[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 17ನೇ ಜನೇವರಿ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  2 :

1. ವಿಧಾನಸಭೆಯ ಸದಸ್ಯರನ್ನು ಎಷ್ಟು ದಿನಗಳ ವರೆಗೆ ಅಮಾನತಿನಲ್ಲಿರಿಸಬಹುದು?

2. ಅಂಚೆ ಮತಪತ್ರದ ಮೂಲಕ ಮತದಾನ.

3. ದೆಹಲಿ ಸರ್ಕಾರದ ದೇಶ್ ಕೆ ಮೆಂಟರ್ ಕಾರ್ಯಕ್ರಮ.

4. ಅಂತರ್‌ಧರ್ಮೀಯ ವಿವಾಹಗಳ ಕಾನೂನಿನ ಕುರಿತು ಸರ್ಕಾರದಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ.

5. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲು ಮನವಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಆರನೇ ಸಾಮೂಹಿಕ ವಿನಾಶ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ನಿವ್ವಳ ಶೂನ್ಯ ಕಟ್ಟಡಗಳು ಯಾವುವು?

2. ಕಾಮನ್ವೆಲ್ತ್ ವಾರ್ ಗ್ರೇವ್ಸ್ ಕಮಿಷನ್ (CWGC).

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ವಿಧಾನಸಭೆಯ ಸದಸ್ಯರನ್ನು ಎಷ್ಟು ದಿನಗಳ ವರೆಗೆ ಅಮಾನತಿನಲ್ಲಿರಿಸಬಹುದು?


(For how long can an MLA be suspended?)

ಸಂದರ್ಭ:

ಇತ್ತೀಚೆಗಷ್ಟೇ ಮಹಾರಾಷ್ಟ್ರದ 12 ಬಿಜೆಪಿ ಶಾಸಕರು ತಮ್ಮನ್ನು ಮಹಾರಾಷ್ಟ್ರ ವಿಧಾನಸಭೆಯಿಂದ ಒಂದು ವರ್ಷ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

  1. ವಿಚಾರಣೆಯ ಸಂದರ್ಭದಲ್ಲಿ, ಶಾಸಕರನ್ನು ಒಂದು ವರ್ಷದ ಅವಧಿಗೆ ಅಮಾನತುಗೊಳಿಸಿರುವುದು ಮೇಲ್ನೋಟಕ್ಕೆ ಅಸಂವಿಧಾನಿಕ ಮತ್ತು ಉಚ್ಛಾಟನೆಗಿಂತಲೂ ಕೆಟ್ಟದ್ದು” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
  2. ‘ಇತರ ಹಿಂದುಳಿದ ವರ್ಗಗಳಿಗೆ’ (OBCs) ಸಂಬಂಧಿಸಿದ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ ಆಧಾರದ ಮೇಲೆ ವಿಧಾನಸಭೆಯಲ್ಲಿ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಈ ಶಾಸಕರನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಶಾಸಕರ ವಾದವೇನು?

ಜುಲೈ 2021 ರಲ್ಲಿ, ಈ 12 ಬಿಜೆಪಿ ಶಾಸಕರನ್ನು ಅಮಾನತುಗೊಳಿಸುವ ನಿರ್ಣಯವನ್ನು ಮಹಾರಾಷ್ಟ್ರ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಅವರು ಮಂಡಿಸಿದರು. ಸದನದ ನಿಯಮಗಳ ಪ್ರಕಾರ ‘ಸಭಾಧ್ಯಕ್ಷರು’ ಮಾತ್ರ ವಿಧಾನ ಸಭೆಯ ಸದಸ್ಯರನ್ನು ಅಮಾನತು ಮಾಡಬಹುದು ಎಂಬುದು ಅಮಾನತುಗೊಂಡಿರುವ ಶಾಸಕರ ವಾದವಾಗಿದೆ.

ಅವರ ಅಮಾನತು “ಅತ್ಯಂತ ಅನಿಯಂತ್ರಿತ ಮತ್ತು ಅಸಮಂಜಸವಾಗಿದೆ” ಎಂದು ಅವರು ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಅಮಾನತಿನ ವಿರುದ್ಧದ ಸವಾಲು ಮುಖ್ಯವಾಗಿ ‘ನೈಸರ್ಗಿಕ ನ್ಯಾಯದ ತತ್ವಗಳ ನಿರಾಕರಣೆ’ ಮತ್ತು ‘ನ್ಯಾಯ ಪ್ರಕ್ರಿಯೆಯ ಉಲ್ಲಂಘನೆ’ಯ ಆಧಾರದ ಮೇಲೆ ಅವಲಂಬಿತವಾಗಿದೆ.

  1. ಈ 12 ಶಾಸಕರು ತಮ್ಮ ವಾದವನ್ನು ಮಂಡಿಸಲು ಯಾವುದೇ ಅವಕಾಶವನ್ನು ನೀಡಲಿಲ್ಲ ಮತ್ತು ಅವರ ಅಮಾನತು ಶಿಕ್ಷೆಯು ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ನೀಡಲಾದ ಕಾನೂನಿನ ಮುಂದೆ ಸಮಾನತೆ’ಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಶಾಸಕರನ್ನು ಅಮಾನತುಗೊಳಿಸಲು ಅನುಸರಿಸಬೇಕಾದ ವಿಧಾನ:

ಮಹಾರಾಷ್ಟ್ರ ವಿಧಾನಸಭೆಯ ನಿಯಮಾವಳಿಗಳ ನಿಯಮ 53 ರ ಅಡಿಯಲ್ಲಿ, ವಿಧಾನಸಭೆಯ ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರವನ್ನು ಸ್ಪೀಕರ್ ಮಾತ್ರ ಚಲಾಯಿಸಬಹುದು ಮತ್ತು ಸ್ಪೀಕರ್‌ನ ಈ ನಿರ್ಧಾರವನ್ನು ಮತಕ್ಕೆ ಹಾಕಲಾಗುವುದಿಲ್ಲ.

  1. ನಿಯಮ 53 ರ ಪ್ರಕಾರ, “ವಿಧಾನಸಭೆಯ ಅಧ್ಯಕ್ಷರ ನಿರ್ಧಾರವನ್ನು ಅನುಸರಿಸಲು ಸದಸ್ಯರು ನಿರಾಕರಿಸಿದ ಸಂದರ್ಭದಲ್ಲಿ ಅಥವಾ ಸಭಾಧ್ಯಕ್ಷರ ಅಭಿಪ್ರಾಯದಲ್ಲಿ, ಯಾವುದೇ ಸದಸ್ಯರು ಸಂಪೂರ್ಣವಾಗಿ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದರೆ, ತಕ್ಷಣವೇ ವಿಧಾನಸಭೆಯಿಂದ ಹೊರ ನಡೆಯುವಂತೆ ಸಭಾಧ್ಯಕ್ಷರು ಆ ಶಾಸಕನಿಗೆ ನಿರ್ದೇಶನ ನೀಡಬಹುದು.
  2. ವಿಧಾನಸಭೆಯಿಂದ ಹೊರ ನಡೆಯುವಂತೆ ಸಭಾಧ್ಯಕ್ಷರಿಂದ ನಿರ್ದೇಶನ ಪಡೆದ ಶಾಸನ ಸಭೆಯ ಸದಸ್ಯರು “ಅಧಿವೇಶನದ ಆ ದಿನದ ಉಳಿದ ಅವಧಿಗೆ ಸಭೆಗೆ ಗೈರುಹಾಜರಾಗಿ ರಬೇಕು”.
  3. ಹಾಲಿ ಅಧಿವೇಶನದಲ್ಲಿ ಎರಡನೇ ಬಾರಿಗೆ ಸದನದಿಂದ ಹೊರಹೋಗುವಂತೆ ಯಾವುದೇ ಸದಸ್ಯರಿಗೆ ಆದೇಶ ನೀಡಿದರೆ, ವಿಧಾನಸಭೆಯ ಸ್ಪೀಕರ್ ಆ ಸದಸ್ಯನಿಗೆ ಪ್ರಸ್ತುತ ಅಧಿವೇಶನದ ಉಳಿದ ಅವಧಿಗೆ ಸದನಕ್ಕೆ ಗೈರುಹಾಜರಾಗಲು” ನಿರ್ದೇಶಿಸಬಹುದು. ಅಂತಹ ಸೂಚನೆಗಳು ಪ್ರಸ್ತುತ ಅಧಿವೇಶನದ ಉಳಿದ ಅವಧಿಯವರೆಗೆ ಮಾತ್ರ ಜಾರಿಯಲ್ಲಿರುತ್ತವೆ.

ರಾಜ್ಯ ಸರ್ಕಾರವು ತನ್ನ ನಿರ್ಧಾರದ ಪರವಾಗಿ ಮಂಡಿಸಿದ ವಾದಗಳು:

ಆರ್ಟಿಕಲ್ 212 ರ ಅಡಿಯಲ್ಲಿ, ಶಾಸಕಾಂಗದ ಕಾರ್ಯವೈಖರಿಯನ್ನು ವಿಚಾರಣೆ ಮಾಡುವ ಅಧಿಕಾರವನ್ನು ನ್ಯಾಯಾಲಯಗಳು ಹೊಂದಿಲ್ಲ.

ಅನುಚ್ಛೇದ 212(1) ರ ಪ್ರಕಾರ, “ರಾಜ್ಯದ ಶಾಸಕಾಂಗದ ಯಾವುದೇ ಪ್ರಕ್ರಿಯೆಯ ಸಿಂಧುತ್ವವನ್ನು ಯಾವುದೇ ಕಾರ್ಯವಿಧಾನದ ಆಪಾದಿತ ಅಕ್ರಮಗಳ ಆಧಾರದ ಮೇಲೆ ಪ್ರಶ್ನಿಸಲಾಗುವುದಿಲ್ಲ”.

ಆರ್ಟಿಕಲ್ 194 ರ ಅಡಿಯಲ್ಲಿ, ಸವಲತ್ತುಗಳನ್ನು ಉಲ್ಲಂಘಿಸುವ ಯಾವುದೇ ಸದಸ್ಯರನ್ನು ಸದನಕ್ಕೆ ಪ್ರದತ್ತವಾದ ಅಂತರ್ಗತ ಅಧಿಕಾರಗಳ ಮೂಲಕ ಅಮಾನತುಗೊಳಿಸಬಹುದು.

ಹೀಗಾಗಿ,ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರವನ್ನು ವಿಧಾನ ಸಭೆಯ ನಿಯಮ 53 ರ ಮೂಲಕ ಮಾತ್ರ ಚಲಾಯಿಸಬಹುದು” ಎಂದು ಒಪ್ಪಲು ರಾಜ್ಯ ಸರ್ಕಾರವು ನಿರಾಕರಿಸಿದೆ.

ಅಮಾನತು ಅವಧಿಯ ಬಗ್ಗೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಕಳವಳಗಳು:

ಒಂದು ವೇಳೆ ಅಮಾನತುಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಪೂರ್ತಿ ಒಂದು ವರ್ಷ ವಿಧಾನಸಭೆಯಲ್ಲಿ ‘ಪ್ರಾತಿನಿಧ್ಯ’ ನೀಡದಿದ್ದರೆ ಆಗ ಸಂವಿಧಾನದ ಮೂಲ ರಚನೆಗೆ ಧಕ್ಕೆಯಾಗುತ್ತದೆ. ಇದು ಈ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ವಿಧಿಸಲಾದ ದಂಡನೆಯಾಗಿದೆ. ನಿಯಮದ ಪ್ರಕಾರ ಯಾವುದೇ ಕ್ಷೇತ್ರ ಆರು ತಿಂಗಳಿಗೂ ಹೆಚ್ಚು ಕಾಲ ಪ್ರಾತಿನಿಧಿತ್ವ ಇಲ್ಲದೇ ಇರಬಾರದು ಎಂದಿತು.

  1. ಚಾಲ್ತಿಯಲ್ಲಿರುವ ನಿಯಮಗಳನ್ನು ಉಲ್ಲೇಖಿಸಿ, ವಿಧಾನಸಭೆ ಸದಸ್ಯರನ್ನು 60 ದಿನಕ್ಕೂ ಅಧಿಕ ಕಾಲ ಅಮಾನತು ಮಾಡಲಾಗದು. ಸಂವಿಧಾನದ ವಿಧಿ 190 (4)ರ ಪ್ರಕಾರ ಅನುಮತಿಯಿಲ್ಲದೇ ಸದಸ್ಯ 60 ದಿನಕ್ಕೂ ಹೆಚ್ಚು ಕಾಲ ಸದನದಿಂದ ದೂರ ಉಳಿದರೆ ಆ ಕ್ಷೇತ್ರ ಖಾಲಿ ಇದೆ ಎಂದೇ ಭಾವಿಸಲಾಗುತ್ತದೆ ಎಂದು ಪೀಠವು ಉಲ್ಲೇಖಿಸಿತು.
  2. 1951 ರ ಪ್ರಜಾಪ್ರತಿನಿಧಿ ಕಾಯಿದೆಯ, ಸೆಕ್ಷನ್ 151 (A) ಅಡಿಯಲ್ಲಿ, “ ಯಾವುದೇ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಆ ಸ್ಥಾನವು ಖಾಲಿಯಾದ ದಿನಾಂಕದಿಂದ ಆರು ತಿಂಗಳ ಅವಧಿಯೊಳಗೆ  ಭರ್ತಿ ಮಾಡಲು ಉಪ-ಚುನಾವಣೆಯು ನಡೆಯಲಿದೆ”. ಇದರರ್ಥ ಈ ವಿಭಾಗದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ವಿನಾಯಿತಿಗಳನ್ನು ಹೊರತುಪಡಿಸಿ ಯಾವುದೇ ಕ್ಷೇತ್ರವು ಆರು ತಿಂಗಳಿಗಿಂತ ಹೆಚ್ಚು ಕಾಲ ಪ್ರಜಾಪ್ರತಿನಿಧಿಯಿಲ್ಲದೆ ಉಳಿಯಲು ಸಾಧ್ಯವಿಲ್ಲ.

ಸರ್ವೋಚ್ಚ ನ್ಯಾಯಾಲಯದ ಪ್ರಕಾರ, ಒಂದು ವರ್ಷದ ಅಮಾನತು ಪ್ರಾಥಮಿಕವಾಗಿ ಅಸಾಂವಿಧಾನಿಕವಾಗಿದೆ ಏಕೆಂದರೆ ಇದು ಆರು ತಿಂಗಳ ಮಿತಿಯನ್ನು ಮೀರುತ್ತದೆ ಮತ್ತು ಹೀಗಾಗಿ ಇದು ಕೇವಲ ಸದಸ್ಯನನ್ನಷ್ಟೇ ಅಲ್ಲ ಇಡೀ ಚುನಾವಣಾ ಕ್ಷೇತ್ರವನ್ನೇ ಶಿಕ್ಷಿಸಿದಂತಾಗುತ್ತದೆ.

ಸಂಸತ್ ಸದಸ್ಯರ ಅಮಾನತು ಅವಧಿಯ ನಿಯಮಗಳು:

ಲೋಕಸಭೆಯಲ್ಲಿನ ‘ಕಾರ್ಯವಿಧಾನ ಮತ್ತು ವ್ಯವಹಾರದ ನಡಾವಳಿಯ ನಿಯಮಗಳ’ ಅಡಿಯಲ್ಲಿ, ‘ಸಂಪೂರ್ಣ ಕಾನೂನುಬಾಹಿರ ನಡವಳಿಕೆ’ ಅಥವಾ ಸದನದ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳಲು ಅಥವಾ ಉದ್ದೇಶಪೂರ್ವಕವಾಗಿ ಸದನದ ವ್ಯವಹಾರಕ್ಕೆ ಅಡ್ಡಿಪಡಿಸುವ ಸದಸ್ಯರನ್ನು ಸದನದಿಂದ ಹೊರಹಾಕುವ ನಿಬಂಧನೆಯನ್ನು ಮಾಡಲಾಗಿದೆ.

  1. ಈ ನಿಯಮಗಳ ಪ್ರಕಾರ, ಹೇಳಲಾದ ಸದಸ್ಯರ ಗರಿಷ್ಠ ಅಮಾನತು ಅವಧಿಯು “ಸತತ ಐದು ಸಿಟ್ಟಿಂಗ್‌/ ಕಲಾಪಗಳಿಗೆ ಅಥವಾ ಅಧಿವೇಶನದ ಉಳಿದ ಅವಧಿಗೆ, ಯಾವುದು ಕಡಿಮೆಯೋ ಅದು” ಅಷ್ಟು ಅವಧಿಗೆ ಅಮಾನತುಗೊಳಿಸಬಹುದು.
  2. ರಾಜ್ಯಸಭೆಯಲ್ಲಿ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 255 ರ ಪ್ರಕಾರ (ಸದನದಿಂದ ಸದಸ್ಯರ ನಿರ್ಗಮನ) – “ಅಧ್ಯಕ್ಷರು ತಮ್ಮ ಅಭಿಪ್ರಾಯದಲ್ಲಿ ಸದನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದ್ದಾರೆ ಎಂದು ಮನಗಂಡರೆ ಯಾವುದೇ ಸದಸ್ಯರನ್ನು ರಾಜ್ಯಸಭೆಯಿಂದ ಹೊರಹೋಗುವಂತೆ ನಿರ್ದೇಶಿಸಬಹುದು,“ಮತ್ತು ನಿರ್ಗಮಿಸಲು ಆದೇಶಿಸಲ್ಪಟ್ಟ ಸದಸ್ಯರು ತಕ್ಷಣವೇ ಸದನದಿಂದ ನಿರ್ಗಮಿಸಬೇಕು ಮತ್ತು ಆ ದಿನದ ಉಳಿದ ಅವಧಿಗೆ ಗೈರುಹಾಜರಾಗಬೇಕು.”

‘ನಿಯಮ 255’ರ ಅಡಿಯಲ್ಲಿ ಅಮಾನತು ಹೇಗೆ ‘ನಿಯಮ 256’ ಅಡಿಯಲ್ಲಿನ ಅಮಾನತ್ತಿಗಿಂತ ಭಿನ್ನವಾಗಿದೆ?

  1. ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ಬಗ್ಗೆ ಸಾಮಾನ್ಯ ‘ನಿಯಮ 256’ ರಲ್ಲಿ ‘ಒಬ್ಬ ಸದಸ್ಯನ ಅಮಾನತಿ’ಗೆ ಅವಕಾಶ ನೀಡುತ್ತದೆ; ಆದರೆ ‘ನಿಯಮ 255’ ಕಡಿಮೆ ಶಿಕ್ಷೆಯನ್ನು ಒದಗಿಸುತ್ತದೆ.
  2. ನಿಯಮ 256 ರ ಅಡಿಯಲ್ಲಿ, “ರಾಜ್ಯಸಭೆಯ ಅಧ್ಯಕ್ಷರು ಅಗತ್ಯವೆಂದು ಭಾವಿಸಿದರೆ, ಪ್ರಸ್ತುತ ಅಧಿವೇಶನದ ಉಳಿದ ಅವಧಿಯನ್ನು ಮೀರದಂತೆ ಯಾವುದೇ ಸದಸ್ಯರನ್ನು ಸದನದಿಂದ ಅಮಾನತುಗೊಳಿಸಬಹುದು.” ಇತ್ತೀಚೆಗೆ ಹಲವು ಸದಸ್ಯರ ಅಮಾನತು ಶಿಕ್ಷೆಯು ‘ಪ್ರಸಕ್ತ ಅಧಿವೇಶನದ ಬಳಿಕ’ ಅಂತ್ಯಗೊಂಡಿದೆ.

ಇದೇ ರೀತಿಯ ನಿಯಮಗಳು ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ ಗಳಿಗೂ ಸಹ ಅನ್ವಯಿಸುತ್ತವೆ, ಅದರ ಪ್ರಕಾರ, ಅಮಾನತಿನ ಗರಿಷ್ಠ ಅವಧಿಯು ಪ್ರಸಕ್ತ ಅಧಿವೇಶನದ ಉಳಿದ ಅವಧಿಯನ್ನು ಮೀರುವಂತಿಲ್ಲ.

 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.

ಅಂಚೆ ಮತಪತ್ರಗಳ ಮೂಲಕ ಮತದಾನ:


(Vote through postal ballot)

ಸಂದರ್ಭ:

ಭಾರತೀಯ ಚುನಾವಣಾ ಆಯೋಗವು ಪತ್ರಕರ್ತರಿಗೆ ‘ಪೋಸ್ಟಲ್ ಬ್ಯಾಲೆಟ್’ ಅಥವಾ ‘ಅಂಚೆ ಮತಪತ್ರ’ ಸೌಲಭ್ಯದ ಮೂಲಕ ಮತ ಚಲಾಯಿಸಲು ಅವಕಾಶ ನೀಡಿದೆ.

ಅನುಸರಿಸಬೇಕಾದ ಕಾರ್ಯವಿಧಾನ:

ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಬಯಸುವ ‘ಗೈರುಹಾಜರಿ ಮತದಾರರು’ (Absentee Voter) ‘ರಿಟರ್ನಿಂಗ್ ಆಫೀಸರ್’ (RO) ಗೆ ನಮೂನೆ 12D ಯಲ್ಲಿ ಎಲ್ಲಾ ಅಗತ್ಯ ವಿವರಗಳನ್ನು ಒದಗಿಸುವ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಮತ್ತು ಈ ಅರ್ಜಿಯನ್ನು ಸಂಬಂಧಪಟ್ಟ ಸಂಸ್ಥೆಯು ನೇಮಿಸಿದ ನೋಡಲ್ ಅಧಿಕಾರಿಯಿಂದ ಪರಿಶೀಲಿಸಲಾಗುತ್ತದೆ.

‘ಪೋಸ್ಟಲ್ ಬ್ಯಾಲೆಟ್ ಫೆಸಿಲಿಟಿ’ ಅಥವಾ ಅಂಚೆ ಮತಪತ್ರಗಳನ್ನು ಆಯ್ಕೆ ಮಾಡುವ ಯಾವುದೇ ಮತದಾರರು ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.

ಪ್ರಸ್ತುತ, ಈ ಕೆಳಗಿನ ಮತದಾರರು ಸಹ ಅಂಚೆ ಮತಪತ್ರದ ಮೂಲಕ ತಮ್ಮ ಮತವನ್ನು ಚಲಾಯಿಸಲು ಅನುಮತಿಸಲಾಗಿದೆ:

  1. ಸೇವಾ ನಿರತ ಮತದಾರರು (ಸೇನೆ, ನೌಕಾಪಡೆ ಮತ್ತು ವಾಯುಪಡೆಯಂತಹ ಸಶಸ್ತ್ರ ಪಡೆಗಳ ಸದಸ್ಯರು, ರಾಜ್ಯವೊಂದರ ಸಶಸ್ತ್ರ ಪೊಲೀಸ್ ಪಡೆಯ ಸದಸ್ಯರು (ರಾಜ್ಯದ ಹೊರಗೆ ಸೇವೆ ಸಲ್ಲಿಸುತ್ತಿದ್ದರೆ)
  2. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಮತದಾರರು,
  3. 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು, ಅಥವಾ ವಿಕಲಾಂಗ ವ್ಯಕ್ತಿಗಳು (PwD).

(ಅಂಚೆ ಮೂಲಕ ಮತಪತ್ರಗಳನ್ನು ಚಲಾಯಿಸಲು ಅಥವಾ ಮತದಾನ ಮಾಡಲು ರಾಜ್ಯದ ಸಾರ್ವಜನಿಕ ವಲಯದ ಕೆಲವು ವರ್ಗಗಳಿಗೆ ಅವಕಾಶ ನೀಡಿರುವುದು ಇದೇ ಮೊದಲು. ಈ ಮೊದಲು, ಸೇವಾ ನಿರತ ಮತದಾರರಿಗೆ ಮತ್ತು ಚುನಾವಣಾ ಕಾರ್ಯಕ್ಕಾಗಿ ನಿಯೋಜನೆಗೊಂಡವರಿಗೆ ಮಾತ್ರ ಈ ಸೌಲಭ್ಯವನ್ನು ಬಳಸಿಕೊಳ್ಳಲು ಅನುಮತಿಸಲಾಗಿತ್ತು).

  1. ಮುನ್ನೆಚ್ಚರಿಕೆ ಬಂಧನ ಕಾಯ್ದೆಯಡಿ ಬಂಧನದಲ್ಲಿರುವ ಮತದಾರರು.

ಮೇಲೆ ತಿಳಿಸಲಾದ ಮತದಾರರ ವರ್ಗಕ್ಕೆ ನೀಡಲಾದ ವಿನಾಯಿತಿಯನ್ನು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 60 ರ ಅಡಿಯಲ್ಲಿ ಒದಗಿಸಲಾಗಿದೆ.

ಅಂಚೆ ಮತದಾನ ಎಂದರೇನು?

ನಿರ್ಬಂಧಿತ ಮತದಾರ ವರ್ಗವು ಮಾತ್ರ ಅಂಚೆ ಮತದಾನವನ್ನು ಮಾಡಬಹುದು. ಈ ಸೌಲಭ್ಯದ ಮೂಲಕ, ಮತದಾರನು ತನ್ನ ಆದ್ಯತೆಯನ್ನು ಮತಪತ್ರದಲ್ಲಿ ದೂರದಿಂದಲೇ ದಾಖಲಿಸುವ ಮೂಲಕ ಮತ್ತು ಅದನ್ನು ಮತ ಎಣಿಕೆ ನಡೆಯುವ ಮೊದಲು ಚುನಾವಣಾ ಅಧಿಕಾರಿಗೆ ಮರಳಿ ಕಳುಹಿಸುವ ಮೂಲಕ ಮತ ಚಲಾಯಿಸಬಹುದು.

ಪ್ರಜಾ ಪ್ರಾತಿನಿಧ್ಯ ಕಾಯ್ದೆ,1951:

ಈ ಕಾಯಿದೆಯು ಭಾರತದಲ್ಲಿ ಚುನಾವಣೆಗಳ ನೈಜ ನಡವಳಿಕೆಯನ್ನು ಒದಗಿಸುತ್ತದೆ. ಇದು ಈ ಕೆಳಗಿನ ವಿಷಯಗಳೊಂದಿಗೆ ವ್ಯವಹರಿಸುತ್ತದೆ:

  1. ಸಂಸತ್ತಿನ ಉಭಯ ಸದನಗಳು ಮತ್ತು ರಾಜ್ಯ ವಿಧಾನಸಭೆಗಳ ಸದಸ್ಯರ ಅರ್ಹತೆ ಮತ್ತು ಅನರ್ಹತೆಯಂತಹ ವಿವರಗಳು,
  2. ಚುನಾವಣೆ ನಡೆಸಲು ಬೇಕಿರುವ ಆಡಳಿತ ಯಂತ್ರವನ್ನು ಸಜ್ಜುಗೊಳಿಸುವುದು.
  3. ರಾಜಕೀಯ ಪಕ್ಷಗಳ ನೋಂದಣಿ,
  4. ಚುನಾವಣೆಗಳನ್ನು ನಡೆಸುವುದು,
  5. ಚುನಾವಣಾ ತಕರಾರುಗಳು,
  6. ಭ್ರಷ್ಟ ಅಭ್ಯಾಸಗಳು ಮತ್ತು ಚುನಾವಣಾ ಅಪರಾಧಗಳು, ಮತ್ತು
  7. ಉಪಚುನಾವಣೆಗಳು.

 

ವಿಷಯಗಳು:ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ದೆಹಲಿ ಸರ್ಕಾರದ ದೇಶ್ ಕೆ ಮೆಂಟರ್ ಕಾರ್ಯಕ್ರಮ:


(Delhi govt’s Desh ke Mentor programme)

ಸಂದರ್ಭ:

ಇತ್ತೀಚೆಗಷ್ಟೇ ದೆಹಲಿ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ‘ದೇಶ್ ಕೆ ಮೆಂಟರ್’ ಬಗ್ಗೆ ವಿವಾದವೊಂದು ಭುಗಿಲೆದ್ದಿದೆ.

ಏನಿದು ಪ್ರಕರಣ?

ಇತ್ತೀಚೆಗೆ, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (NCPCR) ವು, “ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಎಲ್ಲಾ ಲೋಪದೋಷಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಸರಿಪಡಿಸುವವರೆಗೆ” ದೇಶ್ ಕೆ ಮೆಂಟರ್ ಎಂಬ ಹೆಸರಿನ ತನ್ನ ಪ್ರಮುಖ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ದೆಹಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ದೇಶ್ ಕೆ ಮೆಂಟರ್ ಕಾರ್ಯಕ್ರಮದ ಕುರಿತು:

ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಲಾದ ಈ ಕಾರ್ಯಕ್ರಮವು IX ರಿಂದ XII ತರಗತಿಗಳ ವಿದ್ಯಾರ್ಥಿಗಳನ್ನು ಸ್ವಯಂಪ್ರೇರಿತ ಮಾರ್ಗದರ್ಶಕ (Mentors) ರೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮವನ್ನು ‘ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ’ದ ತಂಡ ರಚಿಸಿದ ‘ಆ್ಯಪ್’ ಮೂಲಕ ನಡೆಸಲಾಗುತ್ತದೆ. ಈ ‘ಆ್ಯಪ್’ ಮೂಲಕ 18 ರಿಂದ 35 ವರ್ಷ ವಯಸ್ಸಿನ ಜನರು ಮಾರ್ಗದರ್ಶಕ/ಮೆಂಟರ್ ಆಗಲು ಸೈನ್ ಅಪ್ ಮಾಡಬಹುದು ಮತ್ತು ಪರಸ್ಪರ ಆಸಕ್ತಿಗಳ ಆಧಾರದ ಮೇಲೆ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಬಹುದು.

‘ಮೆಂಟರ್ಷಿಪ್’ ನ ಅಡಿಯಲ್ಲಿ, ಈ ಮಾರ್ಗದರ್ಶಕರು ನಿರ್ದಿಷ್ಟ ವಿದ್ಯಾರ್ಥಿಗೆ ಕನಿಷ್ಠ ಎರಡು ತಿಂಗಳ ಕಾಲ ನಿಯಮಿತ ಫೋನ್ ಕರೆಗಳ ಮೂಲಕ ಮಾರ್ಗದರ್ಶನ ನೀಡುತ್ತಾರೆ, ಇದನ್ನು ಐಚ್ಚಿಕವಾಗಿ, ಇನ್ನೂ ನಾಲ್ಕು ತಿಂಗಳವರೆಗೆ ಮುಂದುವರಿಸಬಹುದು.

ಈ ಕಾರ್ಯಕ್ರಮದ ಪ್ರಾಮುಖ್ಯತೆ:

‘ದೇಶ್ ಕೆ ಮೆಂಟರ್’ ಕಾರ್ಯಕ್ರಮದ ಹಿಂದಿನ ಮುಖ್ಯ ಆಲೋಚನೆಯೆಂದರೆ, ಯುವ ಮಾರ್ಗದರ್ಶಕರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿ ಆಯ್ಕೆಗಳನ್ನು ಸರಿಯಾಗಿ ಆಯ್ಕೆಮಾಡಲು, ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸಲು ಮತ್ತು ಈ ಎಲ್ಲದರ ಒತ್ತಡವನ್ನು ನಿಭಾಯಿಸಲು ಮಾರ್ಗದರ್ಶನ ನೀಡುವುದಾಗಿದೆ.

ಇಲ್ಲಿಯವರೆಗೆ 44,000 ಜನರು ಮಾರ್ಗದರ್ಶಕರಾಗಿ ಸಹಿ ಹಾಕಿದ್ದಾರೆ ಮತ್ತು ಅವರು 1.76 ಲಕ್ಷ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ‘ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ’ದ ಕಾಳಜಿಗಳು:

ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ (NCPCR) ವು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಐದು ಪ್ರಮುಖ ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ:

  1. ನಿಂದನೆಯಿಂದ/ದುರುಪಯೋಗದಿಂದ ರಕ್ಷಣೆ: ಮಕ್ಕಳಿಗಾಗಿ ಸಲಿಂಗ/ಅದೇ ಲಿಂಗದ (ಗಂಡು ಮಕ್ಕಳಿಗೆ ಪುರುಷ ಮತ್ತು ಹೆಣ್ಣುಮಕ್ಕಳಿಗೆ ಮಹಿಳಾ ಮಾರ್ಗದರ್ಶಕರು) ಮಾರ್ಗದರ್ಶಕರನ್ನು ನೇಮಿಸಿಕೊಳ್ಳುವುದು ದುರುಪಯೋಗದಿಂದ ಮಕ್ಕಳ ರಕ್ಷಣೆಯನ್ನು ಖಾತರಿಪಡಿಸುವುದಿಲ್ಲ ಎಂದು NCPCR ಹೇಳುತ್ತದೆ.
  2. ಪೊಲೀಸ್ ಪರಿಶೀಲನೆ ಕೊರತೆ: ‘ಮಾರ್ಗದರ್ಶಿ’ಗಳ ಪೊಲೀಸ್ ಪರಿಶೀಲನೆ ನಡೆಸದಿರುವ ಬಗ್ಗೆಯೂ ಆಯೋಗವೂ ಕಳವಳ ವ್ಯಕ್ತಪಡಿಸಿದೆ.
  3. ‘ಮಾರ್ಗದರ್ಶಕರ / ಮೆಂಟರ್ ಗಳ’ ಸೈಕೋಮೆಟ್ರಿಕ್ ಪರೀಕ್ಷೆ (Psychometric Test) ಯ ಬಗ್ಗೆ ವಿವಿಧ ಕಾಳಜಿಗಳು.
  4. ವಿದ್ಯಾರ್ಥಿ ಮತ್ತು ಮಾರ್ಗದರ್ಶಕರ ನಡುವಿನ ಸಂವಹನವನ್ನು ‘ಫೋನ್ ಕರೆಗಳಿಗೆ’ ಸೀಮಿತಗೊಳಿಸುವುದರಿಂದ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವುದಿಲ್ಲ ಎಂದು ಆಯೋಗ ಹೇಳುತ್ತದೆ. ಏಕೆಂದರೆ “ಮಕ್ಕಳಿಗೆ ಸಂಬಂಧಿಸಿದ ಅಪರಾಧಗಳನ್ನು ಫೋನ್ ಕರೆಗಳ ಮೂಲಕವೂ ಪ್ರಾರಂಭಿಸಬಹುದು.”
  5. NCPCR ಪ್ರಕಾರ, ಈ ಕಾರ್ಯಕ್ರಮವನ್ನು ಪ್ರಾರಂಭಿಸಲು ಪೋಷಕರ ಪೂರ್ವಾನುಮತಿ ಪಡೆಯುವುದು ಅತ್ಯಗತ್ಯ ಷರತ್ತಾದರೂ,“ಇಂತಹ ಸಂದರ್ಭಗಳಿಂದ ಮಕ್ಕಳನ್ನು ರಕ್ಷಿಸುವ ಮತ್ತು ತಡೆಯುವ ಜವಾಬ್ದಾರಿ ಮತ್ತು ಹೊಣೆಗಾರಿಕೆಯೂ ಇಲಾಖೆಯ ಮೇಲಿರುತ್ತದೆ”.ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ ‘ಪೋಷಕರ ಒಪ್ಪಿಗೆ’ಯನ್ನು ಒಂದು ಅನುಮತಿಯ ರೂಪದಲ್ಲಿ ಬಳಸಲಾಗುವುದಿಲ್ಲ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಅಂತರ್‌ಧರ್ಮೀಯ ವಿವಾಹಗಳ ಕಾನೂನಿನ ಕುರಿತು ಸರ್ಕಾರದಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ:


(Government response awaited on law on inter-faith marriages)

ಸಂದರ್ಭ:

ಇತ್ತೀಚೆಗೆ, ದೇಶದಲ್ಲಿ ‘ಅಂತರ್-ಧರ್ಮೀಯ ವಿವಾಹ’ (Inter-Faith Marriages)ಗಳನ್ನು ನಿಯಂತ್ರಿಸುವ ಕಾನೂನಾದ, ವಿಶೇಷ ವಿವಾಹ ಕಾಯ್ದೆ’ 1954 (Special Marriage Act – SMA) 1954)  ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಕಾಯ್ದೆಯಡಿ ವಿವಾಹವಾಗುವ ಯುವ ಜೋಡಿಗಳ ಜೀವಕ್ಕೆ ಅಪಾಯವಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

  1. ಕಾಯಿದೆಯ ಹಲವಾರು ನಿಬಂಧನೆಗಳನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ, ಆದರೂ ಸರ್ಕಾರ ಇನ್ನೂ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿಲ್ಲ.

ಏನಿದು ಪ್ರಕರಣ?

ವಿವಾಹ ನೋಂದಣಿಗೆ ಮುನ್ನ ಸಾರ್ವಜನಿಕ ಪ್ರಕಟಣೆಯನ್ನು ಕಡ್ಡಾಯವಾಗಿ ಪ್ರಕಟಿಸಲು ಅವಕಾಶ ಕಲ್ಪಿಸುವ ‘ವಿಶೇಷ ವಿವಾಹ ಕಾಯಿದೆ’ಯ (SMA) ಸೆಕ್ಷನ್ 6 ಮತ್ತು 7 ಅನ್ನು ಅಸಂಬದ್ಧ ಮತ್ತು ಅನಿಯಂತ್ರಿತವಾಗಿದೆ ಎಂದು ಆರೋಪಿಸುವ ಮೂಲಕ ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

  1. 30 ದಿನಗಳ ಅವಧಿಯು ದಂಪತಿಗಳ ರಕ್ತ ಸಂಬಂಧಿಕರಿಗೆ ಅಥವಾ ಕುಟುಂಬ ಸದಸ್ಯರಿಗೆ ಅಂತರ್ಜಾತಿ ಅಥವಾ ಅಂತರ್ ಧರ್ಮೀಯ ವಿವಾಹಗಳನ್ನು ವಿರೋಧಿಸಲು ಅಥವಾ ನಿರುತ್ಸಾಹ ಗೊಳಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಅರ್ಜಿದಾರರು ವಾದಿಸುತ್ತಾರೆ.

1954 ರ ವಿಶೇಷ ವಿವಾಹ ಕಾಯ್ದೆ,ಎಂದರೇನು?

‘ವಿಶೇಷ ವಿವಾಹ ಕಾಯ್ದೆ’ ಎನ್ನುವುದು ಯಾವುದೇ ಧಾರ್ಮಿಕ ಪದ್ಧತಿಗಳು ಅಥವಾ ಸಂಪ್ರದಾಯಗಳಿಲ್ಲದೆ ವಿವಾಹಗಳನ್ನು ಅನುಮತಿಸುವ ಕಾನೂನು ಆಗಿದೆ.

  1. ವಿವಿಧ ಜಾತಿ ಅಥವಾ ಧರ್ಮ ಅಥವಾ ರಾಜ್ಯಗಳ ಜನರು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗುತ್ತಾರೆ ಮತ್ತು ಇದನ್ನು ನೋಂದಣಿ ಮೂಲಕ ಮಾಡಲಾಗುತ್ತದೆ.
  2. ಈ ಕಾಯಿದೆಯ ಮುಖ್ಯ ಉದ್ದೇಶವೆಂದರೆ ಮದುವೆಗೆ ನೋಂದಣಿ ಮಾತ್ರ ಅಗತ್ಯವಿರುವ ಅಂತರ್-ಧರ್ಮೀಯ ವಿವಾಹಗಳನ್ನು ಪ್ರೋತ್ಸಾಹಿಸುವುದು ಮತ್ತು ಮದುವೆಯನ್ನು ಜಾತ್ಯತೀತ ಸಂಸ್ಥೆಯಾಗಿ ಸ್ಥಾಪಿಸುವುದು ಆಗಿದೆ.

ವಿಶೇಷ ವಿವಾಹ ಕಾಯ್ದೆಯಡಿ ಕಾರ್ಯವಿಧಾನ:

ವಿಶೇಷ ವಿವಾಹ ಕಾಯ್ದೆ-  (Special Marriage Act- SMA) ಅಡಿಯಲ್ಲಿ ವಿವಾಹಗಳನ್ನು ನೋಂದಾಯಿಸಲು ವಿವರವಾದ ಕಾರ್ಯವಿಧಾನವನ್ನು ಸೂಚಿಸಲಾಗಿದೆ.

  1. ಮದುವೆಗೆ ಅಪೇಕ್ಷಿಸುವ ಪಕ್ಷಗಳಲ್ಲಿ ಒಬ್ಬರು ಜಿಲ್ಲೆಯ ಮದುವೆ ಅಧಿಕಾರಿಗೆ ನೋಟಿಸ್ ನೀಡುವ ಅವಶ್ಯಕತೆಯಿದೆ, ಮತ್ತು ಇದಕ್ಕಾಗಿ, ಮದುವೆಗೆ ಅರ್ಜಿ ಸಲ್ಲಿಸುವ ಪಕ್ಷವು ನೋಟಿಸ್ ನೀಡಿದ ದಿನಾಂಕಕ್ಕಿಂತ ಮುಂಚಿತವಾಗಿ ಮೂವತ್ತು ದಿನಗಳಿಗಿಂತ ಹೆಚ್ಚು ಕಾಲ ಜಿಲ್ಲೆಯಲ್ಲಿ ವಾಸವಿರಬೇಕು.
  2. ಮದುವೆಗಾಗಿ ನೀಡಲಾದ ಮಾಹಿತಿಯನ್ನು ಮದುವೆ ಅಧಿಕಾರಿಯಿಂದ ಮದುವೆ ಮಾಹಿತಿ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುತ್ತದೆ ಮತ್ತು ಅಂತಹ ಪ್ರತಿಯೊಂದು ಸೂಚನೆಯ ಪ್ರತಿಯನ್ನು ಅವರ ಕಚೇರಿಯಲ್ಲಿ ಎದ್ದುಕಾಣುವ ಸ್ಪಷ್ಟವಾದ ಸ್ಥಳದಲ್ಲಿ ಮಾಹಿತಿಯನ್ನು ಮದುವೆ ಅಧಿಕಾರಿಯು ಪ್ರಕಟಿಸುತ್ತಾನೆ.
  3. ಮದುವೆ ಅಧಿಕಾರಿ ಪ್ರಕಟಿಸಿದ, ಮದುವೆಯ ಮಾಹಿತಿಯಲ್ಲಿ ಪಕ್ಷಗಳ ಹೆಸರುಗಳು, ಹುಟ್ಟಿದ ದಿನಾಂಕ, ವಯಸ್ಸು, ಉದ್ಯೋಗ, ಪೋಷಕರ ಹೆಸರುಗಳು ಮತ್ತು ವಿವರಗಳು, ವಿಳಾಸ, ಪಿನ್ ಕೋಡ್, ಗುರುತಿನ ಮಾಹಿತಿ, ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
  4. ಅದರ ನಂತರ, ಕಾಯಿದೆಯಡಿ ಒದಗಿಸಲಾದ ವಿವಿಧ ಆಧಾರದ ಮೇಲೆ ಒಬ್ಬರು ಮದುವೆಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಬಹುದು. 30 ದಿನಗಳ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದಿದ್ದರೆ, ಮದುವೆಯನ್ನು ತೀರ್ಮಾನಿಸಬಹುದು. ಒಬ್ಬ ವ್ಯಕ್ತಿಯು ಮದುವೆಗೆ ಆಕ್ಷೇಪಣೆ ಸಲ್ಲಿಸಿದರೆ, ಮದುವೆ ಅಧಿಕಾರಿ ಅದನ್ನು ಪರಿಶೀಲಿಸುತ್ತಾನೆ ಮತ್ತು ನಂತರ ಅವನು ಮದುವೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುತ್ತಾನೆ.

ಮದುವೆ ಮತ್ತು ಮತಾಂತರದ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯ:

  1. ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಹಲವಾರು ತೀರ್ಪುಗಳಲ್ಲಿ, ಜೀವನ ಸಂಗಾತಿಯನ್ನು ಆಯ್ಕೆ ಮಾಡುಕೊಳ್ಳುವ ವಯಸ್ಕರ ಸಂಪೂರ್ಣ ಹಕ್ಕಿನ ಕುರಿತು ಮಧ್ಯಪ್ರವೇಶಿಸಿಸಲು ರಾಜ್ಯ ಮತ್ತು ನ್ಯಾಯಾಲಯಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
  2. ಭಾರತದ ಸುಪ್ರೀಂ ಕೋರ್ಟ್, ಲಿಲಿ ಥಾಮಸ್ ಮತ್ತು ಸರಳಾ ಮುದ್ಗಲ್ ಎರಡೂ ಪ್ರಕರಣಗಳಲ್ಲಿ, ಧಾರ್ಮಿಕ ಮತಾಂತರಗಳು ನಂಬಿಕೆಯಿಲ್ಲದೆ ನಡೆದಿವೆ ಮತ್ತು ಕೆಲವು ಕಾನೂನು ಪ್ರಯೋಜನವನ್ನು ಪಡೆಯುವ ಏಕೈಕ ಉದ್ದೇಶಕ್ಕಾಗಿ ನಡೆದಿವೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ.
  3. ಅಲಹಾಬಾದ್ ಹೈಕೋರ್ಟ್, 2020 ರ ಸಾಲಮತ್ ಅನ್ಸಾರಿ-ಪ್ರಿಯಾಂಕ ಖರ್ವಾರ್ ಪ್ರಕರಣದ ತೀರ್ಪು ನೀಡುವಾಗ, ಸಂಗಾತಿಯನ್ನು ಆಯ್ಕೆ ಮಾಡುವ ಅಥವಾ ಆತನ/ಆಕೆಯ ಆಯ್ಕೆಯ ವ್ಯಕ್ತಿಯೊಂದಿಗೆ ಬದುಕುವ ಹಕ್ಕು ನಾಗರಿಕರ ‘ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿ’ನ (ಆರ್ಟಿಕಲ್ 21) ಭಾಗವಾಗಿದೆ.

ಟೀಕೆಗಳು:

  1. ಕುಟುಂಬ ದಬ್ಬಾಳಿಕೆಯ ತಂತ್ರಕ್ಕೆ ಗುರಿಯಾಗಬಹುದು.
  2. ಗೌಪ್ಯತೆ ಉಲ್ಲಂಘನೆ
  3. ಧಾರ್ಮಿಕ ಮತಾಂತರಕ್ಕೆ ಕಾರಣವಾಗಬಹುದು.

 

ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲು ಮನವಿ:


(Plea for marital rape to be criminalised)

ಸಂದರ್ಭ:

ದೆಹಲಿ ಹೈಕೋರ್ಟ್,ಭಾರತೀಯ ದಂಡ ಸಂಹಿತೆಯ’ ಸೆಕ್ಷನ್ 375 ರ ಅಡಿಯಲ್ಲಿ ನೀಡಲಾದ ‘ವಿನಾಯತಿ’ಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ಈ ಅಪವಾದ ಅಥವಾ ‘ವಿನಾಯತಿ’ಯ ಅಡಿಯಲ್ಲಿ, ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಹೆಚ್ಚಿದ್ದರೆ, ಹೆಂಡತಿಯೊಂದಿಗೆ ಗಂಡನು ನಡೆಸುವ ಬಲವಂತದ ಲೈಂಗಿಕ ಸಂಭೋಗವನ್ನು ‘ಅತ್ಯಾಚಾರ’ ಅಪರಾಧವೆಂದು  ಪರಿಗಣಿಸಲಾಗುವುದಿಲ್ಲ. ಈ ವಿನಾಯಿತಿಯನ್ನು ವೈವಾಹಿಕ ಅತ್ಯಾಚಾರ ವಿನಾಯಿತಿ” (Marital Rape Exception) ಎಂದೂ ಕರೆಯಲಾಗುತ್ತದೆ.

ಏನಿದು ಪ್ರಕರಣ?

ವೈವಾಹಿಕ ಅತ್ಯಾಚಾರ(Marital Rape)ವನ್ನು ಅಪರಾಧವೆಂದು ಘೋಷಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಗಳು 2012 ರಲ್ಲಿ ‘ನಿರ್ಭಯಾ ಸಾಮೂಹಿಕ ಅತ್ಯಾಚಾರ’ದ ಭೀಕರ ಘಟನೆಯ ನಂತರ ರಚಿಸಲಾದ ನ್ಯಾಯಮೂರ್ತಿ ‘ಜೆ ಎಸ್ ವರ್ಮಾ ಸಮಿತಿ’ (J. S. Verma Committee) ವರದಿಗೆ ಸರಕಾರ ಗಮನ ಹರಿಸಲು ನಿರಾಕರಿಸಿದ ಪರಿಣಾಮವಾಗಿದೆ.

  1. ಇಂತಹ ನಿರ್ಧಾರವು ಮದುವೆ ಎಂಬ ಸಂಸ್ಥೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಹೇಳಿದೆ, ಆದರೆ ತಜ್ಞರ ಪ್ರಕಾರ, ಖಾಸಗಿತನದ ಹಕ್ಕು’ ಸೇರಿದಂತೆ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳು ಸರ್ಕಾರದ ವಾದವನ್ನು ಅಸ್ಥಿರಗೊಳಿಸಿವೆ.

ಜೆಎಸ್ ವರ್ಮಾ ಸಮಿತಿಯ ಪ್ರಮುಖ ಶಿಫಾರಸುಗಳು:

ನ್ಯಾಯಮೂರ್ತಿ ವರ್ಮಾ ಸಮಿತಿಯು ಕಾನೂನಿನಲ್ಲಿ ‘ವೈವಾಹಿಕ ಅತ್ಯಾಚಾರಕ್ಕೆ ನೀಡಲಾದ ವಿನಾಯಿತಿ’ ಯನ್ನು ತೆಗೆದುಹಾಕಲು ಶಿಫಾರಸು ಮಾಡಿದೆ ಮತ್ತು “ಅಪರಾಧಿ ಮತ್ತು ಬಲಿಪಶುವಿನ ನಡುವಿನ ವೈವಾಹಿಕ ಅಥವಾ ಇತರ ಸಂಬಂಧವು ಅತ್ಯಾಚಾರ ಅಥವಾ ಲೈಂಗಿಕ-ಹಿಂಸೆಯ ಅಪರಾಧಗಳಿಂದ ರಕ್ಷಣೆ ಒದಗಿಸುವ ಮಾನ್ಯವಾದ  ಕಾನೂನು ಆಧಾರವಲ್ಲ” ಎಂಬುದನ್ನು ಸಹ ಕಾನೂನು ನಿರ್ದಿಷ್ಟಪಡಿಸಬೇಕು ಎಂದು ಹೇಳಿದೆ.

ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಘೋಷಿಸುವುದರ ವಿರುದ್ಧ ಸರ್ಕಾರದ ವಾದಗಳು:

ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ‘ವೈವಾಹಿಕ ಅತ್ಯಾಚಾರ’ವು ‘ವಿವಾಹ ಸಂಸ್ಥೆಯನ್ನು ನಾಶಪಡಿಸುವ’ ಘಟನೆಯಾಗದಂತೆ ಮತ್ತು ‘ಗಂಡಂದಿರಿಗೆ ಕಿರುಕುಳ ನೀಡುವ ಸುಲಭ ಸಾಧನ’ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.

  1. ಸರ್ಕಾರವು ಮತ್ತಷ್ಟು ಮುಂದುವರೆದು ಹೇಳಿಕೆ ನೀಡಿದ್ದು, “ವೈವಾಹಿಕ ಅತ್ಯಾಚಾರದಂತೆ ಹೆಂಡತಿಗೆ ತೋರುವ ಲೈಂಗಿಕ ಸಸಂಬಂಧಗಳು ಇನ್ನೊಬ್ಬರಿಗೆ ಆ ರೀತಿ ಅನ್ನಿಸದಿರಬಹುದು.”

ಈ ವಿಷಯದ ಕುರಿತು ಸರ್ಕಾರದ ನಿಲುವನ್ನು ಪ್ರಶ್ನಿಸುವ ಇತ್ತೀಚಿನ ತೀರ್ಪುಗಳು:

  1. ಇಂಡಿಪೆಂಡೆಂಟ್ ಥಾಟ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ (Independent Thought vs. Union of India) ಪ್ರಕರಣಅಕ್ಟೋಬರ್ 2017 ರ ತೀರ್ಪು. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ‘ಅಪ್ರಾಪ್ತ ಪತ್ನಿಯ ಮೇಲಿನ ಅತ್ಯಾಚಾರ’ ವನ್ನು ಅಪರಾಧ ಎಂದು ಘೋಷಿಸಿದೆ.
  2. ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ (ಸೆಪ್ಟೆಂಬರ್ 2018), ಸಂವಿಧಾನವು ಖಾತರಿಪಡಿಸಿದ ಪ್ರತಿಯೊಬ್ಬ ವ್ಯಕ್ತಿಯ ಖಾಸಗಿತನದ ಮೂಲಭೂತ ಹಕ್ಕನ್ನು ಸರ್ವೋಚ್ಚ ನ್ಯಾಯಾಲಯವು ಸರ್ವಾನುಮತದಿಂದ ಗುರುತಿಸಿದೆ.
  3. ಜೋಸೆಫ್ ಶೈನ್ vs ಯೂನಿಯನ್ ಆಫ್ ಇಂಡಿಯಾ’ ಪ್ರಕರಣ (ಅಕ್ಟೋಬರ್ 2018). ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ‘ವ್ಯಭಿಚಾರ’ (Adultery) ವನ್ನು ಅಪರಾಧ ಎಂದು ಘೋಷಿಸುವ ಮೂಲಕ ಖಂಡಿಸಿತ್ತು.

ಈ ಸಂದರ್ಭದಲ್ಲಿ ಸಂಪೂರ್ಣ ಮೇಲ್ವಿಚಾರಣೆ ಮತ್ತು ಸುಧಾರಣೆಯ ಅಗತ್ಯತೆ:

‘ವೈವಾಹಿಕ ಅತ್ಯಾಚಾರ ವಿನಾಯಿತಿ’ಯ(Marital Rape Exception) ಮೂಲವು ‘ಇಂಗ್ಲೆಂಡ್‌ನ ಕ್ರಿಮಿನಲ್ ಕಾನೂನು’ ಕುರಿತು ಬರೆಯಲಾದ ಪ್ರಮುಖ ಗ್ರಂಥವಾದ ‘ಹಿಸ್ಟರಿ ಆಫ್ ದಿ ಪ್ಲೀಸ್ ಆಫ್ ದಿ ಕ್ರೌನ್’  (History of the Pleas of the Crown)  ನಲ್ಲಿದೆ.

  1. ಈ ಪುಸ್ತಕದಲ್ಲಿ ಆಗಿನ ಬ್ರಿಟಿಷ್ ಮುಖ್ಯ ನ್ಯಾಯಮೂರ್ತಿ ಮ್ಯಾಥ್ಯೂ ಹೇಲ್ ಅವರು 1736 ರಲ್ಲಿ ಹೀಗೆ ಹೇಳಿದರು: “ಪತಿಯು ತನ್ನ ಕಾನೂನುಬದ್ಧ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿದರೆ ತಪ್ಪಿತಸ್ಥನಾಗಿರುವುದಿಲ್ಲ, ಏಕೆಂದರೆ ಪರಸ್ಪರ ವೈವಾಹಿಕ ಒಪ್ಪಿಗೆ ಮತ್ತು ಒಪ್ಪಂದದ ಅಡಿಯಲ್ಲಿ ಹೆಂಡತಿಯೇ ತನ್ನ ಪತಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುತ್ತಾಳೆ, ಅದರಿಂದ ಅವಳು ಸ್ವಯಂ ಪ್ರೇರಣೆಯ ಮೂಲಕ ಇದರಿಂದ ಹಿಂದೆ ಸರಿಯಲು ಸಾಧ್ಯವಿಲ್ಲ.”
  2. 1991 ರಲ್ಲಿ ಇಂಗ್ಲೆಂಡ್‌ನ ಮೇಲ್ಮನೆ, ಹೌಸ್ ಆಫ್ ಲಾರ್ಡ್ಸ್‌ನಲ್ಲಿ, ಮದುವೆಯನ್ನು ‘ಸಮಾನರ ಪಾಲುದಾರಿಕೆ’ ಎಂದು ಘೋಷಿಸಲಾಯಿತು ಮತ್ತು ‘ಹೆಂಡತಿಯನ್ನು ಗಂಡನ ಅಧೀನ ಆಸ್ತಿ’ ಎಂದು ಪರಿಗಣಿಸುವ ಕಲ್ಪನೆಯನ್ನು ತಿರಸ್ಕರಿಸಲಾಯಿತು, ಅಂದಿನಿಂದ, ಈ ವಿನಾಯಿತಿಯನ್ನು ಇಂಗ್ಲೆಂಡ್ ಸೇರಿದಂತೆ ಹಲವು ನ್ಯಾಯವ್ಯಾಪ್ತಿಗಳಲ್ಲಿ ಹಿಂಪಡೆಯಲಾಗಿದೆ.
  3. ಅಲ್ಲದೆ, ವಿಶ್ವ ಬ್ಯಾಂಕ್ ಪ್ರಕಾರ, ನೇಪಾಳ ಸೇರಿದಂತೆ ಕನಿಷ್ಠ 78 ದೇಶಗಳು ‘ವೈವಾಹಿಕ ಅತ್ಯಾಚಾರ’ವನ್ನು ನಿರ್ದಿಷ್ಟವಾಗಿ ಅಪರಾಧ ಎಂದು ಘೋಷಿಸುವ ಕಾನೂನುಗಳನ್ನು ಹೊಂದಿವೆ.

ಈ ನಿಟ್ಟಿನಲ್ಲಿ ಇರುವ ಕಾನೂನು ನಿಬಂಧನೆಗಳು:

ಪ್ರಸ್ತುತ, ‘ವೈವಾಹಿಕ ಅತ್ಯಾಚಾರ’ವನ್ನು ಹಿಂದೂ ವಿವಾಹ ಕಾಯಿದೆ’, 1955, ‘ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಕಾಯಿದೆ’, 1937 (ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅರ್ಜಿ ಕಾಯಿದೆ, 1937)( Muslim Personal Law (Shariat) Application Act, 1937) ಮತ್ತು ‘ವಿಶೇಷ ವಿವಾಹ ಕಾಯಿದೆ’, 1954 ರಲ್ಲಿ ವಿಚ್ಛೇದನಕ್ಕೆ ಆಧಾರವಾಗಿ ಪರಿಗಣಿಸಲಾಗಿಲ್ಲ, ಮತ್ತು ಇದನ್ನು ವಿಚ್ಛೇದನಕ್ಕೆ ಆಧಾರವಾಗಿ ಬಳಸಲಾಗುವುದಿಲ್ಲ ಅಥವಾ ಗಂಡನ ವಿರುದ್ಧ ಕ್ರೌರ್ಯದ ಪ್ರಕರಣವನ್ನು ದಾಖಲಿಸಲು ಬಳಸಲಾಗುವುದಿಲ್ಲ.

  1. ಐಪಿಸಿಯ ಸೆಕ್ಷನ್ 375 ,“ಪತ್ನಿಯ ವಯಸ್ಸು 15 ವರ್ಷಕ್ಕಿಂತ ಕಡಿಮೆಯಿಲ್ಲದಿದ್ದರೆ, ಪುರುಷನು ತನ್ನ ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಸಂಪರ್ಕವು ಅತ್ಯಾಚಾರವಲ್ಲ” ಎಂದು ಹೇಳುತ್ತದೆ.
  2. ಯಾವುದೇ ಕಾನೂನು ಅಥವಾ ಶಾಸನವು ‘ವೈವಾಹಿಕ ಅತ್ಯಾಚಾರ’ವನ್ನು ಗುರುತಿಸುವುದಿಲ್ಲ.
  3. ಕೌಟುಂಬಿಕ ಹಿಂಸಾಚಾರದ ವಿರುದ್ಧ ಮಹಿಳೆಯರ ರಕ್ಷಣೆ ಕಾಯಿದೆ, 2005’ಅಡಿಯಲ್ಲಿ ಒದಗಿಸಲಾದ ನಾಗರಿಕ ಪರಿಹಾರಗಳನ್ನು ಮಾತ್ರ ಸಂತ್ರಸ್ತರು ಆಶ್ರಯಿಸುತ್ತಾರೆ.

ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧ ಎಂದು ಘೋಷಿಸುವುದು ಅವಶ್ಯಕ ಏಕೆಂದರೆ;

  1. ತಮ್ಮ ಹೆಂಡತಿಯರೊಂದಿಗೆ ಸಮ್ಮತಿಯಿಲ್ಲದ ಸಂಭೋಗವನ್ನು ಹೊಂದುವುದು ಮತ್ತು ಬಲಪ್ರಯೋಗದ ಮೂಲಕ ತಮ್ಮ ಹೆಂಡತಿಯರನ್ನು ಲೈಂಗಿಕ ಕ್ರಿಯೆಗೆ ಬಲವಂತಪಡಿಸುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
  2. ಮದುವೆಯು ‘ಸಮಾನ ಸಂಬಂಧಗಳ’ ಒಪ್ಪಂದವಾಗಿದೆ, ಮತ್ತು ಅದು ಎಲ್ಲದಕ್ಕೂ ಒಂದು ಬಾರಿ ನೀಡುವ ಒಪ್ಪಿಗೆಯಲ್ಲ.
  3. ಕಾನೂನಿನಲ್ಲಿ ಪತಿಗೆ ಅತ್ಯಾಚಾರ ಎಸಗಲು ನೀಡಿದ ಕಾನೂನು ವಿನಾಯಿತಿಯು ಪುರುಷರಿಗೆ ಅಸಮಾನ ಸವಲತ್ತುಗಳನ್ನು ಒದಗಿಸುತ್ತದೆ.
  4. ವೈವಾಹಿಕ ಅತ್ಯಾಚಾರಕ್ಕೆ ಬಲಿಯಾದ ಮಹಿಳೆಯರು/ಸಂತ್ರಸ್ತರು ದೀರ್ಘಕಾಲದ  ಮನೋವೈಜ್ಞಾನಿಕ ಆಘಾತವನ್ನು ಅನುಭವಿಸುತ್ತಾರೆ.
  5. ಸೆಕ್ಷನ್ 375 ರ ಅಡಿಯಲ್ಲಿ ನೀಡಲಾದ ವಿನಾಯಿತಿಯು ಸಂವಿಧಾನದ 14, 15, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಮಹಿಳೆಯರಿಗೆ ನೀಡಲಾಗಿರುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ.
  6. ಭಾರತೀಯ ಸಮಾಜದ ಪಿತೃಪ್ರಧಾನ ಸ್ವಭಾವವು ಪುರುಷರ ಮನಸ್ಸಿನಲ್ಲಿ ನೆಲೆಗೊಂಡಿದೆ, ತಮ್ಮ ಗಂಡಂದಿರು ಲೈಂಗಿಕತೆಯನ್ನು ಬಯಸಿದಾಗ ಅದನ್ನು ಮಹಿಳೆಯರು ಪಾಲಿಸಬೇಕೆಂದು ನಿರೀಕ್ಷಿಸಲಾಗಿದೆ.
  7. ವೈವಾಹಿಕ ಅತ್ಯಾಚಾರದಿಂದ ಬಳಲುತ್ತಿರುವ ಮಹಿಳೆ ದೈಹಿಕ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ, ಜೊತೆಗೆ ತನ್ನ ಘನತೆಗೆ ದಕ್ಕೆಯಾವುದರಿಂದ ಆಕೆಯು ಮಾನಸಿಕ ಆಘಾತವನ್ನು ಅನುಭವಿಸಬೇಕಾಗುತ್ತದೆ.
  8. ಐಪಿಸಿ ಸೆಕ್ಷನ್ 375 ರಲ್ಲಿ ನೀಡಿರುವ ಈ ವಿನಾಯಿತಿಯನ್ನು ಕಳೆದ 70 ವರ್ಷಗಳಲ್ಲಿ ಎಂದಿಗೂ ಮುಟ್ಟಲಾಗಿಲ್ಲ.
  9. ಬಾಲ್ಯವಿವಾಹಗಳ ವ್ಯಾಪಕತೆ, ಮತ್ತು ಅನೇಕ ಸಂದರ್ಭಗಳಲ್ಲಿ ಮಹಿಳೆಯರ ಬಲವಂತದ ಮದುವೆಯ ವಿಷಯವು, ಸಮಾಜದಲ್ಲಿ ಸಾಮಾನ್ಯ ವಿದ್ಯಮಾನವಾಗಿ ಹೋಗಿದೆ.

ವೈವಾಹಿಕ ಅತ್ಯಾಚಾರ’ವನ್ನು ಅಪರಾಧವೆಂದು ಘೋಷಿಸುವುದರ ವಿರುದ್ಧದ ವಾದಗಳು:

  1. ‘ವೈವಾಹಿಕ ಅತ್ಯಾಚಾರ’ವನ್ನು ಅಪರಾಧವೆಂದು ಘೋಷಿಸುವುದು,“ಪತಿಗೆ ಕಿರುಕುಳ ನೀಡುವ ಸುಲಭ ಮಾರ್ಗವಾಗಿರುವುದರ ಜೊತೆಗೆ ಮದುವೆ ಎಂಬ ಸಂಸ್ಥೆಯನ್ನು ಅಸ್ಥಿರಗೊಳಿಸಬಹುದು”.
  2. ವರದಕ್ಷಿಣೆ ಕಾಯ್ದೆ ಎಂದು ಕರೆಯಲ್ಪಡುವ ‘ಐಪಿಸಿಯ ಸೆಕ್ಷನ್ 498 ಎ’ ಅನ್ನು “ಗಂಡಂದಿರಿಗೆ ಕಿರುಕುಳ ನೀಡಲು” ಸುಲಭ ಸಾಧನವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.
  3. ‘ವೈವಾಹಿಕ ಅತ್ಯಾಚಾರ’ವನ್ನು ಇತರ ದೇಶಗಳು, ಹೆಚ್ಚಾಗಿ ಪಾಶ್ಚಿಮಾತ್ಯ ದೇಶಗಳು ಅಪರಾಧಿಕರಣ ಗೊಳಿಸಿವೆ. ಇದರರ್ಥ ಇವರನ್ನು ಕುರುಡಾಗಿ ಅನುಸರಿಸುವ ಮೂಲಕ ಭಾರತವೂ ಅದನ್ನೇ ಮಾಡಬೇಕು ಎಂದಲ್ಲ.
  4. ಅತ್ಯಾಚಾರ ಕಾನೂನುಗಳನ್ನು ಪರಿಶೀಲಿಸಲು ರಚಿಸಲಾದ ಕಾನೂನು ಆಯೋಗವು ಈ ಸಮಸ್ಯೆಯನ್ನು ಪರಿಶೀಲಿಸಿದೆ ಮತ್ತು ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವ ಬಗ್ಗೆ ಯಾವುದೇ ಶಿಫಾರಸುಗಳನ್ನು ಮಾಡಿಲ್ಲ.
  5. ಹೆಂಡತಿಗೆ ವೈಯಕ್ತಿಕವಾಗಿ, ವೈವಾಹಿಕ ಅತ್ಯಾಚಾರದಂತೆ ತೋರುವ ಲೈಂಗಿಕ ಸಸಂಬಂಧಗಳು ಇನ್ನೊಬ್ಬರಿಗೆ ಆ ರೀತಿ ಅನ್ನಿಸದಿರಬಹುದು.
  6. ಪುರುಷ ಮತ್ತು ಅವನ ಸ್ವಂತ ಹೆಂಡತಿಯ ನಡುವಿನ ಲೈಂಗಿಕ ಕ್ರಿಯೆಗಳ ಸಂದರ್ಭದಲ್ಲಿ ಯಾವುದೇ ಶಾಶ್ವತವಾದ ಪುರಾವೆಗಳು ಕಂಡುಬರುವುದಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಆರನೇ ಸಾಮೂಹಿಕ ವಿನಾಶ:


(Sixth mass extinction)

ಸಂದರ್ಭ:

ಹೊಸ ಸಂಶೋಧನೆಯ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಆರನೇ ಸಾಮೂಹಿಕ ಅಳಿವು/ವಿನಾಶವು’ (Sixth Mass Extinction) ನಾಗರಿಕತೆಯ ಅಸ್ತಿತ್ವಕ್ಕೆ ಅತ್ಯಂತ ಗಂಭೀರವಾದ ಪರಿಸರ ಬೆದರಿಕೆಗಳಲ್ಲಿ ಒಂದಾಗಿದೆ.

  1. ಒಮ್ಮೆ ಭೂಮಿಯ ಮೇಲೆ ಎರಡು ಮಿಲಿಯನ್ ತಿಳಿದಿರುವ ಪ್ರಜಾತಿಗಳು ನೆಲೆಸಿದ್ದವು. ಅಧ್ಯಯನದ ಪ್ರಕಾರ, 1500 ರ ನಂತರ, ಈ ಪ್ರಜಾತಿಗಳಲ್ಲಿ ಸುಮಾರು 7.5%-13% ಪ್ರಜಾತಿಗಳು ಅಳಿದು ಹೋಗಿವೆ. ಅಳಿದುಹೋದ ವಿವಿಧ ಪ್ರಜಾತಿಗಳ ಸಂಖ್ಯೆಯು ಸುಮಾರು 150,000 ರಿಂದ 260,000 ವರೆಗೆ ಇರಬಹುದು.

ಪ್ರಜಾತಿಗಳ ಸಾಮೂಹಿಕ ಅಳಿವು’ ಎಂದರೇನು?

ಸಾಮೂಹಿಕ ವಿನಾಶವು ಪ್ರಜಾತಿಯ ಅಳಿವಿನ ದರದಲ್ಲಿನ ಗಮನಾರ್ಹ ಹೆಚ್ಚಳವನ್ನು ಅಥವಾ ಕಡಿಮೆ ಭೌಗೋಳಿಕ ಅವಧಿಯಲ್ಲಿ ಭೂಮಿಯ 3ನೇ 4 ಭಾಗಕ್ಕಿಂತಲೂ ಹೆಚ್ಚಿನ ಪ್ರಜಾತಿಗಳ ಅಳಿವಿನ ಪ್ರಮಾಣವನ್ನು ಸೂಚಿಸುತ್ತದೆ.

ಇಲ್ಲಿಯವರೆಗೆ, ಭೂಮಿಯ ಸಂಪೂರ್ಣ ಇತಿಹಾಸದಲ್ಲಿ, ಐದು ಸಾಮೂಹಿಕ ಅಳಿವಿನ ಘಟನೆಗಳು ಸಂಭವಿಸಿವೆ.

ಕಾರಣ ಮತ್ತು ಪರಿಣಾಮಗಳು:

  1. ಕಳೆದ 450 ಮಿಲಿಯನ್ ವರ್ಷಗಳಲ್ಲಿ ‘ಸಾಮೂಹಿಕ ಅಳಿವಿನ’ ಐದು ಘಟನೆಗಳು, ಈ ಹಿಂದೆ ಅಸ್ತಿತ್ವದಲ್ಲಿದ್ದ ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಯ ಜಾತಿಗಳ 70-95 ಪ್ರತಿಶತದಷ್ಟು ನಾಶಕ್ಕೆ ಕಾರಣವಾಯಿತು.
  2. ಈ ಅಳಿವಿನ/ವಿನಾಶದ ಘಟನೆಗಳಿಗೆ ಪ್ರಖಂಡ ಜ್ವಾಲಾಮುಖಿ ಸ್ಫೋಟಗಳು, ಸಾಗರ ಆಮ್ಲಜನಕದ ಕೊರತೆ ಅಥವಾ ಕ್ಷುದ್ರಗ್ರಹಗಳೊಂದಿಗೆ ಘರ್ಷಣೆಯಂತಹ ಪರಿಸರದ ಮೇಲೆ ಉಂಟಾದ ‘ವಿಪತ್ತಿನ ಬದಲಾವಣೆಗಳು’ ಕಾರಣವೆಂದು ಪರಿಗಣಿಸಲಾಗಿದೆ.
  3. ಪ್ರತಿಯೊಂದು ಅಳಿವಿನ ನಂತರ, ಈ ವಿದ್ಯಮಾನದ ಮೊದಲು ಅಸ್ತಿತ್ವದಲ್ಲಿದ್ದ ಪ್ರಜಾತಿಗಳಿಗೆ ಹೋಲಿಸಬಹುದಾದ ಪ್ರಜಾತಿಗಳನ್ನು ಪುನರುತ್ಪಾದಿಸಲು ಮತ್ತು ಮರಳಿ ಪಡೆಯಲು ಲಕ್ಷಾಂತರ ವರ್ಷಗಳನ್ನು ತೆಗೆದುಕೊಂಡಿತು.

ಆರನೇ ಸಾಮೂಹಿಕ ವಿನಾಶ ಎಂದರೇನು?

ಪ್ರಸ್ತುತ ಜಾರಿಯಲ್ಲಿರುವ, ಆರನೇ ಸಾಮೂಹಿಕ ಅಳಿವನ್ನು ಆಂಥ್ರೊಪೊಸೀನ್ (Anthropocene) ವಿನಾಶ ಎಂದು ಕರೆಯಲಾಗುತ್ತದೆ.

ಸಂಶೋಧಕರು ಇದನ್ನು ಅತ್ಯಂತ ಗಂಭೀರ ಪರಿಸರ ಸಮಸ್ಯೆ’ ಎಂದು ಕರೆದಿದ್ದಾರೆ ಏಕೆಂದರೆ ಈ ಅಳಿವಿನ ಜಾತಿಯ ನಷ್ಟವು ಶಾಶ್ವತವಾಗಿರುತ್ತದೆ.

ಇದಕ್ಕೆ ಮನುಷ್ಯ ಏಕೆ ಹೊಣೆಗಾರಣಾಗಿದ್ದಾನೆ?

ಅನೇಕ ಜೀವಂತ ಪ್ರಜಾತಿಗಳಿಗೆ ‘ಅಭೂತಪೂರ್ವ ಬೆದರಿಕೆ’ಯಾಗಿರುವ ಕಾರಣವೆಂದರೆ ಮಾನವರು,ಮತ್ತು ಹೆಚ್ಚುತ್ತಿರುವ ಅವರ ಜನಸಂಖ್ಯೆ ಆಗಿದೆ.

11,000 ವರ್ಷಗಳ ಹಿಂದೆ ಮಾನವ ಪೂರ್ವಜರಿಂದ ಕೃಷಿಯನ್ನು ಅಭಿವೃದ್ಧಿಪಡಿಸಿದಾಗಿನಿಂದ, ಜಾತಿಗಳು ವಿನಾಶ ಹೊಂದುತ್ತಲೇ ಇವೆ. ಅಂದಿನಿಂದ, ಮಾನವ ಜನಸಂಖ್ಯೆಯು ಸುಮಾರು 1 ಮಿಲಿಯನ್‌ನಿಂದ 7 ಬಿಲಿಯನ್‌ಗೆ ಏರಿದೆ.

ಸಂಭವಿಸಿದ ಮತ್ತು ಸಂಭವಿಸುತ್ತಿರುವ ಬದಲಾವಣೆಗಳು:

ಕಳೆದ ಶತಮಾನದಲ್ಲಿ, ಭೂಮಿಯ ಮೇಲಿನ 400 ಕ್ಕೂ ಹೆಚ್ಚು ಕಶೇರುಕ ಪ್ರಭೇದಗಳು ಅಳಿದು ಹೋಗಿವೆ.ಇವುಗಳು ವಿಕಸನ ಹೊಂದಲು ವಿಕಸನದ ಸಾಮಾನ್ಯ ಹಾದಿಯಲ್ಲಿ 10000 ವರ್ಷಗಳನ್ನು ತೆಗೆದುಕೊಂಡಿದ್ದವು.

ಕಳೆದ 100 ವರ್ಷಗಳಲ್ಲಿ, 177 ಜಾತಿಯ ದೊಡ್ಡ ಸಸ್ತನಿಗಳಲ್ಲಿ, ಹೆಚ್ಚಿನ ಜಾತಿಗಳು ತಮ್ಮ ಭೌಗೋಳಿಕ ಆವಾಸಸ್ಥಾನದ 80 ಪ್ರತಿಶತಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿವೆ ಮತ್ತು 27,000 ಕ್ಕಿಂತ ಹೆಚ್ಚು ಕಶೇರುಕ ಪ್ರಭೇದಗಳಲ್ಲಿ 32 ಪ್ರತಿಶತ  ಕಶೇರುಕಗಳು ಅಳಿದು ಹೋಗಿವೆ.

ಪ್ರಸ್ತುತ ಅಳಿವಿನ ಅಂಚಿನಲ್ಲಿರುವ ಅಥವಾ ಅಳಿವಿನ ಹಂತವನ್ನು ತಲುಪಿರುವ ಅನೇಕ ಪ್ರಭೇದಗಳು ಕಾನೂನು ಮತ್ತು ಕಾನೂನುಬಾಹಿರ ಅಕ್ರಮ ವನ್ಯಜೀವಿ ವ್ಯಾಪಾರದಿಂದಾಗಿ ನಾಶವಾಗುತ್ತಿವೆ.

ಒಂದು ಅಥವಾ ಎರಡು ದಶಕಗಳ ಹಿಂದೆ ತುಲನಾತ್ಮಕವಾಗಿ ಸುರಕ್ಷಿತವಾಗಿದ್ದ ಚಿರತೆಗಳು, ಸಿಂಹಗಳು ಮತ್ತು ಜಿರಾಫೆಗಳಂತಹ ಅನೇಕ ಜಾತಿಯ ಸಸ್ತನಿಗಳು ಈಗ ಅಳಿವಿನಂಚಿನಲ್ಲಿವೆ. ಕಾಡಿನಲ್ಲಿ ಸಿಂಹಗಳ ಸಂಖ್ಯೆ ಕೇವಲ 20,000 ಕ್ಕಿಂತ ಕಡಿಮೆ, ಚಿರತೆಗಳ ಜನಸಂಖ್ಯೆಯು ಕೇವಲ 7,000 ಕ್ಕಿಂತ ಕಡಿಮೆ, ದೈತ್ಯ ಪಾಂಡಾಗಳ ಸಂಖ್ಯೆ 500 ರಿಂದ 1,000 ಮತ್ತು ಸುಮಾತ್ರಾನ್ ಘೇಂಡಾಮೃಗಗಳ ಸಂಖ್ಯೆ ಸುಮಾರು 250 ಆಗಿದೆ.

ಅಪಾಯಕ್ಕೊಳಗಾಗಬಲ್ಲ(ದುರ್ಬಲ- Vulnerable regions) ಪ್ರದೇಶಗಳು:

ಉಷ್ಣವಲಯದ ಪ್ರದೇಶಗಳಲ್ಲಿ ಪ್ರಜಾತಿಗಳ ಸಂಖ್ಯೆಯಲ್ಲಿ ಹೆಚ್ಚಿನ ಕಡಿತವನ್ನು ಗಮನಿಸಲಾಗಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ, ದೊಡ್ಡ ದೇಹದ ಸಸ್ತನಿ ಪ್ರಭೇದಗಳು ತಮ್ಮ ನಾಲ್ಕನೇ ಐದು ಭಾಗದಷ್ಟು ಪ್ರದೇಶವನ್ನು ಕಳೆದುಕೊಂಡಿವೆ.

  1. ಸಮಶೀತೋಷ್ಣ ಪ್ರದೇಶಗಳಲ್ಲಿ ಅಳಿದು ಹೋಗುತ್ತಿರುವ ಪ್ರಜಾತಿಗಳ ಸಂಖ್ಯೆಯು ತುಲನಾತ್ಮಕವಾಗಿ ಕಡಿಮೆಯಾಗಿದೆ, ಆದರೆ ಅಳಿವಿನ ಶೇಕಡಾವಾರು ಪ್ರಮಾಣವು ‘ಉಷ್ಣವಲಯದ ಪ್ರದೇಶಗಳಿಗೆ’ ಸಮಾನವಾಗಿದೆ ಅಥವಾ ಹೆಚ್ಚಿನದಾಗಿದೆ.
  2. ಒಮ್ಮೆ ನಮ್ಮ ಗ್ರಹದಲ್ಲಿ ಕಂಡುಬರುತ್ತಿದ್ದ ಅರ್ಧಕ್ಕಿಂತ ಹೆಚ್ಚು ಜೀವಿಗಳು ಪ್ರಸ್ತುತ ಅಸ್ತಿತ್ವದಲ್ಲಿಲ್ಲ. ಈ ನಷ್ಟವನ್ನು “ಭೂಮಿಯ ಇತಿಹಾಸದಲ್ಲಿ ಜೈವಿಕ ವೈವಿಧ್ಯತೆಯ ಅತಿ ದೊಡ್ಡ ನಷ್ಟ” ಎಂದು ವಿವರಿಸಲಾಗಿದೆ.

ಪ್ರಜಾತಿಗಳ ಅಳಿವಿನ/ವಿನಾಶದ ಪರಿಣಾಮಗಳು:

  1. ಜಾತಿಯ ಅಳಿವಿನ ಪ್ರಭಾವವು ಬೆಳೆ ಪರಾಗಸ್ಪರ್ಶ ಪ್ರಕ್ರಿಯೆಯ ಕಡಿತ ಮತ್ತು ನೀರಿನ ಶುದ್ಧೀಕರಣ’ ಸಾಮರ್ಥ್ಯದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.
  2. ಒಂದು ಪ್ರಭೇದವು ಪರಿಸರ ವ್ಯವಸ್ಥೆಯಲ್ಲಿ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಿದರೆ, ಆ ಜಾತಿಯ ನಷ್ಟವು ಆಹಾರ ಸರಪಳಿಯ ಮೇಲೆ ಪರಿಣಾಮ ಬೀರುತ್ತದೆ, ಇದು ಇತರ ಪ್ರಜಾತಿಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ.
  3. ಈ ಅಳಿವಿನ ಪರಿಣಾಮಗಳು ಮುಂಬರುವ ದಶಕಗಳಲ್ಲಿ ಕೆಟ್ಟದಾಗಿರುತ್ತದೆ, ಪರಿಣಾಮವಾಗಿ ಆನುವಂಶಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸವು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಬದಲಾಯಿಸುತ್ತದೆ.
  4. ಯಾವುದೇ ಜನಸಂಖ್ಯೆ ಅಥವಾ ಪ್ರಜಾತಿಗಳಲ್ಲಿನ ಸದಸ್ಯರ ಸಂಖ್ಯೆಯು ಬಹಳ ಕಡಿಮೆಯಾದಾಗ, ಪರಿಸರ ವ್ಯವಸ್ಥೆಯ ಕಾರ್ಯಗಳು ಮತ್ತು ಸೇವೆಗಳಿಗೆ ಅದರ ಕೊಡುಗೆಯು ಅತ್ಯಲ್ಪವಾಗುತ್ತದೆ ಮತ್ತು ಅದರ ಆನುವಂಶಿಕ ವ್ಯತ್ಯಾಸ ಮತ್ತು ಸ್ಥಿತಿಸ್ಥಾಪಕತ್ವವು ಕಡಿಮೆಯಾಗುತ್ತದೆ, ಇದು ಮಾನವ ಯೋಗಕ್ಷೇಮಕ್ಕೆ ಅಥವಾ ಕಲ್ಯಾಣಕ್ಕೆ ಅದರ ಕೊಡುಗೆಯು ನಿಂತುಹೋಗಬಹುದು.

Current Affairs

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 ನಿವ್ವಳ ಶೂನ್ಯ ಕಟ್ಟಡಗಳು ಯಾವುವು?

(What are net zero buildings?)

‘ನಿವ್ವಳ-ಶೂನ್ಯ ಶಕ್ತಿ ಕಟ್ಟಡ’ (net-zero energy building) ಗಳು ತಮ್ಮ ಬಳಕೆಗೆ ಅನುಗುಣವಾಗಿ ಶಕ್ತಿಯನ್ನು ಉತ್ಪಾದಿಸಲು ನವೀಕರಿಸಬಹುದಾದ ಮೂಲಗಳ ಮೇಲೆ ಅವಲಂಬಿತವಾಗಿರುವ ‘ಕಟ್ಟಡಗಳಾಗಿವೆ’. ಇದನ್ನು ಸಾಮಾನ್ಯವಾಗಿ ಒಂದು ವರ್ಷದಲ್ಲಿ ಮಾಡಿದ ಶಕ್ತಿ ಉತ್ಪಾದನೆಯ ಪರಿಭಾಷೆಯಲ್ಲಿ ಅಳೆಯಲಾಗುತ್ತದೆ.

  1. ತಮ್ಮ ಸ್ವಂತ ಬಳಕೆಗೆ ಸಾಕಾಗುವಷ್ಟು ಶಕ್ತಿಯನ್ನು ಅಥವಾ ಇಂಧನವನ್ನು ಉತ್ಪಾದಿಸುವ ಮನೆಗಳು ಮತ್ತು ಇತರ ರಚನೆಗಳನ್ನು ಕೆಲವೊಮ್ಮೆ ‘ನಿವ್ವಳ ಶೂನ್ಯ ಕಟ್ಟಡಗಳು’ ಎಂದು ಕರೆಯಲಾಗುತ್ತದೆ.
  2. ಈ ರೀತಿಯ ಕಟ್ಟಡಗಳಿಂದ ಉತ್ಪತ್ತಿಯಾಗುವ ಹೆಚ್ಚುವರಿ ಶಕ್ತಿಯನ್ನು ವಿದ್ಯುತ್ ಗ್ರಿಡ್‌ಗೆ ಹಿಂತಿರುಗಿಸಬಹುದು.

ನಿವ್ವಳ-ಶೂನ್ಯ ಶಕ್ತಿ ಕಟ್ಟಡಗಳನ್ನು ಶಕ್ತಿ ಸಂಪನ್ಮೂಲಗಳನ್ನುಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ಕಟ್ಟಡಗಳಲ್ಲಿನ ಅನೇಕ ಸೌಲಭ್ಯಗಳು ಯಾವುದೇ ಶಕ್ತಿಯ ಮೂಲವಿಲ್ಲದೆ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ:

  1. ಶೀತ ಹವಾಮಾನದ ಪ್ರದೇಶಗಳಲ್ಲಿ, ದಕ್ಷಿಣಕ್ಕೆ ಎದುರಾಗಿರುವ ದೊಡ್ಡ ಕಿಟಕಿಗಳನ್ನು ಹೊಂದಿರುವ ಕಟ್ಟಡಗಳು ಯಾವುದೇ ಇತರ ಸೌಲಭ್ಯಗಳನ್ನು ಬಳಸಬೇಕಾದ ಅವಶ್ಯಕತೆ ಇರುವುದಿಲ್ಲ ಮತ್ತು ಸೌರ ಬೆಳಕಿನ ಮೂಲಕ ಸ್ವಯಂಚಾಲಿತವಾಗಿ ಶಾಖವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.
  2. ಕಟ್ಟಡದ ತಂಪಾದ ಉತ್ತರ ಭಾಗದಲ್ಲಿ, ಸಣ್ಣ ಕಿಟಕಿಗಳನ್ನು ಸ್ಥಾಪಿಸಲಾಗಿದೆ, ಇದು ಹೆಚ್ಚಿನ ಪ್ರಮಾಣದ ಬೆಳಕು ಒಳ ಪ್ರವೇಶಿಸಲು ಮತ್ತು ಸಣ್ಣ ಪ್ರಮಾಣದ ಶಾಖವು ಹೊರ ಹೋಗಲು ಅನುವು ಮಾಡಿಕೊಡುತ್ತದೆ.
  3. ಬೆಚ್ಚಗಿನ ಋತುಮಾನಗಳಲ್ಲಿ, ನಿಧಾನಗತಿಯ ವಾತಾಯನ ವ್ಯವಸ್ಥೆಗಳು ತಂಪಾದ ಗಾಳಿಯನ್ನು ಕೆಳ ಮೇಲ್ಮೈಯಿಂದ ಮೇಲಕ್ಕೆ ಎಳೆಯಬಹುದು ಮತ್ತು ಕಟ್ಟಡದ ಅತ್ಯುನ್ನತ ಬಿಂದುವಿನಿಂದ ಅದನ್ನು ಹೊರಹಾಕಬಹುದು.
  4. ಈ ಕಟ್ಟಡಗಳಲ್ಲಿ ಅಳವಡಿಸಲಾಗಿರುವ ಮೇಲ್ಛಾವಣಿಯ ವ್ಯವಸ್ಥೆ ಅಥವಾ ರೂಫ್ ಟಾಪ್ ವ್ಯವಸ್ಥೆಗಳು ಸಂಸ್ಕರಿಸಿದ ನೀರಿನ ಬಳಕೆಯನ್ನು ಕಡಿಮೆ ಮಾಡಲು ಮಳೆನೀರನ್ನು ಸಂಗ್ರಹಿಸಬಹುದು.

Current Affairs

ಕಾಮನ್ವೆಲ್ತ್ ವಾರ್ ಗ್ರೇವ್ಸ್ ಕಮಿಷನ್ (CWGC):

(Commonwealth War Graves Commission – CWGC)

ಯುನೈಟೆಡ್ ಕಿಂಗ್‌ಡಮ್ ಮೂಲದ ಕಾಮನ್‌ವೆಲ್ತ್ ವಾರ್ ಗ್ರೇವ್ಸ್ ಕಮಿಷನ್ (CWGC) ಅಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿರುವ ಐದು ಸೈಟ್‌ಗಳನ್ನು ಪಟ್ಟಿ ಮಾಡಿದೆ. ಈ ತಾಣಗಳು ಪ್ರಥಮ ಮಹಾ ವಿಶ್ವಯುದ್ಧ ಮತ್ತು ದ್ವಿತೀಯ ವಿಶ್ವಯುದ್ಧ ದೊಂದಿಗೆ ಸಂಬಂಧಿಸಿವೆ.

ಈ ಪಟ್ಟಿ ಮಾಡಲಾದ ಸ್ಥಳಗಳಲ್ಲಿ ನಾಗಾಲ್ಯಾಂಡ್‌ನ ಕೊಹಿಮಾ ಯುದ್ಧ ಸ್ಮಶಾನವೂ ಸೇರಿದೆ.

  1. ಕೊಹಿಮಾ ಯುದ್ಧ ಸ್ಮಶಾನವು ಮಿತ್ರ ಪಡೆಗಳ 2 ನೇ ಬ್ರಿಟಿಷ್ ವಿಭಾಗದ ಸೈನಿಕರಿಗೆ ಸಮರ್ಪಿತವಾದ ಸ್ಮಾರಕವಾಗಿದೆ. ಈ ಸೈನಿಕರು ಎರಡನೇ ಮಹಾಯುದ್ಧದ ಸಮಯದಲ್ಲಿ ಏಪ್ರಿಲ್ 1944 ರಲ್ಲಿ ಕೊಹಿಮಾದಲ್ಲಿ ಕೊಲ್ಲಲ್ಪಟ್ಟರು.
  2. CWGC ಯಿಂದ ಪಟ್ಟಿ ಮಾಡಲಾದ ಇತರ ಅಸಾಮಾನ್ಯ ಸ್ಥಳಗಳಲ್ಲಿ ಝಿವಿ ಕ್ರೇಟರ್ ಮತ್ತು ಲಿಚ್‌ಫೀಲ್ಡ್ ಕ್ರೇಟರ್ ಸೇರಿವೆ ಇದು ವಿಶ್ವ ಸಮರ I “ಕ್ರೇಟರ್ ಸ್ಮಶಾನ” ಫ್ರಾನ್ಸ್‌ನ ಪಾಸ್ ಡಿ ಕ್ಯಾಲೈಸ್ ಪ್ರದೇಶದಲ್ಲಿದೆ. ಭೂ ಸುರಂಗಗಳ ಸ್ಫೋಟದಿಂದಾಗಿ ಈ ಪ್ರದೇಶದಲ್ಲಿ ಕುಳಿಗಳು ರೂಪುಗೊಂಡಿವೆ.
  3. ಪಟ್ಟಿ ಮಾಡಲಾದ ಸೈಟ್‌ಗಳಲ್ಲಿ ಸೈಪ್ರಸ್‌ನಲ್ಲಿರುವ ನಿಕೋಸಿಯಾ (ವ್ಯಾನ್ಸ್ ಕೀಪ್) ಸ್ಮಶಾನ ಅಥವಾ ಸಿಮೆಟ್ರಿ ಇನ್ ನೋ ಮ್ಯಾನ್ಸ್ ಲ್ಯಾಂಡ್ ಸೇರಿವೆ, ಅಲ್ಲಿ ಸಶಸ್ತ್ರ ಸೈನಿಕರು ನೆಲೆಸಿದ್ದಾರೆ. ಏಕೆಂದರೆ, ಈ ಸ್ಮಶಾನವನ್ನು 1970 ರ ದಶಕದಿಂದಲೂ ದ್ವೀಪದ ದಕ್ಷಿಣ ಮತ್ತು ಉತ್ತರ ಭಾಗಗಳ ನಡುವಿನ ವಿವಾದಿತ ಭೂಮಿಯ ಭಾಗದ ಗಡಿಯಲ್ಲಿ ನಿರ್ಮಿಸಲಾಗಿದೆ.

CWGC ಕುರಿತು:

ಕಾಮನ್‌ವೆಲ್ತ್ ವಾರ್ ಗ್ರೇವ್ಸ್ ಕಮಿಷನ್ (CWGC), ಆರು ಸದಸ್ಯ ರಾಷ್ಟ್ರಗಳ ಅಂತರ-ಸರ್ಕಾರಿ ಸಂಸ್ಥೆಯಾಗಿದ್ದು, ಯುದ್ಧದಲ್ಲಿ ಕೊಲ್ಲಲ್ಪಟ್ಟ ಪುರುಷರು ಮತ್ತು ಮಹಿಳೆಯರನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಖಚಿತಪಡಿಸುತ್ತದೆ.

  1. ಆಯೋಗವನ್ನು ‘ಸರ್ ಫ್ಯಾಬಿಯನ್ ವೇರ್’ ಸ್ಥಾಪಿಸಿದರು ಮತ್ತು ರಾಯಲ್ ಚಾರ್ಟರ್ ಮೂಲಕ 1917 ರಲ್ಲಿ ಇಂಪೀರಿಯಲ್ ವಾರ್ ಗ್ರೇವ್ಸ್ ಕಮಿಷನ್ ಎಂದು ಸ್ಥಾಪಿಸಲಾಯಿತು.
  2. ಸದಸ್ಯರು: ಆಸ್ಟ್ರೇಲಿಯಾ, ಕೆನಡಾ, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಕಿಂಗ್‌ಡಮ್.

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos