ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ಈ ಬಾರಿ ಕೇರಳವನ್ನು, ತಡವಾಗಿ ಪ್ರವೇಶಿಸಲಿರುವ ಮಾನ್ಸೂನ್ ಮಾರುತಗಳು.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಕೇರಳದಲ್ಲಿ ಗ್ರಾಮೀಣ ಹಿರಿಯರಿಗಾಗಿ ‘ಬೆಲ್ ಆಫ್ ಫೇತ್’ ಎಂಬ ಯೊಜನೆ.
2. COVID ಪೀಡಿತ ಮಕ್ಕಳ ಸಬಲೀಕರಣಕ್ಕಾಗಿ,PM CARES ಯೋಜನೆ.
3. ನಿರೀಕ್ಷಣಾ ಜಾಮೀನು ಪರಿಕಲ್ಪನೆ.
4. ಅನುಮಾನಾಸ್ಪದ ಮತದಾರ, ಅಥವಾ ಡಿ- ವೋಟರ್.
5. ಪಶ್ಚಿಮ ಆಫ್ರಿಕಾ ದೇಶಗಳ ಆರ್ಥಿಕ ಸಮುದಾಯ (ECOWAS).
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಸುದ್ದಿಯಲ್ಲಿರುವ ಸ್ಥಳಗಳು- ಕ್ಯಾಲಿ(Cali).
2. ರಿಷಿಗಂಗಾ.
3. ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶ.
4. ವಿಟಮಿನ್ ಡಿ.
5. YUVA (ಯುವ, ಭವಿಷ್ಯದ ಮತ್ತು ಬಹುಮುಖ ಲೇಖಕರು) ಯೋಜನೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.
ಈ ಬಾರಿ ಕೇರಳವನ್ನು,ತಡವಾಗಿ ಪ್ರವೇಶಿಸಲಿರುವ ಮಾನ್ಸೂನ್ ಮಾರುತಗಳು:
(Monsoon onset over Kerala delayed)
ಸಂದರ್ಭ:
ಕೇರಳದಲ್ಲಿ ಈ ಬಾರಿ ನೈರುತ್ಯ (ಮುಂಗಾರು) ಮಾರುತಗಳ ಪ್ರವೇಶ ಎರಡು ದಿನ ವಿಳಂಬವಾಗುವ ನಿರೀಕ್ಷೆಯಿದ್ದು, ಜೂನ್ 3 ರ ವೇಳೆಗೆ ಮುಂಗಾರು ಕೇರಳವನ್ನು ಪ್ರವೇಶಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು (India Meteorological Department (IMD) ತಿಳಿಸಿದೆ.
ಆದಾಗ್ಯೂ, ಮಾನ್ಸೂನ್ ಕೇರಳವನ್ನು ಪ್ರವೇಶಿಸಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್(Skymet) ತಿಳಿಸಿದೆ. ಕಾರಣ,IMD ವ್ಯಾಖ್ಯಾನಿಸಿದ ಮೂರು ಮಾನದಂಡಗಳಲ್ಲಿ ಎರಡು ಮಾನದಂಡಗಳು ಪೂರೈಸಲ್ಪಟ್ಟಿದೆ ಎಂದು ಅದು ಹೇಳಿದೆ.
ಆ ಮಾನದಂಡಗಳು ಇಂತಿವೆ:
- ಮಳೆ ತರುವ ವೆಸ್ಟರ್ಲಿಗಳು(westerlies)ಕನಿಷ್ಠ ಆಳ ಮತ್ತು ವೇಗದಲ್ಲಿವೆ.
- ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ 60% ರಷ್ಟು ಕೇಂದ್ರಗಳು ಮೇ 10 ರ ನಂತರ ಸತತ ಎರಡು ದಿನಗಳವರೆಗೆ 2.5 ಮಿ.ಮೀ ಅಥವಾ ಅದಕ್ಕಿಂತ ಹೆಚ್ಚಿನ ಮಳೆಯಾಗಿದೆ ಎಂದು ವರದಿ ಮಾಡಿವೆ.
- ಒಂದು ನಿರ್ದಿಷ್ಟ ಪ್ರಮಾಣದ ಮೋಡ, 200 W / ಚದರ ಮೀಟರ್ಗಿಂತ ಕೆಳಗಿರಬೇಕು ಎಂದು “ಹೊರಹೋಗುವ ಲಾಂಗ್ವೇವ್ ವಿಕಿರಣ” (outgoing longwave radiation-OLR) ಎಂಬ ನಿಯತಾಂಕವು ಸೂಚಿಸುತ್ತದೆ.
ಪ್ರಸ್ತುತ, ಭಾರತೀಯ ಹವಾಮಾನ ಇಲಾಖೆಯ ಸ್ವಂತ ದತ್ತಾಂಶದ ಪ್ರಕಾರ OLR ಹೊರತುಪಡಿಸಿ, ಇತರ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ಸೂಚಿಸುತ್ತದೆ. ಹೀಗಾಗಿ, ಮುಂಗಾರು ಮಾರುತಗಳ ಆಗಮನದಲ್ಲಿ ವ್ಯಕ್ತಿನಿಷ್ಠತೆಯ ಒಂದು ಪ್ರಮುಖ ಭಾಗವಾಗಿದೆ.
ನೈಋತ್ಯ ಮಾನ್ಸೂನ್ ಪ್ರಾರಂಭದ ಮೇಲೆ ಪ್ರಭಾವ ಬೀರುವ ಅಂಶಗಳು:
ನೈಋತ್ಯ ಮಾನ್ಸೂನ್ ಮಾರುತಗಳ ಕಾಲದ ಪ್ರಾರಂಭವು ಒಂದು ಭಾವನಾತ್ಮಕ ವಿಷಯವಾಗಿದೆ, ಏಕೆಂದರೆ ಇದು ವಿಳಂಬವಾದರೆ ಆತಂಕಕ್ಕೆ ಕಾರಣವಾಗಬಹುದು ಅಥವಾ ಮುಂಚೆಯೇ ಆಗಮನಮಾಡಿದರೆ ಉತ್ಸಾಹವನ್ನು ಹೆಚ್ಚು ಮಾಡಬಹುದು.
ನೈಋತ್ಯ ಮಾನ್ಸೂನ್ ಪ್ರಾರಂಭದ ಮೇಲೆ ಪ್ರಭಾವ ಬೀರುವ ವಿವಿಧ ಅಂಶಗಳು ಇಂತಿವೆ:
ನೈಋತ್ಯ ಮಾನ್ಸೂನ್ ಮಳೆಯ ಪ್ರಾರಂಭಕ್ಕೆ ಕರಾವಳಿಯ ಸಮೀಪದಲ್ಲಿ ಹವಾಮಾನ ವ್ಯವಸ್ಥೆಯ ರೂಪದಲ್ಲಿ ಪ್ರಚೋದಕ ಅಂಶದ ಅಗತ್ಯವಿದೆ. ಇವು ಸಾಗರ ಜನಿತ ವಿದ್ಯಮಾನಗಳಾಗಿವೆ, ಇದು ಮಾನ್ಸೂನ್ ಮಾರುತಗಳು ಪ್ರಾರಂಭವಾಗುವ ಸಾಮಾನ್ಯ ಸಮಯದಲ್ಲಿ ಎದ್ದು ಕಾಣುತ್ತದೆ. ಅವುಗಳೆಂದರೆ:
- ಮೇ ತಿಂಗಳ ಕೊನೆಯ ದಿನಗಳಲ್ಲಿ ಅಥವಾ ಜೂನ್ ಆರಂಭದಲ್ಲಿ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶದ (Depression) ನಿರ್ಮಾಣವಾಗುವುದು.
- ಅದೇ ಸಮಯದಲ್ಲಿ ಅರೇಬಿಯನ್ ಸಮುದ್ರದಲ್ಲಿ ಸಹ ಅಂತಹುದೆ ವ್ಯವಸ್ಥೆಗಳು ನಿರ್ಮಾಣಗೊಂಡಿರುತ್ತದೆ ಮತ್ತು ಅದು ಮುಖ್ಯ ಭೂಭಾಗದಲ್ಲಿ ಮಳೆಯ ಆರಂಭಕ್ಕೆ ಕಾರಣವಾಗುತ್ತದೆ.
- ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಕೇರಳ ಮತ್ತು ಲಕ್ಷದ್ವೀಪ ಕರಾವಳಿಯಲ್ಲಿ ಜರುಗುವ ಮತ್ತೊಂದು ಪ್ರಮುಖ ಅಂಶವೆಂದರೆ ‘ಸೈಕ್ಲೋನಿಕ್ ಸುಳಿ’ (Cyclonic Vortex). ಈ ಸೈಕ್ಲೋನಿಕ್ ಸುಳಿಯು ಮಾನ್ಸೂನ್ ಪ್ರವಾಹವನ್ನು ಮುಂದಕ್ಕೆ ಸಾಗಿಸಲು ಅದು ಕೂಡ ಪಶ್ಚಿಮ ಕರಾವಳಿಯುದ್ದಕ್ಕೂ ಜಾರುತ್ತದೆ.
- ಭೂಮಿ ಮತ್ತು ಸಮುದ್ರದ ನಡುವಿನ ತಾಪಮಾನ ವ್ಯತ್ಯಾಸದಿಂದಾಗಿ ಪಶ್ಚಿಮ ಕರಾವಳಿಯಲ್ಲಿ ‘ಟ್ರಫ್’ (ತಗ್ಗು) ರೂಪುಗೊಳ್ಳುತ್ತದೆ. ಈ ಪರಿಸ್ಥಿತಿಯು ಮಾನ್ಸೂನ್ ಮಾರುತಗಳ ನಿಧಾನಗತಿಯ ಪ್ರಾರಂಭ ಮತ್ತು ದುರ್ಬಲ ಪ್ರಗತಿಗೆ ಕಾರಣವಾಗಬಹುದು.
- ಅಂತಿಮವಾಗಿ,ಅಂತರ ಉಷ್ಣವಲಯ ಸಂಧಿ ಕ್ಷೇತ್ರವು (ITCZ) ಎರಡೂ ಗೋಳಾರ್ಧಗಳ ವಾಣಿಜ್ಯ ಮಾರುತಗಳ ಸಂಗಮ ಕ್ಷೇತ್ರ ವಾಗಿರುವುದು. ಉಷ್ಣ ಸಮಭಾಜಕ ವೃತ್ತವು ಉತ್ತರ ಭಾರತದ ಕಡೆಗೆ ಚಲಿಸಿದಂತೆ ITCZ ಕ್ಷೇತ್ರವು ಕೂಡ ಸಮಾಜಕ ವೃತ್ತದಿಂದ ಉತ್ತರದ ಕಡೆಗೆ ಚಲಿಸುವುದು. ಈ ವಿದ್ಯಮಾನವು ಭಾರತದ ಮುಖ್ಯ ಭೂಭಾಗದ ಕಡೆಗೆ ಬಲವಾದ ಮಾನ್ಸೂನ್ ಮಾರುತಗಳನ್ನು ತರುತ್ತದೆ.
- ಸಮತಲ ವಾಯು ಧಾರೆಗಳ (Jet Streams) ಪ್ರಭಾವವನ್ನೂ ಸಹ ಮಾನ್ಸೂನ್ ಮಾರುತಗಳ ಉಮ್ಮಳಿಸುವಿಕೆಗೆ ( out burst) ಗೆ ಕಾರಣವೆಂದು ಹೇಳಲಾಗಿದೆ.
ಭಾರತದಲ್ಲಿ ಮಾನ್ಸೂನ್ ಗೆ ಸಂಬಂಧಿಸಿದ ಪ್ರಮುಖ ಸಂಗತಿಗಳು:
- ಭಾರತದ ವಾಯುಗುಣವು ಒಟ್ಟಾರೆ ಪ್ರಪಂಚದ ವಾಯುಗುಣದ ಒಂದು ಭಾಗವಾಗಿದ್ದು ಇದರ ವಾಯುಗುಣವನ್ನು ಉಷ್ಣವಲಯದ ಮಾನ್ಸೂನ್ ವಾಯುಗುಣ ಎಂದು ಕರೆಯಲಾಗುತ್ತದೆ.
- ಮಾನ್ಸೂನ್ ಎಂಬ ಪದವು ಅರಬ್ಬಿ ಭಾಷೆಯ ಮೌಸಿಮ್ (Mousim) ಎಂಬ ಪದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ “ನಿಯತಕಾಲಿಕ” ಎಂದಾಗಿದೆ.
- ಭೂಮಿ ಮತ್ತು ಜಲ ಭಾಗಗಳು ಪರಸ್ಪರ ವಿರುದ್ಧ ಪ್ರಮಾಣದ ಉಷ್ಣಾಂಶವನ್ನು ಪಡೆಯುವುದರಿಂದ ನಿಯತಕಾಲಿಕವಾಗಿ ಮಾರುತಗಳು ತದ್ವಿರುದ್ಧ ದಿಕ್ಕಿನಿಂದ ವರ್ಷಪೂರ್ತಿ ಬೀಸುತ್ತವೆ.
- ಈ ಮಾರುತಗಳು 20°ಉತ್ತರ ಹಾಗೂ 20° ದಕ್ಷಿಣ ಅಕ್ಷಾಂಶಗಳ ನಡುವೆ ಸ್ಪಷ್ಟವಾಗಿ ಅಭಿವೃದ್ಧಿಯನ್ನು ಹೊಂದುತ್ತವೆ.
- ಭಾರತದ ಒಟ್ಟು 4 ಋತುಮಾನಗಳಲ್ಲಿ 2 ಋತುಮಾನಗಳನ್ನು ಮಾನ್ಸೂನ್ ಋತುಮಾನವೇ ಒಳಗೊಂಡಿದೆ. ಅವುಗಳೆಂದರೆ ನೈರುತ್ಯ ಮಾನ್ಸೂನ್ ಮಾರುತಗಳ ಕಾಲ (southwest monsoon season) ಮತ್ತು ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (retreating monsoon season).
ಒಟ್ಟಿನಲ್ಲಿ, ಈ ಅವಧಿಯಲ್ಲಿ ಭಾರತವು ವಾರ್ಷಿಕವಾಗಿ 75 % ಕ್ಕಿಂತ ಹೆಚ್ಚು ಮಳೆಯನ್ನು ಪಡೆಯುತ್ತದೆ ಹಾಗೂ ದೇಶದ ಒಟ್ಟು ಭಾಗದಲ್ಲಿ ಶೇಕಡ 90ರಷ್ಟು ಪ್ರದೇಶವು ಮಳೆಯನ್ನು ಪಡೆದು ಮುಂಗಾರು ಬೆಳೆಗಳ ಋತುಮಾನವಾಗಿ ಮಾರ್ಪಾಡಾಗುತ್ತದೆ ಆದ್ದರಿಂದ ಭಾರತವು ಮಾನ್ಸೂನ್ ವಾಯುಗುಣಕ್ಕೆ ಅನ್ವರ್ಥವಾಗಿದೆ ಎನ್ನಬಹುದು.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.
ಕೇರಳದಲ್ಲಿ ಗ್ರಾಮೀಣ ಹಿರಿಯರಿಗಾಗಿ ‘ಬೆಲ್ ಆಫ್ ಫೇತ್’:
(Kerala’s ‘Bell of Faith’ for rural elders)
ಸಂದರ್ಭ:
ಕೇರಳದಲ್ಲಿ ಹಳ್ಳಿಗಳಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರಿಗಾಗಿ ‘ಧರ್ಮ-ಘಂಟೆ’ (Bell of Faith) ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು.
- ಈ ಹಿಂದೆ ಕೇರಳದ ಅನೇಕ ನಗರ ಮನೆಗಳಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿತ್ತು.
‘ಬೆಲ್ ಆಫ್ ಫೇತ್’ ಯೋಜನೆ ಎಂದರೇನು?
- ‘ಧರ್ಮ-ಘಂಟೆ’, ಅಂದರೆ ‘ಬೆಲ್ ಆಫ್ ಫೇಯ್ತ್’ ಯೋಜನೆ, ಕೇರಳದ ‘ಸಮುದಾಯ ಪೊಲೀಸ್ ಯೋಜನೆ’ (Community Policing Scheme) ಅಡಿಯಲ್ಲಿ ಕಲ್ಪಿಸಲಾದ ಭದ್ರತಾ ಯೋಜನೆಯಾಗಿದೆ.
- ‘ಲೌಡ್ ವಾಯ್ಸ್’ ಅಥವಾ ಜೋರಾಗಿ ಶಬ್ದವನ್ನು ಮಾಡುವ ರಿಮೋಟ್-ಕಂಟ್ರೋಲ್ಡ್ ಅಲಾರಮ್ಗಳನ್ನು ಬಳಸುವ ಮೂಲಕ ವಯಸ್ಸಾದ ನಾಗರಿಕರಿಗೆ ತುರ್ತು ಸಂದರ್ಭಗಳಲ್ಲಿ ನೆರೆಹೊರೆಯವರ ಗಮನವನ್ನು ಸೆಳೆಯಲು ‘ಬೆಲ್ ಆಫ್ ಫೇತ್’ ಸಹಾಯ ಮಾಡುತ್ತದೆ.
- ಈ ಯೋಜನೆಯು, ಕೇರಳದಲ್ಲಿ 2018 ರಿಂದ ಜಾರಿಯಲ್ಲಿದೆ.
ಯೋಜನೆಯ ಮಹತ್ವ:
‘ಬೆಲ್ ಆಫ್ ಫೇತ್’ ಯೋಜನೆಯು ವೃದ್ಧರ ಯೋಗಕ್ಷೇಮ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಮುದಾಯದ ಭಾಗವಹಿಸುವಿಕೆಗೆ ಒಂದು ಉದಾಹರಣೆಯಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಚಿಂತಿತರಾಗಿರುವ ವೃದ್ಧರಿಗೆ ಈ ಯೋಜನೆ ತುಂಬಾ ಸಹಾಯಕವಾಗುತ್ತದೆ.
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.
COVID ಪೀಡಿತ ಮಕ್ಕಳ ಸಬಲೀಕರಣಕ್ಕಾಗಿ-PM CARES ಯೋಜನೆ:
(PM CARES For Children- Empowerment of COVID Affected Children)
ಸಂದರ್ಭ:
ಇತ್ತೀಚೆಗೆ, ಕೋವಿಡ್ ಪೀಡಿತ ಮಕ್ಕಳಿಗೆ ಸಹಾಯ ಮಾಡಲು ಮತ್ತು ಸಬಲೀಕರಣಗೊಳಿಸಲು ‘ಪಿಎಂ-ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯನ್ನು (PM CARES For Children) ಪ್ರಾರಂಭಿಸಲಾಗಿದೆ.
ಅರ್ಹತೆ: COVID 19 ರ ಕಾರಣದಿಂದಾಗಿ ಪೋಷಕರನ್ನು ಅಥವಾ ಪಾಲಕರನ್ನು ಕಳೆದುಕೊಂಡಿರುವ ಎಲ್ಲ ಮಕ್ಕಳಿಗೆ ಅಥವಾ ಉಳಿದಿರುವ ಪೋಷಕರು ಅಥವಾ ಕಾನೂನು ಪಾಲಕರು / ದತ್ತು ಪಡೆದ ಪೋಷಕರ ‘ಮಕ್ಕಳಿಗಾಗಿ ಪಿಎಂ-ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯಡಿ ಸಹಾಯ ನೀಡಲಾಗುವುದು.
ಈ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು:
- ಇಂಥ ಮಕ್ಕಳ ಹೆಸರಿನಲ್ಲಿ ಸರ್ಕಾರ ನಿಶ್ಚಿತ ಠೇವಣಿ: ಮಕ್ಕಳಿಗೆ (ಗಂಡು/ಹೆಣ್ಣು) 18 ವರ್ಷ ತುಂಬುವವರೆಗೆ ವಾರ್ಷಿಕ ₹5 ಲಕ್ಷದಷ್ಟು ಆರೋಗ್ಯ ವಿಮೆ, 18 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ಆರ್ಥಿಕ ನೆರವು, 23 ವರ್ಷ ತುಂಬಿದಾಗ ₹10 ಲಕ್ಷ ಹಣಕಾಸಿನ ನೆರವು, ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ ನೀಡಲಾಗುವುದು.
- ಶಾಲಾ ಶಿಕ್ಷಣ: 10 ವರ್ಷದೊಳಗಿನ ಮಕ್ಕಳಿಗೆ: ಸಮೀಪದ ಕೇಂದ್ರೀಯ ವಿದ್ಯಾಲಯದಲ್ಲಿ ಅಥವಾ ಖಾಸಗಿ ಶಾಲೆಯಲ್ಲಿ ದಾಖಲಾತಿ.
- ಶಾಲಾ ಶಿಕ್ಷಣ: 11–18 ವರ್ಷದೊಳಗಿನ ಮಕ್ಕಳಿಗೆ: ಕೇಂದ್ರ ಸರ್ಕಾರದ ವಸತಿಸಹಿತ ಸೈನಿಕ ಶಾಲೆ ಅಥವಾ ನವೋದಯ ವಿದ್ಯಾಲಯಗಳಲ್ಲಿ ಪ್ರವೇಶ.
- ಉನ್ನತ ಶಿಕ್ಷಣಕ್ಕೆ ನೆರವು: ಅಸ್ತಿತ್ವದಲ್ಲಿರುವ ಶಿಕ್ಷಣ ಸಾಲದ ಮಾನದಂಡಗಳ ಪ್ರಕಾರ ಭಾರತದಲ್ಲಿ ವೃತ್ತಿಪರ ಶಿಕ್ಷಣ / ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲವನ್ನು ಪಡೆಯಲು ಮಗುವಿಗೆ ಸಹಾಯ ಮಾಡಲಾಗುವುದು.
- ಆರೋಗ್ಯ ವಿಮೆ: ಅಂತಹ ಎಲ್ಲ ಮಕ್ಕಳನ್ನು ‘ಆಯುಷ್ಮಾನ್ ಭಾರತ್ ಯೋಜನೆ’ (PM-JAY) ಅಡಿಯಲ್ಲಿ 5 ಲಕ್ಷ ರೂ. ಗಳ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಫಲಾನುಭವಿಗಳಾಗಿ ದಾಖಲಿಸಲಾಗುವುದು.
- ಮಗುವನ್ನು ಖಾಸಗಿ ಶಾಲೆಯಲ್ಲಿ ಸೇರಿಸಿದ್ದಲ್ಲಿ, ಶಿಕ್ಷಣ ಹಕ್ಕು ಕಾಯ್ದೆಯ ಮಾನದಂಡಗಳ ಪ್ರಕಾರ ನಿಗದಿತ ಶುಲ್ಕವನ್ನು ಪಿಎಂ- ಕೇರ್ಸ್ ನಿಧಿಯಿಂದ ನೀಡಲಾಗುವುದು.
- ವಿದ್ಯಾರ್ಥಿ ವೇತನ:ಪದವಿಪೂರ್ವ ಮತ್ತು ವೃತ್ತಿಪರ ಕೋರ್ಸ್ಗಳಿಗೆ ಕೋರ್ಸ್ ಶುಲ್ಕಕ್ಕೆ ಸಮಾನವಾದ ವಿದ್ಯಾರ್ಥಿ ವೇತನ.
- ಹಾಲಿ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಅರ್ಹತೆ ಪಡೆಯದ ಮಕ್ಕಳಿಗೆ, ಪಿಎಂ ಕೇರ್ಸ್ ವಿದ್ಯಾರ್ಥಿ ವೇತನ ನೀಡಲಿದೆ.
ದಯವಿಟ್ಟು ಗಮನಿಸಿ:
“ಮುಖ್ಯಮಂತ್ರಿ ಬಾಲಸೇವಾ ಯೋಜನೆ”
- ಕೋವಿಡ್ನಿಂದ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗಾಗಿ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ ಜಾರಿಗೆ ತರಲಿದ್ದು, ತಿಂಗಳಿಗೆ ₹3,500 ನೀಡಲಾಗುವುದು ಎಂದು ಕರ್ನಾಟಕ ಸರ್ಕಾರವು ತಿಳಿಸಿದೆ.
- ಕೊರೊನಾದಿಂದ ಅನಾಥರಾಗಿರುವ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮಾದರಿಯಲ್ಲಿ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ’.
- ‘ಕೋವಿಡ್ನಿಂದ ಅನಾಥರಾದ 10 ವರ್ಷದೊಳಗಿನ ಮಕ್ಕಳ ಪೋಷಣೆ ಮತ್ತು ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರ್ಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುವುದು’ ಎಂದು ಸರ್ಕಾರ ತಿಳಿಸಿದೆ.
- ’21 ವರ್ಷ ತುಂಬಿರುವ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಸೇರಿದಂತೆ ಮುಂದಿನ ಜೀವನಕ್ಕೆ ಅನುಕೂಲ ಕಲ್ಪಿಸಲು ₹1 ಲಕ್ಷ ನೆರವು ನೀಡಲಾಗುವುದು. ರಕ್ಷಣೆಗೆ ಯಾರೂ ಇಲ್ಲದಂತಹ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರದಿಂದ ಮಾರ್ಗದರ್ಶಿ ಅಥವಾ ಹಿತೈಷಿಗಳನ್ನು ನೇಮಿಸಲಾಗುವುದು.
ಯೋಜನೆಯ ಸಮಗ್ರ ವಿವರಗಳು:
- ವಿಸ್ತೃತ ಕುಟುಂಬದ ಸದಸ್ಯರ ಆರೈಕೆಯಲ್ಲಿರುವ ಮಕ್ಕಳಿಗೆ ಪ್ರತಿ ತಿಂಗಳು ₹3500.
- 10 ವರ್ಷದೊಳಗಿನ ಮಕ್ಕಳ ಪಾಲನೆಗೆ ವಿಸ್ತೃತ ಕುಟುಂಬದ ಸದಸ್ಯರು ಇಲ್ಲದಿದ್ದಲ್ಲಿ ಅಂತಹ ಮಕ್ಕಳನ್ನು ನೋಂದಾಯಿತ ಮಕ್ಕಳ ಪಾಲನಾ ಕೇಂದ್ರಕ್ಕೆ ದಾಖಲಿಸಿ ಆರೈಕೆ ಮಾಡಲಾಗುವುದು.
- ಅನಾಥ ಮಕ್ಕಳಿಗೆ ಕಸ್ತೂರಬಾ ಗಾಂಧಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆ ಗಳಂತಹ ಮಾದರಿ ವಸತಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವುದು.
- SSLC ಪೂರ್ಣಗೊಳಿಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಲ್ಯಾಪ್ಟಾಪ್ ಅಥವಾ ಟ್ಯಾಬ್ ವಿತರಣೆ.
- ಕೋವಿಡ್ ನಿಂದ ಅನಾಥರಾದ ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಅಥವಾ ಹಿತೈಷಿಯನ್ನು ನೇಮಿಸಿ ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು.
(ಗಮನಿಸಿ: ನಾವು ಯೋಜನೆಯ ಪ್ರಮುಖ ಅಂಶಗಳನ್ನು ಮಾತ್ರ ಇಲ್ಲಿ ಸೇರಿಸಿದ್ದೇವೆ.) ಪೂರ್ಣ ವಿವರಗಳಿಗಾಗಿ, ದಯವಿಟ್ಟು ನೋಡಿ:
ಈ ಕ್ರಮಗಳು ಅಗತ್ಯತೆ:
- ಭಾರತವು ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ತೀವ್ರ ಅಲೆಯ ಅಡಿಯಲ್ಲಿ ತತ್ತರಿಸುತ್ತಿದೆ ಮತ್ತು ಈ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡ ಪ್ರಕರಣಗಳು ಹೆಚ್ಚುತ್ತಿವೆ.
- ಇದರೊಂದಿಗೆ, ಈ ಮಕ್ಕಳನ್ನು ದತ್ತು ಪಡೆಯುವ ನೆಪದಲ್ಲಿ ಮಕ್ಕಳ ಕಳ್ಳಸಾಗಣೆ ಭಯವೂ ಹೆಚ್ಚಾಗಿದೆ.
- COVID-19 ಪ್ರೇರಿತ ಲಾಕ್ ಡೌನ್ ಸಮಯದಲ್ಲಿ ‘ಬಾಲ್ಯ ವಿವಾಹ’ದ ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗಿದೆ.
ಬಾಲ ಸ್ವರಾಜ್: ಈ ನಡುವೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(NCPCR)ವು ತನ್ನ ಜಾಲತಾಣ ವಾದ ಬಾಲ ಸ್ವರಾಜ್ (ಮಕ್ಕಳ ಆರೈಕೆ ಮತ್ತು ರಕ್ಷಣೆಯ ಬಗ್ಗೆ ಗಮನಹರಿಸುವ NCPCR ನ ಜಾಲತಾಣ) ನಲ್ಲಿ ಎಲ್ಲ ರಾಜ್ಯಗಳ ಜಿಲ್ಲಾಧಿಕಾರಿಗಳಿಗೆ ಪೋಷಕರನ್ನು ಕಳೆದುಕೊಂಡ ಮಕ್ಕಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಕೇಳಿದೆ.
ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.
ನಿರೀಕ್ಷಣಾ ಜಾಮೀನು ಪರಿಕಲ್ಪನೆ:
(The concept of anticipatory bail)
ಸಂದರ್ಭ:
ಇತ್ತೀಚೆಗೆ, ಸುಪ್ರೀಂ ಕೋರ್ಟ್, ‘ಹೈಕೋರ್ಟ್ಗಳ’ ಕಾರ್ಯವಿಧಾನದಲ್ಲಿನ ವಿರೋಧಾಭಾಸವನ್ನು ಪರಿಹರಿಸುವ ಒಂದು ತೀರ್ಪು ನೀಡಿದೆ, ಇದರಲ್ಲಿ, ಉಚ್ಚ ನ್ಯಾಯಾಲಯಗಳು “ಅಸಾಧಾರಣ ಸಂದರ್ಭಗಳಲ್ಲಿ”, (extraordinary circumstances) ಆರೋಪಿಗಳಿಗೆ ‘ನಿರೀಕ್ಷಣಾ ಜಾಮೀನು’ (Anticipatory Bail) ನೀಡಲು ನಿರಾಕರಿಸಿದ ನಂತರವೂ ಬಂಧನದಿಂದ ರಕ್ಷಣೆ ನೀಡುವ ವಿವೇಚನಾಧಿಕಾರ ಹೊಂದಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದಾಗ್ಯೂ, ಈ ಅಧಿಕಾರವನ್ನು ಅನಿಯಂತ್ರಿತವಾಗಿ ಚಲಾಯಿಸಲು ಸಾಧ್ಯವಿಲ್ಲ, ಮತ್ತು ಈ ಅಧಿಕಾರವನ್ನು ಚಲಾಯಿಸಲು ತರ್ಕಬದ್ಧ ಆಧಾರವಿರಬೇಕು ಎಂದು ಹೇಳಿದೆ.
ಹಿನ್ನೆಲೆ:
ಹೈಕೋರ್ಟ್ ನೀಡಿದ ಎರಡು ಆದೇಶಗಳ ವಿರುದ್ಧ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವಾಗ ಸುಪ್ರೀಂ ಕೋರ್ಟ್ ಈ ತೀರ್ಪು ಪ್ರಕಟಿಸಿದೆ.
ಹೈಕೋರ್ಟ್,ತನ್ನ ಆದೇಶದಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ರದ್ದುಪಡಿಸಿದ್ದಲ್ಲದೆ, ವಿಚಾರಣಾ ನ್ಯಾಯಾಲಯದ ಎದುರು ಶರಣಾಗುವಂತೆ ಮತ್ತು 90 ದಿನಗಳಲ್ಲಿ ನಿಯಮಿತ ಜಾಮೀನು ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದೆ, ಮತ್ತು ಈ ಅವಧಿಯಲ್ಲಿ ಆರೋಪಿಗಳ ಮೇಲೆ ಯಾವುದೇ ದಂಡನಾತ್ಮಕ ಕ್ರಮ ಜರುಗಿಸದಂತೆ ರಕ್ಷಣೆಯನ್ನು ಸಹ ಒದಗಿಸಿದೆ.
ಸುಪ್ರೀಂ ಕೋರ್ಟ್ನ ತೀರ್ಪು:
- ಸಂವಿಧಾನದ, 21 ನೇ ಪರಿಚ್ಛೇದದ ಅಡಿಯಲ್ಲಿ ಖಾತರಿಪಡಿಸಿದ ‘ಸ್ವಾತಂತ್ರ್ಯದ ಹಕ್ಕಿಗೆ’ ನೀಡಲಾಗಿರುವ ಅಧಿಕಾರವನ್ನು ಗಮನದಲ್ಲಿಟ್ಟುಕೊಂಡು ಆರೋಪಿಗಳಿಗೆ ‘ನಿರೀಕ್ಷಣಾ ಜಾಮೀನು’ ನೀಡಲು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಅಧಿಕಾರವಿದೆ.
- ಅಪರಾಧ ಪ್ರಕ್ರಿಯೆ ಸಂಹಿತೆಯ (CrPC) ಅಡಿಯಲ್ಲಿ ಅರ್ಜಿಯನ್ನು ಅನುಮೋದಿಸುವುದು ಅಥವಾ ರದ್ದುಪಡಿಸುವುದು ವ್ಯಕ್ತಿಯ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ನಿಬಂಧನೆಯನ್ನು ಧಾರಾಳವಾಗಿ ಓದುವ ಅವಶ್ಯಕತೆಯಿದೆ ಮತ್ತು ಅದರ ಪ್ರಯೋಜನಕಾರಿ ಸ್ವರೂಪವನ್ನು ಪರಿಗಣಿಸಬೇಕು. ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ, ಶಾಸಕಾಂಗವು ಜಾರಿಗೆ ತಂದ ಶಾಸನದ ಸ್ಪಷ್ಟ ಉದ್ದೇಶಕ್ಕೆ ಅನುಗುಣವಾಗಿ ಈ ನಿರ್ಬಂಧಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
- ಇದಕ್ಕಾಗಿ, ನ್ಯಾಯಾಲಯಗಳು ಸಂವಿಧಾನದ 142 ನೇ ವಿಧಿ ಅಡಿಯಲ್ಲಿ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಿ ಅಂತಹ ಆದೇಶಗಳನ್ನು ಸಹ ನೀಡಬಹುದು.
ಈ ರೀತಿಯ ರಕ್ಷಣೆಯ ಅವಶ್ಯಕತೆ:
- ಒಬ್ಬ ಆರೋಪಿಯು, ಆರೋಪಿಯಷ್ಟೇಅಲ್ಲದೆ, ಅವನ ಕುಟುಂಬದ ಮುಖ್ಯ ಸಂರಕ್ಷಕ ಅಥವಾ ಏಕೈಕ ದುಡಿಯುವ ವ್ಯಕ್ತಿ (breadwinner) ಆಗಿರಬಹುದು. ಅವನು/ಅವಳನ್ನು ಬಂಧನ ಮಾಡುವುದರಿಂದ ಆತನ ಪ್ರೀತಿಪಾತ್ರರು ಹಸಿವು ಮತ್ತು ನಿರ್ಲಕ್ಷ್ಯದ ಸನ್ನಿವೇಶವನ್ನು ಎದುರಿಸ ಬೇಕಾಗುತ್ತದೆ.
- 1980 ರ ಗುರ್ಬಕ್ಷ್ ಸಿಂಗ್ ಸಿಬ್ಬಿಯಾ VS ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ, ಅಂದಿನ ಮುಖ್ಯ ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಪೀಠವು ವಿಧಿ 438 (1) ಅನ್ನು ಸಂವಿಧಾನದ 21 ನೇ ವಿಧಿ (ಜೀವ ಸಂರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಯ ಬೆಳಕಿನಲ್ಲಿ ವ್ಯಾಖ್ಯಾನಿಸಬೇಕಾಗಿದೆ ಎಂದು ತೀರ್ಪು ನೀಡಿತು.
‘ನಿರೀಕ್ಷಣಾ ಜಾಮೀನು’ ಪರಿಕಲ್ಪನೆ:
- 1973 ರಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಗೆ ತಿದ್ದುಪಡಿ ಮಾಡಿದಾಗ, ಸೆಕ್ಷನ್ 438 ರ ಅಡಿಯಲ್ಲಿ ‘ನಿರೀಕ್ಷಣಾ ಜಾಮೀನು’ ನಿಬಂಧನೆಯನ್ನು ಜಾರಿಗೆ ತರಲಾಯಿತು.
- ಒಬ್ಬ ವ್ಯಕ್ತಿಯನ್ನು ಬಂಧಿಸಿದ ನಂತರ ನೀಡುವ ಸಾಮಾನ್ಯ ಜಾಮೀನಿಗಿಂತ ಭಿನ್ನವಾಗಿ, ನಿರೀಕ್ಷಿತ ಜಾಮೀನಿನಲ್ಲಿ, ವ್ಯಕ್ತಿಯನ್ನು ಬಂಧಿಸುವುದಕ್ಕೆ ಮುಂಚಿತವಾಗಿಯೇ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಗುತ್ತದೆ.
- ಸಮಯಮಿತಿ: ಸುಶೀಲಾ ಅಗರ್ವಾಲ್ VS ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಪ್ರಕರಣದಲ್ಲಿ (2020), ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿತು, ನಿರೀಕ್ಷಣಾ ಜಾಮೀನು ನೀಡುವಾಗ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಲಾಗುವುದಿಲ್ಲ ಮತ್ತು ಪ್ರಕರಣದ ವಿಚಾರಣೆಯ ಅಂತ್ಯದವರೆಗೂ ಇದನ್ನು ಮುಂದುವರಿಸಬಹುದು ಎಂದು ಹೇಳಿತು.
- ನಿರೀಕ್ಷಣಾ ಜಾಮೀನನ್ನು ಸೆಷನ್ಸ್ ಕೋರ್ಟ್ ಮತ್ತು ಹೈಕೋರ್ಟ್ ಮಾತ್ರ ಮಂಜೂರು ಮಾಡಬಹುದು.
ಪ್ರಾಮುಖ್ಯತೆ:
- ಮುಕ್ತ ಮತ್ತು ಪ್ರಜಾಪ್ರಭುತ್ವ ದೇಶವೊಂದರಲ್ಲಿ ಗಳಿಸಿದ ವೈಯಕ್ತಿಕ ಸ್ವಾತಂತ್ರ್ಯದ ಪ್ರಮುಖ ಆಧಾರವನ್ನು ಸಂಸತ್ತು ಅಂಗೀಕರಿಸಿದ್ದರಿಂದ ಸೆಕ್ಷನ್ 438 ಅನ್ನು ಅಪರಾಧ ಪ್ರಕ್ರಿಯೆ ಸಂಹಿತೆಯಲ್ಲಿ ಜಾರಿಗೆ ತರಲಾಯಿತು.
- ವೈಯಕ್ತಿಕ ಸ್ವಾತಂತ್ರ್ಯದ ಗೌರವವನ್ನು ಉತ್ತೇಜಿಸುವುದು ಸಂಸತ್ತಿನ ಉದ್ದೇಶವಾಗಿತ್ತು, ಮತ್ತು ಅದೇ ಸಮಯದಲ್ಲಿ, ಅಪರಾಧ ನ್ಯಾಯಶಾಸ್ತ್ರದ ಮೂಲಭೂತ ತತ್ವಕ್ಕೆ ಆದ್ಯತೆ ನೀಡಲು ಕೂಡ ಸಂಸತ್ತು ಬಯಸಿತು, ಅದು ‘ಒಬ್ಬ ವ್ಯಕ್ತಿಯು ತಪ್ಪಿತಸ್ಥನೆಂದು ಸಾಬೀತಾಗುವವರೆಗೂ, ಅವನು/ಅವಳು ನಿರಪರಾಧಿ ಎಂದು ಭಾವಿಸಲಾಗುತ್ತದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಅನುಮಾನಾಸ್ಪದ ಮತದಾರ, ಅಥವಾ ಡಿ- ವೋಟರ್:
(D-voter or doubtful voter)
ಸಂದರ್ಭ:
ಇತ್ತೀಚೆಗೆ, ಅಸ್ಸಾಂನ ಆರು ಬಂಧನ ಕೇಂದ್ರಗಳ (Detention Centre) ಲ್ಲಿನ ಒಂದರಲ್ಲಿ ಬಂಧನಕ್ಕೊಳಗಾಗಿದ್ದ, ಮನಿಂದರ್ ದಾಸ್ ಎಂಬ ಕೊನೆಯ ‘ವಿದೇಶಿ’ (Foreigner) ಯನ ಬಿಡುಗಡೆಯಾಗಿದೆ. ಇದೀಗ, ಇತರ ಐದು ಬಂಧನ ಕೇಂದ್ರಗಳಲ್ಲಿ ಇನ್ನೂ ಬಂಧಿತರಾಗಿರುವ ಸುಮಾರು 170 ಜನರನ್ನು ಬಿಡುಗಡೆ ಮಾಡಬೇಕಾಗಿದೆ.
ಮನೀಂದ್ರ ದಾಸ್ ಅವರನ್ನು ‘ಡಿ-ವೋಟರ್’ ಅಥವಾ ಅನುಮಾನಾಸ್ಪದ ಮತದಾರ ಎಂದು 2015 ರಲ್ಲಿ ಗುರುತಿಸಲಾಗಿತ್ತು, ಮತ್ತು ನಂತರ 2019 ರಲ್ಲಿ ‘ವಿದೇಶಿಯರ ನ್ಯಾಯಮಂಡಳಿ’ಯು (Foreigners’ Tribunal- FT) ತನ್ನ ಏಕಪಕ್ಷೀಯ ತೀರ್ಪಿನಲ್ಲಿ ಆತನನ್ನು“ವಿದೇಶಿ” ಎಂದು ಘೋಷಿಸಿತು.
ಅನುಮಾನಾಸ್ಪದ ಮತದಾರ, ಅಥವಾ ಡಿ- ವೋಟರ್ ಎಂದರೆ ಯಾರು?
ಡಿ- ವೋಟರ್ಸ್ ಅಥವಾ ಅನುಮಾನಾಸ್ಪದ ಮತದಾರರು ತಮ್ಮ ಭಾರತೀಯ ರಾಷ್ಟ್ರೀಯತೆಯ ಪರವಾಗಿ ಸಾಕ್ಷ್ಯವನ್ನು ಒದಗಿಸಲಾಗದವರು ಮತ್ತು ಅವರ ಪ್ರಕರಣಗಳು ವಿದೇಶಿಯರ ನ್ಯಾಯಮಂಡಳಿಗಳಲ್ಲಿ ಬಾಕಿ ಉಳಿದಿವೆ ಅಥವಾ ನ್ಯಾಯಮಂಡಳಿಯಿಂದ ವಿದೇಶಿಯರು ಎಂದು ಘೋಷಿಸಲ್ಪಟ್ಟವರಾಗಿದ್ದಾರೆ.
ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (National Register of Citizens– NRC) ತಯಾರಿಸುವಾಗ ಯಾರ ಪೌರತ್ವವು ಅನುಮಾನಸ್ಪದ ಅಥವಾ ವಿವಾದಾಸ್ಪದವಾಗಿದೆ ಎಂದು ಕಂಡುಬಂದಿದೆಯೋ ಅಂತಹ ವ್ಯಕ್ತಿಗಳನ್ನು ‘ಡಿ-ವೋಟರ್ಸ್ ಅಥವಾ ಅನುಮಾನಾಸ್ಪದ ಮತದಾರರು’ ಎಂದು ವರ್ಗೀಕರಿಸಲಾಗಿದೆ.
- ಆ ವ್ಯಕ್ತಿಗಳನ್ನು ‘ಪೌರತ್ವ ಕಾಯ್ದೆ, 1955’ ಅಥವಾ ‘ಪೌರತ್ವ ನಿಯಮಗಳು 2003’ ರಲ್ಲಿ ವ್ಯಾಖ್ಯಾನಿಸಲಾಗಿಲ್ಲ.
ಘೋಷಿತ ವಿದೇಶಿಯ ಎಂದರೆ ಯಾರು?
‘ಘೋಷಿತ ವಿದೇಶಿಯರು'(Declared Foreigners-DF) ಎಂದರೆ ರಾಜ್ಯ ಪೊಲೀಸರ ಗಡಿ ಶಾಖೆಯಿಂದ ಅಕ್ರಮ ವಲಸಿಗರು ಎಂದು ಗುರುತಿಸಲ್ಪಟ್ಟ ನಂತರ, ತಮ್ಮ ಪೌರತ್ವದ ಪುರಾವೆಗಳನ್ನು ಒದಗಿಸಲು ವಿಫಲರಾದ ಆಧಾರದ ಮೇಲೆ ಅವರನ್ನು ಯಾವುದಾದರೂ ಒಂದು ‘ವಿದೇಶಿ ನ್ಯಾಯಮಂಡಳಿ’ (Foreigners’ Tribunal- FT) ಯು ‘ವಿದೇಶಿ’ ಎಂದು ಘೋಷಿಸಲಾಗುತ್ತದೆ.
‘ವಿದೇಶಿ ನ್ಯಾಯಮಂಡಳಿ’ ಎಂದರೇನು?
‘ವಿದೇಶಿಯರ ನ್ಯಾಯಮಂಡಳಿಗಳನ್ನು, ವಿದೇಶಿಯರ (ನ್ಯಾಯಮಂಡಳಿ) [Foreigners (Tribunals) Order]) ಆದೇಶ’ 1964 ರ ಅಡಿಯಲ್ಲಿ ಸ್ಥಾಪಿಸಲಾದ ಅರೆ-ನ್ಯಾಯಾಂಗ ಸಂಸ್ಥೆಗಳು ಆಗಿವೆ.
ಈ ನ್ಯಾಯಮಂಡಳಿಗಳು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವ್ಯಕ್ತಿಯು “ವಿದೇಶಿ” ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.
ಸಂಯೋಜನೆ: ‘ವಿದೇಶಿ ನ್ಯಾಯಮಂಡಳಿಯ’ ಸದಸ್ಯರು ಕನಿಷ್ಠ ಏಳು ವರ್ಷಗಳ ವಕಾಲತ್ತು ಅನುಭವವನ್ನು ಹೊಂದಿರುವ 35 ವರ್ಷಕ್ಕಿಂತ ಕಡಿಮೆಯಲ್ಲದ ವಯಸ್ಸಿನ ವಕೀಲರು (ಅಥವಾ) ಅಸ್ಸಾಂ ನ್ಯಾಯಾಂಗ ಸೇವೆಯ ನಿವೃತ್ತ ನ್ಯಾಯಾಂಗ ಅಧಿಕಾರಿಗಳು, ಅರೆ ನ್ಯಾಯಾಂಗ ಸೇವೆಯಲ್ಲಿ ಅನುಭವ ಹೊಂದಿರುವ ನಾಗರಿಕ ಸೇವಕರನ್ನು (ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿಯ ಶ್ರೇಣಿಗಿಂತ ಕೆಳಗಿಲ್ಲದ) ಒಳಗೊಂಡಿರುತ್ತದೆ.
ವಿದೇಶಿ ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಅಧಿಕಾರ ಹೊಂದಿರುವವರು ಯಾರು?
ಗೃಹ ಸಚಿವಾಲಯವು (MHA) ವಿದೇಶಿಯರ (ನ್ಯಾಯಮಂಡಳಿ) ಆದೇಶ, 1964 ಕ್ಕೆ ತಿದ್ದುಪಡಿ ಮಾಡಿದ ನಂತರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಲ್ಲಿ ನ್ಯಾಯಮಂಡಳಿಗಳನ್ನು (ಅರೆ- ನ್ಯಾಯಿಕ ಪ್ರಾಧಿಕಾರಗಳನ್ನು) ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
- ಈ ಮೊದಲು, ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಅಧಿಕಾರವನ್ನು ಕೇಂದ್ರಕ್ಕೆ ಮಾತ್ರ ವಹಿಸಲಾಗಿತ್ತು.
‘ವಿದೇಶಿ ನ್ಯಾಯಮಂಡಳಿಗಳಿಗೆ’ ಮೇಲ್ಮನವಿ ಸಲ್ಲಿಸುವ ಹಕ್ಕು ಹೊಂದಿರುವವರು ಯಾರು?
- ತಿದ್ದುಪಡಿ ಮಾಡಿದ ಆದೇಶದ [ವಿದೇಶಿ (ನ್ಯಾಯಮಂಡಳಿ) 2019] ಅನ್ವಯ ನ್ಯಾಯಮಂಡಳಿಗಳಲ್ಲಿ ಮೇಲ್ಮನವಿ ಸಲ್ಲಿಸಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ.
- ಇದಕ್ಕೂ ಮೊದಲು ರಾಜ್ಯ ಆಡಳಿತ ಮಾತ್ರ ಈ ನ್ಯಾಯಮಂಡಳಿಗಳಲ್ಲಿ ಶಂಕಿತನ ವಿರುದ್ಧ ಪ್ರಕರಣ ದಾಖಲಿಸಬಹುದಿತ್ತು.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಪಶ್ಚಿಮ ಆಫ್ರಿಕಾ ದೇಶಗಳ ಆರ್ಥಿಕ ಸಮುದಾಯ (ECOWAS):
(Economic Community of West African States (ECOWAS)
ಸಂದರ್ಭ:
ಪಶ್ಚಿಮ ಆಫ್ರಿಕಾದ ದೇಶ ‘ಮಾಲಿ’ಯಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು,’ ಪಶ್ಚಿಮ ಆಫ್ರಿಕಾದ ದೇಶಗಳ ಆರ್ಥಿಕ ಸಮುದಾಯವು ‘(Economic Community of West African States- ECOWAS) ಮಧ್ಯಸ್ಥಿಕೆ ವಹಿಸುವ ಪ್ರಯತ್ನ ನಡೆಸುತ್ತಿದೆ.
‘ಮಾಲಿ’ಯಲ್ಲಿ ಏನಾಗುತ್ತಿದೆ?
1960 ರಲ್ಲಿ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆದ ನಂತರ ಮಾಲಿ ಯಲ್ಲಿ ಐದು ದಂಗೆಗಳು ಸಂಭವಿಸಿವೆ, ಮತ್ತು ಒಮ್ಮೆ ಮಾತ್ರ, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಅಧ್ಯಕ್ಷರಿಂದ ಇನ್ನೊಬ್ಬರಿಗೆ ಶಾಂತಿಯುತವಾಗಿ ಅಧಿಕಾರ ವರ್ಗಾವಣೆಯಾಗಿದೆ.
ಇತ್ತೀಚಿನ ದಂಗೆ: ಒಂಬತ್ತು ತಿಂಗಳ ಹಿಂದೆ, ಬೃಹತ್ ಸರ್ಕಾರ ವಿರೋಧಿ ಪ್ರತಿಭಟನೆಯ ಪರಿಣಾಮವಾಗಿ, ಅಧ್ಯಕ್ಷ ಇಬ್ರಾಹಿಂ ಬೌಬಕರ್ ಕೀಟಾ (Ibrahim Boubacar Keïta) ಅವರನ್ನು ಅಧಿಕಾರದಿಂದ ಉಚ್ಛಾಟಿಸಲಾಯಿತು. ಕಳೆದ ವಾರ, ಇಬ್ಬರು ಪ್ರಮುಖ ಮಿಲಿಟರಿ ಮುಖಂಡರನ್ನು ಒಳಗೊಂಡಿರದ ಹೊಸ ಕ್ಯಾಬಿನೆಟ್ ಘೋಷಿಸಲಾಯಿತು. ಇದರ ನಂತರ ಸೇನೆಯು ರಾಷ್ಟ್ರಪತಿ ಮತ್ತು ಪ್ರಧಾನಿಯನ್ನು ವಶಕ್ಕೆ ತೆಗೆದುಕೊಂಡಿದೆ.
ECOWAS ಕುರಿತು:
- ಪಶ್ಚಿಮ ಆಫ್ರಿಕಾದ ದೇಶಗಳ ಆರ್ಥಿಕ ಸಮುದಾಯವು (ECOWAS) ಪಶ್ಚಿಮ ಆಫ್ರಿಕಾದಲ್ಲಿ ನೆಲೆಗೊಂಡಿರುವ ಹದಿನೈದು ದೇಶಗಳ ಪ್ರಾದೇಶಿಕ ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.
- ಇದನ್ನು 1975 ರಲ್ಲಿ ಲಾಗೋಸ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸ್ಥಾಪಿಸಲಾಯಿತು.
- ಪೂರ್ಣ ಆರ್ಥಿಕ ಮತ್ತು ವಾಣಿಜ್ಯ ಒಕ್ಕೂಟವನ್ನು ನಿರ್ಮಿಸುವುದು, ಏಕೈಕ ಬೃಹತ್ ವ್ಯಾಪಾರ ವೇದಿಕೆಯನ್ನು ರಚಿಸುವ ಮೂಲಕ ಅದರ ಸದಸ್ಯ ರಾಷ್ಟ್ರಗಳಿಗೆ “ಸಾಮೂಹಿಕ ಸ್ವಾವಲಂಬನೆ” (collective self-sufficiency) ಸಾಧಿಸುವುದು ಇಕೋವಾಸ್ನ ಗುರಿಯಾಗಿದೆ.
- ಇದು ಈ ಪ್ರದೇಶದಲ್ಲಿ ‘ಶಾಂತಿಪಾಲನಾ ಪಡೆ’ಯಾಗಿಯೂ ಕಾರ್ಯನಿರ್ವಹಿಸುತ್ತದೆ.
- ಇದು ಇಡೀ ಖಂಡವನ್ನು ಒಳಗೊಂಡ ಆಫ್ರಿಕನ್ ಆರ್ಥಿಕ ಸಮುದಾಯದ (African Economic Community– AEC) ಪ್ರಮುಖ ಆಧಾರಸ್ತಂಭ ಪ್ರಾದೇಶಿಕ ಗುಂಪುಗಳಲ್ಲಿ ಒಂದಾಗಿದೆ.
ECOWAS ಎರಡು ಉಪ-ಪ್ರಾದೇಶಿಕ ಬ್ಲಾಕ್ ಗಳನ್ನು ಒಳಗೊಂಡಿದೆ:
- ‘ಪಶ್ಚಿಮ ಆಫ್ರಿಕಾದ ಆರ್ಥಿಕ ಮತ್ತು ಹಣಕಾಸು ಒಕ್ಕೂಟ’(West African Economic and Monetary Union): ಇದು ಪ್ರಾಥಮಿಕವಾಗಿ ಎಂಟು ಫ್ರೆಂಚ್ ಮಾತನಾಡುವ ದೇಶಗಳ ಸಂಘಟನೆಯಾಗಿದೆ.
- ‘ವೆಸ್ಟ್ ಆಫ್ರಿಕನ್ ವಿತ್ತೀಯ ವಲಯ'(West African Monetary Zone- WAMZ), ಇದನ್ನು 2000 ರಲ್ಲಿ ಸ್ಥಾಪಿಸಲಾಯಿತು: ಇದು ಪ್ರಧಾನವಾಗಿ ಆರು ಇಂಗ್ಲಿಷ್ ಮಾತನಾಡುವ ದೇಶಗಳನ್ನು ಒಳಗೊಂಡಿದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಸುದ್ದಿಯಲ್ಲಿರುವ ಸ್ಥಳಗಳು- ಕ್ಯಾಲಿ(Cali):
- ಕ್ಯಾಲಿ (Cali) ನಗರವು ವಿಸ್ತೀರ್ಣದ ದೃಷ್ಟಿಯಿಂದ ಕೊಲಂಬಿಯಾದ ಎರಡನೇ ಅತಿದೊಡ್ಡ ನಗರ ಮತ್ತು ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.
- ಇದು ಪೆಸಿಫಿಕ್ ಮಹಾಸಾಗರದ ಕರಾವಳಿಯಿಂದ ಸಂಪರ್ಕ ಹೊಂದಿದ ಕೊಲಂಬಿಯಾದ ಏಕೈಕ ಪ್ರಮುಖ ನಗರ.
- ಕ್ಯಾಲಿ ಯು, ಕಾಕಾ ನದಿಯ(Cauca River) ಪಶ್ಚಿಮಕ್ಕೆ ಕಾಕಾ ಕಣಿವೆಯಲ್ಲಿದೆ.
ಸುದ್ದಿಯಲ್ಲಿರಲು ಕಾರಣ:
ಇತ್ತೀಚಿನ ಸರ್ಕಾರ ವಿರೋಧಿ ಪ್ರತಿಭಟನೆಯ ನಂತರ ಕೊಲಂಬಿಯಾದ ಸೇನೆಯು ಕ್ಯಾಲಿಯ ಮೇಲೆ ತನ್ನ ನಿಯಂತ್ರಣವನ್ನು ಬಿಗಿಗೊಳಿಸಿದೆ.
ಪ್ರತಿಭಟನೆಗೆ ಕಾರಣಗಳು:
- ಏಪ್ರಿಲ್ ನಲ್ಲಿ, ಪ್ರಸ್ತಾಪಿತ ವೇತನ ತೆರಿಗೆಯಲ್ಲಿನ ಸುಧಾರಣೆಯ ಬಗ್ಗೆ ಕ್ಯಾಲಿ ಮತ್ತು ಇತರ ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು.
- ಆರ್ಥಿಕ ಸಂಕಷ್ಟಗಳನ್ನು ಸರಾಗಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ವಾದಿಸಿತು, ಆದರೆ ಕೊಲಂಬಿಯಾದ ಅನೇಕ ನಾಗರಿಕರು ಇದರ ಪರಿಣಾಮವಾಗಿ ತಾವು ಬಡತನಕ್ಕೆ ಸಿಲುಕ ಬಹುದಾಗಿದೆ ಎಂದು ಭಯಪಟ್ಟರು.
- ಆದಾಗ್ಯೂ, ಈ ತೆರಿಗೆ ಯೋಜನೆಯನ್ನು ಹಿಂತೆಗೆದುಕೊಳ್ಳಲಾಯಿತು ಆದರೆ ಸರ್ಕಾರ ವಿರೋಧಿ ಭಾವನೆಯ ಪ್ರತಿಭಟನೆಗಳಿಗೆ ಪೊಲೀಸ್ ಹಿಂಸಾಚಾರ, ಬಡತನ ಮತ್ತು ಆರೋಗ್ಯ ಬಿಕ್ಕಟ್ಟನ್ನು ಸೇರಿಸಿದೆ.
ರಿಷಿಗಂಗಾ:
ಇದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹರಿಯುವ ನದಿಯಾಗಿದೆ.
ಮೂಲ: ಇದು ನಂದಾ ದೇವಿ ಪರ್ವತದ ಉತ್ತರ ನಂದಾ ದೇವಿ ಹಿಮನದಿಯಿಂದ ಹುಟ್ಟಿಕೊಂಡಿದೆ. ಮತ್ತು ಇದು ದಕ್ಷಿಣ ನಂದಾ ದೇವಿ ಹಿಮನದಿಯ’ ನೀರನ್ನೂ ಪಡೆಯುತ್ತದೆ.
ನಂದಾದೇವಿ ರಾಷ್ಟ್ರೀಯ ಉದ್ಯಾನವನದ ಮೂಲಕ ಹರಿಯುವ ಇದು ರಿನಿ ಗ್ರಾಮದ ಬಳಿಯ ಧೌಲಿಗಂಗಾ ನದಿಯನ್ನು ಸೇರುತ್ತದೆ.
2021 ರಲ್ಲಿ ವಿಪತ್ತು:
ಫೆಬ್ರವರಿ 2021 ರಲ್ಲಿ, ಭೂಕುಸಿತ, ಹಿಮಪಾತ ಮತ್ತು ಹಿಮನದಿ ಸರೋವರ ಸ್ಫೋಟದಿಂದಾಗಿ ರಿಷಿಗಂಗಾ ನದಿಯಲ್ಲಿ ಪ್ರವಾಹ ದುರಂತ ಸಂಭವಿಸಿತು.
ಸುದ್ದಿಯಲ್ಲಿರಲು ಕಾರಣ:
ಚಮೋಲಿಯ ರಿಷಿಗಂಗಾ ಮೂಲದ ಹಿಮನದಿಗಳಲ್ಲಿನ ಬಿರುಕುಗಳ ವರದಿಗಳ ನಂತರ, ವಿಜ್ಞಾನಿಗಳ ತಂಡವು ವೈಮಾನಿಕ ಸಮೀಕ್ಷೆಯನ್ನು ನಡೆಸಿತು ಆದರೆ ಯಾವುದೇ ಅಪಾಯದ ಮುನ್ಸೂಚನೆಯನ್ನು ಕಂಡುಕೊಂಡಿಲ್ಲ.
ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶ:
- ಇದು ಅಸ್ಸಾಂನಲ್ಲಿರುವ ರಾಷ್ಟ್ರೀಯ ಉದ್ಯಾನವಾಗಿದೆ.
- ಮೇರಿ ಕರ್ಜನ್ ಅವರ ಶಿಫಾರಸ್ಸಿನ ಮೇರೆಗೆ 1908 ರಲ್ಲಿ ನಿರ್ಮಿಸಲಾದ ಈ ಉದ್ಯಾನವನವು ಪೂರ್ವ ಹಿಮಾಲಯನ್ ಜೀವವೈವಿಧ್ಯ ಹಾಟ್ಸ್ಪಾಟ್ ಗಳಾದ – ಗೋಲಾಘಾಟ್ ಮತ್ತು ನಾಗಾನ್ ಜಿಲ್ಲೆಯ ಗಡಿಯಲ್ಲಿದೆ.
- ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ವಿಶ್ವದ ಒಂದು ಕೊಂಬಿನ ಖಡ್ಗಮೃಗದ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗಕ್ಕೆ ನೆಲೆಯಾಗಿದೆ.
- ಇದು ‘ವಿಶ್ವ ಪರಂಪರೆಯ ತಾಣ’ದ ಸ್ಥಾನಮಾನವನ್ನು ಹೊಂದಿದೆ.
- ಪಕ್ಷಿ ಪ್ರಭೇದಗಳ ಸಂರಕ್ಷಣೆಗಾಗಿ ಇದನ್ನು ಪ್ರಮುಖ ಪಕ್ಷಿ ಪ್ರದೇಶವೆಂದು ಬರ್ಡ್ಲೈಫ್ ಇಂಟರ್ನ್ಯಾಷನಲ್ ಗುರುತಿಸಿದೆ.
- ಕಾಜಿರಂಗದಲ್ಲಿ ನಡೆಯುತ್ತಿರುವ ಸಂರಕ್ಷಣಾ ಪ್ರಯತ್ನಗಳ ಮುಖ್ಯ ಗಮನವು ‘ದೊಡ್ಡ ನಾಲ್ಕು’ ಪ್ರಭೇದಗಳಾದ ಖಡ್ಗಮೃಗ, ಆನೆ, ರಾಯಲ್ ಬಂಗಾಳ ಹುಲಿ ಮತ್ತು ಏಷ್ಯನ್ ನೀರಿನ ಎಮ್ಮೆಗಳ ಮೇಲೆ ಕೇಂದ್ರೀಕೃತವಾಗಿದೆ.
- ನಾಲ್ಕು ಪ್ರಮುಖ ನದಿಗಳು – ಬ್ರಹ್ಮಪುತ್ರ, ಡಿಫ್ಲು, ಮೊರಾ ಡಿಫ್ಲು ಮತ್ತು ಮೊರಾ ಧನ್ಸಿರಿ, ಕಾಜಿರಂಗದ ಮೂಲಕ ಹಾದುಹೋಗುತ್ತವೆ.
ಸುದ್ದಿಯಲ್ಲಿ ಏಕಿದೆ?
ಇತ್ತೀಚೆಗೆ, ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಟೈಗರ್ ರಿಸರ್ವ್ನ ಕಾವಲುಗಾರರ ಫೈರ್ಪವರ್ ಹೆಚ್ಚಿಸುವ ಮತ್ತು ಅವರಿಗೆ ಕಮಾಂಡೋ ತರಬೇತಿ ನೀಡುವ ಪ್ರಸ್ತಾಪಕ್ಕೆ ಅಸ್ಸಾಂ ಸರ್ಕಾರ ಅನುಮೋದನೆ ನೀಡಿದೆ. ಈ ಕ್ರಮಗಳ ಉದ್ದೇಶ ಕಳ್ಳ ಬೇಟೆಯನ್ನು ತಡೆಯುವುದು ಆಗಿದೆ.
ವಿಟಮಿನ್ ಡಿ:
- ‘ವಿಟಮಿನ್ ಡಿ’ಕೊಬ್ಬಿನಲ್ಲಿ ಕರಗುವ ವಿಟಮಿನ್, ಅಂದರೆ ಇದು ಕೊಬ್ಬು ಮತ್ತು ಎಣ್ಣೆಗಳಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ನಿಮ್ಮ ದೇಹದಲ್ಲಿ ದೀರ್ಘಕಾಲ ಸಂಗ್ರಹಿಸಬಹುದಾಗಿದೆ.
- ಚರ್ಮದ ಮೇಲೆ ಸೂರ್ಯನ ಬೆಳಕು (ಅಥವಾ ಕೃತಕ ಬೆಳಕು, ವಿಶೇಷವಾಗಿ 190–400 ಎನ್ಎಂ ತರಂಗಾಂತರದ ನೇರಳಾತೀತ ಪ್ರದೇಶದಲ್ಲಿ) ಬಿದ್ದ ಪರಿಣಾಮವಾಗಿ ಇದನ್ನು ಉತ್ಪಾದಿಸಲಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಆಧಾರಿತ ಅಣುಗಳ ರಾಸಾಯನಿಕ ಕ್ರಿಯೆಯನ್ನು ಪ್ರೇರೇಪಿಸುತ್ತದೆ ಮತ್ತು ಇದನ್ನು ಪಿತ್ತಜನಕಾಂಗದಲ್ಲಿ ಕ್ಯಾಲ್ಸಿಡಿಯೋಲ್ (calcidiol) ಎಂದು ಮತ್ತು ಮೂತ್ರಪಿಂಡಗಳಲ್ಲಿ ಕ್ಯಾಲ್ಸಿಟ್ರಿಯೊಲ್ (calcitriol) ಆಗಿ ಪರಿವರ್ತಿಸುತ್ತವೆ.
- ಇದರಪಾತ್ರ: ಇದು ಮೂಳೆಗಳಲ್ಲಿನ ಕ್ಯಾಲ್ಸಿಯಂ ಅಂಶವನ್ನು ಸರಿಯಾದ ಪ್ರಮಾಣದಲ್ಲಿ ಸಮತೋಲನಗೊಳಿಸಲು, ಜೀವಕೋಶದ ಪೊರೆಗಳನ್ನು ಹಾನಿಯಿಂದ ರಕ್ಷಿಸುವ ಪ್ರಕ್ರಿಯೆಯನ್ನು ವೇಗವರ್ಧಿಸಲು, ಅಂಗಾಂಶಗಳ ಉರಿಯೂತವನ್ನು ತಡೆಯಲು, ಅಂಗಾಂಶಗಳು ನಾರುಗಳನ್ನು ರಚಿಸುವುದನ್ನು ತಡೆಯಲು ಮತ್ತು ಮೂಳೆಗಳು ದುರ್ಬಲಗೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ.
- ವಿಟಮಿನ್ ಡಿ ಕೊರತೆಯು ಮಕ್ಕಳಲ್ಲಿ ರಿಕೆಟ್ಸ್ ಮತ್ತು ವಯಸ್ಕರಲ್ಲಿ ಆಸ್ಟಿಯೋಮಲೇಶಿಯಾಕ್ಕೆ ಕಾರಣವಾಗಬಹುದು.
ಸುದ್ದಿಯಲ್ಲಿರಲು ಕಾರಣವೇನು?
ನಿಜಾಮ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (NIMS) ನ ವೈದ್ಯರು ನಡೆಸಿದ ಅಧ್ಯಯನವು ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಕರೋನವೈರಸ್ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕಿತ ರೋಗಿಗಳಿಗೆ ಈ ವಿಟಮಿನ್ ನೀಡುವುದರಿಂದ ಮರಣ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂಬ ವರದಿಯನ್ನು ಬಹಿರಂಗ ಪಡಿಸಿದೆ.
YUVA (ಯುವ, ಭವಿಷ್ಯದ ಮತ್ತು ಬಹುಮುಖ ಲೇಖಕರು) ಯೋಜನೆ:
- ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಲು ಶಿಕ್ಷಣ ಸಚಿವಾಲಯವು ‘ಯುವ’ (Young, Upcoming and Versatile Authors- YUVA) ಯೋಜನೆಯನ್ನು ಪ್ರಾರಂಭಿಸಿದೆ.
- ಓದುವಿಕೆ, ಬರವಣಿಗೆ ಮತ್ತು ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಜಾಗತಿಕವಾಗಿ ಭಾರತ ಮತ್ತು ಭಾರತೀಯ ಬರವಣಿಗೆಯನ್ನು ಪ್ರದರ್ಶಿಸಲು 30 ವರ್ಷದೊಳಗಿನ ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ ತರಬೇತಿ ನೀಡುವ ಈ ಯೋಜನೆಯು ಬರಹಗಾರರ ಮಾರ್ಗದರ್ಶನ ಕಾರ್ಯಕ್ರಮವಾಗಿದೆ.
- ಯುವ ಯೋಜನೆಯಡಿ, ಪ್ರತಿ ಬರಹಗಾರನಿಗೆ ಆರು ತಿಂಗಳ ಅವಧಿಗೆ ತಿಂಗಳಿಗೆ 50,000 ರೂ.ಗಳ ಏಕೀಕೃತ ವಿದ್ಯಾರ್ಥಿವೇತನವನ್ನು ನೀಡಲಾಗುವುದು.
- YUVA ಉಪಕ್ರಮವು, ಭಾರತ @ 75 ಯೋಜನೆ (ಸ್ವಾತಂತ್ರ್ಯದ ಅಮೃತ್ ಮಹೋತ್ಸವ್-Azadi Ka Amrit Mahotsav) ಯ ಒಂದು ಭಾಗವಾಗಿದೆ.
- ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಭಾರತದ ರಾಷ್ಟ್ರೀಯ ಪುಸ್ತಕ ಟ್ರಸ್ಟ್ (National Book Trust) ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿದೆ.