಮತೋಲನವನ್ನು ಸಾಧಿಸುವುದರೊಂದಿಗೆ ಉದ್ಯಮಕ್ಕೆ ಮತ್ತು ಯುವಕರಿಗೆ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುವುದು.
ಅಂತಹ ಶಾಸನಗಳಿಗೆ ಸಂಬಂಧಿಸಿದ ಕಾನೂನು ವಿವಾದಗಳು:
- ಉದ್ಯೋಗಗಳಲ್ಲಿ ( ಸ್ಥಳೀಯ)ನಿವಾಸದ ಆಧಾರದ ಮೇಲೆ ಮೀಸಲಾತಿಯ ಪ್ರಶ್ನೆ: ಶಿಕ್ಷಣದಲ್ಲಿ ನಿವಾಸದ ಆಧಾರದ ಮೇಲೆ ಮೀಸಲಾತಿ ಸಾಕಷ್ಟು ಸಾಮಾನ್ಯವಾಗಿದ್ದರೂ, ಸಾರ್ವಜನಿಕ ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಇದನ್ನು ಅನ್ವಯಿಸುವುದಕ್ಕೆ ನ್ಯಾಯಾಲಯಗಳು ವಿರುದ್ಧವಾಗಿವೆ. ಇದು ನಾಗರಿಕರು ಪಡೆದ ‘ಸಮಾನತೆಯ ಮೂಲಭೂತ ಹಕ್ಕುಗಳಿ’ ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
- ಉದ್ಯೋಗದಲ್ಲಿ ಮೀಸಲಾತಿಯನ್ನು ಒದಗಿಸಲು ಬದ್ಧವಾಗಿರುವಂತೆ ಖಾಸಗಿ ವಲಯವನ್ನು ಒತ್ತಾಯಿಸುವ ವಿಷಯ: ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು, ರಾಜ್ಯವು ಸಂವಿಧಾನದ 16 (4) ನೇ ವಿಧಿಯಿಂದ ಅಧಿಕಾರವನ್ನು ಪಡೆಯುತ್ತದೆ. ಆದರೆ, ಸಂವಿಧಾನದಲ್ಲಿ, ಖಾಸಗಿ ವಲಯದ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತರಲು ರಾಜ್ಯದ ಅಧಿಕಾರಗಳ ಬಗ್ಗೆ ಯಾವುದೇ ಸ್ಪಷ್ಟ ನಿಬಂಧನೆಗಳನ್ನು ಮಾಡಿಲ್ಲ.
- ಆರ್ಟಿಕಲ್ 19 (1) (ಜಿ) ಯ ಮಾನದಂಡಗಳ ಮೇಲೆ ನ್ಯಾಯಾಂಗ ಪರಿಶೀಲನೆಯನ್ನು ಎದುರಿಸಲು ಈ ಕಾನೂನು ವಿಫಲವಾಗಬಹುದು. ಅಥವಾ ಅದಕ್ಕೆ ಸಾಧ್ಯವಾಗದಿರಬಹುದು.
ಉದ್ಯೋಗದ ಸಂದರ್ಭದಲ್ಲಿ ಈ ರೀತಿಯ ದೃಢೀಕರಣದ ಕ್ರಮವನ್ನು ಇತರ ದೇಶಗಳು ತೆಗೆದುಕೊಳ್ಳುತ್ತವೆಯೇ?
ಅನೇಕ ದೇಶಗಳಲ್ಲಿ ಜನಾಂಗೀಯ ಮತ್ತು ಲಿಂಗದ ಹಿನ್ನೆಲೆಯಲ್ಲಿ ದೃಢೀಕರಣದ ಕ್ರಮವನ್ನು ಅಳವಡಿಸಿಕೊಳ್ಳಲಾಗುತ್ತದೆ.
- ಉದಾಹರಣೆಗೆ, ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಉದ್ಯೋಗದಾತರಿಗೆ ಮೀಸಲಾತಿಯನ್ನು ಅನ್ವಯಿಸಲು ಯಾವುದೇ ಶಾಸನಬದ್ಧ ಕಡ್ಡಾಯವಿಲ್ಲದಿದ್ದರೂ, ತಾರತಮ್ಯಕ್ಕೆ ಒಳಗಾದ ಬಲಿಪಶುಗಳಿಗೆ, ನ್ಯಾಯಾಲಯವು ಅಂತಹ ಸೂಕ್ತವಾದ ದೃಢೀಕರಣದ ಕ್ರಮ ಮತ್ತು ವಿತ್ತೀಯ ಹಾನಿ ಮತ್ತು ತಡೆಯಾಜ್ಞೆ ಪರಿಹಾರವನ್ನು ಆದೇಶಿಸಬಹುದು.
- ಕೆನಡಾದಲ್ಲಿ ಉದ್ಯೋಗ ಇಕ್ವಿಟಿ ಕಾಯ್ದೆಯಡಿ, ಅಲ್ಪಸಂಖ್ಯಾತ ಗುಂಪುಗಳು, ವಿಶೇಷವಾಗಿ ಬುಡಕಟ್ಟು ಜನಾಂಗದವರು / ಮೂಲನಿವಾಸಿಗಳು ಫೆಡರಲ್ ನಿಯಂತ್ರಿತ ಕೈಗಾರಿಕೆಗಳಲ್ಲಿ ಮತ್ತು ಖಾಸಗಿ ವಲಯದಲ್ಲೂ ಈ ತಾರತಮ್ಯದಿಂದ ರಕ್ಷಿಸಲ್ಪಟ್ಟಿದ್ದಾರೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಚಂದ್ರಯಾನ -3:
(Chandrayaan-3)
ಸಂದರ್ಭ:
ಲೋಕಸಭೆಗೆ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಆಗಸ್ಟ್ 2022 ರಲ್ಲಿ ಚಂದ್ರಯಾನ-3 ಅನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಚಂದ್ರಯಾನ 3 ರ ಬಗ್ಗೆ:
ಚಂದ್ರಯಾನ-3 ಚಂದ್ರಯಾನ-2 ಮಿಷನ್ನ ಮುಂದುವರೆದ ಭಾಗವಾಗಿದೆ ಮತ್ತು ಇದು ಚಂದ್ರನ ಮೇಲ್ಮೈಯಲ್ಲಿ ಮತ್ತೊಂದು ಸಾಫ್ಟ್-ಲ್ಯಾಂಡಿಂಗ್ ಪ್ರಯತ್ನವನ್ನು ಮಾಡುವ ಸಾಧ್ಯತೆಯಿದೆ.
- ಚಂದ್ರಯಾನ-3 ಚಂದ್ರಯಾನ-2 ಮಿಷನ್ನ ಮುಂದಿನ ಹಂತವಾಗಿದೆ. ಚಂದ್ರಯಾನ-3 ಯೋಜನೆಯು ಚಂದ್ರಯಾನ-2 ರಂತೆಯೇ ಕೇವಲ ‘ಲ್ಯಾಂಡರ್’ ಮತ್ತು ‘ರೋವರ್’ ಅನ್ನು ಒಳಗೊಂಡಿರುತ್ತದೆ, ಆದರೆ ಅದರೊಂದಿಗೆ ‘ಆರ್ಬಿಟರ್’ ಅನ್ನು ಕಳುಹಿಸಲಾಗುವುದಿಲ್ಲ.
- ಇಸ್ರೋ ಪ್ರಕಾರ, ಚಂದ್ರಯಾನ-3 ಮಿಷನ್ನ ಒಟ್ಟು ವೆಚ್ಚ 600 ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಇದರ ತುಲನೆಯಲ್ಲಿ, ಚಂದ್ರಯಾನ-2 ಮಿಷನ್ನ ಒಟ್ಟು ವೆಚ್ಚ 960 ಕೋಟಿ ರೂ. ಗಳಾಗಿತ್ತು.
ಚಂದ್ರಯಾನ್ -2 ಮಿಷನ್ ಕುರಿತು:
ಚಂದ್ರಯಾನ-2 (Chandrayaan-2) ಭಾರತೀಯ ಚಂದ್ರ ಮಿಷನ್ ಆಗಿದ್ದು, ಅದರ ಅಡಿಯಲ್ಲಿ – ಇಲ್ಲಿಯವರೆಗೆ ಯಾವುದೇ ದೇಶಕ್ಕೆ ತಲುಪಲು ಸಾಧ್ಯವಾಗಿರದ – ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವುದಾಗಿತ್ತು.
- ಈ ಕಾರ್ಯಾಚರಣೆಯ ಅಡಿಯಲ್ಲಿ, ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಏಕಕಾಲದಲ್ಲಿ ಚಂದ್ರನ ಮೇಲ್ಮೈಯಲ್ಲಿ ಇಳಿಸಲಾಯಿತು.
- ಚಂದ್ರನ ಬಗ್ಗೆ ಮಾಹಿತಿ ಸಂಗ್ರಹಿಸಿ ಭಾರತಕ್ಕೆ ಹಾಗೂ ಇಡೀ ಮನುಕುಲಕ್ಕೆ ಪ್ರಯೋಜನಕಾರಿಯಾಗುವಂತಹ ಸಂಶೋಧನೆಗಳನ್ನು ಮಾಡುವುದು ಇದರ ಉದ್ದೇಶ.
ನಾವು ಚಂದ್ರನನ್ನು ಅಧ್ಯಯನ ಮಾಡಲು ಏಕೆ ಆಸಕ್ತಿ ಹೊಂದಿದ್ದೇವೆ?
- ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿರುವ ನೈಸರ್ಗಿಕ ಉಪಗ್ರಹವಾಗಿದ್ದು, ಅದರ ಮೂಲಕ ಬಾಹ್ಯಾಕಾಶ ಪರಿಶೋಧನೆಯ ಪ್ರಯತ್ನಗಳನ್ನು ಮಾಡಬಹುದು ಮತ್ತು ಅದಕ್ಕೆ ಸಂಬಂಧಿಸಿದ ಡೇಟಾವನ್ನು ಸಹ ಸಂಗ್ರಹಿಸಬಹುದು.
- ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಪರೀಕ್ಷಿಸಲು ಇದು ಭರವಸೆದಾಯಕ ಪರೀಕ್ಷಾ ಕೇಂದ್ರವೂ ಆಗಿದೆ.
- ಭೂಮಿಯ ಆರಂಭಿಕ ಇತಿಹಾಸಕ್ಕೆ ಚಂದ್ರನು ಅತ್ಯುತ್ತಮ ಸಹಸಂಬಂಧವನ್ನು ಒದಗಿಸುತ್ತದೆ.
- ಇದು ಸೌರವ್ಯೂಹದ ಆಂತರಿಕ ವಾತಾವರಣದ ‘ತಡೆರಹಿತ ಐತಿಹಾಸಿಕ ದಾಖಲೆ’ಯನ್ನು ಸಹ ಒದಗಿಸುತ್ತದೆ.
- ಚಂದ್ರಯಾನ 2 ಅನ್ವೇಷಣೆಯ ಹೊಸ ಯುಗವನ್ನು ಪ್ರಾರಂಭಿಸಲು, ಬಾಹ್ಯಾಕಾಶದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲು, ತಾಂತ್ರಿಕ ಪ್ರಗತಿಯನ್ನು ಹೆಚ್ಚಿಸಲು, ಜಾಗತಿಕ ತಾಳಮೇಳವನ್ನು ಮುನ್ನಡೆಸಲು ಮತ್ತು ಭವಿಷ್ಯದ ಪೀಳಿಗೆಯ ಪರಿಶೋಧಕರು ಮತ್ತು ವಿಜ್ಞಾನಿಗಳಿಗೆ ಸ್ಫೂರ್ತಿ ನೀಡಲು ಸಹಾಯ ಮಾಡುತ್ತದೆ.
ಅನ್ವೇಷಣೆಗಾಗಿ ಚಂದ್ರನ ‘ಚಂದ್ರನ ದಕ್ಷಿಣ ಧ್ರುವ’ (Lunar South Pole) ವನ್ನು ಗುರಿಯಾಗಿಸಲು ಕಾರಣಗಳು:
ಚಂದ್ರನ ದಕ್ಷಿಣ ಧ್ರುವವು ವಿಶೇಷವಾಗಿ ಆಸಕ್ತಿದಾಯಕವಾಗಿದೆ, ಏಕೆಂದರೆ ನೆರಳಿನಲ್ಲಿ ಉಳಿದಿರುವ ಚಂದ್ರನ ಮೇಲ್ಮೈಯ ಹೆಚ್ಚಿನ ಭಾಗವು ಉತ್ತರ ಧ್ರುವಕ್ಕಿಂತ ಹೆಚ್ಚು ವಿಸ್ತಾರವಾಗಿದೆ.
- ಅದರ ಸುತ್ತಲೂ ಶಾಶ್ವತವಾಗಿ ನೆರಳು ಇರುವ ಈ ಪ್ರದೇಶಗಳಲ್ಲಿ ನೀರು ಇರುವ ಸಾಧ್ಯತೆಯಿದೆ.
- ಆರಂಭಿಕ ಸೌರವ್ಯೂಹದ ಕಳೆದುಹೋದ ಪಳೆಯುಳಿಕೆ ದಾಖಲೆಯು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಶೀತ ಕುಳಿಗಳಲ್ಲಿ ಅಸ್ತಿತ್ವದಲ್ಲಿದೆ.
ಚಂದ್ರಯಾನ -2 ನೊಂದಿಗೆ ಆದ ದುರ್ಘಟನೆ:
- ‘ಚಂದ್ರಯಾನ -2’ (Chandrayaan-2) ಭಾರತದ ಎರಡನೇ ಚಂದ್ರಯಾನವಾಗಿದೆ.ಇದು ಚಂದ್ರನ ಮೇಲ್ಮೈಯಲ್ಲಿ ‘ಸಾಫ್ಟ್-ಲ್ಯಾಂಡಿಂಗ್’ ಮಾಡುವಲ್ಲಿ ವಿಫಲವಾಗಿದೆ. ವಾಹನದಲ್ಲಿದ್ದ ಲ್ಯಾಂಡರ್ ಮತ್ತು ರೋವರ್ ಕೊನೆಯ ಕ್ಷಣದಲ್ಲಿ ಕೆಟ್ಟುಹೋಗಿತ್ತು ಮತ್ತು ಮೇಲ್ಮೈ ಮೇಲೆ ಇಳಿಯುವಾಗ ಆಕಸ್ಮಿಕವಾಗಿ ನಾಶವಾಯಿತು.
- 2019 ರಲ್ಲಿ ಚಂದ್ರನ ಡಾರ್ಕ್ ಸೈಡ್ನಲ್ಲಿ ‘ಹಾರ್ಡ್ ಲ್ಯಾಂಡಿಂಗ್’ ಮಾಡಿದ ನಂತರ ‘ಚಂದ್ರಯಾನ್ -2 ಮಿಷನ್’ ಸಂಪರ್ಕವನ್ನು ಕಳೆದುಕೊಂಡಿತು, ಆದರೆ ಇದು ಇನ್ನೂ ತನ್ನ ಆರ್ಬಿಟರ್ ರೂಪದಲ್ಲಿ ಸಕ್ರಿಯವಾಗಿದೆ ಮತ್ತು ಚಂದ್ರನನ್ನು ಪರಿಭ್ರಮಿಸುತ್ತಿದೆ.
- ಚಂದ್ರಯಾನ್ -2 ರ ಮುಖ್ಯ ಉದ್ದೇಶವೆಂದರೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯವನ್ನು ಪ್ರದರ್ಶಿಸುವುದು(soft landing) ಮತ್ತು ಮೇಲ್ಮೈಯಲ್ಲಿ ರೋಬಾಟ್ ರೋವರ್ ಅನ್ನು ನಿರ್ವಹಿಸುವುದು.
- ಈ ಕಾರ್ಯಾಚರಣೆಯು ಆರ್ಬಿಟರ್, ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಗಳನ್ನು ಒಳಗೊಂಡಿದ್ದು ಚಂದ್ರನನ್ನು ಅಧ್ಯಯನ ಮಾಡಲು ಎಲ್ಲಾ ವೈಜ್ಞಾನಿಕ ಸಾಧನಗಳನ್ನು ಹೊಂದಿತ್ತು.
ಆದಾಗ್ಯೂ,ಕಳೆದ ಎರಡು ವರ್ಷಗಳಲ್ಲಿ, ಚಂದ್ರಯಾನ-2 ಮಿಷನ್ನೊಂದಿಗೆ ಕಳುಹಿಸಲಾದ ಆರ್ಬಿಟರ್ ಮತ್ತು ಇತರ ಉಪಕರಣಗಳಿಂದ ಚಂದ್ರ ಮತ್ತು ಅದರ ಪರಿಸರದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸುವ ಬಹಳಷ್ಟು ಹೊಸ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
ಪ್ರಸ್ತುತ ಈ ಕಾರ್ಯಾಚರಣೆಯು ಇನ್ನು ಏಕೆ ಮಹತ್ವದ್ದಾಗಿದೆ?
- ವೈಫಲ್ಯದ ಹೊರತಾಗಿಯೂ, ಆರ್ಬಿಟರ್ ಮತ್ತು ಮಿಷನ್ನೊಂದಿಗೆ ಕಳುಹಿಸಲಾದ ಇತರ ಉಪಕರಣಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಚಂದ್ರನ ಮೇಲ್ಮೈ ಕುರಿತ ಮಾಹಿತಿಯನ್ನು ಸಂಗ್ರಹಿಸುತ್ತಿವೆ.
- ಇತ್ತೀಚೆಗೆ, ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ’ (ಇಸ್ರೋ) ಸಾರ್ವಜನಿಕವಾಗಿ ‘ಚಂದ್ರಯಾನ -2’ ವೈಜ್ಞಾನಿಕ ಉಪಕರಣಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಬಿಡುಗಡೆ ಮಾಡಿದೆ, ಈ ಕೆಲವು ಮಾಹಿತಿಯನ್ನು ಇನ್ನೂ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮಾಡಬೇಕಿದೆ.
ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿ:
ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಉಪಸ್ಥಿತಿ: ಚಂದ್ರನಲ್ಲಿ H2O ಅಣುಗಳ ಇರುವಿಕೆಯ ಬಗ್ಗೆ ಮಿಷನ್ ಅತ್ಯಂತ ನಿಖರವಾದ ಮಾಹಿತಿಯನ್ನು ನೀಡಿದೆ.
ಸೂಕ್ಷ್ಮ ಅಂಶಗಳ ಉಪಸ್ಥಿತಿ: ‘ಕ್ರೋಮಿಯಂ, ಮ್ಯಾಂಗನೀಸ್ ಮತ್ತು ಸೋಡಿಯಂ’ ಅನ್ನು ಮೊದಲ ಬಾರಿಗೆ ಚಂದ್ರನ ಮೇಲ್ಮೈಯಲ್ಲಿ ರಿಮೋಟ್ ಸೆನ್ಸಿಂಗ್ ಉಪಕರಣಗಳಿಂದ ಪತ್ತೆ ಮಾಡಲಾಗಿದೆ. ಈ ಆವಿಷ್ಕಾರವು ಚಂದ್ರನ ಮೇಲೆ ಶಿಲಾಪಾಕದ ಮೂಲ ಮತ್ತು ವಿಕಸನವನ್ನು ಅರ್ಥಮಾಡಿಕೊಳ್ಳಲು ಮತ್ತು ಗ್ರಹಗಳ ವ್ಯತ್ಯಾಸಗಳು ಹಾಗೂ ನೀಹಾರಿಕೆ ಪರಿಸ್ಥಿತಿಗಳ ಬಗ್ಗೆ ಆಳವಾದ ಮಾಹಿತಿಯನ್ನು ಪಡೆದುಕೊಳ್ಳಲು ದಾರಿ ಮಾಡಿಕೊಡುತ್ತದೆ.
ಸೌರ ಜ್ವಾಲೆಗಳ (Solar Flares) ಬಗ್ಗೆ ಮಾಹಿತಿ: ಸಕ್ರಿಯ ಪ್ರದೇಶದ ಹೊರಗೆ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯ ಮೈಕ್ರೋಫ್ಲೇರ್ (Microflares) ಗಳನ್ನು ಗಮನಿಸಲಾಗಿದೆ, ಮತ್ತು ಇಸ್ರೋ ಪ್ರಕಾರ, ಈ ಮಾಹಿತಿಯು “ಸೌರ-ಕರೋನಾದ ಉಷ್ಣತೆಯ ಹಿಂದಿನ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ”. ಹಲವು ದಶಕಗಳಿಂದ ಈ ಸಮಸ್ಯೆ ಬಗೆಹರಿಯದೆ ಉಳಿದಿದೆ.
ರೆಗೊಲಿತ್ನ (Regolith) ಕೆಳಗೆ ‘ಬಂಡೆಗಳು’, ಕುಳಿಗಳು ಮತ್ತು ಶಾಶ್ವತವಾಗಿ ಕತ್ತಲೆಯಾದ ಪ್ರದೇಶಗಳು ಕಂಡುಬರುತ್ತವೆ, ಮತ್ತು ಚಂದ್ರನ ಮೇಲಿನ ಮೇಲ್ಮೈಯಲ್ಲಿ, 3-4 ಮೀಟರ್ ಆಳದ ಹರಳಿನ ನಿಕ್ಷೇಪಗಳನ್ನು ಅನ್ವೇಷಿಸಲಾಗುತ್ತಿದೆ. ಬಾಹ್ಯಾಕಾಶ ನೌಕೆ ಸೇರಿದಂತೆ ಭವಿಷ್ಯದ ಮಾನವಸಹಿತ ಕಾರ್ಯಾಚರಣೆಗಳಿಗೆ ಲ್ಯಾಂಡಿಂಗ್ ಮತ್ತು ಡ್ರಿಲ್ಲಿಂಗ್ ಸೈಟ್ಗಳನ್ನು ನಿರ್ಧರಿಸಲು ವಿಜ್ಞಾನಿಗಳಿಗೆ ಸಹಾಯ ಮಾಡುವ ನಿರೀಕ್ಷೆಯಿದೆ.
ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.
ಭಾರತದ ಹೊಸ ಡ್ರೋನ್ ನಿಯಮಗಳು 2021:
(Drone Rules, 2021)
ಸಂದರ್ಭ:
31ನೇ ಡಿಸೆಂಬರ್ 2021 ರಂತೆ, ಸರ್ಕಾರಿ ಅಥವಾ ಖಾಸಗಿ ಒಡೆತನದ ಘಟಕಗಳಿಂದ ‘ಒಂಬತ್ತು ರಿಮೋಟ್ ಪೈಲಟ್ ತರಬೇತಿ ಸಂಸ್ಥೆಗಳನ್ನು’ ಸ್ಥಾಪಿಸಲಾಗಿದೆ.
ಡ್ರೋನ್ ನಿಯಮಗಳು, 2021 (Drone Rules, 2021) ರ ಪ್ರಕಾರ, ‘ರಿಮೋಟ್ ಪೈಲಟ್ ಟ್ರೈನಿಂಗ್ ಆರ್ಗನೈಸೇಶನ್’ (Remote Pilot Training Organisation – RPTO) ಅನ್ನು ಸ್ಥಾಪಿಸಲು ಹಕ್ಕನ್ನು ಪಡೆಯಲು ಬಯಸುವ ಯಾವುದೇ ವ್ಯಕ್ತಿಯು, ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ನಲ್ಲಿ ನಮೂನೆ D5 ನಲ್ಲಿ ನಿಗದಿತ ಶುಲ್ಕದೊಂದಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
ಭಾರತದಲ್ಲಿ ಡ್ರೋನ್ ನಿರ್ವಹಣೆ:
- ಸೆ.15ರಂದು ಕೇಂದ್ರ ಸರಕಾರದಿಂದ ಮೂರು ಹಣಕಾಸು ವರ್ಷಗಳಲ್ಲಿ ‘ಡ್ರೋನ್ಗಳು’ ಮತ್ತು ‘ಡ್ರೋನ್ ಕಾಂಪೊನೆಂಟ್ಗಳಿಗಾಗಿ’ 120 ಕೋಟಿ ರೂ ಗಳ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಅನುಮೋದಿಸಲಾಗಿದೆ.
- ‘ಡ್ರೋನ್ ನಿಯಮಗಳು, 2021’ (Drone Rules 2021) ಅನ್ನು ಕೇಂದ್ರ ಸರ್ಕಾರವು ಆಗಸ್ಟ್ 25 ರಂದು ಅಧಿಸೂಚಿಸಿದೆ. ಇದರ ಅಡಿಯಲ್ಲಿ, ಭಾರತದಲ್ಲಿ ಡ್ರೋನ್ ಕಾರ್ಯಾಚರಣೆಗಳ ನಿಯಂತ್ರಣವನ್ನು ಸರಾಗಗೊಳಿಸುವ ಮೂಲಕ, ಕಾರ್ಯನಿರ್ವಹಿಸಲು ಅನುಮತಿಗಾಗಿ ಭರ್ತಿ ಮಾಡಬೇಕಾದ ಫಾರ್ಮ್ಗಳ ಸಂಖ್ಯೆಯನ್ನು 25 ರಿಂದ 5 ಕ್ಕೆ ಇಳಿಸಲಾಯಿತು ಮತ್ತು ಆಪರೇಟರ್ಗಳು ವಿಧಿಸಬೇಕಾದ 72 ಪ್ರಕಾರದ ಸುಂಕಗಳನ್ನು ನಾಲ್ಕಕ್ಕೆ ಇಳಿಸಲಾಗಿದೆ.
‘ಹೊಸ ಡ್ರೋನ್ ನಿಯಮಗಳು, 2021’:
(New Drone Rules 2021)
ಪ್ರಮುಖ ಬದಲಾವಣೆಗಳು:
- ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಅನ್ನು ವ್ಯವಹಾರ ಸ್ನೇಹಿ ಸಿಂಗಲ್ ವಿಂಡೋ ಆನ್ಲೈನ್ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲಾಗುವುದು.
- ವಿಮಾನ ನಿಲ್ದಾಣದ ಪರಿಧಿಯಿಂದ 8 ರಿಂದ 12 ಕಿ.ಮೀ ನಡುವಿನ ಪ್ರದೇಶದಲ್ಲಿ 200 ಅಡಿಗಳವರೆಗೆ ಮತ್ತು ಹಸಿರು ಪ್ರದೇಶಗಳಲ್ಲಿ 400 ಅಡಿಗಳವರೆಗೆ ಡ್ರೋನ್ಗಳನ್ನು ಹಾರಿಸಲು ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ.
- ಮೈಕ್ರೋ ಡ್ರೋನ್ಗಳು (ವಾಣಿಜ್ಯೇತರ ಬಳಕೆಗಾಗಿ), ನ್ಯಾನೊ ಡ್ರೋನ್ಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಯಾವುದೇ ಪೈಲಟ್ ಪರವಾನಗಿ ಅಗತ್ಯವಿರುವುದಿಲ್ಲ.
- ಭಾರತದಲ್ಲಿ ನೋಂದಾಯಿತ ವಿದೇಶಿ ಒಡೆತನದ ಕಂಪನಿಗಳಿಂದ ಡ್ರೋನ್ ಕಾರ್ಯಾಚರಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ.
- ಡ್ರೋನ್ಗಳು ಮತ್ತು ಡ್ರೋನ್ ಭಾಗಗಳ ಆಮದನ್ನು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ನಿಯಂತ್ರಿಸುತ್ತದೆ.
- ನೋಂದಣಿ ಅಥವಾ ಪರವಾನಗಿ ಪಡೆಯುವ ಮೊದಲು ಯಾವುದೇ ಭದ್ರತಾ ಅನುಮತಿ ಅಗತ್ಯವಿರುವುದಿಲ್ಲ.
- ಸಂಶೋಧನೆ ಮತ್ತು ಅಭಿವೃದ್ಧಿ(R&D) ಸಂಸ್ಥೆಗಳಿಗೆ ವಾಯು ಯೋಗ್ಯತೆ ಪ್ರಮಾಣಪತ್ರ, ಅನನ್ಯ/ವಿಶಿಷ್ಟ ಗುರುತಿನ ಸಂಖ್ಯೆ, ಪೂರ್ವ ಅನುಮತಿ ಮತ್ತು ದೂರಸ್ಥ ಪೈಲಟ್ ಪರವಾನಗಿ ಅಗತ್ಯವಿರುವುದಿಲ್ಲ.
- 2021 ರ ಡ್ರೋನ್ ನಿಯಮಾವಳಿಗಳ ಅಡಿಯಲ್ಲಿ ಡ್ರೋನ್ ವ್ಯಾಪ್ತಿಯನ್ನು 300 ಕೆಜಿಯಿಂದ 500 ಕೆಜಿಗೆ ಹೆಚ್ಚಿಸಲಾಗಿದೆ ಮತ್ತು ಇದು ಡ್ರೋನ್ ಟ್ಯಾಕ್ಸಿಗಳನ್ನು ಒಳಗೊಂಡಿದೆ.
- ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ವಾಯು ಯೋಗ್ಯತೆ ಪ್ರಮಾಣಪತ್ರವನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ ಮತ್ತು ಅದರಿಂದ ಅಧಿಕಾರ ಪಡೆದ ಸಂಸ್ಥೆಗಳು ಈ ವಾಯು ಯೋಗ್ಯತೆ ಪ್ರಮಾಣಪತ್ರವನ್ನು ನೀಡುತ್ತವೆ.
- ತಯಾರಕರು ತಮ್ಮ ಡ್ರೋನ್ಗಳನ್ನು ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ನಲ್ಲಿ ಸ್ವಯಂ-ಪ್ರಮಾಣೀಕರಣದ ಮೂಲಕ ಅನನ್ಯ/ವಿಶಿಷ್ಟ ಗುರುತಿನ ಸಂಖ್ಯೆಯೊಂದಿಗೆ ಒದಗಿಸಬಹುದು.
- ಡ್ರೋನ್ ನಿಯಮ, 2021 ರ ಅಡಿಯಲ್ಲಿ ಗರಿಷ್ಠ ದಂಡವನ್ನು 1 ಲಕ್ಷ ರೂ.ಗೆ ಇಳಿಸಲಾಯಿತು. ಆದಾಗ್ಯೂ, ಇತರ ಕಾನೂನುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ದಂಡವು ಅನ್ವಯಿಸುವುದಿಲ್ಲ.
- ಸರಕು ವಿತರಣೆಗೆ ಡ್ರೋನ್ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸಲಾಗುವುದು.
- ವ್ಯಾಪಾರ ಸ್ನೇಹಿ ನಿಯಮಗಳನ್ನು ರಚಿಸಲು ಡ್ರೋನ್ ಪ್ರಚಾರ ಮಂಡಳಿಯನ್ನು ಸ್ಥಾಪಿಸಲಾಗುವುದು.
ಹೊಸ ನಿಯಮಗಳ ಮಹತ್ವ:
- ಇದು ಡ್ರೋನ್ಗಳ ಬಳಕೆಯನ್ನು ಅನುಮತಿಸುವ ಸರ್ಕಾರದ ಉದ್ದೇಶವನ್ನು ಎತ್ತಿ ತೋರಿಸುತ್ತದೆ ಮತ್ತು ಅದೇ ಸಮಯದಲ್ಲಿ 2019 ರಲ್ಲಿ ಘೋಷಿಸಿದ ರಾಕ್ಷಸ ವಿರೋಧಿ ಡ್ರೋನ್ ಚೌಕಟ್ಟಿನ ಮೂಲಕ ರಾಕ್ಷಸ ಡ್ರೋನ್ಗಳಿಂದ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
- ಈ ನಿಯಮಗಳನ್ನು ನಂಬಿಕೆ ಮತ್ತು ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ತಯಾರಿಸಲಾಗಿದೆ.
- ಹೊಸ ಡ್ರೋನ್ ನಿಯಮಾವಳಿಗಳು ಈ ವಲಯದಲ್ಲಿ ಕೆಲಸ ಮಾಡುವ ಸ್ಟಾರ್ಟ್ ಅಪ್ಗಳಿಗೆ ಮತ್ತು ನಮ್ಮ ಯುವಕರಿಗೆ ಗಮನಾರ್ಹ ರೀತಿಯಲ್ಲಿ ಸಹಾಯ ಮಾಡುತ್ತದೆ ಮತ್ತು ನಾವೀನ್ಯತೆ ಮತ್ತು ವ್ಯಾಪಾರಕ್ಕಾಗಿ ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ.
- ಭಾರತವನ್ನು ಡ್ರೋನ್ ಹಬ್ ಮಾಡಲು ನಾವೀನ್ಯತೆ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ನಲ್ಲಿ ಭಾರತದ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಲು ಇವುಗಳು ಬಹಳ ದೂರ ಹೋಗುತ್ತವೆ.
ಕಠಿಣ ನಿಯಮಗಳು ಮತ್ತು ನಿಯಂತ್ರಣದ ಅವಶ್ಯಕತೆ:
- ಇತ್ತೀಚೆಗೆ, ಜಮ್ಮುವಿನ ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಇದಕ್ಕಾಗಿ, ಸ್ಫೋಟಕ ಸಾಧನಗಳನ್ನು ನಿರ್ದಿಷ್ಟ ಪ್ರದೇಶದ ಮೇಲೆ ಹಾಕಲು ಡ್ರೋನ್ಗಳನ್ನು ಮೊದಲ ಬಾರಿಗೆ ಬಳಸಲಾಗಿತ್ತು.
- ಕಳೆದ ಎರಡು ವರ್ಷಗಳಲ್ಲಿ, ಪಾಕಿಸ್ತಾನ ಮೂಲದ ಸಂಸ್ಥೆಗಳು ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕವಸ್ತುಗಳನ್ನು ಭಾರತೀಯ ಭೂಪ್ರದೇಶಕ್ಕೆ ಕಳ್ಳಸಾಗಣೆ ಮಾಡಲು ನಿಯಮಿತವಾಗಿ ಡ್ರೋನ್ಗಳನ್ನು ಬಳಸುತ್ತಿವೆ.
- ಸರ್ಕಾರದ ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಪಾಕಿಸ್ತಾನದ ಗಡಿಯಲ್ಲಿ 167 ಡ್ರೋನ್ಗಳನ್ನು ಮತ್ತು 2020 ರಲ್ಲಿ 77 ಡ್ರೋನ್ಗಳನ್ನು ವೀಕ್ಷಿಸಲಾಯಿತು.
- ಇತ್ತೀಚಿನ ವರ್ಷಗಳಲ್ಲಿ ‘ಡ್ರೋನ್ ತಂತ್ರಜ್ಞಾನ’ದ ಶೀಘ್ರ ಹರಡುವಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅದರ ತ್ವರಿತ ಬೆಳವಣಿಗೆಯೊಂದಿಗೆ, ವಿಶ್ವದ ಸುರಕ್ಷಿತ ನಗರಗಳಲ್ಲಿಯೂ ಸಹ ಡ್ರೋನ್ ದಾಳಿಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.
- ಪ್ರಸ್ತುತ, ಡ್ರೋನ್ಗಳು ಭದ್ರತಾ ಬೆದರಿಕೆಯಾಗುತ್ತಿವೆ, ಅದರಲ್ಲೂ ವಿಶೇಷವಾಗಿ ಸಂಘರ್ಷದ ವಲಯಗಳಲ್ಲಿ ಸಕ್ರಿಯರಾಗಿರುವ ಮತ್ತು ತಂತ್ರಜ್ಞಾನಕ್ಕೆ ಸುಲಭವಾಗಿ ಪ್ರವೇಶವನ್ನು ಹೊಂದಿರುವ ‘ದೇಶದ್ರೋಹಿಗಳು’ (Non State Actors – NSA) ಇವರಿಂದಾಗಿ ಡ್ರೋನ್ಗಳು ಭದ್ರತಾ ಬೆದರಿಕೆಯಾಗಿವೆ.
ದಯವಿಟ್ಟು ಗಮನಿಸಿ:
ಡ್ರೋನ್ ನಿಯಮಾವಳಿ–2021 ಕರಡು ಅಂತಿಮ:
ಡ್ರೋನ್ ಕಡಿವಾಣ ಸಡಿಲ:
ಡ್ರೋನ್ ಕರಡು ನಿಯಮ–2021 ಅನ್ನು ನಾಗರಿಕ ವಿಮಾನಯಾನ ಸಚಿವಾಲಯವು ಬಿಡುಗಡೆ ಮಾಡಿದೆ. ನಿಯಮದ ಕರಡು ಬಿಡುಗಡೆಗೂ ಮುನ್ನ, ಮಾನವರಹಿತ ವಿಮಾನ ವ್ಯವಸ್ಥೆಗಳು (UAS) ಅಥವಾ ಡ್ರೋನ್ಗಳ ಸಂಚಾರ ನಿರ್ವಹಣೆಗೆ ನೀತಿ ರೂಪಿಸುವ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರ ಜತೆ ಸಭೆ ನಡೆಸಿದ್ದರು.
- ಡ್ರೋನ್ ಬಳಕೆಗೆ ಸಂಬಂಧಿಸಿದ ಕರಡು ನಿಯಮಗಳ ಬಗ್ಗೆ ಆಕ್ಷೇಪ ಅಥವಾ ಸಲಹೆಗಳಿದ್ದರೆ ಆಗಸ್ಟ್ 5ರ ಮೊದಲು ಸರ್ಕಾರಕ್ಕೆ ಸಲ್ಲಿಸಬೇಕು.
- ಮಾನವರಹಿತ ವಿಮಾನ ವ್ಯವಸ್ಥೆ ನಿಯಮಗಳು–2021 ಈ ಮಾರ್ಚ್ನಲ್ಲಿ ಜಾರಿಗೆ ಬಂದಿತ್ತು. ಡ್ರೋನ್ ಬಳಕೆಯ ಮೇಲೆ ಹತ್ತಾರು ನಿಯಂತ್ರಣಗಳನ್ನು ಈ ನಿಯಮಗಳು ಹೇರಿದ್ದವು. ಸಾಮಾನ್ಯ ಜನರು ಡ್ರೋನ್ ಬಳಸಬೇಕಿದ್ದರೆ 25 ಅನುಮತಿ ಪತ್ರಗಳನ್ನು ಪಡೆಯಬೇಕಿತ್ತು. ಹೊಸ ನಿಯಮಗಳು ಜಾರಿಗೆ ಬಂದರೆ ಡ್ರೋನ್ ಬಳಕೆಗೆ ಅನುಮತಿ ಪಡೆಯುವುದು ಸುಲಭವಾಗಲಿದೆ.
- ಹೊಸ ನೀತಿಯಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ‘ಅನುಮತಿ ಇಲ್ಲದೇ ಟೇಕಾಫ್ ಇಲ್ಲ’, ನೇರ ಟ್ರ್ಯಾಕಿಂಗ್ ವ್ಯವಸ್ಥೆ, ಜಿಯೋ-ಫೆನ್ಸಿಂಗ್ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಭವಿಷ್ಯದಲ್ಲಿ ಅಳವಡಿಸುವುದಾಗಿ ಪ್ರಸ್ತಾಪಿಸಿದೆ. ಎಲ್ಲವೂ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಅನುಮತಿ ಹಾಗೂ ಕಾರ್ಯಾಚರಣೆಗೆ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ‘ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್’ ವೇದಿಕೆಯಲ್ಲಿ ಮಾನವ ಹಸ್ತಕ್ಷೇಪ ಕಡಿಮೆ.
ಉದ್ಯಮಕ್ಕೆ ಉತ್ತೇಜನ:
- ದೇಶದಲ್ಲಿ ಈಗ ಇರುವ ಡ್ರೋನ್ ನಿಯಮಗಳು ಅತ್ಯಂತ ಕಠಿಣವಾದವುಗಳಾಗಿವೆ. ಇದರಿಂದಾಗಿ ಡ್ರೋನ್ ನೋಂದಣಿ, ನಿರ್ವಹಣೆ ಮತ್ತು ಕಾರ್ಯಾಚರಣೆ ಉದ್ಯಮವು ನಿರೀಕ್ಷಿತಮಟ್ಟದಲ್ಲಿ ಬೆಳೆಯುತ್ತಿಲ್ಲ. ಈ ಉದ್ಯಮ ವಲಯದ ಬೆಳವಣಿಗೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಡ್ರೋನ್ ನಿಯಮಗಳಲ್ಲಿ ಬದಲಾವಣೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.
- ‘ಡ್ರೋನ್ ತಂತ್ರಜ್ಞಾನವು ಜಗತ್ತಿನಾದ್ಯಂತ ಮುಂದೆ ಭಾರಿ ಬದಲಾವಣೆ ತರಲಿರುವ ವಿದ್ಯಮಾನವಾಗಿದೆ. ಡ್ರೋನ್ ಬಳಕೆಯಿಂದ ಹಣ, ಸಂಪನ್ಮೂಲ, ಸಮಯ ಉಳಿತಾಯವಾಗುತ್ತದೆ. ಈ ಹೊಸ ಅಲೆಯ ಜೊತೆಯಲ್ಲಿ ತೇಲಿಹೋಗುವ ಆಯ್ಕೆ ನಮ್ಮ ಮುಂದೆ ಇದೆ. ನಮ್ಮ ಡ್ರೋನ್ ನವೋದ್ಯಮಗಳು ಈ ಅಲೆಯ ಜತೆಯಲ್ಲಿ ಸಾಗಲು ಅವಕಾಶಮಾಡಿಕೊಡುವ ಉದ್ದೇಶದಿಂದ ಈ ನಿಯಮಗಳನ್ನು ಬದಲಿಸಲಾಗುತ್ತಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೇಳಿದ್ದಾರೆ.
- ಡ್ರೋನ್ ಕಾರ್ಯಾಚರಣೆ ನಿಯಮಗಳನ್ನು ಸರಳಗೊಳಿಸುವ ಮೂಲಕ ಈ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಮಾಡಲು, ಹೊಸ ತಂತ್ರಜ್ಞಾನ ಅಭಿವೃದ್ಧಿ ಮಾಡಲು ಮತ್ತು ನವೋದ್ಯಮಗಳು ಆರಂಭವಾಗಲು ಉತ್ತೇಜನ ನೀಡುವ ಸಲುವಾಗಿ ಈಗ ಜಾರಿಯಲ್ಲಿರುವ ಕಠಿಣ ನಿಯಮಗಳನ್ನು ಸರಳಗೊಳಿಸಲಾಗುತ್ತಿದೆ. ಡ್ರೋನ್ ಉದ್ಯಮ ಕ್ಷೇತ್ರದಲ್ಲಿ ಇದೊಂದು ಮಹತ್ವದ ಬದಲಾವಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್:
- ಡ್ರೋನ್ಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಆನ್ಲೈನ್ ಮೂಲಕ ನಡೆಸಲು ನಾಗರಿಕ ವಿಮಾನಯಾನ ಸಚಿವಾಲಯವು ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಅನ್ನು ಸ್ಥಾಪಿಸಲಿದೆ. ಡ್ರೋನ್ ಖರೀದಿ, ಹಾರಾಟ ಅನುಮತಿ, ನೋಂದಣಿ, ಕಾರ್ಯಾಚರಣೆ ಸೇರಿದಂತೆ ಎಲ್ಲಾ ಅನುಮತಿಗಳನ್ನು ನೀಡಲು ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಏಕಗವಾಕ್ಷಿಯಂತೆ ಕೆಲಸ ಮಾಡಲಿದೆ ಎಂದು ಕರಡು ಡ್ರೋನ್ ನಿಯಮಗಳಲ್ಲಿ ತಿಳಿಸಲಾಗಿದೆ.
- ಇದು ಸಂಪೂರ್ಣ ಆನ್ಲೈನ್ ವೇದಿಕೆಯಾಗಿದ್ದು, ಎಲ್ಲಾ ಅನುಮತಿ ಮತ್ತು ಪರವಾನಗಿಗಳೂ ಸ್ವಯಂಚಾಲಿತವಾಗಿ ದೊರೆಯಲಿವೆ. ಸಾರ್ವಜನಿಕರು, ಉದ್ಯಮ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳನ್ನು ಸ್ವಯಂಚಾಲಿತ ವ್ಯವಸ್ಥೆಯೇ ಪರಿಶೀಲಿಸಲಿದೆ ಮತ್ತು ಅರ್ಜಿಗಳನ್ನು ಅನುಮತಿಸಲಿದೆ. ಈ ವ್ಯವಸ್ಥೆಯಲ್ಲಿ ಮನುಷ್ಯರ ಹಸ್ತಕ್ಷೇಪ ಇರುವುದಿಲ್ಲ. ಇದ್ದರೂ ಅದು ಅತ್ಯಂತ ಕನಿಷ್ಠಮಟ್ಟದಲ್ಲಿ ಇರಲಿದೆ ಎಂದು ಕರಡು ಡ್ರೋನ್ ನಿಯಮಗಳಲ್ಲಿ ತಿಳಿಸಲಾಗಿದೆ.
- ಡ್ರೋನ್ ಖರೀದಿ, ನೋಂದಣಿ ಮತ್ತು ಹಾರಾಟ ಸಂಬಂಧಿ ಅನುಮತಿಗಳನ್ನು ನೀಡಲಷ್ಟೇ ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಬಳಕೆಯಾಗುವುದಿಲ್ಲ. ಬದಲಿಗೆ ಡ್ರೋನ್ ಹಾರಾಟಕ್ಕೆ ಸಂಬಂಧಿಸಿದಂತೆ ಗುರುತಿಸಲಾಗುವ ಹಸಿರು, ಹಳದಿ ಮತ್ತು ಕೆಂಪು ವಲಯಗಳ ನಕ್ಷೆಯನ್ನು ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಒಳಗೊಂಡಿರಲಿದೆ. ಡ್ರೋನ್ಗಳು ಹಾರಾಟದ ಸಮಯದಲ್ಲೇ ಅದು ಯಾವ ವಲಯದಲ್ಲಿ ಇದೆ ಎಂಬುದರ ಮಾಹಿತಿಯನ್ನು ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ನೀಡಲಿದೆ ಎಂದು ಕರಡು ನಿಯಮಗಳಲ್ಲಿ ವಿವರಿಸಲಾಗಿದೆ.
- ಡ್ರೋನ್ ಹಾರಾಟಕ್ಕೆ ಸಂಬಂಧಿಸಿದಂತೆ ದೂರು ನೀಡಲು ಸಹ ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಅನ್ನು ಬಳಸಬಹುದು. ಉದ್ದಿಮೆ ಸ್ನೇಹಿ ಏಕಗವಾಕ್ಷಿ ಆನ್ಲೈನ್ ವ್ಯವಸ್ಥೆಯಾಗಿ ಇದನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಸರಳಗೊಂಡ ನಿಯಮಗಳು:
ಡ್ರೋನ್ ಹಾರಾಟ ಸಂಬಂಧ 2020ರ ಜೂನ್ನಲ್ಲಿ ಕರಡು ನಿಯಮಗಳನ್ನು ಹೊರಡಿಸಿ, 2021ರ ಮಾರ್ಚ್ನಲ್ಲಿ ಅವನ್ನು ಅನುಷ್ಠಾನಕ್ಕೆ ತರಲಾಗಿತ್ತು. ಈಗ ಜಾರಿಯಲ್ಲಿರುವ ಡ್ರೋನ್ ನಿಯಮಗಳ ಪ್ರಕಾರ ದೇಶದಲ್ಲಿ ಬಳಕೆಯಾಗುವ ಪ್ರತಿಯೊಂದು ಡ್ರೋನ್ಗೂ ಪ್ರತ್ಯೇಕ ನೋಂದಣಿ ಸಂಖ್ಯೆ ಪಡೆಯಲೇಬೇಕಿದೆ. ಆದರೆ ನೂತನ ಕರಡು ನಿಯಮಗಳಲ್ಲಿ ಕಡ್ಡಾಯ ನೋಂದಣಿ ಸಂಖ್ಯೆ ನಿಯಮವನ್ನು ಕೈಬಿಡಲಾಗಿದೆ.
ಈಗ ಜಾರಿಯಲ್ಲಿರುವ ಡ್ರೋನ್ ನಿಯಮಗಳ ಪ್ರಕಾರ ಹಾರಾಟಕ್ಕೆ ಸಂಬಂಧಿಸಿದಂತೆ 25 ರೀತಿಯ ನೋಂದಣಿ ಮತ್ತು ಅನುಮತಿ ಅರ್ಜಿಗಳನ್ನು ಪಡೆಯಬೇಕಿತ್ತು. ನೂತನ ಕರಡು ನಿಯಮಗಳಲ್ಲಿ ಈ ಅರ್ಜಿಗಳ ಸಂಖ್ಯೆಯನ್ನು ಕೇವಲ 6ಕ್ಕೆ ಇಳಿಸಲಾಗಿದೆ. ನೋಂದಣಿ ಮತ್ತು ಹಾರಾಟಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿದ್ದ ಕಠಿಣ ನಿಯಮಗಳನ್ನು ನೂತನ ಕರಡು ನಿಯಮಗಳಲ್ಲಿ ಸಡಿಲಿಸಿ, ಸರಳಗೊಳಿಸಲಾಗಿದೆ.
- ಚಾಲ್ತಿ ನಿಯಮಗಳಲ್ಲಿ ಡ್ರೋನ್ಗಳ ಗಾತ್ರ ಮತ್ತು ತೂಕದ ಆಧಾರದಲ್ಲಿ ನೋಂದಣಿ ಶುಲ್ಕ ವಿಧಿಸಲಾಗುತ್ತಿತ್ತು. ನೂತನ ನಿಯಮಗಳಲ್ಲಿ ಎಲ್ಲಾ ಡ್ರೋನ್ಗಳಿಗೂ ಏಕಪ್ರಕಾರದ ನೋಂದಣಿ ನಿಯಮ ಮತ್ತು ನೋಂದಣಿ ಶುಲ್ಕ ವಿಧಿಸಲಾಗುತ್ತದೆ. ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ
- ಡ್ರೋನ್ ಮಾಲೀಕತ್ವ ಬದಲಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈಗ ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲಾ ಡ್ರೋನ್ಗಳನ್ನು ಅಧಿಕೃತಗೊಳಿಸಲಾಗುತ್ತದೆ
- ಚಾಲ್ತಿ ನಿಯಮಗಳ ಪ್ರಕಾರ ಡ್ರೋನ್ಗಳ ನಿರ್ವಹಣೆ ಮತ್ತು ಕಾರ್ಯಕ್ಷಮತೆ ಪ್ರಮಾಣಪತ್ರವನ್ನು ಪಡೆಯಬೇಕು. ನಿಗದಿತ ಅವಧಿಗೊಮ್ಮೆ ಈ ಪ್ರಮಾಣಪತ್ರವನ್ನು ಪಡೆಯುವುದು ಕಡ್ಡಾಯ. ಆದರೆ ನೂತನ ಕರಡು ನಿಯಮಗಳಲ್ಲಿ ಈ ಪ್ರಮಾಣ ಪತ್ರ ಪಡೆಯಬೇಕಿಲ್ಲ
- ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಡ್ರೋನ್ ಕಾರ್ಯನಿರ್ವಹಣೆ ರಹದಾರಿ ಪಡೆಯುವುದು ಕಡ್ಡಾಯವಾಗಿದೆ. ನೂತನ ಕರಡು ನಿಯಮಗಳಲ್ಲಿ ಈ ಪ್ರಕ್ರಿಯೆಯನ್ನೇ ರದ್ದುಪಡಿಸಲಾಗಿದೆ
- ಡ್ರೋನ್ ಅನ್ನು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಮತ್ತು ಡ್ರೋನ್ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಮಾನ್ಯತೆ ಪಡೆಯಬೇಕು. ಕರಡು ನಿಯಮಗಳಲ್ಲಿ ಈ ಪ್ರಕ್ರಿಯೆಗಳನ್ನು ರದ್ದುಪಡಿಸಲಾಗಿದೆ
- ಈಗ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ, ಡ್ರೋನ್ ಹಾರಾಟ ತರಬೇತುದಾರ ಮತ್ತು ವಿದ್ಯಾರ್ಥಿ ಡ್ರೋನ್ ಪೈಲಟ್ ಪರವಾನಗಿ ಪಡೆಯವುದು ಕಡ್ಡಾಯ. ನೂತನ ಕರಡು ನಿಯಮಗಳಲ್ಲಿ ಇದನ್ನು ರದ್ದುಪಡಿಸಲಾಗಿದೆ
- ಡ್ರೋನ್ ಪೋರ್ಟ್ ಸ್ಥಾಪನೆಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯ ಎಂಬುದು ಈಗಿನ ನಿಯಮ. ಆದರೆ ನೂತನ ಕರಡು ನಿಯಮಗಳ ಪ್ರಕಾರ, ಡ್ರೋನ್ ಪೋರ್ಟ್ ಸ್ಥಾಪನೆಗೆ ಯಾವುದೇ ಮಾನ್ಯತೆ ಪಡೆಯುವ ಅವಶ್ಯಕತೆ ಇಲ್ಲ.
ಡ್ರೋನ್: ಎಲ್ಲಿ ಹಾರಾಟ?
- ಭಾರತದಲ್ಲಿ ಡ್ರೋನ್ ನಿರ್ವಹಣೆಗೆ ಸಂಬಂಧಿಸಿ ಚಟುವಟಿಕೆಗಳಿಗೆ ‘ಡಿಜಿಟಲ್ ಸ್ಕೈ’ ವೇದಿಕೆಯನ್ನು ಸರ್ಕಾರ ರಚಿಸಲಿದೆ. ಡ್ರೋನ್ ಕಾರ್ಯಾಚರಣೆಗಾಗಿ ವಾಯುಪ್ರದೇಶದ ನಕ್ಷೆಯನ್ನು ಒದಗಿಸುವ ಈ ವೇದಿಕೆಯು ಭಾರತದ ಇಡೀ ವಾಯುಪ್ರದೇಶವನ್ನು ಕೆಂಪು, ಹಳದಿ ಮತ್ತು ಹಸಿರು ವಲಯಗಳಾಗಿ ಬೇರ್ಪಡಿಸಿದೆ.
- ಡ್ರೋನ್ಗಳನ್ನು ಎಲ್ಲಿ ಹಾರಿಸಬಹುದು, ಎಲ್ಲಿ ಹಾರಿಸಬಾರದು ಎಂಬುದನ್ನು ಕರಡು ನಿಯಮಗಳು ಸ್ಪಷ್ಟಪಡಿಸಿವೆ. ವಿಮಾನ ನಿಲ್ದಾಣದ ಪರಿಧಿಯನ್ನು 45 ಕಿ.ಮೀ.ನಿಂದ 12 ಕಿ.ಮೀ.ಗೆ ಇಳಿಸಲಾಗಿದೆ. ಪೈಲಟ್ಗಳು ತಮ್ಮ ಉದ್ದೇಶಿತ ಹಾರಾಟದ ಯೋಜನೆಯನ್ನು ರೂಪಿಸಲು ಮತ್ತು ವಲಯಗಳನ್ನು ಸುಲಭವಾಗಿ ಗುರುತಿಸಲು ಯಾಂತ್ರೀಕೃತ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ರೂಪಿಸಲಾಗುತ್ತದೆ.
ಕೆಂಪು ವಲಯ: ಭೂಮಿಯ ಮೇಲ್ಮೈ, ನೀರಿನ ಮೇಲ್ಮೈ ಅಥವಾ ಕೇಂದ್ರ ಸರ್ಕಾರದ ಅಧಿಸೂಚಿತ ಬಂದರು ಮಿತಿಗಳನ್ನು ಈ ವಲಯ ಸೂಚಿಸುತ್ತದೆ. ಈ ವ್ಯಾಪ್ತಿಯಲ್ಲಿ ಡ್ರೋನ್ ಕಾರ್ಯಾಚರಣೆಯನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ.
ಹಳದಿ ವಲಯ: ದೇಶದ ಜಲಗಡಿ, ಬಂದರು, ಸೂಚಿತ ಭೂಪ್ರದೇಶದ ಮೇಲ್ಮೈ ಮೇಲೆ ಡ್ರೋನ್ ಹಾರಾಟ ನಿರ್ಬಂಧವಿರುವ ಪ್ರದೇಶವನ್ನು ಹಳದಿ ವಲಯ ಎಂದು ಗುರುತಿಸಲಾಗಿದೆ. ಇಲ್ಲಿ ಡ್ರೋನ್ ಹಾರಾಟ ನಡೆಸಲು ಅನುಮತಿ ಪಡೆಯಬೇಕು.
ಹಸಿರು ವಲಯ: ಹಳದಿ ಮತ್ತು ಕೆಂಪು ವಲಯ ಎಂದು ಗುರುತಿಸದೇ ಇರುವ ಪ್ರದೇಶದಲ್ಲಿ, ನೆಲದ ಮೇಲ್ಮೈನಿಂದ 400 ಅಡಿ ಎತ್ತರದವರೆಗಿನ ಪ್ರದೇಶವನ್ನು ಹಸಿರು ವಲಯ ಎನ್ನಲಾಗಿದೆ. ಯಾವುದೇ ವಿಮಾನ ನಿಲ್ದಾಣದ ಪರಿಧಿಯಿಂದ 8-12 ಕಿ.ಮೀ. ಒಳಗೆ, ನೆಲದ ಮೇಲ್ಮೈನಿಂದ 200 ಅಡಿ ಎತ್ತರದವರೆಗಿನ ಪ್ರದೇಶವನ್ನು ಹಸಿರು ವಲಯ ಎಂದು ಗುರುತಿಸಲಾಗುತ್ತದೆ. ಇಲ್ಲಿ ಡ್ರೋನ್ ಹಾರಾಟ ನಡೆಸಲು ಯಾವುದೇ ಅನುಮತಿ ಪಡೆಯಬೇಕಿಲ್ಲ.
ಡ್ರೋನ್ ಗಳ ಮಹತ್ವ:
- ವಾಣಿಜ್ಯ, ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ, ವಿಪತ್ತು ನಿರ್ವಹಣೆ ಮತ್ತು ಕಣ್ಗಾವಲು ಕಾರ್ಯಗಳಲ್ಲಿ ಡ್ರೋನ್ಗಳ ಬಳಕೆಯು ಮಾನವ ಶ್ರಮದ ಅವಶ್ಯಕತೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ.
- ಡೇಟಾ ಸಂಗ್ರಹಣೆಗಾಗಿ ಡ್ರೋನ್ಗಳು ಕಡಿಮೆ ವೆಚ್ಚದ, ಸುರಕ್ಷಿತ ಮತ್ತು ತ್ವರಿತ ವೈಮಾನಿಕ ಸಮೀಕ್ಷೆಗಳನ್ನು ಒದಗಿಸುತ್ತವೆ ಮತ್ತು ಇಂಧನ, ಗಣಿಗಾರಿಕೆ ಮತ್ತು ತೈಲ ಮತ್ತು ಅನಿಲ ಪರಿಶೋಧನೆಯಂತಹ ಕೈಗಾರಿಕೆಗಳಿಗೆ ಉಪಯುಕ್ತವಾಗಿವೆ.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
ಹವಾಮಾನ ಬದಲಾವಣೆಗಾಗಿ ನ್ಯಾಷನಲ್ ಅಡಾಪ್ಟೇಶನ್ ಫಂಡ್ (NAFCC):
(National Adaptation Fund for Climate Change)
ಸಂದರ್ಭ:
ಇತ್ತೀಚೆಗೆ ಲೋಕಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಹವಾಮಾನ ಬದಲಾವಣೆಗಾಗಿ ರಾಷ್ಟ್ರೀಯ ಅಡಾಪ್ಟೇಶನ್ ಫಂಡ್ (National Adaptation Fund for Climate Change – NAFCC) ಅಡಿಯಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಲ್ಲಿಯವರೆಗೆ 30 ಯೋಜನೆಗಳನ್ನು ಅನುಮೋದಿಸಲಾಗಿದೆ.
ರಾಷ್ಟ್ರೀಯ ಹವಾಮಾನ ಬದಲಾವಣೆ ಅಡಾಪ್ಟೇಶನ್ ಫಂಡ್ (NAFCC) ಕುರಿತು:
ನ್ಯಾಷನಲ್ ಕ್ಲೈಮೇಟ್ ಚೇಂಜ್ ಅಡಾಪ್ಟೇಶನ್ ಫಂಡ್ (NAFCC) ಅನ್ನು ಆಗಸ್ಟ್ 2015 ರಲ್ಲಿ ಸ್ಥಾಪಿಸಲಾಯಿತು.
- ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳಿಗೆ ನಿರ್ದಿಷ್ಟವಾಗಿ ದುರ್ಬಲವಾಗಿರುವ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ವೆಚ್ಚವನ್ನು ಪೂರೈಸುವುದು ಇದರ ಉದ್ದೇಶವಾಗಿದೆ.
ಅನುಷ್ಠಾನ:
ಕ್ಯೋಟೋ ಶಿಷ್ಟಾಚಾರದ ಅಡಿಯಲ್ಲಿ ‘ಅಡಾಪ್ಟೇಶನ್ ಫಂಡ್’ಗಾಗಿ ರಾಷ್ಟ್ರೀಯ ಅನುಷ್ಠಾನ ಘಟಕವಾಗಿ ನಬಾರ್ಡ್ ಜೊತೆಗಿನ ಪ್ರಸ್ತುತ ವ್ಯವಸ್ಥೆಯನ್ನು ಮತ್ತು ದೇಶದಾದ್ಯಂತ ನಬಾರ್ಡ್ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು NAFCC ಅಡಿಯಲ್ಲಿ “ಹೊಂದಾಣಿಕೆ ಯೋಜನೆಗಳ” ಅನುಷ್ಠಾನಕ್ಕಾಗಿ ಭಾರತ ಸರ್ಕಾರದಿಂದ NABARD ಅನ್ನು ರಾಷ್ಟ್ರೀಯ ಅನುಷ್ಠಾನ ಘಟಕ (National Implementing Entity -NIE) ಎಂದು ಗೊತ್ತುಪಡಿಸಲಾಗಿದೆ.
ಈ ವ್ಯವಸ್ಥೆಯಡಿಯಲ್ಲಿ, ನಬಾರ್ಡ್ ಹವಾಮಾನ ಬದಲಾವಣೆಗಾಗಿ ರಾಜ್ಯ ಕ್ರಿಯಾ ಯೋಜನೆ (State Action Plan for Climate Change – SAPCC) ಯಿಂದ ಯೋಜನೆಯ ಕಲ್ಪನೆಗಳು/ ಪರಿಕಲ್ಪನೆಗಳ ಸೂತ್ರೀಕರಣ, ಯೋಜನೆಯನ್ನು ಸಿದ್ಧಪಡಿಸುವುದು ಅದರ ಪರಿಶೀಲನೆ, ಮಂಜೂರಾತಿ, ನಿಧಿಯ ವಿತರಣೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಮಧ್ಯಸ್ಥಗಾರರ ಸಾಮರ್ಥ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
NAFCC ಯ ಫಲಿತಾಂಶದ ಚೌಕಟ್ಟು:
ಹಣಕಾಸಿನ ಮಟ್ಟದ ಫಲಿತಾಂಶದ ನಿಯತಾಂಕಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
- ನೀರು ಮತ್ತು ಕೃಷಿ ಕ್ಷೇತ್ರಗಳಲ್ಲಿನ ಹವಾಮಾನ ಬದಲಾವಣೆಯ ಪ್ರಮುಖ ಅಪಾಯಗಳು ಮತ್ತು ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸುವುದು.
- ನೀರು ಮತ್ತು ಆಹಾರ ಭದ್ರತೆಯ ಸವಾಲುಗಳನ್ನು ಎದುರಿಸಲು ಬಹು-ವಲಯ, ಅಂತರ-ವಲಯ ಪ್ರಯೋಜನಗಳು/ಸಹ-ಪ್ರಯೋಜನಗಳನ್ನು ಹೆಚ್ಚಿಸುವುದು.
- ಮಾನವ ಅಭಿವೃದ್ಧಿ, ಬಡತನ ನಿರ್ಮೂಲನೆ, ಜೀವನೋಪಾಯ ಭದ್ರತೆ ಮತ್ತು ಸಮುದಾಯದ ಕುರಿತು ಅರಿವು ಹೆಚ್ಚಿಸುವುದು.
- ಹವಾಮಾನ-ಪ್ರೇರಿತ ಸಾಮಾಜಿಕ-ಆರ್ಥಿಕ ಮತ್ತು ಪರಿಸರ ಹಾನಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಲು ಸಾಂಸ್ಥಿಕ ಮತ್ತು ವೈಯಕ್ತಿಕ ಸಾಮರ್ಥ್ಯವನ್ನು ಬಲಪಡಿಸುವುದು.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
COP-26 ನಲ್ಲಿ ಭಾರತದ ನಿಲುವು:
(India’s Stand at COP-26)
ಸಂದರ್ಭ:
ಇತ್ತೀಚೆಗೆ, ಸರ್ಕಾರವು ಈಗ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ COP 26 ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
- ಸರ್ಕಾರದ ಪ್ರಕಾರ, ‘ಹವಾಮಾನ ಕ್ರಿಯೆ’ಯನ್ನು ವೇಗಗೊಳಿಸುವ ಭಾರತದ ಘೋಷಣೆಯು ಶುದ್ಧ ಮತ್ತು ಹವಾಮಾನ ಸ್ಥಿತಿಸ್ಥಾಪಕ ಆರ್ಥಿಕತೆಗೆ ದೇಶದ ಪರಿವರ್ತನೆಯನ್ನು ಬೆಂಬಲಿಸಲು ಹೂಡಿಕೆಯನ್ನು ಮತ್ತು ಹೊಸ ತಂತ್ರಜ್ಞಾನಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.
ಹಿನ್ನೆಲೆ:
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ ‘COP 26’ ಯುನೈಟೆಡ್ ಕಿಂಗ್ಡಂನ ಅಧ್ಯಕ್ಷತೆಯಲ್ಲಿ 31 ಅಕ್ಟೋಬರ್ ನಿಂದ 12 ನವೆಂಬರ್ ವರೆಗೆ ನಡೆದಿತ್ತು.
- ಇದು ‘ಪಕ್ಷಗಳ 26 ನೇ ಸಮ್ಮೇಳನ’ ಆಗಿರುತ್ತದೆ, ಆದ್ದರಿಂದ ಇದಕ್ಕೆ ‘COP26’ ಎಂದು ಹೆಸರು.
- ಗ್ಲ್ಯಾಸ್ಗೋದಲ್ಲಿನ ಸ್ಕಾಟಿಷ್ ಈವೆಂಟ್ ಕ್ಯಾಂಪಸ್ನಲ್ಲಿ ‘COP26’ ನಡೆದಿತ್ತು.
- ಯುನೈಟೆಡ್ ಕಿಂಗ್ಡಂನ ಗ್ಲಾಸ್ಗೋ ನಗರದಲ್ಲಿ ನಡೆದ ಯುನೈಟೆಡ್ ನೇಷನ್ಸ್ ಕ್ಲೈಮೇಟ್ ಚೇಂಜ್ ಫ್ರೇಮ್ವರ್ಕ್ ಕನ್ವೆನ್ಶನ್ (United Nations Framework Convention on Climate Change – UNFCCC) ನ ಪಕ್ಷಗಳ ಸಮ್ಮೇಳನದ (COP26) 26 ನೇ ಅಧಿವೇಶನದಲ್ಲಿ ಭಾರತ ಸರ್ಕಾರವು ಇತ್ತೀಚೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಕಳವಳವನ್ನು ವ್ಯಕ್ತಪಡಿಸಿದೆ.
ಐದು ಅಮೃತ ಅಂಶಗಳು (ಪಂಚಾಮೃತ):
ಭಾರತವು ತನ್ನ ಹವಾಮಾನ ಕ್ರಿಯೆಯ ‘ಐದು ಅಮೃತ ಅಂಶಗಳು’ ಅಂದರೆ ಪಂಚಾಮೃತವನ್ನು (ಐದು ಅಮೃತ ಅಂಶಗಳು – ಪಂಚಾಮೃತ) ಪ್ರಸ್ತುತಪಡಿಸಿದೆ. ಅವುಗಳು:
- ಭಾರತವು 2070 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುತ್ತದೆ.
- 2030 ರ ವೇಳೆಗೆ, ಭಾರತವು ತನ್ನ ಶಕ್ತಿ / ಇಂಧನ ಅಗತ್ಯತೆಯ 50% ಅನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆಯುವುದನ್ನು ಖಚಿತಪಡಿಸುತ್ತದೆ.
- ಭಾರತವು ತನ್ನ ಇಂಗಾಲದ ಹೊರಸೂಸುವಿಕೆಯನ್ನು 2030 ರವರೆಗೆ ಒಂದು ಬಿಲಿಯನ್ ಟನ್ಗಳಷ್ಟು ಕಡಿಮೆ ಮಾಡುತ್ತದೆ.
- ಇದು ಜಿಡಿಪಿಯ ಪ್ರತಿ ಯೂನಿಟ್ಗೆ ಅದರ ಹೊರಸೂಸುವಿಕೆಯ ತೀವ್ರತೆಯನ್ನು 45% ಕ್ಕಿಂತ ಕಡಿಮೆಗೊಳಿಸುತ್ತದೆ.
- ಭಾರತವು 2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ, ಇದು ಪ್ರಸ್ತುತ ಭಾರತವು ಹಾಕಿಕೊಂಡಿರುವ ಗುರಿಗಿಂತ 50 GW ಹೆಚ್ಚಳವಾಗಿದೆ.
ಜೀವನದ ಮಂತ್ರ – ಜೀವನಶೈಲಿ:
COP 26 ರಲ್ಲಿ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಭಾರತವು ‘ಜೀವನ(LIFE)– ಪರಿಸರಕ್ಕಾಗಿ ಜೀವನಶೈಲಿ ’ (LIFE- Lifestyle for Environment) ಮಂತ್ರವನ್ನು ಹಂಚಿಕೊಂಡಿದೆ.
- ‘ಪರಿಸರ ಪ್ರಜ್ಞೆಯ ಜೀವನಶೈಲಿ’ಯನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡುವ ಅಭಿಯಾನವಾಗಿ ‘ಪರಿಸರಕ್ಕಾಗಿ ಜೀವನಶೈಲಿ’ ಯನ್ನು (ಲೈಫ್) ಮುನ್ನಡೆಸಬೇಕಾಗಿದೆ ಎಂದು ಭಾರತ ಹೇಳಿದೆ.
- ಜಗತ್ತು ಅದನ್ನು ಬುದ್ದಿಹೀನವಾಗಿ ಮತ್ತು ವಿನಾಶಕಾರಿಯಾಗಿ ಸೇವಿಸುವ ಬದಲು ಬುದ್ಧಿವಂತಿಕೆಯಿಂದ ಮತ್ತು ಸದುದ್ದೇಶ ಪೂರ್ವಕವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂಬುದು ಭಾರತವು ನೀಡಿದ ಸಂದೇಶವಾಗಿತ್ತು.
ನೆಟ್ ಜೀರೋ:
ಭಾರತವು 2070 ರ ವೇಳೆಗೆ ನಿವ್ವಳ ಶೂನ್ಯ (Net Zero) ಇಂಗಾಲ ಹೊರಸೂಸುವಿಕೆಯನ್ನು ಸಾಧಿಸುವ ಪ್ರತಿಜ್ಞೆ ಮಾಡಿದೆ, ಹಾಗೆಯೇ ನವೀಕರಿಸಬಹುದಾದ ಶಕ್ತಿಯ ನಿಯೋಜನೆ ಮತ್ತು ಇಂಗಾಲದ ಹೊರಸೂಸುವಿಕೆ ಕಡಿತಕ್ಕೆ ಹೆಚ್ಚಿದ ಗುರಿಗಳನ್ನು ಘೋಷಿಸಿದೆ.
ಭಾರತದ ದೃಷ್ಟಿಕೋನ:
- ತನ್ನ ಸಮಗ್ರ ವಿಧಾನದ ಒಂದು ಭಾಗವಾಗಿ, ಭಾರತವು ಇಕ್ವಿಟಿಯ ಮೂಲಭೂತ ತತ್ವಗಳು ಮತ್ತು ‘ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು’ (common but differentiated responsibilities) ಮತ್ತು ಆಯಾ ಸಂಬಂಧಿತ ಸಾಮರ್ಥ್ಯಗಳನ್ನು ಒತ್ತಿಹೇಳುತ್ತದೆ.
- ಪ್ಯಾರಿಸ್ ಒಪ್ಪಂದವು ನಿಗದಿಪಡಿಸಿದ ಮಿತಿಯೊಳಗೆ ತಾಪಮಾನ ಏರಿಕೆಯನ್ನು ಇರಿಸಿಕೊಳ್ಳಲು ಸೀಮಿತ ಜಾಗತಿಕ ಸಂಪನ್ಮೂಲವಾದ ಜಾಗತಿಕ ಇಂಗಾಲದ ಬಜೆಟ್ಗೆ ಎಲ್ಲಾ ದೇಶಗಳು ಸಮಾನ ಪ್ರವೇಶವನ್ನು ಹೊಂದಿರಬೇಕು ಎಂದು ಭಾರತವು COP 26 ನಲ್ಲಿ ಎತ್ತಿ ತೋರಿಸಿದೆ.
- ಮತ್ತು, ಈ ಜಾಗತಿಕ ಇಂಗಾಲದ ಬಜೆಟ್ ಅನ್ನು ಜವಾಬ್ದಾರಿಯುತವಾಗಿ ಬಳಸುವ ಮೂಲಕ ಎಲ್ಲಾ ದೇಶಗಳು ತಮ್ಮ ನ್ಯಾಯಯುತ ಪಾಲಿನ ಒಳಗೆಯೇ ಇರಬೇಕು.
- ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜವಾಬ್ದಾರಿ: ಭಾರತವು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹವಾಮಾನ ನ್ಯಾಯವನ್ನು ಒದಗಿಸಲು ಮತ್ತು ಪ್ರಸ್ತುತ ದಶಕದಲ್ಲಿ ಹೊರಸೂಸುವಿಕೆಯಲ್ಲಿ ತ್ವರಿತ ಕಡಿತವನ್ನು ಕೈಗೊಳ್ಳಲು ಕರೆ ನೀಡುತ್ತದೆ, ಇದರಿಂದ ಅವರು ಘೋಷಿಸಿದ ದಿನಾಂಕಗಳಿಗಿಂತ ಮುಂಚಿತವಾಗಿ ‘ನೆಟ್ ಝೀರೋ’ ಗುರಿ ತಲುಪಬಹುದು.
ಪ್ರಸ್ತುತ ಸವಾಲುಗಳನ್ನು ಎದುರಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು:
- ಎಲ್ಲಾ ಪ್ಲಾಟ್ಫಾರ್ಮ್ಗಳು ‘ ಮೊದಲು ನವೀಕರಿಸಬಹುದಾದ ವಿಧಾನ’ (Renewable First Approach) ವನ್ನು ಅಳವಡಿಸಿಕೊಳ್ಳಬೇಕು.
- ವಿವಿಧ ಸಂಸ್ಥೆಗಳು ಮತ್ತು ಇತರ ದೇಶಗಳ ನಡುವೆ ಹೊಂದಾಣಿಕೆ ಇರಬೇಕು. ಉದಾಹರಣೆ: ‘ಒನ್ ಸನ್, ಒನ್ ವರ್ಲ್ಡ್, ಒನ್ ಗ್ರಿಡ್’ (OSOWOG), ಭಾರತದಿಂದ CoP26 ನಲ್ಲಿ ಪ್ರಾರಂಭಿಸಲಾಯಿತು. ಈ ಉಪಕ್ರಮವು OSOWOG ಅಡಿಯಲ್ಲಿ ನವೀಕರಿಸಬಹುದಾದ ಶಕ್ತಿಯನ್ನು ಅಳವಡಿಸಿಕೊಳ್ಳಲು ಗಡಿಯಾಚೆಗಿನ ಶಕ್ತಿ ಗ್ರಿಡ್ಗಳ ಅಂತರ್ಸಂಪರ್ಕಕ್ಕೆ ಬೆಂಬಲವನ್ನು ಒದಗಿಸುತ್ತದೆ.
- ಹೊರಸೂಸುವಿಕೆ-ತೀವ್ರ ಪ್ರದೇಶಗಳನ್ನು ಡಿಕಾರ್ಬನೈಸ್ ಮಾಡಬೇಕು. ಉದಾಹರಣೆ: ಕಬ್ಬಿಣ ಮತ್ತು ಉಕ್ಕಿನಂತಹ ಭಾರೀ ಕೈಗಾರಿಕೆಗಳು.
- ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ‘ಪರಿಸರ ವ್ಯವಸ್ಥೆ ಆಧಾರಿತ’ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆ: ಫೇಮ್ ಇಂಡಿಯಾ ಸ್ಕೀಮ್.
- ನಮಗೆ ಹೆಚ್ಚು ‘ಕಾರ್ಬನ್ ಸಿಂಕ್ಗಳು’ ಬೇಕು – ಇಂಗಾಲವನ್ನು ಸಂಗ್ರಹಿಸುವ ಪ್ರದೇಶಗಳು – ಉದಾಹರಣೆಗೆ ಕಾಡುಗಳು, ಮಹಾಸಾಗರಗಳು ಮತ್ತು ಜೌಗು ಪ್ರದೇಶಗಳು.
- ಪರಿಸರ ಸಂರಕ್ಷಣೆಗೆ ಸ್ಥಳೀಯ ಜನರನ್ನು ಸೇರಿಸಿಕೊಳ್ಳಬೇಕು.
- ಹವಾಮಾನ ಹೊಂದಾಣಿಕೆಗಾಗಿ ಸಾಕಷ್ಟು ಸಂಪನ್ಮೂಲಗಳನ್ನು ಸಜ್ಜುಗೊಳಿಸಬೇಕು. ಉದಾಹರಣೆ: ಹವಾಮಾನ ಮತ್ತು ಹಸಿರು ಶಕ್ತಿ ಯೋಜನೆಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸೆಪ್ಟೆಂಬರ್ನಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಆರಂಭಿಸಿದ ಕ್ಲೈಮೇಟ್ ಫೈನಾನ್ಸ್ ಲೀಡರ್ಶಿಪ್ ಇನಿಶಿಯೇಟಿವ್ ಈ ದಿಕ್ಕಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
ನದಿ ನಗರಗಳ ಒಕ್ಕೂಟ:
(River Cities Alliance – RCA)
‘ರಿವರ್ ಸಿಟೀಸ್ ಅಲೈಯನ್ಸ್’ (RCA) ಎಂಬುದು ನಗರ ನದಿಗಳ ಸುಸ್ಥಿರ ನಿರ್ವಹಣೆಗಾಗಿ ಪ್ರಮುಖ ಅಂಶಗಳ ಕುರಿತು ಚರ್ಚಿಸಲು ಮತ್ತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಸದಸ್ಯ ನಗರಗಳಿಗೆ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಕಾರ್ಯಕ್ರಮವಾಗಿದೆ.
- ಆರಂಭಿಕ ಹಂತದಲ್ಲಿ ಡೆಹ್ರಾಡೂನ್, ರಿಷಿಕೇಶ್, ಹರಿದ್ವಾರ, ಶ್ರೀನಗರ, ವಾರಣಾಸಿ, ಕಾನ್ಪುರ್, ಪ್ರಯಾಗ್ರಾಜ್ ಸೇರಿದಂತೆ 30 ನಗರಗಳೊಂದಿಗೆ ಮೈತ್ರಿಯನ್ನು ಪ್ರಾರಂಭಿಸಲಾಗಿದೆ.
- ನದಿ ನಗರಗಳ ಒಕ್ಕೂಟ (RCA) ಭಾರತದ ಎಲ್ಲಾ ನದಿಯ ನಗರಗಳಿಗೆ ಮುಕ್ತವಾಗಿರುತ್ತದೆ. ಯಾವುದೇ ನದಿ-ನಗರವು ಯಾವುದೇ ಸಮಯದಲ್ಲಿ ಮೈತ್ರಿಗೆ ಸೇರಬಹುದು.
ಪುನೌರಾ ಧಾಮ್:
(Punaura Dham)
ಬಿಹಾರ ರಾಜ್ಯ ಸರ್ಕಾರವು ಮಾಡಿಕೊಂಡ ಮನವಿಯ ಪ್ರಕಾರ, ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ್ ದರ್ಶನ್ ಯೋಜನೆಯ ‘ರಾಮಾಯಣ ಸರ್ಕ್ಯೂಟ್’ನಲ್ಲಿ ‘ಪುನೌರ ಧಾಮ್’ ಅನ್ನು ಸೇರಿಸಿದೆ.
- ಪುನೌರಾ ಧಾಮ್ ತಾಣವನ್ನು ಇತ್ತೀಚೆಗೆ ಪ್ರವಾಸೋದ್ಯಮ ಸಚಿವಾಲಯದ ‘ಪ್ರಸಾದ್ ಯೋಜನೆ’ ಅಡಿಯಲ್ಲಿ ಸೇರಿಸಲಾಗಿದೆ.
- ಪುನೌರಾ ಧಾಮ್ ಸೀತಾ ಮಾತೆಯ ಜನ್ಮಸ್ಥಳ ಎಂದು ನಂಬಲಾಗಿದೆ ಮತ್ತು ಇದು ಸೀತಾಮರ್ಹಿ ಪಟ್ಟಣದ ಪಶ್ಚಿಮಕ್ಕೆ 5 ಕಿಮೀ ದೂರದಲ್ಲಿರುವ ಪುನೌರಾ ಗ್ರಾಮದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಹರಡಿದೆ.
- ದೇವಾಲಯದ ಸಂಕೀರ್ಣದಲ್ಲಿ ರಾಮ ಜಾನಕಿ ದೇವಾಲಯ, ಸೀತಾ ಕುಂಡ್ ಎಂಬ ಕೊಳ ಮತ್ತು ಸಭಾಂಗಣವಿದೆ.